Advertisement

ಉಕ್ಕಿನ ಸೇತುವೆ ಕೈಬಿಟ್ಟಿದ್ದ ರ ಹಿಂದೆ ಕೈ ತಂತ್ರಗಾರಿಕೆ​​​​​​​

11:31 AM Mar 03, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಈ ದಿಢೀರ್‌ ತೀರ್ಮಾನವು ಪೂರ್ವಯೋಜಿತ ತಂತ್ರವೇ? ಉಕ್ಕಿನ ಸೇತುವೆ ಪರ ಇರುವ ಸಾರ್ವಜನಿಕರ ಆಕ್ರೋಶ ಬಿಜೆಪಿಯತ್ತ ತಿರುಗುವಂತೆ ಮಾಡುವ ಉದ್ದೇಶ ಇದರ ಹಿಂದೆಯೇ? ಜನಾಗ್ರಹದ ವಾತಾವರಣ ಮೂಡಿಸಿ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳುವ ಉದ್ದೇಶ ಇದರ ಹಿಂದೆ ಇದೆಯೇ?

Advertisement

ಇಂದಿನ ಬೆಳವಣಿಗೆಗಳನ್ನು ಗಮನಿಸಿದವರಿಗೆ ಇಂಥ ಹಲವು ಪ್ರಶ್ನೆಗಳು ಸಹಜವಾಗಿಯೇ ಏಳುತ್ತಿದೆ. ಉಕ್ಕಿನ ಸೇತುವೆ ನಿರ್ಮಾಣ ಪ್ರಸ್ತಾಪವಾದಾಗಿನಿಂದ ಪ್ರತಿ ಹಂತದಲ್ಲೂ ವಿರೋಧ ವ್ಯಕ್ತಪಡಿಸುತ್ತ ಕೊನೆಗೆ ಆ ಕಾಮಗಾರಿಯ ಟೆಂಡರ್‌ನಲ್ಲಿ ಲಂಚ ಪಡೆಯಲಾಗಿದೆಯೆಂದು ಸರ್ಕಾರ ಅದರಲ್ಲೂ ಕಾಂಗ್ರೆಸ್‌ನ ಮೇಲೆ ಮುಗಿಬಿದ್ದ ಬಿಜೆಪಿಗೆ ಅದರದೇ ಮಾರ್ಗದಲ್ಲಿ ತಿರುಗೇಟು ನೀಡಲೆಂದೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

ಉಕ್ಕಿನ ಸೇತುವೆ ವಿರೋಧಿಸುತ್ತಿದ್ದವರಿಗಿಂತ ಉಕ್ಕಿನ ಸೇತುವೆ ಪರ ಇದ್ದವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ, ಲಂಚ ಆರೋಪ ನೆಪ ಮುಂದಿಟ್ಟುಕೊಂಡು ಯೋಜನೆ ರದ್ದುಗೊಳಿಸಿ ಬಿಜೆಪಿ ಅಭಿವೃದ್ಧಿ ವಿರೋಧಿ ಎಂದು ಬಿಂಬಿಸುವ ಉದ್ದೇಶವಾಗಿದೆ ಎಂದು ಹೇಳಲಾಗಿದೆ. ಒಂದೊಮ್ಮೆ ಉಕ್ಕಿನ ಸೇತುವೆ ಪರ ಹೋರಾಟ ಮಾಡಿದ್ದವರು ಮತ್ತೆ ಬೀದಿಗಿಳಿದು ಪ್ರತಿಭಟಿಸಿದರೆ, ಆ ಭಾಗದ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಉಕ್ಕಿನ ಸೇತುವೆ ಬೇಕೇ ಬೇಕೆಂದು ಒತ್ತಡ ಹಾಕಿದರೆ ಜನಾಗ್ರಹದ ಮೇರೆಗೆ ಯೋಜನೆ ಕೈಗೆತ್ತಿಕೊಳ್ಳುವ ಅವಕಾಶವೂ ಇದೆ.

