Advertisement

ಕ್ಷೇತ್ರ ಗೆಲ್ಲಲು ಸಿದ್ದು ಪುತ್ರ,ಬಿಜೆಪಿ ನಿಷ್ಠನ ಫೈಟ್‌

06:35 AM May 05, 2018 | |

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಪ್ರತಿನಿಧಿಸಿರುವ ಕ್ಷೇತ್ರವನ್ನು ಈ ಚುನಾವಣೆಯಲ್ಲಿ ತಮ್ಮ ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟಿರುವುದರಿಂದ ವರುಣ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಈ ಮಧ್ಯೆ, ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ತಿ.ನರಸೀಪುರದ ಹೋಟೆಲ್‌ ಉದ್ಯಮಿ ತೋಟದಪ್ಪ ಬಸವರಾಜು ಅವರನ್ನು ಕಣಕ್ಕಿಳಿಸಿದ್ದು, ಪ್ರಬಲ ಪೈಪೋಟಿ ನೀಡಲು  ಮುಂದಾಗಿದೆ. ಜೆಡಿಎಸ್‌ನಿಂದ ಅಭಿಷೇಕ್‌ ಕಣದಲ್ಲಿದ್ದು, ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

Advertisement

ಮೈಸೂರು ಹೊರವಲಯದ ತಿ.ನರಸೀಪುರ ಮುಖ್ಯರಸ್ತೆ ಹಾಗೂ ಈ ಭಾಗದ ಪ್ರಭಾವಿ ಮಠವಿರುವ ಸುತ್ತೂರು ಗ್ರಾಮಕ್ಕೆ ತೆರಳುವ ಮಾರ್ಗದ ಜಂಕ್ಷನ್‌ನಲ್ಲಿರುವ ಪುಟ್ಟ ಗ್ರಾಮ ವರುಣ. ಕ್ಷೇತ್ರ ಪುನರ್‌ ವಿಂಗಡಣೆ ಸಂದರ್ಭದಲ್ಲಿ ಮೈಸೂರು ತಾಲೂಕಿನ ಚಾಮುಂಡೇಶ್ವರಿ ಕ್ಷೇತ್ರ, ತಿ.ನರಸೀಪುರ ಹಾಗೂ ನಂಜನಗೂಡು ತಾಲೂಕಿಗೆ ಸೇರಿದ 122 ಹಳ್ಳಿಗಳನ್ನು ಸೇರಿಸಿ ವರುಣ ಕ್ಷೇತ್ರವನ್ನು ರಚಿಸಲಾಗಿದೆ. 2008ರಲ್ಲಿ ನಡೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ತ್ಯಜಿಸಿ, ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ 71,908 ಮತ ಪಡೆದು, ಬಿಜೆಪಿ ಅಭ್ಯರ್ಥಿಯಾಗಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ಎಲ್‌.ರೇವಣಸಿದ್ದಯ್ಯ ವಿರುದಟಛಿ 18,837 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

2013ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಸಿದ್ದರಾಮಯ್ಯ 84,385
ಮತಗಳನ್ನು ಪಡೆದು ಕೆಜೆಪಿ ಅಭ್ಯರ್ಥಿ ಕಾ.ಪು.ಸಿದ್ದಲಿಂಗಸ್ವಾಮಿ ವಿರುದ್ಧ 29,641 ಮತಗಳ ಅಂತರದಿಂದ  ಜಯಗಳಿಸಿದರು.

ಬಿಜೆಪಿ ಅಭ್ಯರ್ಥಿ ಎಸ್‌.ಡಿ.ಮಹೇಂದ್ರ ಹಾಗೂ ಜೆಡಿಎಸ್‌ ಅಭ್ಯರ್ಥಿ ಚೆಲುವರಾಜು ಠೇವಣಿ ಕಳೆದುಕೊಂಡರು. ವೀರಶೈವ-ಲಿಂಗಾಯತರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮತಗಳೂ ಹೆಚ್ಚಾಗಿವೆ. ನಂತರದ ಸ್ಥಾನದಲ್ಲಿ ಕುರುಬರು, ಒಕ್ಕಲಿಗರು, ಅಷ್ಟೇ ಸಂಖ್ಯೆಯಲ್ಲಿ ಇತರ ಹಿಂದುಳಿದ ವರ್ಗಗಳ ಜನರ ಮತಗಳಿವೆ.

