Advertisement

ಮೋದಿ 2.0: ಕನಸು ಹಾಗೂ ಸವಾಲುಗಳ ಹಾದಿಯಲ್ಲಿ…

08:28 AM May 30, 2020 | Hari Prasad |

5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಆಡಳಿತಾವಧಿಯು 2024ಕ್ಕೆ ಪೂರ್ಣಗೊಳ್ಳಲಿದೆ. ಆ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯನ್ನಾಗಿಸುವ ಗುರಿ ಹಾಕಿಕೊಳ್ಳಲಾಗಿದೆ.

Advertisement

ಭಾರತವು 5 ಲಕ್ಷ ಕೋಟಿ ಡಾಲರ್‌ನ ಆರ್ಥಿಕತೆಯಾಗಿ ಹೊರ ಹೊಮ್ಮಬೇಕಿದ್ದರೆ ದೇಶವು ಸತತ 4 ವರ್ಷಗಳ ಕಾಲ ವಾರ್ಷಿಕ ಶೇ.21ರಷ್ಟು ಆರ್ಥಿಕ ಪ್ರಗತಿಯನ್ನು ದಾಖಲಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಕೋವಿಡ್ ಬಿಕ್ಕಟ್ಟು ಎದುರಿಸುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟ ಸಾಧ್ಯ. ಏತನ್ಮಧ್ಯೆ, ಕೇಂದ್ರ ಸರ್ಕಾರ ನಿರ್ದಿಷ್ಟ ಯೋಜನೆಗಳೊಂದಿಗೆ ದಿಟ್ಟ ಹೆಜ್ಜೆಯಿಡುತ್ತಿದೆ. ಈಗಾಗಲೇ ಈ ಗುರಿಯ ಒಂದು ಭಾಗವಾಗಿ ವಿವಿಧ ಮೂಲಭೂತ ಸೌಲಭ್ಯ ವಲಯಕ್ಕೆ 103 ಲಕ್ಷ ಕೋಟಿ ರೂ. ಮೊತ್ತದ ನ್ಯಾಷನಲ್‌ ಪೈಪ್‌ಲೈನ್‌ ಪ್ರಾಜೆಕ್ಟ್ ಗೆ (ಎನ್‌ಐಪಿ) ಚಾಲನೆ ನೀಡಲಾಗಿದೆ.

ಜೊತೆಗೆ ಕೋವಿಡ್ ಬಿಕ್ಕಟ್ಟು ಎದುರಿಸಲು 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಪ್ರಕಟಿಸಲಾಗಿದೆ. ಈ ಯೋಜನೆಗಳು ಪರಿಣಾಮಕಾರಿ ಹಾಗೂ ಯಶಸ್ವಿಯಾಗಿ ಜಾರಿಯಾದರೆ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಗುರಿಯನ್ನು ದಾಖಲಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ನಮ್ಮ ಆರ್ಥಿಕತೆಯು ಡಾಲರ್‌ ಏರಿಳಿತ, ಜಾಗತಿಕ ವಿದ್ಯಮಾನ ಹಾಗೂ ಮುಂಗಾರು ಮಳೆಯನ್ನು ಅವಲಂಬಿಸಿದೆ. ಈ ಬೆಳವಣಿಗೆಗಳು ನಮಗೆ ಆಶಾದಾಯಕವಾಗಿರಬೇಕಿದೆ.

ಅನ್ನದಾತನ ಆದಾಯ ದ್ವಿಗುಣಗೊಳಿಸುವ ಗುರಿ
ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಮಹತ್ವಾಕಾಂಕ್ಷೆಯ ಮಾತನ್ನು ಮೋದಿ ಸರ್ಕಾರ ಅನೇಕ ಬಾರಿ ಹೇಳಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಹಾಗೂ ಹೊಸ ವಿಧಾನಗಳಿಗೆ ಒತ್ತು ನೀಡಲಾಗುತ್ತಿದೆ. ಸ್ಥಳೀಯವಾಗಿ ಆಹಾರ ಸಂಸ್ಕರಣೆ ಹಾಗೂ ಮಾರ್ಕೆಟಿಂಗ್‌ಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ.

