Advertisement

ಅನೂಪ್‌ ನಿರ್ದೇಶನದಲ್ಲಿ ಸುದೀಪ್‌ ಚಿತ್ರ

11:45 AM Dec 19, 2018 | |

“ರಂಗಿತರಂಗ’, “ರಾಜರಥ’ ಚಿತ್ರಗಳನ್ನು ಕೊಟ್ಟ ಬಳಿಕ ಕೆಲಕಾಲ ಚಿತ್ರರಂಗದಲ್ಲಿ ಎಲ್ಲೂ ಕಾಣಿಸಿಕೊಂಡಿರದ ನಿರ್ದೇಶಕ ಅನೂಪ್‌ ಭಂಡಾರಿ, ತೆರೆಮರೆಯಲ್ಲೇ ಒಂದಷ್ಟು ತಯಾರಿ ಮಾಡಿಕೊಂಡು ಹೊಸ ಸರ್‌ಪ್ರೈಸ್‌ ಕೊಡುತ್ತಿದ್ದಾರೆ.  ಹೌದು, ನಿರ್ದೇಶಕ ಅನೂಪ್‌ ಭಂಡಾರಿ ನಟ ಕಿಚ್ಚ ಸುದೀಪ್‌ಗಾಗಿ ಹೊಸಚಿತ್ರವೊಂದನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಸ್ವತಃ ಸುದೀಪ್‌ ಅವರೇ ಟ್ವಿಟ್ಟರ್‌ನಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದು, ಸುದೀಪ್‌ ಅವರ ನಿರ್ಮಾಣ ಸಂಸ್ಥೆಯಿಂದಲೇ ಈ ಚಿತ್ರ ನಿರ್ಮಾಣವಾಗುತ್ತಿದೆ. 

Advertisement

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ತಿಳಿಸಿರುವ ಸುದೀಪ್‌, ನನ್ನ ನಿರ್ಮಾಣ ಸಂಸ್ಥೆಯು ಅನೂಪ್‌ ಭಂಡಾರಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರೋದನ್ನು ತಿಳಿಸಲು ಸಂತಸವಾಗುತ್ತಿದೆ. ಮತ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗುವ ಯೋಚನೆಯೇ ನನಗೆ ಹುಮ್ಮಸ್ಸು ತಂದು ಕೊಟ್ಟಿದೆ. ಹೆಚ್ಚಿನ ವಿವರವನ್ನು ಇದೇ ಗುರುವಾರ ಸಂಜೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಅನೂಪ್‌ ಭಂಡಾರಿ ಕೂಡ ಈ ವಿಷಯವನ್ನು ಖಚಿತಪಡಿಸಿದ್ದು, ಈ ಹೊಸ ಚಿತ್ರದ ಬಗ್ಗೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಸುಮಾರು 18 ವರ್ಷದ ಹಿಂದೆಯೇ ಬರೆದಿದ್ದ ಕಥೆ ಈಗ ಸಿನಿಮಾವಾಗುತ್ತಿದೆ. ಇದೊಂದು ಆ್ಯಕ್ಷನ್‌- ಆಡ್ವೆಂಚರ್‌ ಸಿನಿಮಾ. 2010ರ ಕಾರ್ಯಕ್ರಮವೊಂದರಲ್ಲಿ ಸುದೀಪ್‌ ಅವರನ್ನು ಭೇಟಿ ಮಾಡಿದ್ದಾಗ, ಅವರ ಜೊತೆ ಸಿನಿಮಾ ಮಾಡುವ ಆಸೆಯನ್ನು ಹೇಳಿಕೊಂಡಿದ್ದೆ. ಆಗ ಸುದೀಪ್‌ ಕೂಡ, ಒಳ್ಳೆಯ ಕಥೆ ಇದ್ದರೆ ತನ್ನಿ ಮಾಡೋಣ ಅಂತ ಹೇಳಿದ್ದರು. ಅದಾದ ಎಂಟು ವರ್ಷಗಳ ಬಳಿಕ ಅದಕ್ಕೆ ಕಾಲ ಕೂಡಿ ಬಂದಿದೆ. ಸುದೀಪ್‌ ಅವರಿಗೂ ಚಿತ್ರದ ಕಥೆ ಇಷ್ಟವಾಗಿದ್ದು, ಸದ್ಯ ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಭರದಿಂದ ನಡೆಯುತ್ತಿದೆ ಎಂದಿದ್ದಾರೆ ಅನೂಪ್‌.

ಚಿತ್ರರಂಗದ ಮೂಲಗಳ ಪ್ರಕಾರ, ಅನೂಪ್‌ ಭಂಡಾರಿಯವರ “ರಾಜರಥ’ ಚಿತ್ರದ ಮೇಕಿಂಗ್‌ ನೋಡಿ ಇಷ್ಟ ಪಟ್ಟಿದ್ದ ಸುದೀಪ್‌, ಈ ಚಿತ್ರವನ್ನು ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸಲು ಆಸಕ್ತರಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಹೊಸ ಚಿತ್ರದ  ಕಲಾವಿದರು, ತಂತ್ರಜ್ಞರ ಆಯ್ಕೆಗೆ ಚಾಲನೆ ಸಿಕ್ಕಿದ್ದು, ಸಂಕ್ರಾಂತಿಯ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ನಾಳೆ ಸಂಜೆ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆಯಾಗಲಿದ್ದು, ಸುದೀಪ್‌-ಅನೂಪ್‌ ಚೊಚ್ಚಲ ಚಿತ್ರದ ಶೀರ್ಷಿಕೆ ಏನು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next