Advertisement

ರಾಮನ ಆರ್ಥಿಕ ನೀತಿ ಬಿಜೆಪಿಗೆ ಅನ್ವಯಿಸಲ್ವಾ?: ವಿ.ಎಸ್‌. ಉಗ್ರಪ್ಪ

11:43 PM Oct 14, 2019 | Team Udayavani |

ಬೆಂಗಳೂರು: ರಾಮನ ಜಪ ಮಾಡುವ ಬಿಜೆಪಿಯವರಿಗೆ ರಾಮನ ಆರ್ಥಿಕ, ಸಾಮಾಜಿಕ ನೀತಿ ಕೇಂದ್ರದ ಬಿಜೆಪಿ ಸರ್ಕಾರಕ್ಕೂ ಅನ್ವಯ ಆಗುತ್ತದೆ ಎಂಬುದು ಗೊತ್ತಿರಬೇಕು. ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದ ದೇಶದ ಸಾಮಾನ್ಯ ಜನರ ಮೇಲೆ ಆಗುತ್ತಿರುವ ತೊಂದರೆಯನ್ನು ಮರೆ ಮಾಚಲು ಐಟಿ ದಾಳಿ ಹಾಗೂ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ರಾಮನ ಜಪ ಮಾಡುತ್ತಿದ್ದಾರೆ.

Advertisement

ರಾಮಾಯಣದ ಅಯೋಧ್ಯೆ ಖಾಂಡದಲ್ಲಿ ಭರತ ಕಾಡಿಗೆ ಬಂದಾಗ ರಾಮನು ತನ್ನ ರಾಜ್ಯದ ಆರ್ಥಿಕ, ಸಾಮಾಜಿಕ, ಗಣಿ ಸಂಪತ್ತು ಬಳಕೆ, ಬೇಹುಗಾರಿಕೆ ಹೇಗಿರಬೇಕು, ಮಂತ್ರಿಮಂಡಲ ಹೇಗಿರಬೇಕು ಎಂದು ಉಪದೇಶಿಸುತ್ತಾನೆ. ಅದು ಮೋದಿ ಸರ್ಕಾರಕ್ಕೂ ಅನ್ವಯ ಆಗುತ್ತದೆ. ಆ ಬಗ್ಗೆ ಮೋದಿಗೆ ಅರಿವು ಇದ್ದಿದ್ದರೆ, ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರಲಿಲ್ಲ. 2020ರಲ್ಲಿ ದೇಶದ ಜಿಡಿಪಿ ಶೇ.6ಕ್ಕೆ ಕುಸಿಯುವ ಮೂಲಕ ದೇಶದಲ್ಲಿ ಬಡತನ ಉಲ್ಬಣಿಸಲು ಕೇಂದ್ರ ಸರ್ಕಾರವೇ ಕಾರಣವಾಗಿದೆ ಎಂದರು.

ಕೋಟಿ ಪರಿಹಾರಕ್ಕೆ ಆಗ್ರಹ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಡಾ.ಜಿ.ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಅವರ ಕುಟುಂಬಕ್ಕೆ ಐಟಿ ಇಲಾಖೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next