Advertisement

ಈ ವರ್ಷದ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 16 ಕಾರ್ಯ ಯೋಜನೆಗಳನ್ನು ಪ್ರಸ್ತಾಪಿಸಿ, 2.83 ಲಕ್ಷ ಕೋಟಿ ರೂ. ವ್ಯಯಿಸಲಾಗುತ್ತಿದೆ. ರೈತರ ಬೆಳೆಗಳನ್ನು ರೈಲು ಹಾಗೂ ಉಡಾನ್‌ ಯೋಜನೆಯ ವಿಮಾನಗಳ ಮೂಲಕ ಸಾಗಿಸಲು ಅವಕಾಶ ನೀಡುವ ಉಪಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಇವುಗಳು ರೈತ ಸ್ನೇಹಿಯಾಗಿರುವಂತೆ ನೋಡಿಕೊಳ್ಳಬೇಕಿದೆ.

ಬೆಳೆ ನಷ್ಟ ಪರಿಹಾರಕ್ಕಾಗಿ ಬಿಮಾ ವಿಮೆ ಫ‌ಸಲ್‌ ಯೋಜನೆ ಇದೆ. ದೇಶದ ಕೆಲ ಪ್ರದೇಶಗಳಿಗೆ ಈ ಯೋಜನೆ ಸರಿಯಾಗಿ ಹೊಂದಾಣಿಕೆ ಆಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇದರಲ್ಲಿನ ಲೋಪಗಳನ್ನು ಸರಿಪಡಿಸಿಬೇಕಿದೆ. ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಯೋಜನೆ ಮೂಲಕ ನೀಡುವ ನೆರವು ಯಾವುದಕ್ಕೂ ಸಾಲದಾಗಿದೆ. ತರಕಾರಿ ಮತ್ತಿತರ ಬೆಳೆಗಳಿಗೆ ಯಾವ ಯೋಜನೆಗಳೂ ಇಲ್ಲ. ಕೃಷಿಗಾಗಿ ಸಮಗ್ರ ಯೋಜನೆ ರೂಪಿಸಿ, ಕಾರ್ಯಕ್ರಮಗಳ ಸಕಾಲದಲ್ಲಿ ಅನುಷ್ಠಾನ ಆಗುವಂತೆ ನೋಡಿಕೊಳ್ಳಬೇಕಿದೆ.

ಎಲ್ಲರಿಗೂ ಸೂರು ಕಲ್ಪಿಸುವತ್ತ ಚಿತ್ತ
ಕೇಂದ್ರ ಸರ್ಕಾರವು ದೇಶದಲ್ಲಿ ಪ್ರತಿಯೊಬ್ಬರಿಗೂ ನೆಲೆ ಕಲ್ಪಿಸಲು ‘ಎಲ್ಲರಿಗೂ ಸೂರು -2022 ಯೋಜನೆ’ ರೂಪಿಸಿದೆ. 2022ರ ವೇಳೆಗೆ ಭಾರತವು ಸ್ವಾತಂತ್ರ್ಯಗಳಿಸಿ 75 ವರ್ಷ ಪೂರ್ಣಗೊಳ್ಳಲಿದೆ. ಇಂತಹ ಸಂಭ್ರಮದ ಹೊತ್ತಿನಲ್ಲಿ  ಪ್ರತಿಯೊಬ್ಬರೂ ಸ್ವಂತ ಸೂರು ಹೊಂದಿರುವುದು ಮೋದಿ ಸರ್ಕಾರದ ಆಶಯವಾಗಿದೆ.

