Advertisement

ಈ ವಾರ ತೆರೆಗೆ ಹತ್ತು; ರಿಲೀಸ್‌ಗೆ ಸಾಲು ಸಾಲು ಸಿನಿಮಾ

09:50 AM Nov 28, 2019 | Lakshmi GovindaRaj |

ಈ ವರ್ಷ ಪೂರ್ಣಗೊಳ್ಳಲು ತಿಂಗಳಷ್ಟೇ ಬಾಕಿ ಇದೆ. ಹೀಗಾಗಿ ಕನ್ನಡ ಚಿತ್ರರಂಗದಲ್ಲೀಗ ಚಿತ್ರಗಳ ಬಿಡುಗಡೆಯ ತಯಾರಿ ಜೋರಾಗಿಯೇ ಇದೆ. ಸ್ಟಾರ್‌ ಸಿನಿಮಾಗಳ ಬಿಡುಗಡೆ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಒಂದಷ್ಟು ಹೊಸಬರ ಚಿತ್ರಗಳು ಬಿಡುಗಡೆಗೆ ಹಿಂದೆ ಮುಂದೆ ನೋಡಿದ್ದವು. ದೊಡ್ಡವರ ಮುಂದೆ ನಾವೇಕೆ? ಎಂಬ ಕಾರಣ ಕೊಟ್ಟು ಚಿತ್ರ ಬಿಡುಗಡೆಯನ್ನು ಮುಂದೂಡಿದ್ದವು. ಈ ವಾರ ಬರೋಬ್ಬರಿ ಹತ್ತು ಚಿತ್ರಗಳು ಬಿಡುಗಡೆಯಾಗುತ್ತಿವೆ. ಇವು ಅಧಿಕೃತವಾಗಿ ಘೋಷಣೆ ಮಾಡಿದ ಚಿತ್ರಗಳು. ಇನ್ನೆರೆಡು ದಿನಗಳಲ್ಲಿ ಬಿಡುಗಡೆಯ ಸಂಖ್ಯೆ ಹೆಚ್ಚಿದರೂ ಅಚ್ಚರಿ ಇಲ್ಲ. ಆ ಕುರಿತು ಒಂದು ವರದಿ.

Advertisement

ಸಾಮಾನ್ಯವಾಗಿ ವಾರಕ್ಕೆ ಮೂರು, ನಾಲ್ಕು, ಆರು, ಏಳು ಚಿತ್ರಗಳು ಬಿಡುಗಡೆಯಾಗಿರುವ ಉದಾಹರಣೆಗಳಿವೆ. ಈ ವಾರ ಹತ್ತು ಚಿತ್ರಗಳು ಚಿತ್ರಮಂದಿರಕ್ಕೆ ಅಪ್ಪಳಿಸುತ್ತಿವೆ. ಪ್ರೇಕ್ಷಕರಿಗೆ ಹಬ್ಬವಂತೂ ಹೌದು. ಆದರೆ, ಯಾವ ಸಿನಿಮಾ ನೋಡಬೇಕು ಎಂಬ ಗೊಂದಲ ಮಾತ್ರ ಸುಳ್ಳಲ್ಲ. ಆದರೂ, ತಮ್ಮ ಚಿತ್ರದ ಕಂಟೆಂಟ್‌ ನಂಬಿಕೊಂಡು ಚಿತ್ರಮಂದಿರಕ್ಕೆ ಲಗ್ಗೆ ಇಡಲು ಒಂದಷ್ಟು ಚಿತ್ರಗಳಂತೂ ಸಜ್ಜಾಗಿವೆ. “ದಮಯಂತಿ’, “ಬ್ರಹ್ಮಚಾರಿ’,”ಮೂಕಜ್ಜಿಯ ಕನಸುಗಳು’,”ಮುಂದಿನ ನಿಲ್ದಾಣ’,”ರಿವೀಲ್‌’,”ರಣಹೇಡಿ’,”ಕಿರು ಮಿನ್ಕಣಜ’, “ಮಾರ್ಗರೇಟ್‌’, “ನಾನೇ ರಾಜ’ ಮತ್ತು “ತುಂಡೈಕ್ಳ ಸಾವಾಸ’ ಚಿತ್ರಗಳು ತಮ್ಮ ಬಿಡುಗಡೆಯ ದಿನ ಘೋಷಿಸಿವೆ. ತೆರೆಮರೆಯಲ್ಲಿ ಬಿಡುಗಡೆಗೆ ಪ್ರಯತ್ನಿಸುತ್ತಿರುವ ಚಿತ್ರಗಳೂ ಇವೆ. ಒಂದು ವೇಳೆ ಆ ಚಿತ್ರಗಳೂ ಈ ವಾರವೇ ಬಿಡುಗಡೆಯಾದರೆ, ಖಂಡಿತವಾಗಿಯೂ ಇದೊಂದು ದಾಖಲೆಯೇ ಸರಿ.

