Advertisement

ಸೋಲಾರ್‌ನಲ್ಲಿ ತಂತ್ರಜ್ಞಾನ ಅಭಿವೃದ್ಧಿ ಅಗತ್ಯ

02:24 PM Apr 28, 2022 | Team Udayavani |

ಹಾವೇರಿ: ಸೋಲಾರ್‌ ಶಕ್ತಿ ಉತ್ಪಾದನೆಯಲ್ಲಿ ನೂತನ ತಂತ್ರಜ್ಞಾನಗಳು ಅಭಿವೃದ್ಧಿಗೊಳ್ಳಬೇಕು. ಗ್ರಾಮೀಣ ಭಾಗದ ಜನರು ಸೋಲಾರ್‌ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಉದ್ಯೋಗದಲ್ಲಿ ಸ್ವಾವಲಂಬನೆ ಸಾಧಿಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಹೇಳಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಸೆಲ್ಕೋ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ ವತಿಯಿಂದ ಬುಧವಾರ ಏರ್ಪಡಿಸಿದ್ದ ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಎಲ್ಲೆಡೆ ಸೋಲಾರ್‌ ತಂತ್ರಜ್ಞಾನ ಸಮೃದ್ಧವಾಗಿ ಬೆಳೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದ ಜನರು ಸೋಲಾರ ಸೌಲಭ್ಯವನ್ನು ಪಡೆದುಕೊಳ್ಳಬೇಕು. ವಿದ್ಯುತ್‌ ನಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದ್ದು, ಸೌರ ಶಕ್ತಿಯನ್ನು ಬಳಸಿಕೊಂಡು ಸೋಲಾರ್‌ ಸೌಲಭ್ಯವನ್ನು ಪಡೆಯುವ ಮೂಲಕ ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಲಾರ್‌ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಂಪೂರ್ಣ ಸೋಲಾರ್‌ ಗ್ರಾಮಗಳನ್ನಾಗಿ ಮಾಡಬೇಕಾಗಿದೆ. ಮುಂಬರುವ ದಿನಗಳಲ್ಲಿ ಸೋಲಾರ್‌ ವಿದ್ಯುತ್‌ ದೀಪಗಳು ಗ್ರಾಮೀಣ ಜನರಿಗೆ ಸುಲಭವಾಗಿ ಸಿಗುವಂತಾಗಬೇಕು ಎಂದರು.

ಸೆಲ್ಕೋ ಸೋಲಾರ್‌ ಕಂಪನಿಯ ಉಪ ಮಹಾ ಪ್ರಬಂಧಕ ಪ್ರಸನ್ನ ಹೆಗಡೆ ಮಾತನಾಡಿ, ಇಂದಿನ ಆಧುನಿಕ ಜೀವನದಲ್ಲಿ ಸೌರಶಕ್ತಿ ಬೆಳಕಿಗಾಗಿ ಮಾತ್ರ ಉಳಿದಿಲ್ಲ, ಅದು ಬದುಕಿಗಾಗಿ ಅವಶ್ಯಕವಾಗಿದೆ. ಕಳೆದ 10 ವರ್ಷಗಳಿಂದ ಸೌರಶಕ್ತಿ ವಿವಿಧ ಉಪಕರಣಗಳು ಬದುಕಿಗೆ ಹೊಸ ಭರವಸೆ ನೀಡಿದ್ದು, ರಾಜ್ಯದ ಯಾದಗಿರಿ, ರಾಯಚೂರಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌರಶಕ್ತಿ ಅಳವಡಿಸಲಾಗಿದೆ.

ಹಾವೇರಿ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸುಮಾರು 500 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸೌರಶಕ್ತಿ ಆಧಾರಿತಗೊಳಿಸಲಾಗಿದೆ ಎಂದರು.

Advertisement

ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಸ್ವಾವಲಂಬಿ ಜೀವನ ನಡೆಸಲು ಸೌರಶಕ್ತಿ ಚಾಲಿತ ಮಂಡಕ್ಕಿ ಬಟ್ಟಿ, ರೊಟ್ಟಿ ಯಂತ್ರ, ಹೊಲಿಗೆ ಯಂತ್ರ, ಝರಾಕ್ಸ್‌ ಯಂತ್ರ, ಕಮ್ಮಾರಿಕೆ, ಆರೋಗ್ಯ ಕೇಂದ್ರ, ವಾಷಿಂಗ್‌ ಮಶೀನ್‌, ಹೈನುಗಾರಿಕೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಬಹುತೇಕ ಎಲ್ಲ ವಲಯಗಳಲ್ಲಿ ಸೌರಶಕ್ತಿ ಬಳಸಿಕೊಂಡು ಕಿರು ಉದ್ಯಮ ಪ್ರಾರಂಭಿಸಿ ಬಹಳಷ್ಟು ಜನರು ಯಶಸ್ಸು ಕಂಡಿದ್ದಾರೆ ಎಂದರು.

