Advertisement

ಕೆಪಿಎಸ್ಸಿ ನೇಮಕದಲ್ಲೂ ಭ್ರಷ್ಟಾಚಾರ :ತಮ್ಮದೇ ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

01:52 PM Apr 30, 2022 | Team Udayavani |

ವಿಜಯಪುರ : ಪಿಎಸ್‍ಐ ಹುದ್ದೆಗೆ ಮಾತ್ರವಲ್ಲ ಕೆಪಿಎಸ್ಸಿ ನೇಮಕದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತದೆ. ಕೆಪಿಎಸ್ಸಿ ಅಧ್ಯಕ್ಷ-ಸದಸ್ಯರಾಗಲು ಹತ್ತಾರು ಕೋಟಿ ರೂ. ಕೊಟ್ಟು ಅಧಿಕಾರ ನಡೆಸುವವರು ಸುಮ್ಮನೇ ಕೆಲಸ ಮಾಡುತ್ತಾರೆಯೇ. ಕೆಪಿಎಸ್ಸಿ ಅಧ್ಯಕ್ಷನಾಗಿದ್ದ ಶಾಂ ಭಟ್ ಮನೆಯಲ್ಲಿ ಭ್ರಷ್ಟಾಚಾರ ವಿರೋಧಿ ದಳಗಳು ದಾಳಿ ಮಾಡಿದಾಗ ಏನೆಲ್ಲ ಸಿಕ್ಕಿದೆ ಎಂಬುದನ್ನು ನಾಡಿನ ಜನತೆ ನೋಡಿಲ್ಲವೇ ಎಂದು ಶಾಸಕ ಬಸನಗೌಡ ಪಾಟೀಲ್  ಯತ್ನಾಳ್ ತಮ್ಮದೇ ಸರ್ಕಾರದ ವಿರುದ್ಧ,  ಸರ್ಕಾರಿ ಹುದ್ದೆಗಳ ಭರ್ತಿ ನೇಮಕದ ಭ್ರಷ್ಟಾಚಾರದ ವಿರುದ್ದ ಹರಿಹಾಯ್ದರು.

Advertisement

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾನಾಡಿದ ಅವರು, ಕೆಪಿಎಸ್ಸಿ ಭ್ರಷ್ಟಾಚಾರದಲ್ಲಿ ತೊಡಗಿದವರು ಯಾವ ಪಕ್ಷದವರು ಎಂಬುದು ಮುಖ್ಯವಲ್ಲ ಎಲ್ಲ ಪಕ್ಷಗಳ ಸರ್ಕಾರದ ಅವಧಿಯಲ್ಲೂ ಭ್ರಷ್ಟಾಚಾರ ನಡೆಯುತ್ತಲೇ ಇದೆ. ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಅವರನ್ನು ಕೇಳಿ, ತಮ್ಮ ಅಧಿಕಾರದ ಅವಧಿಯಲ್ಲಿ ಕೆಪಿಎಸ್ಸಿ ಸಂಸ್ಥೆಗೆ ಯಾವ ಸದಸ್ಯರನ್ನು ಹಣ ಇಲ್ಲದೇ ಪ್ರಮಾಣಿಕವಾಗಿ ನೇಮಕ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

545 ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂಬುದು ಸರಿಯಲ್ಲ. ಈ ಹಿಂದೆಯೂ ಪೊಲೀಸ್ ನೇಮಕಾತಿಯಲ್ಲಿ ಅವ್ಯವಹಾರ ನಡೆಯುತ್ತಲೇ ಇದೆ. ಯಾವ ಹುದ್ದೆಯೂ ಉಚಿತವಾಗಿ ಸಿಗುವುದಿಲ್ಲ. ಭ್ರಷ್ಟಾಚಾರ ಇಲ್ಲದೇ ಯಾವ ಹುದ್ದೆಯ ನೇಮಕವೂ ಆಗುವುದಿಲ್ಲ ಎಂಬುದು ಜಗಜ್ಜಾಹಿರಾಗಿದೆ ಎಂದರು.