ದಮಯಂತಿ ದರ್ಶನ
ರಾಧಿಕಾ ಅಭಿನಯದ “ದಮಯಂತಿ’ ಚಿತ್ರವನ್ನು ನವರಸನ್‌ ನಿರ್ಮಿಸಿ, ನಿರ್ದೇಶಿಸಿದ್ದಾರೆ. ವಿಶೇಷವೆಂದರೆ, ಇದು ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ತಯಾರಾಗಿದೆ. ಹಾರರ್‌, ಥ್ರಿಲ್ಲರ್‌, ಕಾಮಿಡಿ ಕಥೆ ಹೊಂದಿರುವ ಚಿತ್ರದಲ್ಲಿ “ಭಜರಂಗಿ’ ಲೋಕಿ, ಸಾಧುಕೋಕಿಲ, ತಬಲನಾಣಿ, ಮಿತ್ರ, ನವೀನ್‌ ಕೃಷ್ಣ, ಹೊನ್ನವಳ್ಳಿ ಕೃಷ್ಣ, ರವಿಗೌಡ, ಬಲರಾಜವಾಡಿ, ವೀಣಾಸುಂದರ್‌, ಕೆಂಪೇಗೌಡ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಗಣೇಶ್‌ ನಾರಾಯಣ್‌ ಸಂಗೀತವಿದೆ. ಪಿ.ಕೆ.ಎಚ್‌ ದಾಸ್‌ ಛಾಯಾಗ್ರಹಣವಿದೆ. ವಿನೋದ್‌ ಸಾಹಸ ಮಾಡಿದ್ದಾರೆ.

ಬ್ರಹ್ಮಚಾರಿ ಪುರಾಣ
“ನೀನಾಸಂ’ ಸತೀಶ್‌ ನಾಯಕರಾಗಿ ನಟಿಸಿರುವ “ಬ್ರಹ್ಮಚಾರಿ’ ಚಿತ್ರಕ್ಕೆ ಚಂದ್ರಮೋಹನ್‌ ನಿರ್ದೇಶಕರು. ಶೀರ್ಷಿಕೆಯೇ ಹೇಳುವಂತೆ ಇದೊಂದು ಪಕ್ಕಾ ಹಾಸ್ಯಮಯ ಚಿತ್ರ. ಒಂದೊಳ್ಳೆಯ ಮನರಂಜನೆಯ ಪಾಕ ಇದರಲ್ಲಿದೆ ಎಂಬ ಗ್ಯಾರಂಟಿ ಚಿತ್ರತಂಡದ್ದು. ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ. ಉಳಿದಂತೆ ಶಿವರಾಜ್‌ ಕೆ.ಆರ್‌.ಪೇಟೆ, ಅಶೋಕ್‌, ಅಕ್ಷತ, ಅಚ್ಯುತಕುಮಾರ್‌, ಪದ್ಮಜಾರಾವ್‌, ದತ್ತಣ್ಣ ಇತರರು ನಟಿಸಿದ್ದಾರೆ. ಚಿತ್ರಕ್ಕೆ ರವಿಕುಮಾರ್‌ ಛಾಯಾಗ್ರಹಣವಿದೆ. ಧರ್ಮವಿಶ್‌ ಸಂಗೀತ ನೀಡಿದ್ದಾರೆ. ಅರ್ಜುನ್‌ ಕಿಟ್ಟು ಸಂಕಲನ ಮಾಡಿದ್ದಾರೆ. ಉದಯ್‌ ಮೆಹ್ತಾ ನಿರ್ಮಾಣ ಮಾಡಿದ್ದಾರೆ.

