Advertisement

ಸೀತೆಯ ಜನ್ಮಭೂಮಿಯಲ್ಲಿ…

08:59 AM Dec 01, 2019 | Lakshmi GovindaRaj |

ಮಿಥಿಲೆ ಪುರಾಣ ಗ್ರಂಥಗಳಿಂದ ಮಾತ್ರವೇ ನಮಗೆ ತಿಳಿದಿರುವ ನಗರ. ಸೀತೆ ಹುಟ್ಟಿದ್ದು, ಜನಕರಾಜನ ಅರಮನೆ ಇದ್ದಿದ್ದು ಇಲ್ಲಿಯೇ ಎಂದು ನಂಬಿದ್ದೇವೆ. ಮಿಥಿಲಾ ನಗರಿ ಈಗ ಎಲ್ಲಿದೆ? ನೇಪಾಳದ ಜನಕಪುರ ಕೆಲವು ಸಾಕ್ಷ್ಯಗಳನ್ನು ನಮ್ಮ ಮುಂದಿಡುತ್ತದೆ…

Advertisement

ಸೀತೆಯ ಹುಟ್ಟಿದ ತಾಣ ಮಿಥಿಲಾ ನಗರ ಎನ್ನುವ ನಂಬಿಕೆಯಿದೆ. ಜನಕ ಮಹಾರಾಜ ಆಳಿದ ರಾಜ್ಯವೇ ಮಿಥಿಲಾ. ಅದೀಗ ಎಲ್ಲಿದೆ ಎಂದು ಹುಡುಕುತ್ತಾ ಹೋದರೆ, ಕೆಲವು ನಂಬಲರ್ಹ ಸಾಕ್ಷ್ಯಗಳು ಸಿಗುವುದು ನೇಪಾಳದ ಜನಕಪುರದಲ್ಲಿ. ಬಿಹಾರದ ಉತ್ತರಕ್ಕೆ ಅಂಟಿಕೊಂಡ ಪುಟ್ಟ ರಾಷ್ಟ್ರ ನೇಪಾಳ. ಅತ್ಯಂತ ಪ್ರಾಚೀನ ಕಾಲದಲ್ಲಿ ನೇಪಾಳದ ಗಂಡಕೀ ನದಿಯಿಂದ ಭಾರತದ ಚಂಪಾರಣ್ಯದ ವರೆಗೆ ಮಿಥಿಲಾನಗರ ವಿಸ್ತರಿಸಿತ್ತು ಎನ್ನಲಾಗುತ್ತದೆ. “ವಿದೇಹ’ ಎನ್ನುವ ರಾಜ್ಯದ ರಾಜಧಾನಿಯೇ ಮಿಥಿಲಾ. ಪ್ರಸ್ತುತ “ಜನಕಪುರ’ವೆಂದು ಪ್ರಸಿದ್ಧಿ ಪಡೆದಿದೆ.

ನಮ್ಮ ಪುರಾಣ ಗ್ರಂಥಗಳಲ್ಲಿ ಮಿಥಿಲೆಯ ವರ್ಣನೆ ಸೊಗಸಾಗಿದೆ. “ಇಲ್ಲಿರುವ ವೇಶ್ಯೆಯರೂ ಬ್ರಹ್ಮಜ್ಞಾನಿಗಳಾಗಿ ಭಗವಂತನ ಭಕ್ತೆಯಾಗಿದ್ದರು’ ಎನ್ನುವ ಬಣ್ಣನೆಯೂ ಇದೆ. ಇಲ್ಲಿ ಅನೇಕ ಮಂದಿರಗಳಿದ್ದರೂ, ಆ ಪೈಕಿ ಜಾನಕಿ ಮಹಲ್‌ ಪ್ರಖ್ಯಾತ. ನಗರದ ಚತುರ್ದಿಕ್ಕಿನಲ್ಲಿ 15 ಕಿ.ಮೀ. ವಿಸ್ತೀರ್ಣದಲ್ಲಿ ಏಳು ಶಿವಮಂದಿರಗಳಿವೆ- ಶಿಲಾನಾಥ, ಕಪಿಲೇಶ್ವರ, ಕೂಪೇಶ್ವರ, ಕಲ್ಯಾಣೇಶ್ವರ, ಜಾಲೇಶ್ವರ, ಕ್ಷೀರೇಶ್ವರ ಮತ್ತು ಮಿಥಿಲೇಶ್ವರ.