ಹೀಗಾಗಿ, ಸದ್ಯಕ್ಕೆ ಯೋಜನೆ ಸಹವಾಸವೇ ಬೇಡವೆಂದು ಹೇಳುವ ಮೂಲಕ ಸರ್ಕಾರ ಜಾಣನಡೆ ಅನುಸರಿಸಿದೆ. ಮೇಲ್ನೋಟಕ್ಕೆ ಬಿಜೆಪಿಯವರು ಇದೀಗ “ವಿಲನ್‌’ಗಳಂತಾಗಿದ್ದಾರೆ. ಸರ್ಕಾರಕ್ಕೂ ಇದೇ ಬೇಕಾಗಿತ್ತು ಎನ್ನಲಾಗಿದೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಜಾರ್ಜ್‌ ಮುಗಿಬಿದ್ದಿರುವುದನ್ನು ನೋಡಿದರೆ ಹಾಗೆಯೇ ಅನ್ನಿಸುತ್ತದೆ.

ಉಕ್ಕಿನ ಸೇತುವೆ ಯೋಜನೆ ಕೈ ಬಿಡುವ ನಿರ್ಧಾರ ಎರಡು ದಿನಗಳ ಹಿಂದೆಯೇ ಆಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಉಕ್ಕಿನ ಸೇತುವೆ ಟೆಂಡರ್‌ ನೀಡಲು ಪಡೆದಿರುವ 65 ಕೋಟಿ ರೂ. ಲಂಚ ನೇರವಾಗಿ ಸಿದ್ದರಾಮಯ್ಯ ಕುಟುಂಬಕ್ಕೆ ಸೇರಿದೆಯೆಂದು ಆರೋಪ ಮಾಡಿದ್ದರಿಂದ ಕೆರಳಿದ್ದ ಮುಖ್ಯಮಂತ್ರಿ, ಯೋಜನೆಯನ್ನೇ ಕೈ ಬಿಡಿ ಎಂದು ತಿಳಿಸಿದ್ದರು.

Advertisement

ಹೀಗಾಗಿ, ಯೋಜನೆ ರದ್ದುಪಡಿಸುವ ಸಂಬಂಧದ ಘೋಷಣೆಗೆ ಗುರುವಾರ ಮಹೂರ್ತ ನಿಗದಿಪಡಿಸಿ, ಅದಕ್ಕಾಗಿಯೇ ತರಾತುರಿಯಲ್ಲಿ ನೀರಿನ ಸಮಸ್ಯೆ ನಿವಾರಣೆ ಹೆಸರಿನಲ್ಲಿ ಸಭೆ ಆಯೋಜಿಸಿ ಮಾಧ್ಯಮಕ್ಕೆ ಆಹ್ವಾನ ನೀಡಲಾಗಿತ್ತು. ಅಲ್ಲಿ ಬಿಜೆಪಿ ಶಾಸಕರೂ ಬರುವುದರಿಂದ ವಿಷಯ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಯೋಜನೆ ರದ್ದುಮಾಡುವ ಘೋಷಣೆ ಮಾಡಲಾಯಿತೆಂದು ಹೇಳಲಾಗಿದೆ.

ಬಸವೇಶ್ವರ ವೃತ್ತದಿಂದ ಮೇಖೀÅ ವೃತ್ತ ಹೆಬ್ಟಾಳ- ಬ್ಯಾಟರಾಯನಪುರ-ಯಲಹಂಕ ಮಾರ್ಗದಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದ್ದು ಬೆಳಗ್ಗೆ ಹಾಗೂ ಸಂಜೆ ವೇಳೆ ಗಂಟೆಗಟ್ಟಲೆ ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಗುತ್ತವೆ. ಆ ಭಾಗದ ಸಾರ್ವಜನಿಕರು ಹಾಗೂ ನಾಗರಿಕ ಕ್ಷೇಮಾಭಿವೃದ್ಧಿ ಸಂಘಟನೆಗಳು ಈ ಸಮಸ್ಯೆ ನಿವಾರಿಸಲು ಮಾರ್ಗೋಪಾಯ ಕಂಡು ಹಿಡಿಯಬೇಕೆಂದು ಮೊದಲಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದಾರೆ. ಅದಕ್ಕೆ ಸರ್ಕಾರ ಕಂಡುಕೊಂಡಿದ್ದ ಮಾರ್ಗ ಉಕ್ಕಿನ ಸೇತುವೆ.

