Advertisement

ಸುಧಾ ಮಂಗಳ ಮಹೋತ್ಸವ ಸಮಾರೋಪ: ಸೋಸಲೆ ಶ್ರೀ ತೀರ್ಥರಿಗೆ ತುಲಾಭಾರ ಸಮರ್ಪಣೆ

12:15 PM Jun 11, 2024 | Team Udayavani |

ಮೈಸೂರು: ಸುಧಾಮಂಗಳ ಸಮಾರೋಪ ಸಮಾರಂಭದಲ್ಲಿ ಲಕ್ಷ ಆವರ್ತಿ ವಾಯುಸ್ತುತಿ ಪಾರಾಯಣ ಸಂಘದಿಂದ ನೂರಾರು ಸಾತ್ವಿಕರಿಂದ ವಾಯು ಸ್ತುತಿ ಪಾರಾಯಣ, ಲೋಕ ಕಲ್ಯಾಣಕ್ಕಾಗಿ 1008 ಬಾರಿ ಸುಮಧ್ವ ವಿಜಯ ಪಾರಾಯಣ ಮತ್ತು 1008 ಬಾರಿ ಹರಿಕಥಾಮೃತಸಾರ ಪಾರಾಯಣ ಹಾಗೂ ಒಂದು ಕೋಟಿ ಬಾರಿ ಯಂತ್ರೋದ್ಧಾರಕ ಹನುಮತ್ ಸ್ತೋತ್ರ ಪಾರಾಯಣ ಸಮರ್ಪಣೆ ನೆರವೇರಿದ್ದು ಗಮನ ಸೆಳೆಯಿತು.

Advertisement

ಇದೇ ಸಂದರ್ಭದಲ್ಲಿ ಸದಾಚಾರ ಸ್ಮೃತಿ ಪಾರಾಯಣ ಸಮರ್ಪಣೆ , ಮಹಿಳೆಯರಿಂದ ಶ್ರೀ ಲಕ್ಷ್ಮಿ ಶೋಭಾನೆ ಮತ್ತು ಮಧ್ವನಾಮ ಸಹಿತ ಪಂಚರತ್ನ ಸುಳಾದಿಗಳ ಪಾರಾಯಣವು ನೆರವೇರಿದ್ದು ಬಹು ವಿಶೇಷ ವಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಮತ್ತು ಹೊರರಾಜ್ಯಗಳಿಂದ ಬಂದಂತಹ ಭಕ್ತರು ಹಾಗೂ ವನಿತೆಯರು ಈ ಸೇವ ಕಾರ್ಯದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ನಿಂದ ವೆಂಕಟೇಶಮೂರ್ತಿ ಅವರ ಸಾರಥ್ಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ 3 ತಾಸುಗಳ ಕಾಲ ವಿಜೃಂಭಣೆಯಿಂದ ನೆರವೇರಿದ್ದು ವಿಶೇಷವಾಗಿತ್ತು. ಸುಸಜ್ಜಿತವಾದ ವೇದಿಕೆಯಲ್ಲಿ ವಿಶೇಷ ಧ್ವನಿ ಬೆಳಕು ಮತ್ತು ಸೆಟ್ಟಿಂಗ್ ನಡುವೆ ಶ್ರೀನಿವಾಸನ ಕಲ್ಯಾಣ ಕಾರ್ಯವನ್ನು ಸ್ವಯಂಸೇವಕರು ಮತ್ತು ವಿದ್ವಾಂಸರು, ಸುಮಂಗಲಿಯರ ಒಡಗೂಡಿ ನೆರವೇರಿಸಿದ್ದು ಭಕ್ತಿ ಭಾವದ ಪ್ರತೀಕವಾಗಿತ್ತು.

ಕಲ್ಯಾಣೋತ್ಸವದಲ್ಲಿ ಶ್ರೀ ನಿವಾಸನು ಪದ್ಮಾವತಿ ದೇವಿಗೆ ಮಾಂಗಲ್ಯ ಧಾರಣೆ ಮಾಡಿದಾಗ ಮಂಗಳ ವಾದ್ಯಗಳನ್ನು ಮೊಳಗಿಸಲಾಯಿತು. ಸಮಾರೋಪ ಸಂದರ್ಭದಲ್ಲಿ ಹಾಜರಿದ್ದ ಎಲ್ಲ ಭಕ್ತರಿಗೂ ಶ್ರೀನಿವಾಸನ ಮಂತ್ರಾಕ್ಷತೆ ಸಹಿತ ಪ್ರಸಾದವನ್ನು ವಿತರಣೆ ಮಾಡಲಾಯಿತು. ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವಿಶೇಷ ಮೈಲಿಗಲ್ಲು:
ಸಮಸ್ತ ಭಕ್ತರು ಒಂಬತ್ತು ದಿನಗಳ ಕಾಲ ನಡೆದ ಐತಿಹಾಸಿಕ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ನಾಡಿನ ಮತ್ತು ಹೊರನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಜನ ಹಲವು ಯತಿಗಳ ಸಮ್ಮುಖದಲ್ಲಿ ಧನ್ಯತೆಯನ್ನು ಮೆರೆದಿದ್ದಾರೆ . ಸೋಸಲೆ ಗುರುಗಳ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವಕ್ಕೆ ನಾಡಿನ ಹಲವು ಯತಿಗಳು ಸಾಕ್ಷಿಯಾಗಿದ್ದು ಒಂದು ವಿಶೇಷ. ಮಧ್ವ ಪೀಠದ ಮಠದ ಇತಿಹಾಸದಲ್ಲಿ ಇದು ಒಂದು ವಿಶೇಷ ಮೈಲಿಗಲ್ಲು.