ಸರ್ಕಾರದ ನೇಮಕ ಎಂಬುದು ದಂಧೆಯಾಗಿ ಪರಿಣಮಿಸಿದ್ದು, ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವ ಮೋಸದ ಜಾಲ ಸಕ್ರೀಯವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಹೀಗಾಗಿ ಸರ್ಕಾರದ ನೇಮಕಾತಿ ಪಾರದರ್ಶಕವಾಗಬೇಕು. ಇದಕ್ಕಾಗಿ ಅಮೂಲಾಗ್ರ ಬದಲಾವಣೆ ತರಬೇಕು. ಅಕ್ರಮ, ಅವ್ಯವಹಾರ ಯಾವ ಪಕ್ಷ ಹಾಗೂ ಯಾರು ಮಾಡಿದರು ಎಂದು ಆರೋಪ-ಪ್ರತ್ಯಾರೋಪ ಮಾಡುವುದಕ್ಕಿಂತ ಎಲ್ಲರೂ ಪ್ರಾಮಾಣಿಕ ನೇಮಕಾತಿಗೆ ಮುಂದಾಗಬೇಕು. ಪರಿಶ್ರಮಪಟ್ಟು ಓದುವ ಪ್ರತಿಭಾವಂತರಿಗೆ ಅನ್ಯಾಯ ಆಗದಂತೆ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎಂದು ಆಗ್ರಹಿಸಿದರು.

ಜಮೀರ್ ಬಂಧನಕ್ಕೆ ಆಗ್ರಹ

Advertisement

ಹುಬ್ಬಳ್ಳಿ ಗಲಭೆಕೋರರ ಕುಟುಂಬಕ್ಕೆ ಆರ್ಥಿಕ ನೆರವು, ಆಹಾರದ ಕಿಟ್ ವಿತರಿಸಿರುವ ಕಾಂಗ್ರೆಸ್ ಶಾಸಕ ಜಮೀರ ಅಹ್ಮದ್ ವಿರುದ್ಧ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಬೇಕು. ಉತ್ತರ ಪ್ರದೇಶ ಸರ್ಕಾರ ಆಜಂ ಖಾನ್‍ನನ್ನು ಬಂಧಿಸಿದಂತೆ ಜಮೀರ್ ಅಹ್ಮದ್ ಬಂಧನದ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದೇಶದ್ರೋಹಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಜಮೀರ್ ಅಹ್ಮದ್ ಇಸ್ಲಾಂ ಮತೀಯವಾದಿಯಾಗಿದ್ದು, ಸರ್ಕಾರದ ವಿರುದ್ಧವೇ ಚಟುವಟಿಕೆ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಕೂಡಲೇ ಜಮೀರ್ ಅವರನ್ನು ಬಂಧಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಠಾಣೆ ಮೇಲೆ ಕಲ್ಲು ಎಸೆದವರು, ದೇವಸ್ಥಾನಗಳ ಮೇಲೆ ದಾಳಿ ಮಾಡಿದವರನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಸಮಾಜ ಘಾತುಕ ಶಕ್ತಿಗಳು ಜೈಲಿಗೆ ಹೋದಾಗ ಭೇಟಿ ಮಾಡುವುದು, ಸನ್ಮಾನಿಸಿ ಅವರ ಸಮಾಜ ವಿರೋಧಿ ಕೃತ್ಯಗಳಿಗೆ ಬೆಂಬಲಿಸುವಂಥ ನಡೆಗಳನ್ನೇ ಅನುಸರಿಸುತ್ತಾ ಬಂದಿದ್ದಾರೆ ಎಂದು ಕಿಡಿ ಕಾರಿದರು.

