Advertisement

ಸ್ವರ್ಗ ಮೇಲೋ? ಭೂಮಿ ಮೇಲೋ?

03:44 PM Feb 23, 2017 | Harsha Rao |

ರಂಗಣ್ಣ ಎಂಬ ರೈತನಿದ್ದ. ಅವನು ಎಂತಹ ಬಿರುಮಳೆಗೂ ಜಗ್ಗುತ್ತಿರಲಿಲ್ಲ, ಚಳಿಯೆಂಬ ನಡುಕವೂ ಅವನಿಗಿರಲಿಲ್ಲ. ಹೊಲದಲ್ಲಿ ಶ್ರಮಪಟ್ಟು ದುಡಿಯುವುದೊಂದೇ ಅವನ ಧ್ಯೇಯವಾಗಿತ್ತು. ರಂಗಣ್ಣನ ಬೆವರಿನ ಪ್ರತಿ ಹನಿಯೂ ಮುತ್ತಿನಂತಹ ಕಾಳುಗಳಾಗುತ್ತಿದ್ದವು. ರೈತನ ಶ್ರಮದ ಫ‌ಲದಿಂದ ಬೆಳೆದ ಕಾಳುಗಳನ್ನು ಉಂಡು ಜನ ಹಾಯಾಗಿ ಬದುಕುತ್ತಿದ್ದರು. ಸಮಸ್ತ ಜೀವಕೋಟಿಗೂ ಅವನು ಬೆಳೆದುದರಲ್ಲಿ ಪಾಲು ಸಿಗುತ್ತಿತ್ತು.

Advertisement

ಒಂದು ಸಲ ದೇವಲೋಕದಲ್ಲಿ ದೇವೇಂದ್ರ ಯಾರ್ಯಾರ ಪುಣ್ಯ ಕಾರ್ಯ ಎಷ್ಟೆಷ್ಟು ಇದೆಯೆಂದು ಪರಿಶೀಲಿಸತೊಡಗಿದ. ಅವನಿಗೆ ಆಶ್ಚರ್ಯವಾಯಿತು. ಎಲ್ಲರಿಗಿಂತ ಹೆಚ್ಚು ಪುಣ್ಯ ರಂಗಣ್ಣನ ಖಾತೆಯಲ್ಲಿ ಜಮಾ ಆಗಿತ್ತು. ಲೋಕದ ಅಸಂಖ್ಯ ಜೀವಿಗಳ ಉದರಕ್ಕೆ ಬೇಕಾದ ಅನ್ನ ಬೆಳೆಯುತ್ತಿರುವ ಕಾರಣಕ್ಕೆ ಅವನ ಪುಣ್ಯದ ಪಾಲು ದೊಡ್ಡದಾಗಿದೆಯೆಂದು ದೇವದೂತರು ಹೇಳಿದರು. ಎಲಾ! ಲೋಕದಲ್ಲಿ ಒಬ್ಬ ಹುಲು ರೈತನಿಗೆ ಇಷ್ಟು ಬೆಲೆ ಇದೆಯೇ? ಹೀಗಾಗಬಾರದು. ವರ್ಷಡೀ ತನಗೆ ಹವಿಸ್ಸು ಸಮರ್ಪಿಸುವ ಋಷಿ ಮುನಿಗಳಿಗೂ ಇಷ್ಟೊಂದು ಪುಣ್ಯ ಪ್ರಾಪ್ತಿಯಾಗಿಲ್ಲ. ಇವನಿಗೇನು ಹೆಚ್ಚುಗಾರಿಕೆ? ಇದಕ್ಕೆ ಅಡ್ಡಗಾಲಿಡಬೇಕೆಂದು ಇಂದ್ರ ವರುಣನನ್ನು ಕರೆದ. “ರಂಗಣ್ಣನ ಹೊಲದ ಮೇಲೆ ಮಳೆ ಸುರಿಸಬೇಡ. ಅವನು ಬೆಳೆದ ಬೆಳೆಗಳನ್ನೆಲ್ಲ ಸುಟ್ಟುಬಿಡು’ ಎಂದು ಆಜಾnಪಿಸಿದ.

