Advertisement

ಪರಿಹಾರ ಯೋಜನೆ ನನೆಗುದಿಗೆ, ಎಲ್ಲೆಲ್ಲೂ ಕಸ-ಕಸ

01:00 AM Mar 03, 2019 | Harsha Rao |

ಕೋಟ:  ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದ್ದು, ಬಗೆಹರಿಯದ ಪ್ರಶ್ನೆಯಾಗಿದೆ. 

Advertisement

ವಿಲೇವಾರಿಗೆ ಸೂಕ್ತ ಸ್ಥಳಾವಕಾಶ ವಿಲ್ಲದಿರುವುದರಿಂದ 7 ತಿಂಗಳಿನಿಂದ ಕಸ ಸಂಗ್ರಹ ಸ್ಥಗಿತಗೊಂಡಿದೆ. ಹೀಗಾಗಿ ಇಲ್ಲಿನ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಕಸ ಕೊಳೆತು ನಾರುತ್ತಿದೆ. ಸಮಸ್ಯೆ ಪರಿಹಾರಕ್ಕೆ ಪ.ಪಂ. ಹಲವು ಯೋಜನೆಗಳನ್ನು ಕೈಗೆತ್ತಿಕೊಂಡರೂ ಯಾವುದೂ ಕಾರ್ಯಗತವಾಗಿಲ್ಲ.

ಸಮಸ್ಯೆಯಿರುವ ಪ್ರದೇಶಗಳು
ಸಾಲಿಗ್ರಾಮ-ಪಾರಂಪಳ್ಳಿ ರಸ್ತೆಯ ಪಾರಂಪಳ್ಳಿ ಸೇತುವೆ ಸಮೀಪ ಹಾಗೂ ಪಡುಕರೆ ಗುಡ್ಡಿ ಶಾಲೆ ಅಕ್ಕ-ಪಕ್ಕದಲ್ಲಿ,  ಕಾರ್ಕಡ-ಕಾವಡಿ ರಸ್ತೆ,  ಕೋಟ-ಬನ್ನಾಡಿ ರಸ್ತೆಯ ಬೆಟ್ಲಕ್ಕಿ, ಉಪ್ಲಾಡಿ ಮುಂತಾದ ಕಡೆ ಕಸ ಸಂಗ್ರವಾಗಿ, ಕೊಳೆಯುತ್ತಿದೆ. 

ಇಲ್ಲಿನ 16ವಾರ್ಡ್‌ಗಳ  ಸುಮಾರು 1500 ಮನೆ ಹಾಗೂ 5 ವಸತಿ ಸಂಕಿರ್ಣಗಳು, 10ಕ್ಕೂ ಹೆಚ್ಚು ಹೋಟೆಲ್‌, ತರಕಾರಿ ಮಾರುಕಟ್ಟೆ, ನಾಲ್ಕೈದು ಕಲ್ಯಾಣ ಮಂಟಪ ಮುಂತಾದ ಕಡೆಗಳಿಂದ ನಿತ್ಯ 4ಟನ್‌ ಕಸ ಸಂಗ್ರಹವಾಗುತ್ತಿದೆ. ಹೀಗಾಗಿ ಈ ಕಸ ವಿಲೇವಾರಿ ಸಮಸಯೆಯಾಗಿದೆ. ಅಕ್ಕಪಕ್ಕದ ಪ್ರದೇಶಗಳಲ್ಲೂ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಅವರು ಇಲ್ಲಿಯೇ ಕಸ ಎಸೆಯುತ್ತಿದ್ದಾರೆ.

ಹೊಳೆ- ಕೃಷಿಭೂಮಿ, ಎಲ್ಲೆಲ್ಲೂ ಕಸ 
ಪಾರಂಪಳ್ಳಿ ಪಡುಕರೆಯ ರಸ್ತೆಯ ಪಕ್ಕದಲ್ಲಿರುವ ಕೃಷಿಭೂಮಿ ಪ್ಲಾಸ್ಟಿಕ್‌ನಿಂದ ತುಂಬಿದೆ. ಬೆಟ್ಲಕ್ಕಿ ಹಡೋಲಿನ ಎರಡೂ ಕಡೆಗಳಲ್ಲಿರುವ ನೀರಿನ ಹೊಂಡಗಳಲ್ಲಿ ಕಸ ಶೇಖರಣೆಯಾಗಿದೆ. ಕಾವಡಿ ಸೇತುವೆ, ಉಪ್ಲಾಡಿ ಸೇತುವೆಯ ಸಮೀಪ ಅಪಾಯಕಾರಿ ಕಸವನ್ನು ನೀರಿಗೆಸೆಯಲಾಗುತ್ತವೆ.

