Advertisement

Literature: ಸಂಸ್ಕಾರ ಸಾಹಿತ್ಯದ ಸಿರಿತುಪ್ಪೆ ಬನ್ನಂಜೆ ಬಾಬು ಅಮೀನ್‌

12:56 AM Dec 17, 2023 | Team Udayavani |

ಹಿರಿಯ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್‌ ಅವರು 80 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಭಿನಂದನ ಸಮಿತಿಯು ಬನ್ನಂಜೆಯ ನಾರಾಯಣಗುರು ಸಭಾಂಗಣದಲ್ಲಿ ಡಿ.17ರಂದು ಸಿರಿತುಪ್ಪೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೆಳಗ್ಗೆ 8.45 ರಿಂದ ವಿಚಾರ ಗೋಷ್ಠಿ, ಯಕ್ಷಗಾನ, ಜಾನಪದ ವೈವಿಧ್ಯ ಮತ್ತಿತರ ಕಾರ್ಯಕ್ರಮಗಳಿರಲಿವೆ.

Advertisement

ಬದುಕಿನ ಬಹುಭಾಗವನ್ನು ಬಹುಸಂಸ್ಕೃತಿಯು ಆವರಿಸಿ ಕೊಂಡಿರುವ ಕಾಲಘಟ್ಟದಲ್ಲಿ ಮೌಖೀಕ ಪರಂಪರೆಯ ನೆಲ ಮೂಲದ ಕಲೆ ಸಂಸ್ಕೃತಿಯನ್ನು ತನ್ನ ಸಾಹಿತ್ಯ ಮತ್ತು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡ ಬನ್ನಂಜೆ ಬಾಬು ಅಮೀನರು ಬಾಳಯಾನದ 80 ಸಂವ ತ್ಸರಗಳು ಸಂಪನ್ನಗೊಂಡಿದೆ. ಪ್ರಾಜ್ಞರಾಗಿ, ಜಾನಪದ ಜಂಗಮನಾಗಿ, ಸಾಹಿತ್ಯಿಕ ಕೃಷಿ ಯಲ್ಲಿ ತೊಡಗಿದವರು. ಭವಿಷ್ಯತ್ತಿಗೆ ಯೋಗ್ಯವೆನಿಸುವ ಫ‌ಲವತ್ತಾದ ಫ‌ಸಲಿನ “ನುಡಿಸಿರಿ’ ಎನ್ನುವಷ್ಟು ಇವರ ಬರಹಗಳು ಸ್ವೀಕಾ ರಾರ್ಹವಾಗಿವೆ.

ಜನಪದ ಬದುಕು, ಜಾನಪದ ಸಾಹಿತ್ಯ, ಗರೋಡಿ ಅಧ್ಯಯನ,ದೈವಾರಾಧನೆಯ ಕುರಿತು ತಳಮಟ್ಟದ ಚಿಂತನೆ ನಡೆಸಿದ ವಾಸ್ತವವಾದಿ ವಿದ್ವಾಂಸರು. ಯಕ್ಷಗಾನ, ಶನಿಕಥೆ, ತಾಳಮದ್ದಲೆಯಂತಹ ಸಾಂಸ್ಕೃತಿಕ ಸಂಗತಿಗಳ ಬಹು ರೂಪಿ ಸಂಗಾತಿಯೂ ಹೌದು. ಸೇವಾ ಚಟುವಟಿಕೆಗಳಿಗೆ ಸಂಘಟನಾತ್ಮಕ ಸಂಚಲನ ನೀಡಿದ ನೇತಾರರೂ ಹೌದು.

