Advertisement

ತುಳುನಾಡ ಕಲಾಕೃತಿಗಳನ್ನು ಸುರಕ್ಷಿತವಾಗಿಡುವುದೇ ಸವಾಲು

07:30 PM Jan 23, 2022 | Team Udayavani |

ಕಾರ್ಕಳ: ಕೋಟಿ ಚೆನ್ನಯರ ಥೀಮ್‌ ಪಾರ್ಕ್‌ ಹಿಂಭಾಗ ತುಳುನಾಡ ಸಂಸ್ಕೃತಿಯ ದರ್ಶನಕ್ಕೆ 2 ಕೋಟಿ ರೂ. ವೆಚ್ಚದ ಕಲಾಕೃತಿಗಳ ಪಾರ್ಕ್‌ ನಿರ್ಮಾಣಗೊಂಡಿವೆ. ಉದ್ಘಾಟನೆಗಷ್ಟೆ ಈಗ ಬಾಕಿ ಇದೆ. ಈ ಪಾರಂಪರಿಕ ಸ್ಥಳವನ್ನು ಮೋಜಿನ ತಾಣವನ್ನಾಗಿ ಬಳಸುವ ಪ್ರಯತ್ನ ಕೆಲ ಕಿಡಿಗೇಡಿಗಳು ನಡೆಸುತ್ತಿದ್ದು, ಅವುಗಳಿಗೆ ತಡೆ ಹಾಕುವ ಕೆಲಸವಾಗಬೇಕಿದೆ.

Advertisement

ತುಳುನಾಡ ವೈಭವ ಪ್ರಸ್ತುತಪಡಿಸುವ ವೀರಪುರುಷರಾದ ಕೋಟಿ ಚೆನ್ನಯರ ಬಾಲ್ಯದಿಂದ ಬದುಕಿನ ಕೊನೆವರೆಗಿನ ಹೋರಾಟದ ಕಥೆ, ಪರಾಕ್ರಮ, ಜೀವನ ಶೈಲಿಯನ್ನು ಕಟ್ಟಿ ಕೊಡುವ ಅಪರೂಪದ ನೆನಪುಗಳ ಸಂಗ್ರಹ ಚರಿತ್ರೆ ಕೋಟಿ ಚೆನ್ನಯ ಥೀಂ ಪಾರ್ಕ್‌ನಲ್ಲಿದೆ. ಪಕ್ಕದಲ್ಲಿ ತುಳುನಾಡ ಸಂಸ್ಕೃತಿಯ ಹೇಳುವ ಹಲವು ಕಲಾಕೃತಿಗಳಿವೆ. 1 ಕೋ.ರೂ ವೆಚ್ಚದಲ್ಲಿ ಎರಡನೇ ಹಂತದಲ್ಲಿ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ನಗರದಿಂದ 3 ಕಿ.ಮೀ ದೂರದ ತಾ| ಕ್ರೀಡಾಂಗಣ ಅನತಿ ದೂರದಲ್ಲಿದೆ. 10 ಎಕರೆ ಜಾಗದಲ್ಲಿ ಪಾರ್ಕ್‌ ಇದ್ದು, ಎರಡನೇ ಹಂತದ ಯೋಜನೆಯಲ್ಲಿ ಕಲಾಕೃತಿಗಳು ರಚನೆಗೊಂಡಿವೆ.

ಕಣ್ಮನ ಸೆಳೆಯುವ ಕಲಾಕೃತಿ
ನಿರ್ಮಿತಿ ಕೇಂದ್ರದ ವತಿಯಿಂದ ಕಲಾಕೃತಿ ನಿರ್ಮಾಣವಾಗಿದ್ದು, ತುಳುನಾಡಜೀವನ ಶೈಲಿ, ಸಂಸ್ಕೃತಿಯ ಪ್ರತಿರೂಪ
ವಾಗಿ ಭತ್ತದ ನಾಟಿ, ತೆನೆ ಹೊರುವುದು, ಭತ್ತ ಬಡಿಯುವುದು, ಕಂಬಳ, ಗೋಪೂಜೆ, ಸ್ಪರ್ಧೆ, ಕುಸ್ತಿ, ಶೇಂದಿ ಅಂಗಡಿ, ವನಔಷಧ, ಕುಟೀರ, ಕೋಳಿ ಅಂಕ, ಗಿರಣಿ ಎಣ್ಣೆ ಗಿಡ್ಡ, ಭೂತನರ್ತನ, ಡೋಲು ಕುಣಿತ, ಹುಲಿವೇಷ, ನೇಯ್ಗೆ, ಆಚಾರಿ ಕೊಟ್ಟಿಗೆ, ಆಟಿ ಕಳಂಜ, ಇತ್ಯಾದಿ ತುಳುನಾಡಿನ ಹಿಂದಿನ ಜೀವನಶೈಲಿ, ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ.