Advertisement

ಪರಿಹಾರ ಯೋಜನೆಗಳು  ಮರೀಚಿಕೆ 
ಎಸ್‌.ಎಲ್‌.ಆರ್‌.ಎಂ. ಘಟಕ ನಿರ್ಮಿಸಲು ಹಿಂದೆ ಉಳೂ¤ರಿನಲ್ಲಿ ಜಾಗ ಖರೀದಿಸಿದ್ದರೂ ಆಕ್ಷೇಪದಿಂದಾಗಿ ಸಾಧ್ಯವಾಗಿಲ್ಲ. ಅನಂತರ ಎಸ್‌.ಎಲ್‌.ಆರ್‌.ಎಂ. ಘಟಕವೂ ಕೈಗೂಡಲಿಲ್ಲ. ಸಮಗ್ರ ತ್ಯಾಜ್ಯ ನಿರ್ವಹಣೆ ಪರಿಕಲ್ಪನೆಯಡಿ ವೈಜ್ಞಾನಿಕವಾಗಿ ವಿಲೇವಾರಿಯ ಸ್ವಚ್ಛಾಸ್ತ್ರ  ಯೋಜನೆಯನ್ನು ಅಳವಡಿಸಿಕೊಳ್ಳುವ ಕುರಿತು ಸಂಬಂಧಪಟ್ಟ ಕಂಪನಿಯ ಜತೆ ಮಾತುಕತೆ ನಡೆಸಲಾಗಿತ್ತು. ಅಂದುಕೊಂಡಂತೆ ಆದರೆ ಡಿಸೆಂಬರ್‌ ಅಂತ್ಯದೊಳಗೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಬೇಕಿತ್ತು ಹಾಗೂ ಶಾಶ್ವತ ಘಟಕ ಸ್ಥಾಪಿಸಬೇಕಿತ್ತು. ಆದರೆ ಇದೀಗ  ಕಂಪನಿ ಆರ್ಥಿಕ ಕಾರಣವನ್ನು ನೀಡಿ ಘಟಕ ಸ್ಥಾಪಿಸಲು ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. 

ಸಾರ್ವಜನಿಕರ ಮೌನವೃತ
ಇಷ್ಟೆಲ್ಲ ಸಮಸ್ಯೆ ಇದ್ದರು ಸಾರ್ವಜನಿಕರು ಸ್ವಲ್ಪವೂ ಪ್ರತಿರೋಧ ತೋರಿಲ್ಲ ಹಾಗೂ ಮೌನವಾಗಿ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರ ಈ ನಿರ್ಲಿಪ್ತ ಧೋರಣೆಯಿಂದಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎನ್ನುವುದು ಸ್ಥಳೀಯ ಹೋರಾಟಗಾರರ ಅಭಿಪ್ರಾಯವಾಗಿದೆ.  ಪ್ರತಿ ವರ್ಷ ತೆರಿಗೆ ಪಾವತಿಸುವ ಸಂದರ್ಭ ಕಸ ವಿಲೇವಾರಿಗಾಗಿ ಒಂದು ಕುಟುಂಬದಿಂದ 180-200ರೂ ಪಡೆದು ಇದೀಗ ಕಸ ವಿಲೇವಾರಿ ಮಾಡದಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.

ಶ್ರಮವಹಿಸಿದರೂ ಸಾಧ್ಯವಾಗಿಲ್ಲ
ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಕಷ್ಟು  ಶ್ರಮವಹಿಸಲಾಗುತ್ತಿದೆ ಹಾಗೂ ಅಗತ್ಯ ಸಂದರ್ಭದಲ್ಲಿ ಹಸಿಕಸವನ್ನು ಸ್ವಲ್ಪ-ಸ್ವಲ್ಪ ವಿಲೇವಾರಿ ಮಾಡಲಾಗುತ್ತಿದೆ. ಆದರೆ ಮತ್ತೆ-ಮತ್ತೆ ಕಸ ಎಸೆಯುವುದರಿಂದ ಸಮಸ್ಯೆಯಾಗುತ್ತಿದೆ.  ಸ್ವಚ್ಛಾಸ್ತ್ರ ಯೋಜನೆ ಅನುಷ್ಠಾನದ ಹಂತದಲ್ಲಿ ಸ್ಥಗಿತವಾಗಿದೆ. ಸಮಸ್ಯೆಯನ್ನು  ಶಾಸಕರ ಗಮನಕ್ಕೆ ತರಲಾಗಿದೆ.
-ಅರುಣ್‌ ಕುಮಾರ್‌, ಮುಖ್ಯಾಧಿಕಾರಿಗಳು ಸಾಲಿಗ್ರಾಮ ಪ.ಪಂ.

 ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡಲಾಗಿದೆ
ಎಸ್‌.ಎಲ್‌.ಆರ್‌.ಎಂ. ಘಟಕದಿಂದ ಸ್ಥಳೀಯ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಇಲ್ಲ. ಆದ್ದರಿಂದ ಉಳೂ¤ರಿನಲ್ಲಿ ಖರೀದಿ ಮಾಡಿರುವ ಜಾಗದಲ್ಲಿ  ಸ್ಥಳೀಯರು ಮತ್ತು ಸ್ಥಳೀಯಾಡಳಿತದ ಮನವೊಳಿಸಿ ಎಸ್‌.ಎಲ್‌.ಆರ್‌.ಎಂ. ಘಟಕ ಸ್ಥಾಪಿಸುವಂತೆ ಪ.ಪಂ. ಮುಖ್ಯಾಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಕುರಿತು ಪ್ರಯತ್ನ ನಡೆಸಲಾಗುವುದು.
-ಹಾಲಾಡಿ ಶ್ರೀನಿವಾಸ್‌ ಶೆಟ್ಟಿ, ಸ್ಥಳೀಯ ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next