ನಮ್ಮ ಪಕ್ಷದಲ್ಲೇ ಇರುವ ಹೊಂದಾಣಿಕೆ ರಾಜಕೀಯ

ಜಮೀರ್ ಅವರು ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದ್ದರೂ ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಸ್ವಪಕ್ಷದ ಸಚಿವ ಆರಗ ಅವರ ವಿರುದ್ಧವೂ ಹರಿಹಾಯ್ದ ಯತ್ನಾಳ್, ದೇಶದ್ರೋಹಿಗಳಿಗೆ ಬೆಂಬಲಿಸುವ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಬಂಧಿಸಿ ಜೈಲಿಗೆ ಹಾಕುವ ಧೈರ್ಯ ಮಾಡಬೇಕು. ಆದರೆ ಜಮೀರ್ ಗೆ  ನಮ್ಮದೇ ಪಕ್ಷದ ಓರ್ವ ಮಹಾನ್ ನಾಯಕನ ಬೆಂಬಲವಿದೆ ಎಂದು ಸ್ಪೋಟಕ ಮಾಹಿತಿ ಹೊರ ಹಾಕಿದರು. ಆದರೆ ಬಿಜೆಪಿ ಮಹಾ ನಾಯಕ ಯಾರು ಎಂಬುದನ್ನು ಮಾತ್ರ ಬಹಿರಂಗ ಮಾಡಲಿಲ್ಲ.ನಮ್ಮ ಪಕ್ಷದಲ್ಲೇ ಇರುವ ಹೊಂದಾಣಿಕೆ ರಾಜಕೀಯ, ಸಲುಗೆ ಶಾಸಕ ಜಮೀರ್ ದೇಶದ್ರೋಹಿಗಳಿಗೆ ಬೆಂಬಲ ನೀಡುವ ವರ್ತನೆಗೆ ಕಾರಣ. ವಯಕ್ತಿಯ ವ್ಯವಹಾರಗಳ ಒಡನಾಟವೂ ಅವರಿಗೆ ರಕ್ಷಣೆಗೆ ಸಹಕಾರಿ ಆಗಿದೆ. ಮತ್ತೊಂದೆಡೆ ಜಮೀರ್ ನಡೆಗೆ ಅವರ ಪಕ್ಷದ ನಾಯಕ ಸಿದ್ಧರಾಮಯ್ಯ ಕೂಡ ಮಾಧ್ಯಮಗಳಿಗೆ ಹೇಳಿಕೆ ಕೊಡದೇ ಹೋಗಿರುವುದು ಜಮೀರ್ ನಡೆಗೆ ಬೇಸರ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಕೆಣಕಿದರು.

ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಯೋ, ಸಂಪೂರ್ಣ ಪುಣಾರಚನೆಯೋ ನನಗೆ ತಿಳಿಯದು. ಆದರೆ ಪಕ್ಷದ ವರಿಷ್ಠರು ಸಂಪುಟದಲ್ಲಿ ಬದಲಾವಣೆಗೆ ನಿರ್ಧರಿಸಿರುವುದು ಸತ್ಯ. ನಾನಂತೂ ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದರು.

ದೇಶಧ ಮುಖ್ಯಮಂತ್ರಿಗಳ ಸಭೆ ಹಾಗೂ ನ್ಯಾಯಾಧೀಶರ ಸಮ್ಮೇಳಕ್ಕಾಗಿ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ, ಸಂಪುಟ ವಿಷಯವಾಗಿ ಯಾರನ್ಣೂ ಭೇಟಿ ಆಗುವುದಿಲ್ಲ ಎಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಬಸವ ಜಯಂತಿ ವೇಳೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಆಗ ಸಂಪುಟ ವಿಸ್ತರಣೆ-ಪುನಾರಚನೆ ಬಗ್ಗೆ ಚರ್ಚಿಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಹೈಕಮಾಂಡ್ ಒಂದೊಳ್ಳೆಯ ಸಂಪುಟ ರಚಿಸುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next