ಜಾನಕಿ ಮಹಲ್‌: ಇದೊಂದು ವಿಶಾಲ ಮಂದಿರ. ದೊಡ್ಡ ಪ್ರಾಕಾರದಲ್ಲಿ ಮುಖ್ಯ ಮಂದಿರದಲ್ಲಿ ರಾಮ, ಲಕ್ಷ್ಮಣ, ಸೀತೆಯರ ಭವ್ಯಮೂರ್ತಿಗಳಿವೆ. ಬೇಕಮ್‌ಗಢದ ಮಹಾರಾಣಿ ವೃಷಭಾನು ಈ ಮಂದಿರದ ನಿರ್ಮಾತೃ. ಇದನ್ನು “ನೌಲಕಾ ಮಂದಿರ’ ಅಥವಾ “ಶೇಷ ಮಹಲ್‌’ ಎಂದು ಕರೆಯುವುದು ವಾಡಿಕೆ. ಇದಕ್ಕೆ ಕಾರಣವೂ ಉಂಟು. ಮಂದಿರ ನಿರ್ಮಿಸುವ ಕಾಲಘಟ್ಟದಲ್ಲಿ ಪ್ರತಿ ವಸ್ತುವೂ ಅಗ್ಗವಾಗಿ ಸಿಗುತ್ತಿತ್ತಂತೆ. ಅರ್ಥಾತ್‌ ಒಂದು ರೂಪಾಯಿಗೆ 25 ಕಿಲೋ ಅಕ್ಕಿ ಸಿಗುವ ಕಾಲವಾಗಿತ್ತು. ಕಾರ್ಮಿಕರ ಕೂಲಿ ಇಂದಿನ ನಾಣ್ಯದಲ್ಲಿ 40 ಪೈಸೆಗೆ ಸಮಾನ ಆದ್ದರಿಂದ ಕೇವಲ 9 ಲಕ್ಷ ರೂಪಾಯಿಯಲ್ಲಿ ಈ ಬೃಹತ್‌ ಕಟ್ಟಡ ಕಟ್ಟಲಾಗಿತ್ತು. ಜಾನಕಿ ಮಹಲ್‌ನ ಪಕ್ಕದಲ್ಲಿಯೇ, ಲಕ್ಷ್ಮಣ ಮಂದಿರವೂ ಇದೆ.

ಇದು ರಾಮಮಂದಿರ…: ಜಾನಕಿ ಮಂದಿರದಿಂದ ದಕ್ಷಿಣಕ್ಕೆ ಅಲ್ಪದಾರಿ ಸವೆಸಿದರೆ, ವಿಶಾಲವಾದ ಪ್ರಾಕಾರವೊಂದರಲ್ಲಿ ಶ್ರೀರಾಮ ಪಂಚಾಯತನ, ಲಕ್ಷ್ಮೀನಾರಾಯಣ ಮತ್ತು ದಶಾವತಾರದ ವಿಗ್ರಹಗಳಿವೆ. ರಾಮ ಪಂಚಾಯತನ ಮೂರ್ತಿಯು ಅಕ್ಷಯ ವಟವೊಂದರ ಕೆಳಗೆ ಭೂಮಿಯಲ್ಲಿ ದೊರೆತಿದ್ದರಿಂದ, ಅಲ್ಲಿಯೇ ಮಂದಿರ ನಿರ್ಮಾಣವಾಯಿತು. ಮಹಾತ್ಮ ಚತುರ್ಭುಜ ಗಿರಿಗೆ ಸ್ವಪ್ನಾದೇಶದಂತೆ ಈ ಮೂರ್ತಿ ದೊರೆಯಿತಂತೆ. ಹನುಮಾನ್‌ ಚತುರ್ಭುಜನಾಥ ಮತ್ತು ತ್ರಿಪುರ ಸುಂದರಿ ದೇವಿಯ ಮಂದಿರ ಇಲ್ಲಿದ್ದು, ತ್ರಿಪುರ ಸುಂದರ ದೇವಿ ಜನಕರಾಜನ ಪರಿವಾರದ ದೇವತೆ ಕೂಡ ಹೌದು.