ಶೇಷಾದ್ರಿಯ ಮೂಕಜ್ಜಿಯ ಕನಸುಗಳು
ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ಪಡೆದ “ಮೂಕಜ್ಜಿಯ ಕನಸುಗಳು’ ಚಿತ್ರರೂಪ ಪಡೆದಿದೆ. ಪಿ.ಶೇಷಾದ್ರಿ ಚಿತ್ರವನ್ನು ನಿರ್ದೇಸಿಸಿದ್ದಾರೆ. ತಮ್ಮ ಗೆಳೆಯರೊಂದಿಗೆ ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ. ಚಿತ್ರದಲ್ಲಿ “ಮೂಕಜ್ಜಿ’ ಪಾತ್ರದಲ್ಲಿ ಬಿ.ಜಯಶ್ರೀ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅರವಿಂದ್‌ ಕುಪ್ಳಿಕರ್‌, ನಂದಿನಿ ವಿಠಲ್‌, ರಾಮೇಶ್ವರಿ ವರ್ಮ, ಪ್ರಗತಿ ಪ್ರಭು, ಕಾವ್ಯಾಶಾ, ಪ್ರಭುದೇವ, ಸಿದ್ಧಾರ್ಥ್ ಇತರರು ನಟಿಸಿದ್ದಾರೆ. ಪ್ರವೀಣ್‌ ಗೋಡ್ಖಿಂಡಿ ಸಂಗೀತ ನೀಡಿದ್ದಾರೆ. ಜಿ.ಎಸ್‌.ಭಾಸ್ಕರ್‌ ಛಾಯಾಗ್ರಹಣ ಹಾಗು ಬಿ.ಎಸ್‌.ಕೆಂಪರಾಜು ಅವರ ಸಂಕಲನವಿದೆ.

Advertisement

ಹೊಸಬರ ಮುಂದಿನ ನಿಲ್ದಾಣ
ಹೊಸಬರ ಈ ಚಿತ್ರದಲ್ಲಿ ಪ್ರವೀಣ್‌ ತೇಜ್‌ ಹೀರೋ. ರಾಧಿಕಾ ನಾರಾಯಣ್‌ ನಾಯಕಿಯಾಗಿದ್ದಾರೆ. ಕೋಸ್ಟಲ್‌ ಬ್ರಿಜ್‌ ಸಂಸ್ಥೆ ಬ್ಯಾನರ್‌ನಲ್ಲಿ ತಯಾರಾಗಿರುವ ಚಿತ್ರವನ್ನು ವಿನಯ್‌ ಭಾರಧ್ವಜ್‌ ನಿರ್ದೇಶಿಸಿದ್ದಾರೆ. ವಿಶೇಷವೆಂದರೆ ಚಿತ್ರಕ್ಕೆ ಏಳು ಜನ ಸಂಗೀತ ನಿರ್ದೇಶಕರು ಸಂಗೀತ ನೀಡಿದ್ದಾರೆ. ವಾಸುಕಿ ವೈಭವ್‌, ಸ್ವರಾತ್ಮ, ಮಸಾಲ ಕಾಫಿ, ಆದಿಲ್‌ ನದಾಫ್, ಕೌಶಿಕ್‌ ಶುಕ್ಲ, ಜಿಮ್‌ ಸತ್ಯ, ಶ್ರೀನಿಧಿ ವೆಂಕಟೇಶ್‌ ಸಂಗೀತವಿದೆ. ಅಭಿಮನ್ಯು ಸದಾನಂದನ್‌ ಛಾಯಾಗ್ರಹಣವಿದೆ. ಶ್ರೀಕಾಂತ್‌ ಸಂಕಲನ ಮಾಡಿದರೆ, ವಿಶ್ವ ಕಿರಣ್‌, ಅಕ್ಷಿತ್‌ ಶೆಟ್ಟಿ ನೃತ್ಯ ನಿರ್ದೇಶನವಿದೆ. ಈ ಚಿತ್ರದ ತಾರಾಬಳಗದಲ್ಲಿ ಪ್ರವೀಣ್‌ ತೇಜ್‌, ರಾಧಿಕಾ ನಾರಾಯಣ್‌, ಅಜಯ್‌ ರಾಜ್‌, ದತ್ತಣ್ಣ, ಅನನ್ಯಾ ಕಶ್ಯಪ್‌, ದೀಕ್ಷ ಶರ್ಮ, ಶಂಕರ್‌ ಅಶ್ವತ್‌ ನಟಿಸಿದ್ದಾರೆ.

