Advertisement

Crime: ಅನೈತಿಕ ಸಂಬಂಧಕ್ಕೆ ಅಡ್ಡಿ ಆಗಿದ್ದ ಬಾಲಕಿ ಹತ್ಯೆಗೈದ ತಾಯಿ,ಪ್ರಿಯಕರ?

12:17 PM Jul 15, 2024 | Team Udayavani |

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್‌ ಸ್ಥಳದಲ್ಲಿ ಪತ್ತೆಯಾಗಿದ್ದ 5 ವರ್ಷದ ಬಾಲಕಿಯ ಮೃತದೇಹದ ಗುರುತನ್ನು ರೈಲ್ವೆ ಪೊಲೀಸರು ಪತ್ತೆಯಾಗಿದ್ದಾರೆ.

Advertisement

ಮೃತ ಬಾಲಕಿ ಮರಿಯಮ್(5) ಎಂದು ಗುರುತಿಸಲಾಗಿದೆ. ಜು.3ರಂದು ಕೆಎಸ್‌ಆರ್‌ ರೈಲು ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್‌ ಸ್ಥಳದಲ್ಲಿ 5 ವರ್ಷದ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ತಾಂತ್ರಿಕ ತನಿಖೆ ನಡೆಸಿ ಆ ಬಾಲಕಿ ಮತ್ತು ಆಕೆಯ ತಂದೆ-ತಾಯಿಯ ಗುರುತನ್ನೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ಮರಿಯಮ್‌, ಹೀನಾ ಮತ್ತು ಶಿವು ದಂಪತಿಯ ಪುತ್ರಿ ಆಗಿದ್ದು, ಈ ಮಧ್ಯೆ ಹೀನಾ, ರಾಜು ಅಲಿಯಾಸ್‌ ಮಣಿಕಂಠ ಎಂಬಾತನ ಜತೆಗೆ ಅನೈತಿಕ ಸಂಬಂಧ ಹೊಂದಿದ್ದು, ಅದರಿಂದ ಪತಿ ಶಿವುನನ್ನು ತೊರೆದು ಪ್ರಿಯಕರ ರಾಜು ಜತೆ ಭಿಕ್ಷಾಟನೆ ಮಾಡಿ ಕೊಂಡು ಓಡಾಡುತ್ತಿದ್ದಳು. ಕೊಲೆಯಾದ ಮರಿಯಮ್‌ ಸಹ ಹೀನಾ ಮತ್ತು ರಾಜು ಜತೆಗೆ ಇದ್ದಳು. ಹೀಗಾಗಿ ಈ ಇಬ್ಬರ ಮೇಲೆ ಅನುಮಾನ ವ್ಯಕ್ತವಾಗಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ?: ತಮ್ಮ ಅನೈತಿಕ ಸಂಬಂಧಕ್ಕೆ ಮರಿಯಮ್‌ ಅಡ್ಡಿಯಾಗಿದ್ದಳು ಎಂಬ ಕಾರಣಕ್ಕೆ ಹೀನಾ ಮತ್ತು ರಾಜು ಕೊಲೆ ಮಾಡಿ ರುವ ಶಂಕೆ ವ್ಯಕ್ತವಾಗಿದೆ. ಮರಿಯಮ್‌ ಮೃತದೇಹ ಪತ್ತೆ ಯಾದ ದಿನದಿಂದಲೂ ಈ ಇಬ್ಬರು ನಾಪತ್ತೆಯಾಗಿದ್ದಾರೆ. ಹೀಗಾಗಿ ರೈಲ್ವೆ ಪೊಲೀಸರು ಈ ಇಬ್ಬರ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಇಬ್ಬರ ಬಗ್ಗೆ ಮಾಹಿತಿ ಇದ್ದರೆ ತಿಳಿಸುವಂತೆ ರೈಲ್ವೆ ಪೊಲೀಸರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ಮಾಹಿತಿಗಾಗಿ ಮೊ.9480802113 ಮತ್ತು ಮೊ. 9480802102ಗೆ ಸಂಪರ್ಕಿಸುವಂತೆ ರೈಲ್ವೆ  ಪೊಲೀಸರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next