Advertisement

Mangaluru ಕಟ್ಟುವ ಉತ್ಸಾಹ, ದುರಂತಪ್ರಜ್ಞೆ ಎರಡೂ ರಾಮಾಯಣದಲ್ಲಿದೆ: ಲಕ್ಷ್ಮೀಶ ತೋಳ್ಪಾಡಿ

12:05 AM Jan 20, 2024 | Team Udayavani |

ಮಂಗಳೂರು: ನಮ್ಮನ್ನು ಆಳುವುದು ಆಲೋಚನೆಗಳೇ ಹೊರತು ಸರಕಾರಗಳಲ್ಲ, ಆಲೋಚನೆ ಎಂದರೆ ಭಾಷೆ, ಮನಸ್ಸು, ಅದು ಘೋರವನ್ನು ಸೃಷ್ಟಿಸುವುದಾದರೆ, ಅದಕ್ಕೇ ಶಾಂತಿಯನ್ನೂ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿ ಪ್ರಾಯಪಟ್ಟಿದ್ದಾರೆ.

Advertisement

ಇಲ್ಲಿನ ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ “ಮಂಗಳೂರು ಲಿಟ್‌ ಫೆಸ್ಟ್‌’ನ ಆರನೇ ಆವೃತ್ತಿಗೆ ಚಾಲನೆ ನೀಡಿ ಅವರು ಮಾತನಾಡಿ, ಕಟ್ಟುವ ಕೆಲಸವನ್ನು ಮುರಿದವರೇ ಮಾಡಬೇಕು, ಹಾಗೆ ಮಾಡಬೇಕಾದರೆ ಅಳಲಿಗೆ ಕಿವಿಕೊಡುವ ಸೂಕ್ಷ್ಮತೆ ಬೇಕು, ಅದನ್ನು ರಾಮಾಯಣ ಹೇಳುತ್ತದೆ ಎಂದು ತಿಳಿಸಿದರು.

ಸಾಹಿತ್ಯದಲ್ಲಿ ಸಾಮಾನ್ಯವಾಗಿ ಬಳಸುವ ಪದ ಸೃಷ್ಟಿಶೀಲತೆ ಅಥವಾ ಸೃಜನಶೀಲತೆ. ಅದು ಹುಟ್ಟಬೇಕಾದರೆ ಅದಕ್ಕೆ ಎರಡು ದಾರಿ ಇದೆ, ಅಥವಾ ಒಂದು ಸಮೀಕರಣವಿದೆ. ಮೊದಲನೆಯದ್ದು ಆದರ್ಶ ಅಥವಾ ಕಟ್ಟುವ ಉತ್ಸಾಹ ಮತ್ತು ದುರಂತಪ್ರಜ್ಞೆ ಅಥವಾ ನೋವಿಗೆ ಕಿವಿಯಾಗುವ ಸೂಕ್ಷ್ಮತೆ. ಇವೆರಡೂ ಒಟ್ಟಿಗೆ ರಾಮಾಯಣದಲ್ಲಿ ಸೇರಿಕೊಂಡಿವೆ ಎಂದು ಬಣ್ಣಿಸಿದರು.

ವಾಲ್ಮೀಕಿ ಕವಿ ನಾರದನಿಂದ ರಾಮನ ಕಥೆಯನ್ನು ಆಲಿಸಿ ತಿಳಿದುಕೊಂಡಿದ್ದರು, ಅವರು ಅದನ್ನು ಹಾಗೆಯೇ ಬರೆದಿದ್ದರೆ ಅದು ವಾಲ್ಮೀಕಿ ರಾಮಾಯಣವಾಗದೆ ನಾರದನ ರಾಮಾಯಣವಾಗುತ್ತಿತ್ತು. ಆದರೆ ಆ ಬಳಿಕ ಕ್ರೌಂಚ ಪಕ್ಷಿಗಳ ಮಿಲನವನ್ನು ನೋಡುತ್ತಿದ್ದಾಗ ಬೇಡನೊಬ್ಬ ಅದರಲ್ಲಿ ಗಂಡು ಹಕ್ಕಿಯನ್ನು ಕೊಲ್ಲುವುದು, ಆಗ ಹೆಣ್ಣು ಪಕ್ಷಿ ದುಃಖತಪ್ತವಾಗುವುದನ್ನು ನೋಡಿ ವಾಲ್ಮೀಕಿಯಲ್ಲಿ ಕರುಣ ರಸ ಸು#ರಣೆಯಾಯಿತು, ಹೀಗೆ
ಕಟ್ಟುವ ಉತ್ಸಾಹ ಮತ್ತು ನೋವಿಗೆ ಮಿಡಿಯುವ ಆದ್ರìತೆ ಇವೆರಡೂ ಸೇರಿದಾಗ ಅಲ್ಲಿ ನಮಗೆ ಗೊತ್ತಿಲ್ಲದಂತೆಯೇ ಸೃಷ್ಟಿ ಶೀಲತೆ ಪ್ರಕಟವಾಗುತ್ತದೆ ಎಂದರು.

ಮಿಥಿಕ್‌ ಸೊಸೈಟಿಯ ಟ್ರಸ್ಟಿ ಎಸ್‌.ರವಿ ಅವರು ಮಾತನಾಡಿ, ಮಂಗಳೂರು ಲಿಟ್‌ ಫೆಸ್ಟ್‌ ದಿ ಐಡಿಯಾ ಆಫ್‌ ಭಾರತ್‌ ಎಂಬ ವಿಷಯದೊಂದಿಗೆ ನಡೆಯುತ್ತ ಬಂದಿದೆ ಎಂದರು.

Advertisement

ಮಹಿಳಾ ಸಶಕ್ತೀಕರಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಧಾರವಾಡದ ವನಿತಾ ಸೇವಾ ಸಮಾಜ ಸಂಸ್ಥೆಗೆ ಮಂಗಳೂರು ಲಿಟ್‌ ಫೆಸ್ಟ್‌ ಪರವಾಗಿ ಪ್ರಶಸ್ತಿ ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಮಧುರಾ ಹೆಗ್ಡೆ ಅವರು ಪ್ರಶಸ್ತಿ ಸ್ವೀಕರಿಸಿದರು. ಭಾರತ್‌ ಫೌಂಡೇಶನ್‌ ಟ್ರಸ್ಟಿಗಳಾದ ಕ್ಯಾ| ಬೃಜೇಶ್‌ ಚೌಟ, ಶ್ರೀರಾಜ್‌ ಗುಡಿ ಉಪಸ್ಥಿತರಿದ್ದರು.
ಭಾರತ್‌ ಫೌಂಡೇಶನ್‌ನ ಟ್ರಸ್ಟಿ ಸುನಿಲ್‌ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು. ಅಭಿಷೇಕ್‌ ಶೆಟ್ಟಿ ಮತ್ತು ನಿಧಿ ಹೆಗ್ಡೆ ನಿರೂಪಿಸಿದರು.

ಜ. 20, 21ರಂದು ಕಲಾಪ
ಜ. 20, 21ರಂದು ಮಂಗಳೂರು ಲಿಟ್‌ ಫೆಸ್ಟ್‌ನಲ್ಲಿ ವಿವಿಧ ಕಲಾಪಗಳು ನಡೆಯಲಿದ್ದು, ದಿ ಐಡಿಯಾ ಆಫ್‌ ಭಾರತ್‌ ಎಂಬ ವಿಚಾರದಲ್ಲಿ ಹಲವು ಮಗ್ಗುಲಗಳಲ್ಲಿ ವಿಷಯಮಂಡನೆ, ಸಮಾಲೋಚನೆಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next