ರೈತರ ಕುರಿತ ರಣಹೇಡಿ
ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರವನ್ನು ಡಿ.ಎಂ ನಿರ್ಮಿಸಿದ್ದಾರೆ. ಮನು ಕೆ.ಶೆಟ್ಟಿಹಳ್ಳಿ ನಿರ್ದೇಶನದ ಈ ಚಿತ್ರಕ್ಕೆ ವಿ.ಮನೋಹರ್‌ ಅವರ ಸಂಗೀತವಿದೆ. ಕುಮಾರ್‌ ಛಾಯಾಗ್ರಹಣ ಹಾಗೂ ನಾಗೇಂದ್ರ ಅರಸ್‌ ಅವರ ಸಂಕಲನವಿದೆ. ಚಿತ್ರದಲ್ಲಿ ಬಿ.ಕುಮಾರ (ಕರ್ಣಕುಮಾರ್‌), ಐಶ್ವರ್ಯ ರಾವ್‌, ಅಚ್ಯುತ್‌ ಕುಮಾರ್‌, ಎಂ.ಎಸ್‌.ಮಹಿನುದ್ದೀನ್‌ (ಶಫಿ), ರಘು ಪಾಂಡೇಶ್ವರ್‌, ಆಶಾಲತ, ಬೇಬಿ ಚಾರಿತ್ರ್ಯ ಇತರರು ನಟಿಸಿದ್ದಾರೆ.

ಹೊಸಬರು ರಿವಿಲ್‌ ಮಾಡ್ತಾರೆ
ಇದು ಕೂಡ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಹೊಸ ಬಗೆಯ ಕಥೆ ಇಟ್ಟುಕೊಂಡು ಮಾಡಿರುವ ಈ ಚಿತ್ರವನ್ನು ಜಯಸುಧ.ಕೆ ನಿರ್ಮಾಣ ಮಾಡಿದ್ದಾರೆ. ಮುರಳಿ. ಎಸ್‌.ವೈ ಚಿತ್ರ ನಿರ್ದೇಶಿಸಿದ್ದಾರೆ. ಅದ್ವೈತ್‌, ಆದ್ಯ ಆರಾಧನ, ಸುಧಾಕರ್‌, ವಿಸ್ಮಯ, ದೇವಿ ಇತರರು ನಟಿಸಿದ್ದಾರೆ. ವಿಜಯ್‌ ಯರ್ಡ್ಲಿ ಅವರ ಸಂಗೀತ ನಿರ್ದೇಶನವಿದೆ. ರವಿ ಸುವರ್ಣ ಛಾಯಾಗ್ರಹಣ ಹಾಗು ಶಿವಪ್ರಸಾದ್‌ ಸಂಕಲನವಿದೆ.

ವಿಭಿನ್ನ ಈ ಕಿರು ಮಿನ್ಕಣಜ
ಶೀರ್ಷಿಕೆಯಲ್ಲೇ ಒಂದು ಕುತೂಹಲ ಕೆರಳಿಸಿರುವ ಈ ಚಿತ್ರವನ್ನು ಜನಾರ್ದನ್‌ ಆರ್‌ ದಸೂದಿ ನಿರ್ಮಿಸಿದ್ದಾರೆ. ಮಂಜು.ಎಂ ನಿರ್ದೇಶನದ ಈ ಚಿತ್ರಕ್ಕೆ ಗೋಪಾಲ್‌ ಮಹಾರಾಜ್‌ ಕಥೆ ಬರೆದು ಸಹ ನಿರ್ದೇಶನ ಮಾಡಿದ್ದಾರೆ. ಸುರೇಶ್‌ ಬಾಬು ಛಾಯಾಗ್ರಹಣವಿದೆ. ಧ್ರುವರಾಜ್‌, ಗಂಧರ್ವ ಸಂಗೀತ ನೀಡಿದ್ದಾರೆ. ಸುಪ್ರಿತ್‌ ಶಂಕರ್‌ ಸಂಕಲನ ಮಾಡಿದರೆ, ಭೂಷಣ್‌, ಮಂಜು ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ರವಿಚಂದ್ರ.ವಿ.ಅರ್ಜುನ್‌ ರಮೇಶ್‌, ವರ್ಷಿಕ, ಜೀವನ್‌ ನೀನಾಸಂ, ಶ್ರೀಧರ್‌ ನಾಯಕ್‌, ಗೋಪಾಲ್‌ ಸೇರಿದಂತೆ ಇತರರು ನಟಿಸಿದ್ದಾರೆ.