ತುಳುನಾಡ ವೈಭವ ವೀಕ್ಷಣೆಗೆ ಸಿದ್ಧವಾಗಿದೆ. ಕಾರ್ಕಳ ಉತ್ಸ ವದ ಸಂದರ್ಭ ಲೋಕಾರ್ಪಣೆ ಯಾಗು ವುದಿತ್ತು. ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟಿದ್ದು ದಿನ ನಿಗದಿಯಾಗ ಬೇಕಷ್ಟೆ. ಪ್ರವಾಸಿಗರ ನೆಪದಲ್ಲಿ ಬರುವ
ಕಿಡಿಗೇಡಿಗಳು ಪ್ರೇಕ್ಷಣೀಯ ತಾಣವನ್ನು ಹಾಳು ಗೆಡಹುವ ಪ್ರಯತ್ನ ನಡೆಸುತ್ತಿದ್ದಾರೆ. ಕಲಾಕೃತಿಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸುವುದು, ಸೆಲ್ಫಿ ತೆಗೆಯುವುದು ಮಾಡುತ್ತಿದ್ದಾರೆ. ಇದರಿಂದ ಕಲಾಕೃತಿಗಳಿಗೆ ಹಾನಿಯಾಗುತ್ತಿದೆ. ಕಲಾಕೃತಿಗಳಿಗೆ ಬಣ್ಣ ಬಳಿದು ಅಂದಗೊಳಿಸಲಾಗಿದ್ದು, ಒಳ ಹೋಗದಂತೆ ನಿರ್ಮಿತಿ ಕೇಂದ್ರದ ವತಿ ಯಿಂದ ತಡೆಬೇಲಿ ನಿರ್ಮಿಸ ಲಾಗಿದೆ. ಆದರೂ ಎದುರು ಭಾಗದಿಂದ ಕಾಂಪೌಂಡ್‌ ಇರುವ ಕಡೆಯ ಮೂಲಕವೂ ಹೋಗಿ ತೊಂದರೆ ನೀಡುತ್ತಿರುತ್ತಾರೆ.

ಸದ್ಯ ಬೀಟ್‌ ಪೊಲೀಸ್‌ ವ್ಯವಸ್ಥೆ ಅಗತ್ಯ
ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ನಿರ್ವಹಣೆಗೆ ಸಮಿತಿ ಆಗಿಲ್ಲ. ವೀಕ್ಷಣೆಗೆ ಈಗ ದರ ನಿಗದಿಪಡಿಸಿಲ್ಲ. ಇಲ್ಲಿಗೆ ಬರುವವರು ಪಕ್ಕದ ಎರಡನೇ ಹಂತದ ಪಾರ್ಕ್‌ನ ಕಲಾಕೃತಿ ನೋಡಲು ತೆರಳುತ್ತಾರೆ. ಈ ಸಂದರ್ಭ ವಿವೇಚನರಹಿತವಾಗಿ ವರ್ತಿಸಿ ಕಲಾಕೃತಿಗಳಿಗೆ ಹಾನಿ ಮಾಡುತ್ತಿರುತ್ತಾರೆ. ಸೆಕ್ಯೂರಿಟಿ ನಿಯೋಜನೆ, ಪಾರ್ಕ್‌ ನಿರ್ವಹಣೆ ಸಮಿತಿ ಇತ್ಯಾದಿ ವ್ಯವಸ್ಥೆ ಆಗಬೇಕಿದೆ. ಲೋಕಾರ್ಪಣೆ ಆಗುವ ತನಕ ಕಲಾಕೃತಿ, ಪರಿಸರವನ್ನು ಸಂರಕ್ಷಿಸಿಡುವುದೇ ದೊಡ್ಡ ಸವಾಲಾಗಿದೆ. ಸಿಸಿ ಕೆಮರಾ ಇತ್ಯಾದಿ ವ್ಯವಸ್ಥೆ ಆವಶ್ಯಕವಾಗಿವೆ ಎನ್ನುವುದು ಸ್ಥಳಿಯರ ಅಭಿಪ್ರಾಯವಾಗಿದೆ.

Advertisement

ಶೀಘ್ರ ಭೇಟಿ ನೀಡುವೆ
ಇತ್ತೀಚೆಗಷ್ಟೇ ನಗರ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ. ತುಳುನಾಡ ವೈಭವ ಕಲಾಕೃತಿ ಗಳಿಗಿರುವಲ್ಲಿಗೆ ನಾನಿನ್ನೂ ಭೇಟಿ ನೀಡಿಲ್ಲ. ಅಲ್ಲಿಗೆ ಶೀಘ್ರ ಭೇಟಿ ನೀಡಿ ಪರಿಶೀಲಿಸುವೆ
-ಪ್ರಸನ್ನ ಎಂ.ಎಸ್‌.,
ಎಸ್‌.ಐ., ಕಾರ್ಕಳ ನಗರ ಠಾಣೆ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next