ಸೂರ್ಯನಿಗೇ ಬೇರೆ ದೀವಟಿಗೆ ಬೇಕೆ..? ತನ್ನದೇ ವಿವೇಚನಾ ವ್ಯಾಪ್ತಿಯಲ್ಲಿ, ನಿರ್ಧಾರಕ ಸಾಮರ್ಥ್ಯದಲ್ಲಿ, ಜ್ಞಾನಾನುಭವದ ಆಧಾರದಲ್ಲಿ ಜಾನಪದ ಅವತರಣಿಕೆಯಲ್ಲಿ ಅಪರೂಪದ, ಅನುರೂಪದ ಹೊತ್ತಗೆಗಳನ್ನು ಹೊರತಂದವರು ಇವರು.

ನೆಲೆ ನಿಂತ ನೆಲವನ್ನು ಒಳ್ಳೆಯ ಸಂಸ್ಕಾರದಿಂದ ಬೆಳಗ ಬೇಕೆನ್ನುವ ಆಶಯಗಳು ಇವರ ಕೃತಿಗಳದ್ದು. ಇದೊಂದು “ಪರ್ವಕೃತಿ’ ಎಂದು ಪ್ರೊ| ಅಮೃತ ಸೋಮೇಶ್ವರ ನುಡಿದಿರುವ, ಪ್ರೊ| ಮೋಹನ್‌ ಕೋಟ್ಯಾನ್‌ ಜತೆಗೂಡಿ ಇವರು ಬರೆದ “ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥ’ ಮಹತ್ವದ ಸಂಗತಿಗಳನ್ನು ದಾಖಲಿಸಿದ ಮೇರು ಕೃತಿ. ಪೂ-ಪೊ¨ªೊಲ…, ಮಾನೆಚ್ಚಿ, ದೈವಗಳ ಮಡಿಲಲ್ಲಿ, ಉಗುರಿಗೆ ಮುಡಿಯಕ್ಕಿ, ನುಡಿಕಟ್ಟ್, ತುಳುನಾಡ ದೈವಗಳು-ಸಾಂಸ್ಕೃತಿಕ ವಿಶ್ಲೇಷಣೆ, ತುಳುವೆರೆ ಮದಿಮೆ, ಗರೋಡಿ ಒಂದು ಚಿಂತನೆ, ದೈವನೆಲೆ, ಆಟಿ-ಸೋಣ, ಸಮಗ್ರ ಕೋಟಿ ಚೆನ್ನಯ-ಇವರ 21 ಕೃತಿಗಳು ಶೋಧ ಪ್ರಜ್ಞೆಯ ಪ್ರತೀಕಗಳಾಗಿವೆ.

Advertisement

ಜೀವಂತಿಕೆಯೆ ಉತ್ಸಾಹ, ಕ್ರಿಯಾಶೀಲತೆ ಮತ್ತು ಸ್ಪಂದನೆ ಅವರ ವಿಶೇಷತೆ. ಸುಮ್ಮನಿದ್ದದ್ದೇ ಕಡಿಮೆ, ಸುದ್ದಿಯಲ್ಲಿದ್ದದ್ದೇ ಹೆಚ್ಚು. ತಾನು ಹಂಬಲಿಸುವ ವರ್ತಮಾನದ ಬದುಕಿಗೆ ಅವರು ಬಾಧ್ಯರು. ಆರ್ಥಿಕ ಲಾಭ, ಅಧಿಕಾರ, ಅಂತಸ್ತು ಇಂತವುಗ ಳಿಂದ ಅಂತರ ಕಾಯ್ದುಕೊಳ್ಳುವ ತಮ್ಮ ನಿಲುವುಗಳಿಂದ ಏನನ್ನು ಕಳೆದು ಕೊಂಡಿರಬಹುದೋ ಅದಕ್ಕಿಂತ ಶ್ರೇಷ್ಠವಾದ ಗೌರವ, ಜನ ಮನ್ನಣೆ ಗಳಿಸಿದವರು. ಇದಲ್ಲವೇ ಸಾಹಿತಿಗೊಲಿಯ ಬೇಕಾದ ಶ್ರೇಷ್ಠ ಪ್ರಶಸ್ತಿ, ನಿಜವಾದ ಗೌರವ?

ಸಾಮಾನ್ಯವಾಗಿ ಹುಟ್ಟಿ ಅಸಾಮಾನ್ಯವಾಗಿ ಬೆಳೆಯುವುದೇ ಸಾಧನೆ ಎನ್ನುವುದಾದರೆ ಆ ಎಲ್ಲ ಅರ್ಹತೆಗಳು ಬನ್ನಂಜೆ ಬಾಬು ಅಮೀನರಲ್ಲಿದೆ. ಸೃಜನಶೀಲ, ರಚನಾತ್ಮಕ ಮನಸ್ಸಿನ ಈ ಜೀವಕ್ಕೆ ಛಲ ಮತ್ತು ಆತ್ಮವಿಶ್ವಾಸವು ದೈವದತ್ತವಾದುದು. ತಮ್ಮ ನಡೆ ನುಡಿ, ಸಾಹಿತ್ಯಗಳಲ್ಲಿ ಇತರರನ್ನು ಅನುಕರಿಸುವ ಜಾಯಮಾನವೇ ಇವರಿಗಿಲ್ಲ. ಅವರೇನಿದ್ದರೂ ತುಳು ಜಾನಪದ ಜಗತ್ತಿನ ನೈಜ, ಮೂಲ ಉತ್ಪನ್ನ.

ಬೆಳವಣಿಗೆಗೆ ಬುಡವಾಗಿ, ಒಗ್ಗಟ್ಟಿಗೆ ಬಲವಾಗಿ ಮುನ್ನುಡಿ, ಮುಂದಡಿಯಿಡುವ ಕಾರಣಕ್ಕಾಗಿ ಅತ್ಯಾಪ್ತ ಪ್ರೀತಿಯಲ್ಲಿ ಬಾಬಜ್ಜ, ಬಾಬು ಮಾಮು, ಬಾಬಣ್ಣ… ಎಂದೇ ಸ್ವೀಕೃತರು.
ಒಪ್ಪಿಸಿದ ಒಪ್ಪ ಬಂಗಾರವಾಗಿರದೆ ಅಪ್ಪಟ ಅಪರಂಜಿಯಾಗಿರುವ ಬನ್ನಂಜೆಯವರಿಗೆ ಬದ್ಧತೆಯ ಬಂಗಾರದೊಂದಿಗೆ ಅವಿನಾಭಾವದ ಋಣಾನುಬಂಧವಿದೆ. ತುಳುನಾಡಿನ ಮಣ್ಣಿನ ಮಗ ಬನ್ನಂಜೆ ಬಾಬು ಅಮೀನರಂತಹ ಸಾಧಕ ರೊಂದಿಗಿನ ಸಖ್ಯವೇ ಶ್ರೇಷ್ಠ ಸುಖ.

ಬನ್ನಂಜೆಯವರ ಅಮೂಲ್ಯ ಅಂಕಿತಗಳನ್ನು ನಮ್ರತೆಯಿಂದ ನೆನೆಯುವ ಸಂಭ್ರಮವೇ “ಸಿರಿತುಪ್ಪೆ’ ಕಾರ್ಯಕ್ರಮ. ಒಳಿತಿನ ಸತ್ಕಾರ್ಯಗಳು ಸೂರ್ಯಚಂದ್ರರ ಕಾಲದವರೆಗೆ ಉಳಿಯಲಿ, ಬಾಬು ಅಮೀನರು ಬಯಸಿದ ಸರ್ವ ಶ್ರೇಷ್ಠ ಬಾಳ್ವೆಯನ್ನು ನಡೆಸಲಿ. ಇನ್ನೂ ಏನೋ ಹೇಳಬೇಕೆಂದಿದೆ, ಆಡದೆ ಉಳಿದಿಹ ಮಾತು ನೂರಿದೆ…

 ದಯಾನಂದ ಕರ್ಕೇರ ಉಗ್ಗೆಲ್ಬೆ ಟ್ಟು

Advertisement

Udayavani is now on Telegram. Click here to join our channel and stay updated with the latest news.

Next