2010ರಲ್ಲೇ ಈ ಬಗ್ಗೆ ಆಗಿನ ಬಿಜೆಪಿ ಸರ್ಕಾರ ಪ್ರಸ್ತಾವ ಸಿದ್ಧಪಡಿಸಿತ್ತು. ಆದಾದ ನಂತರ ತಾಂತ್ರಿಕ ಸಲಹೆ ಪಡೆಯುವ ಹಂತದಲ್ಲಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಸಲಹೆ ಕಾರ್ಯ ಪೂರ್ಣಗೊಳಿಸಿ 2014ರಲ್ಲಿ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಿಸಿತ್ತು. ಆದರೆ, ಕ್ರಿಯಾ ಯೋಜನೆ ತಯಾರಿ ಪ್ರಾರಂಭವಾಗಿದ್ದು 2016ರಲ್ಲಿ. ಮೊದಲಿಗೆ 1350 ಕೋಟಿ ರೂ. ಇದ್ದ ಯೋಜನಾ ಮೊತ್ತ 1800 ಕೋಟಿ ರೂ.ಗೆ ಏರಿದ್ದೇ ವಿವಾದಕ್ಕೆ ಕಾರಣವಾಯಿತು. ವಿವಾದ ತಾರಕಕ್ಕೇರಿ ಯೋಜನೆಯಲ್ಲಿ ಕಿಕ್‌ಬ್ಯಾಕ್‌ ಪಡೆಯಲಾಗಿದೆಯೆಂಬ ಗಂಭೀರ ಆರೋಪವೂ ಕೇಳಿಬಂದು, ವಿಧಾನಪರಿಷತ್‌ ಸದಸ್ಯ ಗೋವಿಂದ ರಾಜು ನಿವಾಸದ ಮೇಲಿನ ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಡೈರಿ ದೊರೆತಿದ್ದು ಅದರಲ್ಲಿ ಉಕ್ಕಿನ ಸೇತುವೆ ಸಂಬಂಧ 65 ಕೋಟಿ ರೂ. ಲಂಚ ಪಡೆದಿರುವ ಉಲ್ಲೇಖವಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಾಂಬ್‌ ಸಿಡಿಸಿದ್ದರು.

ಕೊನೆಗೆ ಆ ಮೊತ್ತ ಮುಖ್ಯಮಂತ್ರಿ ಕುಟುಂಬಕ್ಕೆ ಸೇರಿದೆ ಎಂದು ಹೇಳಿದ್ದರು. ಇದು ಸರ್ಕಾರ ಮತ್ತು ಸಿದ್ದರಾಮಯ್ಯ ಅವರಿಗೆ ಇರಿಸು ಮುರಿಸು ತಂದಿತ್ತು. ಇದರಿಂದ ಪಾರಾಗಲು ಕೊನೆಗೆ ಉಕ್ಕಿನ ಸೇತುವೆ ಯೋಜನೆಯನ್ನೇ ಕೈ ಬಿಡಲಾಗಿದೆ. ಮುಂದೇನು ? ಎಂಬುದು ಕಾದು ನೋಡಬೇಕಿದೆ.

ಅನುಕೂಲ
6.7 ಕಿ.ಮೀ. ಮಾರ್ಗವನ್ನು ಏಳೇ ನಿಮಿಷದಲ್ಲಿ ಕ್ರಮಿಸಬಹುದು.