Advertisement

*ಡಿ. ಪಿ . ಅನಂತಾಚಾರ್ಯ ಮಠದ ಮುಖ್ಯಸ್ಥರು

ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ನಾಲ್ವರು ಯುವಕರು ಸುಧಾ ಪಂಡಿತರಾಗಿ ಮನ್ನಣೆ ಗಳಿಸಿದ ವಿಶೇಷ ಸಂದರ್ಭದಲ್ಲಿ ಸಾವಿರಾರು ಭಕ್ತರು, 20 ಕ್ಕೂ ಹೆಚ್ಚು ಮಠಾಧಿಪತಿಗಳು ಹಾಜರಿದ್ದು ಶುಭ ಹಾರೈಸಿದ್ದಾರೆ. ಸುಧಾ ಮಂಗಳ ಎಂದರೆ ಅದು ಹತ್ತು ಘಟಿಕೋತ್ಸವಗಳಿಗೆ ಸಮನಾದ ವಿದ್ವತ್ ಸಭೆ ಮತ್ತು ಪದವಿ ಪ್ರದಾನ ಸಮಾರಂಭ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಒಂದು ಭವ್ಯ ಸಮಾರಂಭ ನಮ್ಮ ನಿರೀಕ್ಷೆಗೂ ಮೀರಿ ಸಂಪನ್ನಗೊಂಡಿದೆ. ನಮ್ಮ ಮಠದ ಕಾರ್ಯಕರ್ತರು, ಸ್ವಯಂ ಸೇವಕರು ಮತ್ತು ಸಮಸ್ತ ಭಕ್ತ ಗಣ ನೀಡಿದ ಸಹಕಾರ ಮಹೋನ್ನತವಾದದ್ದು .
*ಡಾ. ಡಿ. ಪಿ. ಮಧು ಸೂದನಾಚಾರ್ಯ ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ

ಸ್ವಾಮೀಜಿ ಆಶೀರ್ವಚನ.
ಸೊಸಲೆ ಶ್ರೀ ವ್ಯಾಸರಾಜರ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಮಾರೋಪ ಆಶೀರ್ವಚನವನ್ನು ನೀಡಿ, ವಿದ್ವತ್ ಪ್ರಪಂಚಕ್ಕೆ ನಾಲ್ವರು ಯುವ ಮತ್ತು ನವ ಪಂಡಿತರನ್ನು ಕೊಡುಗೆಯಾಗಿ ನೀಡಿದ ಈ ಸುಧಾಮಂಗಳ ಮಹೋತ್ಸವ ಸಂಪೂರ್ಣವಾಗಿ ಯಶಸ್ವಿಯಾಗಿದೆ . ಇಂದಿನ ಯುವಕರು ಧರ್ಮ ಮತ್ತು ಸಂಸ್ಕೃತಿಯನ್ನು ಪಾಲಿಸಿಕೊಂಡು ಅಖಂಡ ಭಾರತದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಆಗಬೇಕು ಎಂದು ಆಶಿಸುತ್ತೇವೆ ಎಂದರು.

ವ್ಯಾಸರಾಜರ ಮಠವು ಸದಾ ಕಾಲ ಸನಾತನ ಧರ್ಮದ ಪಾಲನೆಗೆ ಮತ್ತು ಪರಂಪರೆಯ ರಕ್ಷಣೆಗೆ ಬದ್ಧವಾಗಿದೆ. ಮುಂಬರುವ ವರ್ಷಗಳಲ್ಲಿ ಇಂತಹ ಸುಧಾಮಂಗಳ ಸಮ್ಮೇಳನಗಳನ್ನು ಪ್ರತಿವರ್ಷವೂ ಆ ಯೋಜನೆ ಮಾಡಲು ಸಂಕಲ್ಪ ಮಾಡಲಾಗಿದೆ . ಶ್ರೀ ಹರಿವಾಯು ಗುರುಗಳು ಮತ್ತು ಶ್ರೀ ವ್ಯಾಸರಾಜರು ಈ ಕಾರ್ಯವನ್ನು ಸುಗಮವಾಗಿ ನಡೆಸಲಿ ಎಂದು ಪ್ರಾ ರ್ಥಿಸುತ್ತಿದ್ದೇನೆ ಎಂದು ಹೇಳಿದರು.

ನಾಡಿಗೆ ಸೂಕ್ತ ಕಾಲದಲ್ಲಿ ಮಳೆ ಮತ್ತು ಬೆಳೆಗಳು ಲಭಿಸಲಿ. ಸಮಸ್ತ ಮಾನವ ಕೋಟಿ ಸುಖ ಮತ್ತು ಶಾಂತಿಯಿಂದ ಜೀವಿಸಲಿ. ಎಲ್ಲರಲ್ಲಿಯೂ ಸದಾಚಾರ ಸದ್ವಿಚಾರ ಮತ್ತು ಸನ್ನಡತೆಗಳು ವಿಜೃಂಭಿಸಲಿ. ಆ ಮೂಲಕ ಭಾರತ ವಿಶ್ವಗುರುವಾಗಿ ಮೆರೆಯಲಿ. ಇದಕ್ಕೆ ನಮ್ಮ ನಾಡಿನ ಮಠ ಮತ್ತು ಪೀಠಗಳು ಸದಾ ಸ್ಪಂದಿಸುತ್ತವೆ ಎಂದು ಸೋಸಲೆ ಶ್ರೀಗಳು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next