Advertisement

‘ಶಿವಣ್ಣ ಯಾವಾಗ ಬರ್ತಾರೆ, ಯಾವಾಗ ಹೋಗ್ತಾರೆ ಅಂತ ಗೊತ್ತಾಗಲ್ಲ’

09:04 PM Oct 13, 2017 | Team Udayavani |

ಸುದೀಪ್‌ ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ‘ದಿ ವಿಲನ್‌’ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದಾರೆ. ಈಗಾಗಲೇ ಅವರು ‘ದಿ ವಿಲನ್‌’ ಚಿತ್ರಕ್ಕಾಗಿ ಪ್ರೇಮ್‌ ಜೊತೆಗೆ ಸಾಕಷ್ಟು ಸುತ್ತಾಡಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಲಂಡನ್‌, ಬ್ಯಾಂಕಾಕ್‌, ಶಿವಮೊಗ್ಗ, ಬೆಳಗಾವಿ ಅಂತ ಸಾಕಷ್ಟು ಸಮಯ ಕಳೆದಿದ್ದಾರೆ. ಇಷ್ಟು ದಿನಗಳಲ್ಲಿ ಪ್ರೇಮ್‌ ಒಬ್ಬ ಪ್ಯಾಶನೇಟ್‌ ನಿರ್ದೇಶಕ ಎಂದು ಅರ್ಥ ಮಾಡಿಕೊಂಡಿದ್ದಾರೆ. 

Advertisement


‘ಪ್ರೇಮ್‌ ತುಂಬಾ ಬಿಲ್ಡಪ್‌ ಕೊಡುತ್ತಾರೆ, ಶೋ ಆಫ್ ಮಾಡುತ್ತಾರೆ ಅಂತ ಕೇಳಿದ್ದೆ. ಆದರೆ, ಅವರ ಜೊತೆಗೆ ಕೆಲಸ ಮಾಡಿದ ಮೇಲೆ ಆತ ಎಷ್ಟು ಪ್ಯಾಶನೇಟ್‌ ಅಂತ ಅರ್ಥವಾಯಿತು. ಅವರ ಪ್ಯಾಶನ್‌ಗೆ ತಲೆ ಬಾಗಲೇಬೇಕು. ಸದಾ ಸಿನಿಮಾ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾರೆ. ಆ ಮನುಷ್ಯ ಒಂದು ಕಡೆ ಕೂರಲ್ಲ. ಸರಿಯಾಗಿ ಊಟ ಮಾಡಲ್ಲ. ನಾನು ಬೈದು ಊಟ ಮಾಡಿಸ್ತೀನಿ. ಇನ್ನೂ ಒಂದು ವಿಶೇಷ ಅಂದರೆ, ಆತ ಯಾರಿಗೂ ಬೈಯಲ್ಲ. ಎಲ್ಲರಿಂದಲೂ ಪ್ರೀತಿ ಇಂದ ಕೆಲಸ ತೆಗೆಯುತ್ತಾರೆ. ಅಂತಹ ನಿರ್ದೇಶಕರ ಜೊತೆಗೆ ಕೆಲಸ ಮಾಡುವುದಕ್ಕೆ ನಿಜಕ್ಕೂ ಖುಷಿ. ಇನ್ನು ಶಿವರಾಜಕುಮಾರ್‌ ಜೊತೆಗೆ ಕೆಲಸ ಮಾಡೋದು ನಿಜಕ್ಕೂ ಸಂತೋಷ. ಅವರು ಯಾವಾಗ ಬರ್ತಾರೆ, ಯಾವಾಗ ಹೋಗುತ್ತಾರೆ ಅನ್ನೋದೇ ಗೊತ್ತಾಗಲ್ಲ. ಅವರು ಯಾವತ್ತೂ ಬರುವಾಗ ಅಹಂ ತರುವುದಿಲ್ಲ. ಹಾಗಾಗಿ ಬಹಳ ಖುಷಿಯಾಗತ್ತೆ ಅವರ ಜೊತೆಗೆ ಕೆಲಸ ಮಾಡೋಕೆ. ಇನ್ನು ಪ್ರೇಮ್‌, ನಮ್ಮಿಬ್ಬರ ಪಾತ್ರವನ್ನ ಬಹಳ ಚೆನ್ನಾಗಿ ಬ್ಯಾಲೆನ್ಸ್‌ ಮಾಡಿದ್ದಾರೆ’ ಎಂದು ಖುಷಿಯಾಗುತ್ತಾರೆ ಸುದೀಪ್‌.


ಇನ್ನು ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಚೇಸ್‌ ಸನ್ನಿವೇಶಗಳ ಬಗ್ಗೆ ಅವರಿಗೆ ಬಹಳ ಸಂತೋಷವಿದೆ. ‘ಬ್ಯಾಂಕಾಕ್‌ನಲ್ಲಿ ಬಹಳ ವ್ಯವಸ್ಥಿತವಾಗಿ ಚಿತ್ರೀಕರಣ ಮಾಡಿದ್ದಾರೆ. ಬರೀ ಪ್ರೇಮ್‌ ಒಬ್ಬರೇ ಅಲ್ಲ, ಇಡೀ ತಂಡ ಅದರಲ್ಲಿ ತೊಡಗಿಸಿಕೊಂಡಿದ್ದು ನೋಡಿ ಖುಷಿಯಾಯ್ತು. ಆ ಚಿತ್ರ ಹೇಗೆ ಬರುತ್ತದೆ ಎಂಬ ಕುತೂಹಲ ಇದೆ. ಚಿತ್ರ ಏನೇ ಆಗಲೀ, ತುಂಬಾ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ’ ಎನ್ನುತ್ತಾರೆ ಸುದೀಪ್‌.

Advertisement

Udayavani is now on Telegram. Click here to join our channel and stay updated with the latest news.

Next