Advertisement

ಮೇಲ್ಸೇತುವೆ ಮೇಲೊಂದು ಬಸ್‌ ನಿಲ್ದಾಣ!

06:15 AM Mar 15, 2019 | Team Udayavani |

ಬೆಂಗಳೂರು: ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತಿರುವ ಹತ್ತಾರು ಖಾಸಗಿ ವಾಹನಗಳು, ರಸ್ತೆ ಮಧ್ಯೆ ಬಸ್‌ಗಾಗಿ ಕಾಯುವ ಪ್ರಯಾಣಿಕರು, ಕೇವಲ ನೂರು ಮೀಟರ್‌ ರಸ್ತೆ ಕ್ರಮಿಸಲು ಹತ್ತಾರು ನಿಮಿಷ ಪರದಾಡುವ ವಾಹನ ಸವಾರರು…

Advertisement

ಹಳೇ ಮದ್ರಾಸ್‌ ರಸ್ತೆಯಲ್ಲಿ ಉಂಟಾಗುತ್ತಿದ್ದ ವಾಹನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಮಿಸಿರುವ ಕೆ.ಆರ್‌.ಪುರ ತೂಗು ಸೇತುವೆಯ ಟಿನ್‌ ಫ್ಯಾಕ್ಟರಿ ಬಳಿ ನಿತ್ಯ ಕಂಡುಬರುವ ದೃಶ್ಯಗಳಿವು.

ವಾಹನ ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಕೆ.ಆರ್‌.ಪುರ ರೈಲು ನಿಲ್ದಾಣದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗಿದ್ದು, ದೇಶದ ಅತ್ಯುತ್ತುಮವಾದ ಮೇಲ್ಸೇತುವೆ ಎಂಬ ಖ್ಯಾತಿಯನ್ನು ಇದು ಪಡೆದಿದೆ. ಆದರೆ, ವಾಹನಗಳು ಮಾತ್ರ ಮೇಲ್ಸೇತುವೆ ಪ್ರವೇಶಿಸಲು ಹತ್ತಾರು ನಿಮಿಷ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಇದೀಗ ಬಿಎಂಆರ್‌ಸಿಎಲ್‌ ವತಿಯಿಂದ ನಮ್ಮ ಮೆಟ್ರೋ ಯೋಜನೆಯ ಮಾರ್ಗಕ್ಕಾಗಿ ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪರಿಣಾಮ ರಸ್ತೆ ವಿಭಜಕದಿಂದ ನಾಲ್ಕೈದು ಅಡಿ ಜಾಗವನ್ನು ಬ್ಯಾರಿಕೇಡಿಂಗ್‌ ಮಾಡುವ ಮೂಲಕ ರಸ್ತೆ ಗಾತ್ರ ಕುಗ್ಗಿಸಲಾಗಿದೆ.

ಜತೆಗೆ ಐಟಿಪಿಎಲ್‌, ವೈಟ್‌ಫೀಲ್ಡ್‌, ಮಹದೇವಪುರ ಹಾಗೂ ಸಿಲ್ಕ್ ಬೋರ್ಡ್‌ಗೆ ಹೋಗಲು ಒಂದು ಕಡೆ ಹಾಗೂ ಕೋಲಾರ, ಚಿಂತಾಮಣಿ, ಆಂಧ್ರ, ತಮಿಳುನಾಡು ಕಡೆಗೆ ಹೋಗುವವರಿಗೆ ಮತ್ತೂಂದು ನಿಲ್ದಾಣವಿದೆ. ಪರಿಣಾಮ ಜನರು ರಸ್ತೆಗಳಲ್ಲಿಯೇ ನಿಲ್ಲುವುದರಿಂದ ದಟ್ಟಣೆ ನಿವಾರಣೆ ತ್ರಾಸದಾಯವಾಗಿ ಪರಿಣಮಿಸಿದೆ.

Advertisement

ಖಾಸಗಿ ಬಸ್‌ಗಳಿಗೆ ಅರ್ಧ ರಸ್ತೆ ಮೀಸಲು!: ಕೇವಲ 40 ಅಡಿ ಅಗಲವಿರುವ ಮೇಲ್ಸೇತುವೆ ರಸ್ತೆಯಲ್ಲಿ ಎರಡು ಬಸ್‌ಗಳು ಒಟ್ಟಿಗೆ ಸಂಚರಿಸಲು ಅವಕಾಶವಿದೆ. ಆದರೆ, ಆಂಧ್ರ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಹೋಗುವ ಖಾಸಗಿ ಬಸ್‌ಗಳು ಮೇಲ್ಸೇತುವೆಯ ಅರ್ಧ ರಸ್ತೆ ಅಕ್ರಮಿಸುತ್ತಿವೆ. ಪರಿಣಾಮ ಉಳಿದ ಅರ್ಧ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಂಚರಿಸಲಾಗದೆ ಕಿಲೋ ಮೀಟರ್‌ಗಟ್ಟಲೇ ದಟ್ಟಣೆ ಸೃಷ್ಟಿಯಾಗುತ್ತಿದೆ. 