ಪಕ್ಷನಿಷ್ಠನಿಗೆ ಬಿಜೆಪಿ ಬೆಂಬಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ವರುಣಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುವ ಮೂಲಕ ಬಿಜೆಪಿಯಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಯಡಿಯೂರಪ್ಪ ಅವರೇ ತಮ್ಮ ಪುತ್ರ ಇಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಹೈಕಮಾಂಡ್‌ ಪಕ್ಷದ ಸಾಮಾನ್ಯ ಕಾರ್ಯಕರ್ತ, ನಿಷ್ಠಾವಂತ, ತಿ.ನರಸೀಪುರದ ಹೋಟೆಲ್‌ ಉದ್ಯಮಿ ತೋಟದಪ್ಪ ಬಸವರಾಜು ಅವರನ್ನು ಕಣಕ್ಕಿಳಿಸಿದ್ದು, ತಿಂಗಳುಗಳ ಕಾಲ ಕ್ಷೇತ್ರದ ಹಳ್ಳಿ ಹಳ್ಳಿ ಸುತ್ತಿದ್ದ ವಿಜಯೇಂದ್ರ ನಂತರ ವರುಣಾ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶನಿವಾರ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸುವ ಮೂಲಕ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದಾರೆ. ಜೆಡಿಎಸ್‌ನಿಂದ ಅಭಿಷೇಕ್‌ ಕಣದಲ್ಲಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿರುವ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು, ಕ್ಷೇತ್ರದ ಲಿಂಗಾಯತ ಮತ್ತು ಒಕ್ಕಲಿಗ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟಿವೆ.

Advertisement

ಯತೀಂದ್ರ ಡಾಕ್ಟರ್ ಸಿದ್ದರಾಮಯ್ಯನವರ ಹಿರಿಯ ಪುತ್ರ ರಾಕೇಶ್‌ ಅಕಾಲಿಕ ಮರಣದ ನಂತರ ಕುಟುಂಬದವರ ಒತ್ತಾಯದ ಮೇರೆಗೆ ತಂದೆಯ ಉತ್ತರಾಧಿಕಾರಿಯಾಗಿ ಒಂದೂವರೆ ವರ್ಷಗಳ ಹಿಂದೆ ಕ್ಷೇತ್ರಕ್ಕೆ ಕಾಲಿಟ್ಟ ಯತೀಂದ್ರ, ಇಡೀ ಕ್ಷೇತ್ರದ ಜವಾಬ್ದಾರಿ ಹೊತ್ತು ಕೆಲಸ-ಕಾರ್ಯಗಳನ್ನು ಮಾಡುವ ಮೂಲಕ ಹಳ್ಳಿಗರ ಬಾಯಲ್ಲಿ ಡಾಕ್ಟರ್ ಎಂದೇ ಜನಪ್ರಿಯರಾಗಿದ್ದಾರೆ. ಸಿದ್ದರಾಮಯ್ಯ ಪುತ್ರನಿಗೆ ರಾಜಕೀಯ ಅಧಿಕಾರ ಕಲ್ಪಿಸುವ ದೃಷ್ಟಿಯಿಂದ ಸುರಕ್ಷಿತವಾದ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟು, ತಾವು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ ಅಪಾರವಾಗಿದ್ದು, ಹಿಂದೆಂದೂ ಆಗದಂತಹ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.ಆದ್ದರಿಂದ ಮತದಾರರು ಅಭಿವೃದ್ಧಿ ನೋಡಿ ಕಾಂಗ್ರೆಸ್‌ ಪಕ್ಷವನ್ನು, ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ.
– ಡಾ.ಯತೀಂದ್ರ, ಕಾಂಗ್ರೆಸ್‌ ಅಭ್ಯರ್ಥಿ
ಸಾಮಾನ್ಯ

ಕಾರ್ಯಕರ್ತನಾದ ನನಗೆ ಬಿಜೆಪಿ ಟಿಕೆಟ್‌ ನೀಡಿದ್ದು, ಎಲ್ಲರ ಸಹಕಾರದಿಂದ ಪ್ರಚಾರ ಚೆನ್ನಾಗಿ ನಡೆದಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕ್ಷೇತ್ರದಲ್ಲಿ ನನ್ನ ಪರ ಪ್ರಚಾರಕ್ಕೆ ಬರುತ್ತಿರುವುದು ನಮ್ಮ ಆತ್ಮಸ್ಥೆçರ್ಯವನ್ನು ವೃದಿಟಛಿಸಿದೆ.
– ತೋಟದಪ್ಪ ಬಸವರಾಜು, ಬಿಜೆಪಿ ಅಭ್ಯರ್ಥಿ

ವಿದೇಶದಲ್ಲಿ ಅಧ್ಯಯನ ನಡೆಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ಪಡೆದು ಬಂದಿರುವ ನನಗೆ ಯುವ ಜನರನ್ನು ಸ್ವ ಉದ್ಯೋಗದಲ್ಲಿ ತೊಡಗಿಸಿ, ಸ್ವಾವಲಂಬಿಗಳನ್ನಾಗಿಸುವ ಮಹತ್ವಾಕಾಂಕ್ಷೆ ಇದೆ. ಕುಮಾರಸ್ವಾಮಿ ಸಿಎಂ ಆದರೆ ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದರಿಂದ ಜನ ಜೆಡಿಎಸ್‌ ಬೆಂಬಲಿಸಲಿದ್ದಾರೆ.
– ಅಭಿಷೇಕ್‌ ಎಸ್‌.ಮಣೆಗಾರ್‌, ಜೆಡಿಎಸ್‌ ಅಭ್ಯರ್ಥಿ

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next