ಈ ನಿಟ್ಟಿನಲ್ಲಿ ವಸತಿ ಯೋಜನೆಗಳನ್ನು ರೂಪಿಸಿ, ಮನೆಗಳನ್ನು ನಿರ್ಮಿ ಸುವ ಕಾರ್ಯ ನಡೆಯುತ್ತಿದೆ. 2030ರ ಹೊತ್ತಿಗೆ 60 ಕೋಟಿ ಜನರು ನಗರಗಳಲ್ಲಿ ವಾಸಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇಷ್ಟು ಮಂದಿಗೆ ಮೂಲಭೂತ ಸೌಲಭ್ಯಗಳೊಂದಿಗೆ ವಸತಿ ಕಲ್ಪಿಸುವುದು ಅಷ್ಟು ಸುಲಭವಲ್ಲ.

ದೀರ್ಘಾವಧಿ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೇರಾ ಕಾಯ್ದೆಗೆ ತಿದ್ದುಪಡಿ ತಂದು ರಿಯಲ್‌ ಎಸ್ಟೇಟ್‌ ವಲಯದ ಅಡೆತಡೆಗಳನ್ನು ನಿವಾರಿಸಲಾಗಿದೆ. ಈ ವಲಯಕ್ಕೆ ವಿಶೇಷ ಪ್ಯಾಕೇಜ್‌ ಕೂಡ ಪ್ರಕಟಿಸಲಾಗಿದೆ. ಇದರೊಂದಿಗೆ ಈಗಾಗಲೇ ಘೋಷಿಸಿರುವ ಸ್ಮಾರ್ಟ್‌ಸಿಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಿದೆ.

ಸ್ವಾವಲಂಬಿ ಭಾರತ
ಕೋವಿಡ್ ಬಿಕ್ಕಟ್ಟಿನಿಂದ ಪಾರಾಗಲು ಕೇಂದ್ರ ಸರ್ಕಾರ ‘ಸ್ವಾವಲಂಬಿ ಭಾರತ’ ಪರಿಕಲ್ಪನೆ ಎದುರಿಟ್ಟಿದೆ.  ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ಪ್ರೋತ್ಸಾಹ ನೀಡುವುದು, ದೇಶವನ್ನು  ಕೃಷಿ, ಮತ್ಸೋದ್ಯಮ, ಹೈನುಗಾರಿಕೆ, ಶಿಕ್ಷಣ, ಆರೋಗ್ಯ, ರಕ್ಷಣಾ ಮತ್ತಿತರ ವಲಯಲ್ಲಿ ಸ್ಥಳೀಯವಾಗಿ ಹೂಡಿಕೆಗೆ ಅವಕಾಶ ಕಲ್ಪಿಸಿ ಸಶಕ್ತಗೊಳಿಸುವುದು ಸ್ವಾವಲಂಬಿ ಭಾರತದ ದಿಕ್ಕಿನಲ್ಲಿ ಇಡಲಾಗುತ್ತಿರುವ ಹೆಜ್ಜೆಯಾಗಿದೆ.

ಉದಾಹರಣೆಗೆ, ಇಲ್ಲಿಯವರೆಗೂ ರಕ್ಷಣಾ ವಲಯದಲ್ಲಿ ವಿಮಾನಗಳ ರಿಪೇರಿ, ಬದಲಾವಣೆ, ಜೋಡಣೆ, ನಿರ್ವಹಣೆಗೆ ವಿದೇಶವನ್ನು ಅವಲಂಬಿಸಿದ್ದ ಭಾರತವು, ತನ್ನಲ್ಲಿರುವ ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನದ ಸಾಮರ್ಥ್ಯವನ್ನು  ಬಳಸಿಕೊಂಡು ಈಗಾಗಲೇ ತನ್ನ ನೆಲದಲ್ಲೇ ಈ ಎಲ್ಲ ಕಾರ್ಯಗಳನ್ನು ನಿರ್ವಹಿಸಲು ಆರಂಭಿಸಿದೆ ಎನ್ನುವುದು ಗಮನಾರ್ಹ. ಒಟ್ಟಲ್ಲಿ ದೇಶವು ಆತ್ಮನಿರ್ಭರವಾಗುವುದರಿಂದಾಗಿ ನಿರುದ್ಯೋಗದ ಸಮಸ್ಯೆಯೂ ದೂರವಾಗಿ ದೇಶ ಬಲಿಷ್ಠವಾಗುತ್ತದೆ.