ಸೌರ ಉದ್ಯಮಿ ತಿಳವಳ್ಳಿಯ ಶೀಲಾ ಕೊಟಗಿ ಮಾತನಾಡಿ, ಸೋಲಾರ್‌ ಆಧಾರಿತ ರೊಟ್ಟಿಯಂತ್ರ ಸ್ವಾವಲಂಬಿ ಬದುಕು ನೀಡುವ ಮೂಲಕ ಆರ್ಥಿಕ ಸದೃಢತೆ ಸಾಧಿಸಲು ಸಹಕಾರಿಯಾಗಿದೆ. ಮಹಿಳೆಯರು ವಿನಾಃಕಾರಣ ಸಮಯ ವ್ಯರ್ಥ ಮಾಡದೇ ಇಂತಹ ಯಂತ್ರಗಳನ್ನು ಬಳಸಿ ಉದ್ಯಮ ಆರಂಭಿಸಿದರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ. ಮನೆಯಿಂದ ಹೊರಗಡೆ ಹೋಗಿ ದುಡಿಯಲು ಹಿಂಜರಿಯುವ ಮಹಿಳೆಯರು ಸೌರಶಕ್ತಿ ಆಧರಿತ ರೊಟ್ಟಿಯಂತ್ರ ಅಳವಡಿಸಿಕೊಂಡು ಉದ್ಯಮ ಆರಂಭಿಸಬಹುದು. ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಗಳಿಸಲು ಸೌರಶಕ್ತಿ ಆಧಾರಿತ ರೊಟ್ಟಿ ಯಂತ್ರ ಸಹಕಾರಿಯಾಗಿದೆ ಎಂದರು.

ಕಾರ್ಯಾಗಾರದಲ್ಲಿ ಬೆಳಗಾವಿ ಕ್ಷೇತ್ರ ವ್ಯವಸ್ಥಾಪಕ ವಿನಾಯಕ ಹೆಗಡೆ ಸೆಲ್ಕೋ ಕಾರ್ಯ ವಿಧಾನ ಮತ್ತು ಉದ್ದೇಶಗಳ ಕುರಿತು, ಚಿತ್ರದುರ್ಗದ ವ್ಯವಸ್ಥಾಪಕ ಮಂಜುನಾಥ ಭಾಗವತ್‌ ಸೆಲ್ಕೋ ಮತ್ತು ಆರೋಗ್ಯ ಕುರಿತು, ಬೆಂಗಳೂರಿನ ಮುಖ್ಯ ವ್ಯವಸ್ಥಾಪಕ ಅಮೋಘ ಸೌರಶಕ್ತಿ ಆಧಾರಿತ ಜೀವನಾಧಾರ ವೃತ್ತಿ ಕುರಿತು ಉಪನ್ಯಾಸ ನೀಡಿದರು.

ಸಮಾರೋಪ: ಕಾರ್ಯಾ2ಗಾರದ ನಂತರ ಜರುಗಿದ ಸಮಾರೋಪ ಸಮಾರಂಭದಲ್ಲಿ ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಮಾತನಾಡಿ, ನೈಸರ್ಗಿಕ ಇಂಧನ ಮೂಲಗಳ ಸಂಶೋಧನೆ ಹಾಗೂ ಬಳಕೆ ಜಾಗೃತಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸೆಲ್ಕೋ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು. ರಾಣೆಬೆನ್ನೂರ ನೀಡ್ಸ್‌ ಕಾರ್ಯನಿರ್ವಹಣಾಧಿಕಾರಿ ಎ.ಎಫ್‌. ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜು ಮಠದ, ಕರಿಸ್ವಾಮಿ ಕೆ., ರಘು ಜಾವಳಗಿ, ಗಿರೀಶ ಕುಮಾರ, ಸೇರಿದಂತೆ ವಿವಿಧ ಸೆಲ್ಕೋ ಶಾಖೆಗಳ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.

ಸೌರ ಉದ್ಯಮಿಗಳ ಭೇಟಿ ಕಾರ್ಯಾಗಾರಕ್ಕೂ ಮುನ್ನದಿನ ಜಿಲ್ಲೆಯ ವಿವಿಧಡೆ ಸಂಚರಿಸಿ ಸೆಲ್ಕೋ ಸೋಲಾರ್‌ ಚಾಲಿತ ಯಂತ್ರಗಳನ್ನು ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಸೌರ ಉದ್ಯಮಿಗಳನ್ನು ಭೇಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಕ್ಕಿ ಬಟ್ಟಿ, ರೊಟ್ಟಿ ಯಂತ್ರ, ಝರಾಕ್ಸ್‌ ಅಂಗಡಿಗಳ ಉದ್ಯಮಿಗಳು ಸೆಲ್ಕೋ ಸೋಲಾರ್‌ ಚಾಲಿತ ಉಪಕರಣಗಳ ಬಳಕೆಯಿಂದ ಆಗುತ್ತಿರುವ ಪ್ರಯೋಜನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next