Advertisement

ಜನಕನ ದೇಗುಲ: ರಾಮಮಂದಿರದ ಈಶಾನ್ಯ ದಿಕ್ಕಿನಲ್ಲಿ ಈ ಮಂದಿರವಿದೆ. ಇದರಲ್ಲಿ ಜನಕರಾಜ, ಸುನಯನಾ ಮತ್ತು ಸೀತಾ ಮೂರ್ತಿಗಳಿವೆ. ಮಂದಿರದ ಹತ್ತಿರ ಗಂಗಾಸಾಗರವೆಂಬ ವಿಸ್ತೃತ ಸರೋವರವಿದೆ. ಇದರೊಳಗೆ ಸೀತಾಮೂರ್ತಿ ಪ್ರಾಪ್ತವಾಯಿತು ಎನ್ನುತ್ತಾರೆ. ಈ ದೇಗುಲದ ಸಮೀಪವೇ ಇರುವುದು, ದಶರಥ ಮಂದಿರ. ಇಲ್ಲಿ ಹಲವಾರು ಪುಣ್ಯಪ್ರದ ಸರೋವರಗಳಿದ್ದು, ತೀರ್ಥಸ್ನಾನಕ್ಕೆ ಪ್ರವಾಸಿಗರು ಮುಗಿಬೀಳುವುದನ್ನು ಕಾಣಬಹುದು. ತ್ರೇತಾಯುಗದ ಜನಕರಾಜನ ಅರಮನೆಗಳು ಈಗಿಲ್ಲದಿದ್ದರೂ, ಕೆಲವೊಂದು ಗುರುತುಗಳ ಮೂಲಕ ಮಿಥಿಲಾ ನಗರವೇ ಇದಾಗಿದೆ ಎನ್ನುವುದಕ್ಕೆ ಅನೇಕ ಸಾಕ್ಷ್ಯಗಳಿವೆ.

ರಾಮನು ಶಿವಧನುಸ್ಸು ಮುರಿದಿದ್ದು…: ಜನಕಪುರದಿಂದ 20 ಕಿ.ಮೀ. ದೂರದಲ್ಲಿ ಧನುಷಾ ಎಂಬ ಗ್ರಾಮವಿದೆ. ಇಲ್ಲಿ ಸೀತಾ ಸ್ವಯಂವರ ನಡೆಯಿತೆಂದೂ, ರಾಮನು ಶಿವಧನುಸ್ಸನ್ನು ಮುರಿದು ಸೀತೆಯನ್ನು ವರಿಸಿದನೆಂತಲೂ ಹೇಳುತ್ತಾರೆ. ಇಲ್ಲಿ ಒಂದು ಧನುಸ್ಸಿನಾಕಾರಾದ ಪಾಷಾಣ ಖಂಡವಿದೆ. ರಾಮಚಂದ್ರನಿಂದ ಮುರಿಯಲ್ಪಟ್ಟ ಧನುಸ್ಸು ಶಿಲೆಯಾಗಿ ಇಲ್ಲಿದೆಯೆಂದು ನಂಬಲಾಗುತ್ತದೆ.

ಇದುವೇ ಮಾರ್ಗ…: ಜಯನಗರ- ದರ್ಭಾಂಗಕ್ಕೆ ಈಶಾನ್ಯ ರೈಲಗಳು ಹೋಗುತ್ತವೆ. ದರ್ಭಾಂಗದಿಂದ 68 ಕಿ.ಮೀ. ದೂರದಲ್ಲಿ ಜಯನಗರ ಬರುತ್ತದೆ. ಇಲ್ಲಿಂದ ಮುಂದೆ ನೇಪಾಳದ ರೈಲ್ವೆ, “ಜನಕಪುರ ಎಕ್ಸ್‌ಪ್ರೆಸ್‌’ ಮೂಲಕ ಸೀತೆಯ ಜನ್ಮ ಸ್ಥಳವನ್ನು ತಲುಪಬಹುದು. ಸ್ಟೇಷನ್‌ನಿಂದ 1.5 ಕಿ.ಮೀ. ದೂರದಲ್ಲಿ ಜನಕಮಹಲ್‌ ಇದೆ. ನಗರದಲ್ಲಿ ಅನೇಕ ಹೋಟೆಲ್‌, ಧರ್ಮಶಾಲೆಗಳಿವೆ. ಕಠ್ಮಂಡುವಿನಿಂದಲೂ ಇಲ್ಲಿಗೆ 303 ಕಿ.ಮೀ. ದೂರವಿದ್ದು, ನೇರ ಬಸ್‌ ಸಂಚಾರವಿದೆ.

* ಕೋಟೇಶ್ವರ ಸೂರ್ಯನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next