Advertisement
ಅವರ ಕಣ್ಣುಗಳಲ್ಲಿ ಮತಿಭ್ರಮಣೆಯ ಕಿಡಿಗಳಿದ್ದವು, ಅವರ ಮುಖದ ತುಂಬೆಲ್ಲ ಹತ್ಯೆಯ ಛಾಯೆ ಕುಣಿದಾಡುತ್ತಿತ್ತು. “ಏಯ್ ಏಯ್ ಏಯ್…ಟ್ರೇನ್ನಲ್ಲಿ ಯಾರಾದರೂ ಸರ್ದಾರ್ಗಳಿದ್ದಾರಾ? ಗುಂಡು ಹೊಡೆದು ಸಾಯಿಸ್ತೀವಿ ಅವರನ್ನ’ ಎನ್ನುವ ಮೈನಡುಗಿಸುವ ಅವರ ಕೂಗು ಕೇಳಿ ನಮ್ಮ ಮೈಕೈ ಮರಗಟ್ಟಿಹೋಯಿತು…
Related Articles
Advertisement
ಮರುದಿನ ಬೆಳಗ್ಗೆ 11 ಗಂಟೆಗೆ ನಾವು ಗಾಜಿಯಾಬಾದ್ ತಲುಪಿದೆವು (ದೆಹಲಿಯಿಂದ 2 ತಾಸು ದೂರದಲ್ಲಿದೆ). ಗಾಜಿಯಾಬಾದ್ ನಮ್ಮ ಪಾಲಿನ ಅತ್ಯಂತ ಭಯಾನಕ ಪಯಣಕ್ಕೆ ಮುನ್ನುಡಿ ಬರೆಯಿತು. ರಕ್ತಪಿಪಾಸು ತೋಳಗಳಂತೆ ವರ್ತಿಸುತ್ತಿದ್ದ ಗುಂಪೊಂದು ಸಿಖ್ಬರನ್ನು ಕೊಚ್ಚಿಹಾಕಲು ಗಾಜಿಯಾಬಾದ್ ಸ್ಟೇಷನ್ನಿನಲ್ಲಿ ಕಾದು ನಿಂತಿತ್ತು. ಟ್ರೇನ್ ನಿಲ್ಲುತ್ತಿದ್ದಂತೆಯೇ ಕಬ್ಬಿಣದ ಸರಳುಗಳು, ಚಾಕು ಹಿಡಿದಿದ್ದ ಅವರೆಲ್ಲ ಹುಚ್ಚುತನದ ಅತಿರೇಕದಲ್ಲಿ ಅನ್ಯ ಬೋಗಿಯಲ್ಲಿದ್ದ ಸಿಖ್ಬರನ್ನು ಹುಡುಕಿ ಹೊರಗೆಳೆದು ಅವರ ಪೇಟಾಕ್ಕೆ ಬೆಂಕಿ ಹಚ್ಚಿದರು, ಚಾಕು-ರಾಡ್ಗಳಿಂದ ತಿವಿದು ಸಾಯಿಸಿ, ದೇಹಗಳನ್ನು ಹಳಿಗಳ ಮೇಲೆ ಎಸೆಯಲಾರಂಭಿಸಿದರು. ಮುಪ್ಪಾನು ಮುದುಕರನ್ನೂ ಅವರು ಉಳಿಸಲಿಲ್ಲ. ಆ ಹತ್ಯೆಗಳನ್ನು ನಡೆಸುತ್ತಲೇ ಈ ರಕ್ತದಾಹಿ ಗುಂಪು “ನಾವು ಹೆಣ್ಣುಮಕ್ಕಳಿಗೆ ಏನೂ ಮಾಡುವುದಿಲ್ಲ’ ಎಂದು ಘೋಷಿಸುತ್ತಾ ಓಡಾಡುತ್ತಿತ್ತು! ಯಾವ ಅರ್ಥದಲ್ಲಿ ಹೆಣ್ಣು ಮಕ್ಕಳಿಗೆ ಏನೂ ಮಾಡುವುದಿಲ್ಲ ಎಂದು ಈ ಗುಂಪಿನಲ್ಲಿದ್ದವರು ಸಾರುತ್ತಿದ್ದರು? ತಮ್ಮ ಕುಟುಂಬದ ಗಂಡಸರು ಬರ್ಬರವಾಗಿ ಹತ್ಯೆಯಾಗುವುದನ್ನು ಕಣ್ಣಾರೆ ನೋಡುವುದಕ್ಕಿಂತ ಯಾತನೆಯ ವಿಷಯ ಬೇರೇನಿದೆ ಹೆಣ್ಣುಮಕ್ಕಳಿಗೆ? ಆ ಹತ್ಯಾಕಾಂಡದಲ್ಲಿ ನಮ್ಮೊಡನಿದ್ದ ಆರು ಜನ ಸಿಖ್ ಗಂಡಸರು ಮಾತ್ರ ಬದುಕುಳಿದರು. ಇದಕ್ಕೆ ಕಾರಣವಾದದ್ದು, ನಮ್ಮ ಬೋಗಿಯಲ್ಲಿದ್ದ ಸಹಪ್ರಯಾಣಿಕರ ಸಹಾಯ. ಟ್ರೇನ್ ಗಾಜಿಯಾಬಾದ್ನಲ್ಲಿ ಪೂರ್ಣವಾಗಿ ನಿಲ್ಲುವ ಮುನ್ನವೇ ಈ ಗುಂಪಿನಲ್ಲಿದ್ದ ಕೆಲವರು ನಮ್ಮೊಡನಿದ್ದ ಆರು ಗಂಡಸರನ್ನು ನೋಡಿಬಿಟ್ಟಿದ್ದರು. ಹತ್ತಾರು ಕಲ್ಲುಗಳು ನಮ್ಮ ಬೋಗಿಯತ್ತ ತೂರಿ ಬಂದು ಪಟಪಟನೆ ಬಾಗಿಲು, ಸರಳುಗಳಿಗೆ ಬಡಿಯಲಾರಂಭಿಸಿದವು. ಕಿಟಕಿಯ ಗಾಜುಗಳೆಲ್ಲ ಚೂರಾಗಿ ಸಿಡಿಯತೊಡಗಿದವು. ಕೂಡಲೇ ಪ್ರಯಾಣಿಕರೆಲ್ಲ ರಕ್ಷಣೆಗಾಗಿ ಕಿಟಕಿಯ ಶಟರ್ ಎಳೆದುಬಿಟ್ಟರು. ಸ್ಟೇಷನ್ನಿನಲ್ಲಿ ಪೊಲೀಸರು ಇದ್ದರಾದರೂ, ಈ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗದೇ, ಸುಮ್ಮನೇ ಬೆನ್ನು ತಿರುಗಿಸಿ ನಡೆದುಬಿಟ್ಟರೆಂದು ಆಮೇಲೆ ನಮಗೆ ತಿಳಿಯಿತು! ಈ ಗುಂಪು ಒಂದೊಂದೇ ಬೋಗಿಯನ್ನು ಹೊಕ್ಕು ಅದರಲ್ಲಿದ್ದವರನ್ನು ಹತ್ಯೆ ಮಾಡಲಾರಂಭಿಸಿತ್ತು. ನಮ್ಮ ಕೋಚ್ನಲ್ಲಿ ಲೇಡೀಸ್ ಕಂಪಾರ್ಟ್ ಮೆಂಟ್ ಕೂಡ ಇತ್ತು, ಇತರೆ ಪ್ರಯಾಣಿಕರು, ಎದುರಾಗಬಹುದಾದ ಅಪಾಯವನ್ನು ಅರಿತು ನಮ್ಮೊಡನಿದ್ದ ಆರು ಗಂಡಸರಿಗೆ ಲೇಡೀಸ್ ಕಂಪಾರ್ಟ್ಮೆಂಟ್ನಲ್ಲಿ ಅವಿತುಕೊಳ್ಳಲು ಸಲಹೆ ನೀಡಿದರು. ಆದರೆ ಮೊದಲು ಈ ಆರು ಮಂದಿ ಹಿಂದೇಟು ಹಾಕಿದರು. ಕೊನೆಗೆ ನಾವೆಲ್ಲಾ ಸೇರಿ ಅವರನ್ನು ಒಳಗೆ ತಳ್ಳÛಬೇಕಾಯಿತು. (ಐತಿಹಾಸಿಕವಾಗಿ ಧೈರ್ಯ-ಸಾಹಸಕ್ಕೆ ಹೆಸರಾದ ಸಿಖ್ ಗಂಡಸರಿಗೆ, ಈಗ ಮಹಿಳಾ ಕಂಪಾರ್ಟ್ಮೆಂಟ್ನಲ್ಲಿ ಅವಿತುಕೊಳ್ಳುವುದು ಅಸಹನೀಯವಾಗಿತ್ತು.) ಈ ಆರು ಮಂದಿಯೊಡನೆ ಇಬ್ಬರು ಮಹಿಳೆಯರನ್ನೂ ಲೇಡೀಸ್ ಕಂಪಾರ್ಟ್ಮೆಂಟ್ಗೆ ಕಳುಹಿಸ ಲಾಯಿತು. ಯಾರಾದರೂ ಬಂದು ಪ್ರಶ್ನಿಸಿದರೆ, ಕಂಪಾರ್ಟ್ಮೆಂಟ್ನಲ್ಲಿ ಕೇವಲ ಮಹಿಳೆಯರಷ್ಟೇ ಇದ್ದಾರೆ ಎಂದು ಅವರು ಹೇಳಬೇಕಿತ್ತು. ಕೋಚ್ನ ಮುಖ್ಯ ಬಾಗಿಲುಗಳನ್ನು ಒಳಗಿನಿಂದ ಬಂದು ಮಾಡಿಕೊಂಡು ನಾವು ಕುಳಿತೆವು. ಗಾಬರಿಯಿಂದ ನಮ್ಮ ಉಸಿರಾಟದ ಗತಿ ವೇಗವಾಗಲಾರಂಭಿಸಿತ್ತು. ಆರಂಭವಾಯಿತು ನೋಡಿ…
ನಮ್ಮ ಕೋಚ್ನತ್ತ ಓಡಿ ಬಂದ ಆ ಗುಂಪು ಕಬ್ಬಿಣದ ಸರಳುಗಳಿಂದ ಜೋರಾಗಿ ನಮ್ಮ ಬಾಗಿಲಿಗೆ ಹೊಡೆಯಲಾರಂಭಿಸಿದರು. ಬಾಗಿಲು ತೆರೆಯದಿದ್ದರೆ ಇಡೀ ರೈಲಿಗೇ ಬೆಂಕಿ ಹಚ್ಚಿಬಿಡುವುದಾಗಿ ಬೆದರಿಕೆಗಳೂ ಕೇಳಲಾರಂಭಿಸಿದವು. ಈ ಧಮಕಿಗಳಿಗೆ ಹೆದರಿದ ಸಿಖ್ಬತರ ಪ್ರಯಾಣಿಕರೊಬ್ಬರು ನಡುಗುತ್ತಾ ಬಾಗಿಲು ತೆರೆಯಲು ಎದ್ದು ನಿಂತರು. “ಬಾಗಿಲು ತೆರೆಯದಿದ್ದರೆ ಎಲ್ಲರೂ ಪ್ರಾಣ ಕಳೆದು ಕೊಳ್ಳಬೇಕಾಗುತ್ತದೆ’ ಎಂಬ ಭಯ ಅವರದ್ದು. ಆದರೆ ಇತರೆ ಪ್ರಯಾಣಿಕರು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಯಾವುದೇ ಕಾರಣಕ್ಕೂ ಬಾಗಿಲು ತೆರೆಯುವಂತಿಲ್ಲ ಎಂದು ಹೇಳಿ ಆ ವ್ಯಕ್ತಿಯನ್ನು ಆತನ ಜಾಗದಲ್ಲಿ ಕುಳ್ಳಿರಿಸಿದರು. ಕೊನೆಗೂ ಹೊರಗಿದ್ದ ಆ ಗುಂಪು ಸಲಾಕೆಗಳಿಂದ ಬಾಗಿಲನ್ನು ಮುರಿದು ತೆರೆಯಲು ಸಫಲವಾಗಿಬಿಟ್ಟಿತು. ಸುಮಾರು 15 ನಿಮಿಷಗಳವರೆಗೆ ಬಾಗಿಲು ತೆರೆಯಲು ಒದ್ದಾಡಿದ್ದಕ್ಕಾಗಿ ಅವರ ಸಿಟ್ಟು ನೂರ್ಮಡಿಸಿಬಿಟ್ಟಿತ್ತು. ರಕ್ತಕ್ಕಾಗಿ ಅವರ ಮನಸ್ಸು ಒದ್ದಾಡತೊಡಗಿತ್ತು. ನಮ್ಮ ಕೋಚ್ನೊಳಗೆ ರಾಡ್, ಕತ್ತಿ, ಚಾಕು ಹಿಡಿದು ನುಗ್ಗಿದ ಗುಂಪು…ಎಲ್ಲೆಡೆಯೂ ಕಣ್ಣಾಡಿಸಲಾರಂಭಿಸಿತು. ಆಗಲೇ ಅದಕ್ಕೆ ಲೇಡೀಸ್ ಕಂಪಾರ್ಟ್ಮೆಂಟ್ನ ಬಾಗಿಲು ಮುಚ್ಚಿರುವುದು ಗಮನಕ್ಕೆ ಬಂತು. ಕೂಡಲೇ ಅಲ್ಲಿ ಓಡಿ, ಆ ಬಾಗಿಲನ್ನು ಒದೆಯಲಾರಂಭಿಸಿತು. ಈ ಹೊತ್ತಿಗಾಗಲೇ ನಾವೆಲ್ಲ ಭಯದಿಂದ ಕುಸಿದು ಬೀಳುವ ಹಂತ ತಲುಪಿದ್ದೆವು. ಲೇಡೀಸ್ ಕಂಪಾರ್ಟ್ಮೆಂಟ್ನಲ್ಲಿ ಗಂಡಸರಿಲ್ಲ ಎಂದು ಎಷ್ಟೇ ಮನವರಿಕೆ ಮಾಡಲು ಪ್ರಯತ್ನಿಸಿದರೂ ಅವರು ಕೇಳಲು ಸಿದ್ಧರಿರಲಿಲ್ಲ. ಜೋರಾಗಿ ಬಾಗಿಲಿಗೆ ರಾಡ್ಗಳಿಂದ ಹೊಡೆಯಲಾರಂಭಿಸಿದರು. ಅದೇ ಕ್ಷಣದಲ್ಲಿ ಅವರ ದೃಷ್ಟಿ ನಾನು ಮತ್ತು ನನ್ನೊಡನಿದ್ದ ಇತರೆ ಮಹಿಳೆಯರತ್ತ ಹೊರಳಿತು. “ಇವರ್ಯಾಕೆ ಲೇಡೀಸ್ ಕಂಪಾರ್ಟ್ಮೆಂಟ್ನಲ್ಲಿಲ್ಲ?’ ಎಂದು ನಮ್ಮತ್ತ ಕೈತೋರಿಸಿ ಸಹಯಾತ್ರಿಕರನ್ನು ಪ್ರಶ್ನಿಸಿತು ಆ ಗುಂಪು. ಕೂಡಲೇ ಸಹಪ್ರಯಾಣಿಕರೊಬ್ಬರು “ಈ ಹೆಣ್ಣುಮಕ್ಕಳೆಲ್ಲ ನಮ್ಮೊಡನಿದ್ದಾರೆ. ನಮ್ಮ ಮನೆಯ ಹೆಣ್ಣುಮಕ್ಕಳು’ ಎಂದುಬಿಟ್ಟರು. ಉಳಿದ ಪ್ರಯಾಣಿಕರೂ ಭಯವನ್ನು ಮರೆಮಾಚಿಕೊಂಡು ಗುಂಪಿನ ಮನವೊಲಿಸಲು ಪ್ರಯತ್ನಿಸಿದರು. ಅದರ ನಡುವೆಯೂ ಈ ಗುಂಪಿನಲ್ಲಿದ್ದ ಒಂದಿಬ್ಬರು ಲೇಡೀಸ್ ಕಂಪಾರ್ಟ್ಮೆಂಟ್ನ ಬಾಗಿಲುಗಳಿಗೆ ಜೋರಾಗಿ ಒದೆಯುವುದನ್ನು ಮುಂದುವರಿಸಿದ್ದರು. ಆಗಲೇ ಕಂಪಾರ್ಟ್ಮೆಂಟ್ನೊಳಗಿನ ಹೆಣ್ಣುಮಕ್ಕಳು ಹೆದರಿ ಜೋರಾಗಿ ಚೀರಲಾರಂಭಿಸಿದರು. ಆ ಮಹಿಳೆಯರ ಚೀರಾಟ, ಸಹ ಪ್ರಯಾಣಿಕರ ಮಾತು ಕೆಲಸ ಮಾಡಿಬಿಟ್ಟವು! ಲೇಡೀಸ್ ಕಂಪಾರ್ಟ್ಮೆಂಟ್ನಲ್ಲಿ ಸಿಖ್ ಗಂಡಸರಿಲ್ಲ ಎಂದು ಭಾವಿಸಿದ ಈ ಗುಂಪು ಕೆಳಕ್ಕಿಳಿದು ಕಣ್ಮರೆಯಾಯಿತು. ಆರು ಜನರ ಜೀವ ಉಳಿಯಿತು. ಕೆಲ ಸಮಯದ ನಂತರ ಟ್ರೇನ್ ಹೊರಟಿತು. ನಾವೆಲ್ಲ ಬದುಕುಳಿದದ್ದಕ್ಕೆ ನಿಟ್ಟುಸಿರುಬಿಟ್ಟೆವು. ದೆಹಲಿಯಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ ಎಂದೇ ಭಾವಿಸಿದೆವು. ಆದರೆ ದೆಹಲಿ ಸ್ಟೇಷನ್ನಿನಲ್ಲಿಯೂ ಯಾವುದೇ ಭದ್ರತೆ ಇರಲಿಲ್ಲ! ಈ ಕಾರಣಕ್ಕಾಗಿಯೇ, ಸುಮಾರು 500ಕ್ಕೂ ಹೆಚ್ಚು ಸಿಖ್ ಪುರುಷರು ವೇಟಿಂಗ್ ರೂಮಿನಲ್ಲಿ ಸಿಲುಕಿಕೊಂಡಿದ್ದರು. ಸ್ಟೇಷನ್ನಿಂದ ಹೊರಗೆ ಹೋದರೆ ಸಾವು ಖಚಿತ ಎನ್ನುವುದು ಅವರಿಗೆ ಸ್ಪಷ್ಟವಾಗಿತ್ತು. ತಮ್ಮ ಗಂಡಸರನ್ನು ಸುರಕ್ಷಿತವಾಗಿಡುವುದು ಹೇಗೆ ಎಂದು ತಿಳಿಯದೇ ಹೊರಗೆ ಹೆಣ್ಣುಮಕ್ಕಳು ಒದ್ದಾಡುತ್ತಿದ್ದರು. ನಾನು ನನ್ನ ಗುಂಪಿನಲ್ಲಿದ್ದ ಹೆಣ್ಣುಮಕ್ಕಳೊಡನೆ ದೆಹಲಿ ರೈಲ್ವೇ ಸ್ಟೇಷನ್ನಿಂದ ಹೊರಬರುವುದರಲ್ಲಿ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ನಮ್ಮ ಜೊತೆಗಿದ್ದ ಆರು ಜನ ಸಿಖ್ ಗಂಡಸರು ಸ್ಟೇಷನ್ನಿನಲ್ಲಿಯೇ ಉಳಿದುಕೊಂಡರು. (ನಮ್ಮ ಟ್ರೇನಿನಲ್ಲಿ ಬದುಕುಳಿದ ಸಿಖ್ ಪುರುಷರೆಂದರೆ ಅವರಷ್ಟೇ!). ಅವರೆಲ್ಲ ಅದೇ ಟ್ರೇನ್ನ ಅನೇಕ ಬೋಗಿಗಳಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೇಹಗಳನ್ನು, ಗಾಯಾ ಳುಗಳನ್ನು ಹೊರಕ್ಕೆ ತರಲು ಸಹಾಯ ಮಾಡತೊಡಗಿದರು. ಕೊನೆಗೂ ಈ ಆರು ಮಂದಿಯನ್ನು ಸುರಕ್ಷಿತವಾಗಿ ದೆಹಲಿ ಸ್ಟೇಷನ್ನಿನಿಂದ ಹೊರತರುವಷ್ಟರಲ್ಲಿ ರಾತ್ರಿ 8 ಗಂಟೆಯಾಗಿತ್ತು. ಅಲ್ಲಿ ಘನಘೋರ ಮೌನವೊಂದೇ ಉಳಿದಿತ್ತು. ಚಾಕು- ರಾಡುಗಳಿಂದ ಜರ್ಜರಿತವಾಗಿದ್ದ, ಅಂಗಾಂಗಗಳು ಛಿದ್ರವಾಗಿದ್ದ, ರಕ್ತಸಿಕ್ತ ಮುಖದ ಹಲವಾರು ದೇಹಗಳನ್ನು ನಾನು ನೋಡಿದೆ. ಇವರೆಲ್ಲ ಕೋಲ್ಕತ್ತಾದಿಂದ ನಮ್ಮ ಟ್ರೇನ್ನಲ್ಲೇ ಏರಿದವರು.. ಅಷ್ಟರಲ್ಲಾಗಲೇ, ಅನೇಕ ಜಾಗಗಳಿಂದ ದೆಹಲಿಗೆ ಬಂದ ಇತರೆ ಟ್ರೇನುಗಳೂ ಸಿಖ್ ಪುರುಷರ ಶವಗಳನ್ನು ತಮ್ಮೊಡಲಲ್ಲಿ ಹೊತ್ತು ತಂದಿದ್ದವು. ಕೇವಲ ಸಿಖ್ಬರಾಗಿ ಹುಟ್ಟಿದ್ದಕ್ಕಾಗಿ ಜೀವ ಕಳೆದುಕೊಂಡಿದ್ದರು ಈ ಅಮಾಯಕರೆಲ್ಲ… ಈ ಘಟನೆ ನಡೆದು ದಶಕಗಳೇ ಕಳೆದಿವೆ. ಆದರೆ ಕೋಲ್ಕತ್ತಾದಿಂದ-ದೆಹಲಿಯೆಡೆಗಿನ ಆ ಭಯಾನಕ ರೈಲು ಪಯಣ, ಇಷ್ಟು ವರ್ಷಗಳಾದರೂ ನನ್ನನ್ನು ಕಾಡುತ್ತಲೇ ಇದೆ. ಪಾಯಲ್ ಸಿಂಗ್ ಮೊಹಾಂಕಾ