ಸಮಯ ಮತ್ತು ಇಂಧನ ಉಳಿತಾಯ

ಕಾಂಕ್ರೀಟ್‌ ಮೇಲ್ಸೇತುವೆಗೆ ಹೋಲಿಸಿದರೆ ನಿರ್ಮಾಣ ಕಾಮಗಾರಿ ಅವಧಿ ಕಡಿಮೆ

ಸಂಚಾರ ನಿರ್ಬಂಧ ವಿಧಿಸದೇ ರಾತ್ರಿ ವೇಳೆ ಸಹ ಕಾಮಗಾರಿನಡೆಸಿ 18 ತಿಂಗಳಲ್ಲಿ ಪೂರ್ಣಗೊಳಿಸಬಹುದು

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಗಮ ಸಂಚಾರ

ಹೆಬ್ಟಾಳ, ಬ್ಯಾಟರಾಯಪುರ, ಯಲಹಂಕ, ಕೊಡಿಗೇಹಳ್ಳಿ ಭಾಗದ ಸಾರ್ವಜನಿಕರಿಗೆ ದಟ್ಟಣೆಯಿಂದ ಮುಕ್ತಿ

ಅನಾನುಕೂಲ
ರಾಷ್ಟ್ರದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಯೋಜನೆ ಕಾರ್ಯಸಾಧುವಲ್ಲ ಎಂಬುದು ತಜ್ಞರ ಅಭಿಮತ.

ಉಕ್ಕಿನ ಸೇತುವೆ ನಿರ್ಮಾಣದಿಂದ ಶಬ್ದ ಮಾಲಿನ್ಯ ತೀವ್ರವಾಗಲಿರುವ ಜತೆಗೆ ಉಷ್ಣತೆ ಕೂಡ ಹೆಚ್ಚಲಿದೆ

ಕಾಮಗಾರಿಗಾಗಿ 812 ಮರಗಳನ್ನು ಕಡಿದರೆ ಹಸಿರು ವಲಯ ನಾಶವಾಗಲಿದೆ ಎಂಬುದು ಪರಿಸರವಾದಿಗಳ ಆತಂಕ.

ಉದ್ಯಾನನಗರಿಯ ಸಹಜ ಸೌಂದರ್ಯಕ್ಕೂ ಇದೊಂದು ಕಾಯಂ ಕಪ್ಪು ಚುಕ್ಕೆಯಾಗಲಿದೆ ಎಂಬ ಆರೋಪ

ಒಂದು ಮೇಲ್ಸೇತುವೆಗೆ ಬರೋಬ್ಬರಿ 1800 ಕೋಟಿ ರೂ. ವೆಚ್ಚ ಆರ್ಥಿಕವಾಗಿ ಮಿತವ್ಯಯಕಾರಿಯಲ್ಲ ಎಂಬ ವಾದ

ಉಕ್ಕಿನ ಸೇತುವೆ ನಿರ್ಮಾಣವಾದರೂ ಚಾಲುಕ್ಯ ವೃತ್ತ, ವಿಧಾನಸೌಧ ಮುಂಭಾಗ “ಬಾಟಲ್‌ ನೆಕ್‌’ ಭೀತಿ

ಈ ಉಕ್ಕಿನ ಸೇತುವೆ ಬಳಕೆ ಮಾಡುವವರು ಟೋಲ್‌ ಪಾವತಿಸಬೇಕಾಗುತ್ತದೆ

ಎನ್‌ಜಿಟಿಯಲ್ಲಿ ಶೀಘ್ರದಲ್ಲೇ ಉಕ್ಕಿನ ಸೇತುವೆಗೆ ಸಂಬಂಧಿಸಿದಂತೆ ಆದೇಶ ಹೊರಬೀಳುತ್ತಿತ್ತು. ವಿಚಾರಣೆಗಳ ಹಂತದಲ್ಲೇ ಆದೇಶದ ಮುನ್ಸೂಚನೆಯೂ ಸರ್ಕಾರಕ್ಕೆ ಸಿಕ್ಕಿತ್ತು. ಆ ಮುಜುಗರದಿಂದ ತಪ್ಪಿಸಿಕೊಳ್ಳಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅದೇನೇ ಇರಲಿ, ಒಟ್ಟಾರೆ ನಗರದ ಪರಿಸರಕ್ಕೆ ಧಕ್ಕೆ ಉಂಟುಮಾಡುವ ಈ ಯೋಜನೆ ಕೈಬಿಟ್ಟಿದ್ದು ಸ್ವಾಗತಾರ್ಹ.
– ಎನ್‌.ಎಸ್‌. ಮುಕುಂದ, ಸಂಸ್ಥಾಪನಾ ಅಧ್ಯಕ್ಷ, ಬೆಂಗಳೂರು ನಾಗರಿಕ ಕ್ರಿಯಾ ಸಮಿತಿ. 

