Advertisement

D. K. Shivakumar ಜತೆ ಎಸ್‌ಟಿಎಸ್‌, ಡಾ.ಕೆ.ಸುಧಾಕರ್‌! ಕುತೂಹಲಕ್ಕೆ ಕಾರಣವಾದ ನಾಯಕರ ನಡೆ

08:37 PM Dec 18, 2023 | Team Udayavani |

ಬೆಂಗಳೂರು: ಈಚೆಗೆ ಬೆಳಗಾವಿ ಅಧಿವೇಶನದ ವೇಳೆ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸದಸ್ಯರ ಔತಣಕೂಟದಲ್ಲಿ ಕಾಣಿಸಿಕೊಂಡು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಶಾಸಕರು, ಮೂರ್‍ನಾಲ್ಕು ದಿನಗಳ ಅಂತರದಲ್ಲಿ ಕಾರ್ಯಕ್ರಮವೊಂದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜತೆ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕುತೂಹಲಕ್ಕೆ ಕಾರಣರಾಗಿದ್ದಾರೆ.

Advertisement

ಈ ಬಾರಿ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಎಸ್‌.ರವಿ ಅವರ ಪುತ್ರಿಯ ಮದುವೆ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಮತ್ತು ಮಾಜಿ ಸಚಿವ ಡಾ.ಕೆ. ಸುಧಾಕರ್‌ ಕಾಣಿಸಿಕೊಂಡಿದ್ದಾರೆ. ಮೂವರೂ ಕೆಲಹೊತ್ತು ಹರಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶೇರ್‌ ಆಗುವುದರ ಜತೆಗೆ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿ ಅಧಿವೇಶನದ ವೇಳೆ ಪ್ರತಿಪಕ್ಷ ಬಿಜೆಪಿ ಸಭಾತ್ಯಾಗ ಮಾಡಿದಾಗ, ನಾಯಕರನ್ನು ಶಾಸಕ ಎಸ್‌.ಟಿ. ಸೋಮಶೇಖರ್‌ ಹಿಂಬಾಲಿಸದೆ, ಕಲಾಪದಲ್ಲಿ ಕುಳಿತುಕೊಳ್ಳುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದರು. ಈ ಮಧ್ಯೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೋಮಶೇಖರ್‌ ಮತ್ತು ಶಾಸಕ ಶಿವರಾಮ್‌ ಹೆಬ್ಬಾರ್‌ ಕಾಣಿಸಿಕೊಂಡಿದ್ದರು ಎಂಬ ವದಂತಿ ಕೇಳಿಬಂದಿತ್ತು. ನಂತರದಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಶಾಸಕರಿಗೆ ಏರ್ಪಡಿಸಿದ್ದ ಔತಣಕೂಟಕ್ಕೆ ಮಾತ್ರ ಹಾಜರಾಗಿದ್ದರು ಎಂದು ಸ್ವತಃ ನಾಯಕರು ಸ್ಪಷ್ಟಪಡಿಸಿದ್ದರು.

ಮತ್ತೊಂದೆಡೆ ಅದೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರಂಭದಿಂದ ಅಂತ್ಯದವರೆಗೂ ಮೇಲ್ಮನೆಯ ಬಿಜೆಪಿ ಸದಸ್ಯ ಎಚ್‌. ವಿಶ್ವನಾಥ್‌ ಹಾಜರಾಗಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಡಿ.ಕೆ. ಶಿವಕುಮಾರ್‌ ಜತೆ ಡಾ.ಕೆ. ಸುಧಾಕರ್‌ ಮತ್ತು ಎಸ್‌.ಟಿ. ಸೋಮಶೇಖರ್‌ ಕಾಣಿಸಿಕೊಂಡಿರುವುದು ಕುತೂಹಲ ಕೆರಳಿಸುವಂತೆ ಮಾಡಿದೆ. “ಆದರೆ, ಇದೊಂದು ಆಕಸ್ಮಿಕ ಭೇಟಿ ಅಷ್ಟೇ ಆಗಿತ್ತು. ಈ ಭೇಟಿ ವೇಳೆ ಉಭಯ ಕುಶಲೋಪರಿ, ರಾಜಕೀಯ ಬೆಳವಣಿಗೆಗಳು ಮತ್ತಿತರ ವಿಷಯಗಳು ಚರ್ಚೆಗೆ ಬಂದಿವೆ. ಯಾವುದೇ ಪಕ್ಷಾಂತರದ ಬಗ್ಗೆ ಗಂಭೀರ ಚರ್ಚೆಗಳೇನೂ ಈ ಸಂದರ್ಭದಲ್ಲಿ ನಡೆದಿಲ್ಲ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next