ಬೆಳೆ ಸುಟ್ಟು ಹೋಗುವಾಗ ರೈತ ನೋಡುತ್ತ ಸುಮ್ಮನಿರಲಿಲ್ಲ. ಒಂದು ಕೊಡ ತೆಗೆದುಕೊಂಡು ದೂರದ ಸಮುದ್ರಕ್ಕೆ ಹೋದ. ಅಲ್ಲಿಂದ ನೀರು ತಂದು ಹೊಲಕ್ಕೆ ಹನಿಸಿದ. ಅವನ ಕಷ್ಟ ನೋಡಿ ಭೂತಾಯಿ ಖುಷಿಪಟ್ಟಳು. ಬೆಳೆಗೆ ಸ್ವಲ್ಪವೂ ಹಾನಿ ಮಾಡಲಿಲ್ಲ. ಪೂರ್ಣ ಫ‌ಲ ನೀಡಿದಳು.

ಈಗ ರಂಗಣ್ಣನೆದುರು ಇಂದ್ರನೇ ಸೋತು ಹೋದ. ದೇವಮಾನವರೊಂದಿಗೆ ಅವನ ಬಳಿಗೆ ಬಂದ. “ಬಾರಯ್ಯ ಪುಣ್ಯಶಾಲಿಯೇ ಬಾ. ನಿನ್ನಂಥ ಶ್ರೇಷ್ಠರು ಹೀಗೆ ಇಲ್ಲಿ ಮಳೆ ಬಿಸಿಲೆನ್ನದೆ ಕಷ್ಟಪಡಬಾರದು. ನನ್ನೊಂದಿಗೆ ಸ್ವರ್ಗಕ್ಕೆ ಬಂದುಬಿಡು’ ಎಂದು ಕರೆದ.     

“ಸ್ವರ್ಗಕ್ಕಾ?’ ರಂಗಣ್ಣ ಅಚ್ಚರಿಯಿಂದ ಕೇಳಿದ. “ಅಲ್ಲಿ ಇಂತಹ ಹೊಲ ಗದ್ದೆಗಳಿವೆಯೇ? ನೊಗ ನೇಗಿಲುಗಳಿವೆಯೇ? ಎತ್ತುಗಳಿವೆಯೇ? ಮಳೆ ಬಿಸಿಲಿದೆಯೇ?’.

Advertisement

ಇಂದ್ರ ಜೋರಾಗಿ ನಕ್ಕ. “ಅಯ್ಯೋ ಪೆದ್ದೇ; ಸ್ವರ್ಗದಲ್ಲಿ ಪೃಥ್ವಿಯಂತೆ ಹಸಿವಿಲ್ಲ. ದಾಹವಿಲ್ಲ. ಹುಟ್ಟಿಲ್ಲ, ಸಾವಿಲ್ಲ. ಮತ್ತೇಕೆ ಹೊಲದಲ್ಲಿ ನೇಗಿಲು ಹಿಡಿದು ದುಡಿಯಬೇಕು? ಅಂಥ ಕಷ್ಟವಿರುವುದು ಭೂಮಿಯ ನಿವಾಸಿಗಳಿಗೆ ಮಾತ್ರ. ಅಲ್ಲಿ ಏನಿದ್ದರೂ ಸುಖವೊಂದೇ’ ಎಂದ ಅವನು.

ಆ ಕೂಡಲೇ ರಂಗಣ್ಣ, “ಏನೆಂದಿರಿ? ದುಡಿದು ತಂದು ಲೋಕದ ಜೀವಿಗಳ ಹಸಿವು ತಣಿಸುವ ಪುಣ್ಯಕಾರ್ಯಕ್ಕೆ ಅಲ್ಲಿ ಅವಕಾಶವೇ ಇಲ್ಲವೇ? ಇದರಿಂದ ಸಿಗುವ ಮನಸ್ಸಮಾಧಾನ ನನಗೆ ಯಾವ ಸಗ್ಗದಲ್ಲಿಯೂ ಸಿಗಲಿಕ್ಕಿಲ್ಲ. ಖಂಡಿತ ನಾನಲ್ಲಿಗೆ ಬರುವುದಿಲ್ಲ. ನಾನು ಬೆಳೆದ ಬೆಳೆಯನ್ನು ಉಂಡು ಅಷ್ಟೊಂದು ಜೀವಿಗಳಿಗೆ ಸಿಗುವ ಸುಖವಿದೆಯಲ್ಲ ಅದು ಇಲ್ಲದಲ್ಲಿ ನಾನಿರುವುದಿಲ್ಲ’ ಎನ್ನುತ್ತ ನೊಗ ಹೆಗಲಿಗೇರಿಸಿ ನಡೆದೇಬಿಟ್ಟ. ಇಂದ್ರನಿಗೆ ನಾಚಿಕೆಯಾಯಿತು. ರಂಗಣ್ಣನ ದೊಡ್ಡತನವನ್ನೊಪ್ಪಿಕೊಂಡು ಅವನ ದುಡಿಮೆಗೆ ತನ್ನ ಅನುಗ್ರಹವನ್ನು ಪೂರ್ಣವಾಗಿ ನೀಡಿದ. 
***