ಹಸಿರು ನ್ಯಾಯಾಧೀಕರಣ (ಎನ್‌ಜಿಟಿ)ದ ವಿಚಾರಣೆ ಮುಗಿದಿತ್ತು. ಮತ್ತೂಂದೆಡೆ ಜನಾಕ್ರೋಶವೂ ವ್ಯಕ್ತವಾಗಿತ್ತು. ರಾಜಕೀಯ ಮೇಲಾಟವೂ ನಡೆದಿತ್ತು. ಇದರಲ್ಲಿ ಯಾವುದೋ ಒಂದು ಕಾರಣಕ್ಕೆ ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಕೈಬಿಟ್ಟಿದ್ದು ಸ್ವಾಗತಾರ್ಹ. ನಗರದ ವಾಹನದಟ್ಟಣೆಗೆ ಮೇಲ್ಸೇತುವೆಗಳು ಪರಿಹಾರ ಅಲ್ಲ; ಸಮೂಹ ಸಾರಿಗೆ ಮಾತ್ರ ಪರಿಹಾರ ಎಂಬುದನ್ನೂ ಸರ್ಕಾರ ಅರ್ಥಮಾಡಿಕೊಳ್ಳಬೇಕು.
– ವಿ. ಬಾಲಸುಬ್ರಮಣಿಯನ್‌,
ನಿವೃತ್ತ ಐಎಎಸ್‌ ಅಧಿಕಾರಿ.

ಉಕ್ಕಿನ ಸೇತುವೆಯೇ ಬೇಕು ಎಂದು ನಾವು ಹೇಳುವುದಿಲ್ಲ. ಆದರೆ, ಆ ಮಾರ್ಗದಲ್ಲಿ ನಿತ್ಯ ಸಂಚರಿಸುವ ನಾವು ನಿತ್ಯ ನರಕಯಾತನೆ ಅನುಭವಿಸುತ್ತಿದ್ದೇವೆ. ಇದಕ್ಕೆ ಶಾಶ್ವತ ಪರ್ಯಾಯ ಒದಗಿಸಿ. ಆ ಮೂಲಕ ವಾಹನದಟ್ಟಣೆ ಕಿರಿಕಿರಿಯಿಂದ ಮುಕ್ತಿ ಕೊಡಿ.
– ಎಚ್‌.ಎಂ. ವೆಂಕಟೇಶ್‌,ಅಧ್ಯಕ್ಷ, ಸ್ವಾಮಿ ವಿವೇಕಾನಂದ
ಅಭ್ಯುದಯ ಪ್ರತಿಷ್ಠಾನ

ಉಕ್ಕಿನ ಮೇಲ್ಸೇತುವೆ ಯೋಜನೆ ಬೇಡವೆಂದು ಬಹುತೇಕ ಬೆಂಗಳೂರಿಗರು ಪ್ರತಿಭಟನೆ ನಡೆಸಿದರೂ ಕೇಳದ ಸರ್ಕಾರ ಗೋವಿಂದರಾಜು ಡೈರಿ ಬಹಿರಂಗವಾದ ನಂತರ ಅದನ್ನು ರದ್ದುಗೊಳಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದೆ. ಆದರೆ, ಈ ಪ್ರಕರಣದಲ್ಲಿ ಹಣ ಬದಲಾವಣೆಯಾಗಿದೆ ಎಂಬ ನಮ್ಮ ಆರೋಪ ಸತ್ಯ. ಇದೀಗ ಹಣ ಕೊಟ್ಟವರು ಮತ್ತು ತೆಗೆದುಕೊಂಡವರ ಪರಿಸ್ಥಿತಿ ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ ಎಂಬಂತಾಗಿದೆ.
– ಸುರೇಶ್‌ಕುಮಾರ್‌, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next