ರಾಮಮಂದಿರ ನಿರ್ಮಾಣ
ಹಲವು ದಶಕಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣ ಇದೀಗ ನನಸಾಗುತ್ತಿದೆ. ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿನಿಂದ ಕಡೆಗೂ ರಾಮಜನ್ಮಭೂಮಿ ವಿವಾದ ಇತ್ಯರ್ಥವಾಯಿತು. ಅಯೋಧ್ಯೆ ರಾಮನದ್ದೇ ಎಂದು ಸರ್ವೋಚ್ಚ ನ್ಯಾಯಾಲಯವೂ ಹೇಳಿದ್ದರಿಂದ ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಗೆ ಯಾವುದೇ ಸಣ್ಣ ಅಡೆತಡೆ ಕೂಡ ಇಲ್ಲ.

ಮಂದಿರ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಚಾಲನೆ ದೊರೆತಿದೆ. 2024ರ ವೇಳೆಗೆಅಯೋಧ್ಯೆಯಲ್ಲಿ ಭವ್ಯವಾದ ಗಗನಚುಂಬಿ ರಾಮ ಮಂದಿರ ನಿರ್ಮಿಸುವ ಗುರಿ ಬಿಜೆಪಿಗಿದೆ. ಇದರೊಂದಿಗೆ ಬಿಜೆಪಿ ಪ್ರಣಾಳಿಕೆಯಲ್ಲಿದ್ದ ರಾಮಮಂದಿರ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಬಂದಂತಾಗಲಿದೆ. ರಾಮಮಂದಿರ ನಿರ್ಮಾಣಕ್ಕಾಗಿ, ವಿಎಚ್‌ಪಿ, ಬಿಜೆಪಿ ನಾಯಕರು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರು.

ಮಹಿಳಾ ಪರ ಸರ್ಕಾರ
ಮಹಿಳೆಯರ ಕಲ್ಯಾಣಕ್ಕಾಗಿ ಮೋದಿ ಸರ್ಕಾರ ತ್ರಿವಳಿ ತಲಾಖ್‌ ನಿಷೇಧವಷ್ಟೇ ಅಲ್ಲದೇ, ಹಲವು ಸುಧಾರಣೆಗಳನ್ನೂ ಜಾರಿಮಾಡಿದೆ. ಉದಾಹರಣೆಗೆ, ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡುವ ಅವಕಾಶ ವಾಯುಸೇನೆಯಲ್ಲಿ ಪೈಲಟ್‌ (ಫೈಟರ್‌) ವಿಭಾಗದಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಅವಕಾಶ, ಸೈನಿಕ ಶಾಲೆಗಳಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶ.

ಬಲಿಷ್ಠ ಫೋಕ್ಸೋ ಕಾಯ್ದೆ ಜಾರಿ, ಅತ್ಯಾಚಾರಿಗಳಿಗೆ ಮರಣದಂಡನೆಯಂಥ ಶಿಕ್ಷೆ. ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ಹೇಳಿದಂತೆ ಸಂವಿಧಾನ ಎಷ್ಟೇ ಉತ್ತಮವಿರಲಿ ಅದನ್ನು ಜಾರಿಗೊಳಿಸುವವರು (ಅರ್ಥಾತ್‌ ಆಡಳಿತಗಾರರು) ಒಳ್ಳೆಯವರಾಗಿರದಿದ್ದರೆ ಅಥವಾ ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಜಾರಿಗೊಳಿಸುವವರು ಒಳ್ಳಯವರಾಗಿದ್ದರೆ ಅದೂ ಕೂಡಾ ಒಳ್ಳೆಯದಾಗುತ್ತದೆ. ಇದರ ತಾತ್ಪರ್ಯ ಇಷ್ಟೆ ಆಡಳಿತಗಾರರು ಒಳ್ಳೆಯವರು – ಉತ್ತಮರಾಗಿರಬೇಕು ಎನ್ನುವುದು.

Advertisement

Udayavani is now on Telegram. Click here to join our channel and stay updated with the latest news.

Next