ಯುದ್ಧ ನಿಲ್ಲಿಸಿದ ಇರುವೆಗಳು

ಸಿಕಂದರ್‌ ಎಂಬ ದೊರೆಗೆ ಇಡೀ ಜಗತ್ತನ್ನು ಗೆದ್ದು ಸರ್ವಾಧಿಕಾರಿಯಾಗಬೇಕೆಂಬ ದುರಾಶೆ ಹುಟ್ಟಿತು. ಅದಕ್ಕಾಗಿ ದೊಡ್ಡ ಸೇನೆಯನ್ನು ಕಟ್ಟಿದ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ದಂಡಯಾತ್ರೆ ಕೈಗೊಂಡ. ಶರಣಾದವರ ದೇಶದ ಸಂಪತ್ತನ್ನೆಲ್ಲ ವಶಪಡಿಸಿಕೊಂಡ. ಎದುರಿಸಿ ಹೋರಾಟಕ್ಕೆ ಅಣಿಯಾದವರನ್ನು ನಿರ್ದಯೆಯಿಂದ ಕೊಂದು ಹಾಕಿ ಅವರ ಕೋಶಾಗಾರವನ್ನು ಸೂರೆ ಮಾಡಿದ.

ಹೀಗೆ ಸೇನೆಯೊಂದಿಗೆ ಮುಂದುವರೆಯುತ್ತಾ ಸಿಕಂದರ್‌ ಒಂದು ಪುಟ್ಟ ರಾಜ್ಯಕ್ಕೆ ಮುತ್ತಿಗೆ ಹಾಕಿದ. ಶರಣಾಗಲು ಹೇಳಿದ. ಅಲ್ಲಿಯ ಪ್ರಜೆಗಳಲ್ಲಿ ಸ್ವಾತಂತ್ರ್ಯದ ಅಭಿಮಾನ ಉಕ್ಕುತ್ತಿತ್ತು. ಅವರು ಶರಣಾಗಲು ಒಪ್ಪಲಿಲ್ಲ. “ದೇಶಕ್ಕಾಗಿ ಹೋರಾಡುತ್ತೇವೆ. ತಪ್ಪಿದರೆ ವೀರ ಮರಣ ಇದ್ದೇ ಇದೆ’ ಎಂದು ದಿಟ್ಟವಾಗಿ ಹೇಳಿ ಅಚಲ ಆತ್ಮವಿಶ್ವಾಸದಿಂದ ಕಾದಿದರು. ಆಶ್ಚರ್ಯವೆಂಬಂತೆ ಅವರ ಕೆಚ್ಚಿನೆದುರು ಸಿಕಂದರನ ಬಹು ದೊಡ್ಡ ಸೇನೆ ಧೂಳೀಪಟವಾಯಿತು. ಪುಟ್ಟ ದೇಶದವರು ಜಯ ಪತಾಕೆ ಹಾರಿಸಿದರು.