ಮಾರ್ಗರೇಟ್‌
ಹೊಸಬರ ಹೊಸ ಆಲೋಚನೆಯೊಂದಿಗೆ ತಯಾರಾಗಿರುವ ಈ ಚಿತ್ರವನ್ನು ಮುರಳಿಧರನ್‌ ಅವರು ನಿರ್ಮಿಸಿದ್ದಾರೆ. ಎಂ.ಎಸ್‌.ಶ್ರೀನಾಥ್‌ ನಿರ್ದೇಶಿಸಿದ್ದು, ಚಿತ್ರದಲ್ಲಿ ಶಂಕರ್‌ ಬಹದ್ದೂರ್‌, ಅಹಲ್ಯ ಸುರೇಶ್‌, ಸೌರವ್‌ ಲೋಕೇಶ್‌, ರಾಜೇಶ್‌ ನಟರಂಗ, ಅರವಿಂದ ರಾವ್‌ ನಟಿಸಿದ್ದಾರೆ. ಚಿತ್ರಕ್ಕೆ ಜಿ.ಪಾಲ್‌ ಸಂಗೀತವಿದೆ. ಡ್ಯಾನಿ ಸಾಹಸ ಮಾಡಿದರೆ, ರಾಜ ಶಿವಶಂಕರ್‌ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಇನ್ನು, ಸೂರಜ್‌ ಅಂಕೋಲ್ಕರ್‌ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.

ನಾನೇ ರಾಜ
ಗಣೇಶ್‌ ಸಹೋದರ ಸೂರಜ್‌ ಕೃಷ್ಣ ಅಭಿನಯದ ಈ ಚಿತ್ರವನ್ನು ಶ್ರೀನಿವಾಸ್‌ ನಿರ್ದೇಶಿಸಿದ್ದಾರೆ. ಹೀರೋ ಇಲ್ಲಿ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಎಲ್‌.ಆನಂದ್‌ ಚಿತ್ರ ನಿರ್ಮಿಸಿದ್ದು, ಚಿತ್ರಕ್ಕೆ ನಾಯಕಿಯಾಗಿ ಸೋನಿಕಾ ಗೌಡ ನಟಿಸಿದ್ದಾರೆ. ವಿನೋದ್‌ ಭಾರತಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಸಿ.ಎಂ.ಮಹೇಂದ್ರ ಸಂಗೀತವಿದೆ. ರಾಜೇಶ್‌ ಸಾಲುಂಡಿ ಸಂಭಾಷಣೆ ಇದೆ. ಚಿತ್ರದಲ್ಲಿ ಡ್ಯಾನಿ ಕುಟ್ಟಪ್ಪ, ಕುರಿ ಪ್ರತಾಪ್‌, ಉಮೇಶ್‌, ಟೆನ್ನಿಸ್‌ ಕೃಷ್ಣ, ಮಾಲತಿಶ್ರೀ ಇತರರು ನಟಿಸಿದ್ದಾರೆ.

ತುಂಡ್‌ ಹೈಕ್ಳ ಸಾವಾಸ
ಕಿಶೋರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಬಿ.ಎಂ.ಗಿರಿರಾಜ್‌ ನಿರ್ದೇಶಿಸಿದ್ದಾರೆ. ಶ್ಯಾಮ್‌ ಜಿಗಳಿ, ಎಂ.ಶಂಕರ್‌, ಜಿ.ಎನ್‌.ರುದ್ರೇಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೊಂದು ಹಳ್ಳಿಗಾಡಿನ ಹುಡುಗರ ಕಥೆ ಆಗಿದ್ದು, ಪಕ್ಕಾ ಮನರಂಜನೆಯ ಜೊತೆಗೆ ಒಂದು ಸಂದೇಶವೂ ಇದೆ. ಬಹಳ ದಿನಗಳ ಹಿಂದೆಯೇ ತಯಾರಾಗಿದ್ದ ಈ ಚಿತ್ರ ಈ ವಾರ ತೆರೆಗೆ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next