ದಟ್ಟಣೆಯ ಪರಿಣಾಮವೇನು?: ಟಿನ್‌ಫ್ಯಾಕ್ಟರಿ ಬಸ್‌ ನಿಲ್ದಾಣದ ಬಳಿ ಕೇವಲ ಐದು ನಿಮಿಷ ದಟ್ಟಣೆ ಉಂಟಾದರೆ ಹೊರವರ್ತುಲ ರಸ್ತೆ ಹಾಗೂ ಹಳೆಮದ್ರಾಸ್‌ನ ರಸ್ತೆಯ ಎರಡೂ ಬದಿ, ಐಟಿಪಿಎಲ್‌ ಹಾಗೂ ಸಿಲ್ಕ್ಬೋಡ್‌ ರಸ್ತೆಯಲ್ಲಿ 20-30 ನಿಮಿಷಗಳ ಕಾಲ ದಟ್ಟಣೆ ಉಂಟಾಗುತ್ತದೆ. ಇನ್ನು ಬೆಳಗ್ಗೆ ಹಾಗೂ ಸಂಜೆ ವೇಳೆ ದಟ್ಟಣೆ ದುಪ್ಪಟ್ಟಾದ ಉದಾಹರಣೆಗಳಿವೆ.

ದಟ್ಟಣೆ ಹೆಚ್ಚಿಸಿದೆಯೇ ವೈಟ್‌ಟಾಪಿಂಗ್‌: ನಾಗಾವಾರ ಹೊರ ವರ್ತುಲ ರಸ್ತೆಯಲ್ಲಿ ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ವೈಟ್‌ಟಾಪಿಂಗ್‌ ಕಾಮಗಾರಿಯೂ ಟಿನ್‌ಫ್ಯಾಕ್ಟರಿಯಲ್ಲಿ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. ಬಾಣಸವಾಡಿಯಿಂದ ಟಿನ್‌ಫ್ಯಾಕ್ಟರಿ ರ್‍ಯಾಂಪ್‌ವರೆಗೆ ವೈಟ್‌ಟಾಪಿಂಗ್‌ ರಸ್ತೆಯಾಗಿರುವುದರಿಂದ ವಾಹನ ಸಂಚಾರಕ್ಕೆ ಅನುಕೂಲವಾಗಲಿದ್ದು, ಒಮ್ಮೆಗೆ ನೂರಾರು ವಾಹನಗಳು ಟಿನ್‌ಫ್ಯಾಕ್ಟರಿಗೆ ಬರುತ್ತಿರುವುದು ಸಹ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. 

ಖಾಸಗಿ ಬಸ್‌ಗಳಿಗೆ ಕಡಿವಾಣವೊಂದೆ ಪರಿಹಾರ!: ಕೆ.ಆರ್‌.ಪುರ ತೂಗು ಸೇತುವೆ ಪ್ರವೇಶಿಸುವ ಆರಂಭದಲ್ಲಿಯೇ ಹತ್ತಾರು ಖಾಸಗಿ ವಾಹನಗಳು ನಿಲುಗಡೆಯಾಗಿರುತ್ತವೆ. ಟಿಕೆಟ್‌ ಬುಕ್ಕಿಂಗ್‌ ಮಾಡಿರುವ ಪ್ರಯಾಣಿಕರು ಬರುವವರೆಗೆ ವಾಹನ ಮುಂದೆ ಹೋಗುವುದಿಲ್ಲ.

ಆದರೆ, ಸಂಚಾರ ಪೊಲೀಸರು ಮಾತ್ರ ಇಂತಹ ಬಸ್‌ಗಳ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗದಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದ್ದು, ಸಿಸಿ ಕ್ಯಾಮೆರಾ ಅಳವಡಿಸಿ ಅವೈಜ್ಞಾನಿಕವಾಗಿ ವಾಹನ ನಿಲುಗಡೆ ಮಾಡುವ ವಾಹನಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂಬುದು ಜನರ ಒತ್ತಾಯವಾಗಿದೆ. 

2 ಕಿ.ಮೀ. ಸಾಗಲು 30 ನಿಮಿಷ!: ಬೆನ್ನಿಗಾನಹಳ್ಳಿಯ ರೈಲ್ವೆ ಅಂಡರ್‌ ಪಾಸ್‌ನಿಂದ ಹಳೆ ಮದ್ರಾಸ್‌ ರಸ್ತೆಯ ಐಟಿಐ ಬಸ್‌ ನಿಲ್ದಾಣದವರೆಗಿನ 2 ಕಿ.ಮೀ. ರಸ್ತೆ ಸಾಗಲು ಕನಿಷ್ಠ 30 ನಿಮಿಷಗಳಾಗುತ್ತಿದೆ. ದಟ್ಟಣೆ ನಿವಾರಣೆಗಾಗಿ ಸಿಗ್ನಲ್‌ ಅಳವಡಿಕೆ ಮಾಡಲಾಗಿದ್ದರೂ, ದಟ್ಟಣೆ ಮಾತ್ರ ಬಗೆಹರಿದಿಲ್ಲ.

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next