ಈ ಪ್ರಕರಣದಿಂದ ಸಿಕಂದರ್‌ ಅವಮಾನಿತನಾದ. ಸೋಲಿನ ಸೇಡು ತೀರಿಸಿಕೊಳ್ಳಲು ಸಜಾjದ. ಇನ್ನಷ್ಟು ಪ್ರಬಲವಾದ ಸೈನ್ಯವನ್ನು ಒಟ್ಟುಗೂಡಿಸಿ ಮತ್ತೆ ಧಾಳಿಗೆ ಆ ದೇಶದತ್ತ ಹೊರಟ. ಕುದುರೆಗಳನ್ನೇರಿಕೊಂಡು ಸೇನಾಪಡೆ ಬರುತ್ತಿದ್ದಾಗ, ಮುಂದಿದ್ದ ಸಿಕಂದರ್‌, “ಎಲ್ಲರೂ ಒಂದು ಕ್ಷಣ ಅಲ್ಲಲ್ಲೇ ನಿಲ್ಲಿ’ ಎಂದು ಆಜಾnಪಿಸಿದ. ಅಶ್ವಾರೂಢರು ಕುದುರೆಗಳಿಂದ ಇಳಿದು ಏನೆಂದು ನೋಡಿದಾಗ ಒಂದು ದೊಡ್ಡ ಸಾಲಿನಲ್ಲಿ ಇರುವೆಗಳು ಹೋಗುತ್ತಿರುವುದು ಕಾಣಿಸಿತು. ಅದರತ್ತ ಬೆರಳು ತೋರಿಸಿದ ಸಿಕಂದರ್‌. “ಕುದುರೆಗಳ ಕಾಲು ಕೆಳಗೆ ಸಿಲುಕಿ ಇರುವೆಗಳು ಸಾಯಬಾರದು. ಎಚ್ಚರಿಕೆಯಿಂದ ಪಥ ಬದಲಿಸಿ ಮುಂದೆ ಸಾಗಿ’ ಎಂದು ಹೇಳಿದ.

    ಈ ಮಾತು ಕೇಳಿ ಸೈನಿಕನೊಬ್ಬನ ಮುಖದಲ್ಲಿ ನಗೆಯ ಗೆರೆಯೊಂದು ಸುಳಿದು ಮಾಯವಾಯಿತು. ಸಿಕಂದರ್‌ ಅದನ್ನು ಗಮನಿಸಿದ. ನಗುವಿನ ಕಾರಣ ವಿಚಾರಿಸಿದ. ಸೈನಿಕ ಕೈಜೋಡಿಸಿ ಹೇಳಿದ “ದೊರೆಯೇ, ತಪ್ಪಾದರೆ ಕ್ಷಮಿಸಬೇಕು. ಪುಟ್ಟ ಇರುವೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಾರದೆಂದು ತಾವು ಸೇನೆಯ ಪಥವನ್ನೇ ಬದಲಾಯಿಸಲು ಆಜಾnಪಿಸಿದಿರಿ. ಆದರೆ ಪುಟ್ಟದೇಶವೊಂದರ ದೇಶಾಭಿಮಾನಿಗಳ ದಮನಕ್ಕೆ ದೊಡ್ಡ ಸೇನೆಯೊಂದಿಗೆ ಸಾಗುತ್ತಿರುವುದು ತಮಾಷೆ ಅನ್ನಿಸಿತು. ಅದಕ್ಕೆ ಸಣ್ಣಗೆ ನಗು ಬಂತು’ ಎಂದು ಹೇಳಿದ. ಈ ಮಾತು ಸಿಕಂದರನ ಹೃದಯವನ್ನು ಈಟಿಯಂತೆ ಇರಿಯಿತು. ಮಂಜಿನಂತೆ ಕೊರೆಯಿತು. ಅವನು ಸೈನಿಕನೆದುರು ಮೊಣಕಾಲೂರಿದ. “ನೀನು ಸಾಮಾನ್ಯ ಸೈನಿಕ ಅಲ್ಲವಪ್ಪಾ… ನನ್ನ ತಪ್ಪನ್ನು ಎತ್ತಿ ತೋರಿಸಿ ನನ್ನ ಕಣ್ತೆರೆಸಿದೆ. ನಿಜ. ಅವರ ಹಕ್ಕನ್ನು ನಾವು ದಮನ ಮಾಡಬಾರದು. ಹಿಂತಿರುಗೋಣ. ಆ ದೇಶದವರ ರಾಷ್ಟ್ರಪ್ರೇಮವನ್ನು ಗೌರವಿಸೋಣ’ ಎಂದು ಹೇಳಿದ. ಹೀಗೆ ಇರುವೆಗಳಿಂದಾಗಿ ಒಂದು ದೊಡ್ಡ ಅನಾಹುತ ನಡೆಯುವುದು ತಪ್ಪಿತು.

– ವಿಹಾನ್‌, ಬೆಳ್ತಂಗಡಿ 

Advertisement

Udayavani is now on Telegram. Click here to join our channel and stay updated with the latest news.

Next