Advertisement

ಶಿವರಾಮೇಗೌಡ ಹೇಳಿಕೆ ಖಂಡಿಸಿ ಏಕಾಂಗಿ ಪ್ರತಿಭಟನೆ

06:14 PM Apr 08, 2019 | Lakshmi GovindaRaju |

ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್‌ ಹಾಗೂ ಅವರ ಪರ ಪ್ರಚಾರ ನಡೆಸುತ್ತಿರುವ ನಟ ದರ್ಶನ್‌ ಅವರು ನಾಯ್ಡುಗಳು ಎನ್ನುವ ಮೂಲಕ ಸಂಸದ ಎಲ್‌.ಆರ್‌.ಶಿವರಾಮೇಗೌಡ ರಾಜಕೀಯ ಲಾಭಕ್ಕಾಗಿ ಜಾತಿಯನ್ನು ಎಳೆದುತಂದಿರುವುದನ್ನು ಖಂಡಿಸಿ ದರ್ಶನ್‌ ಅಭಿಮಾನಿಯೊಬ್ಬರು ನಗರದಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದರು.

Advertisement

ಬುಧವಾರ ಮೈಸೂರು ಮಹಾ ನಗರಪಾಲಿಕೆ ಕಚೇರಿ ಎದುರು ಇಲ್ಲಿ ಬಾಯಿ ಮಾತಿನಲ್ಲಿ ಜಾತಿ ಸರ್ಟಿಫಿಕೇಟ್‌ ನೀಡಲಾಗುವುದು ಎಂಬ ಬರಹವುಳ್ಳ ಫ‌ಲಕ, ಶಿವರಾಮೇಗೌಡರ ಭಾವಚಿತ್ರದ ಕೆಳಗೆ ನಿಯತ್ತಿಗೆ ಹೆಸರಾದದ್ದು ಶ್ವಾನ- ಅದಕ್ಕೆ ಮಾಡಬೇಡಿ ಅವಮಾನ ಎಂಬ ಫ‌ಲಕ ಹಿಡಿದು ಏಕಾಂಗಿ ಪ್ರತಿಭಟನೆ ನಡೆಸಿದ ದರ್ಶನ್‌ ಅಭಿಮಾನಿ ಹರೀಶ್‌, ಸಂಸದ ಶಿವರಾಮೇಗೌಡ ಜಾತಿ ಹೆಸರೇಳಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ಶಿವರಾಮೇಗೌಡ ಅವರನ್ನು ನಾವು ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಿದ್ದು ಜನರ ಕೆಲಸ ಮಾಡಲು, ಜಾತಿ ಬಗ್ಗೆ ಮಾತನಾಡಿ ಎಂದು ನಿಮ್ಮನ್ನು ಮಂಡ್ಯದ ಜನತೆ ಆರಿಸಿ ಕಳುಹಿಸಿಲ್ಲ, ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಟ ದರ್ಶನ್‌ ಜಾತಿ ಹೇಳಿ ಅವರಿಗೆ ಅವಮಾನಿಸಿರುವುದು ಸರಿಯಲ್ಲ. ದರ್ಶನ್‌ ಶಾಂತಿಪ್ರಿಯರು, ಅವರನ್ನು ಪದೇ ಪದೆ ಕೆಣಕುವುದು ಸರಿಯಲ್ಲ ಎಂದರು.

ಸುಮಲತಾ ಅಂಬರೀಶ್‌ ಹಾಗೂ ದರ್ಶನ್‌ ಅವರೆಂದಿಗೂ ಜಾತಿ ಬಗ್ಗೆ ಮಾತನಾಡಿಲ್ಲ.
ಸಂಸದ ಶಿವರಾಮೇಗೌಡ ಟಿಕೆಟ್‌ ಸಿಗದ ಕಾರಣಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ರಾಜಕೀಯ ಮಾಡಿ, ಆದರೆ ಜಾತಿ ರಾಜಕೀಯ ಮಾಡಬೇಡಿ. ನೀವು ಜಾತಿ ರಾಜಕೀಯ ಮಾಡಿ ದರ್ಶನ್‌ ಅಭಿಮಾನಿಗಳನ್ನು ಕೆರಳಿಸಬೇಡಿ, ಮುಂದಾಗುವ ಎಲ್ಲಾ ಅನಾಹುತಕ್ಕೂ ನೀವೇ ಜವಾಬ್ದಾರರಾಗುತ್ತೀರಿ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next