ತುಮಕೂರು: ಕಳೆದ 50ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹ ತತ್ವದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾಯಕಯೋಗಿ, ಸಂತರ ಸಂತ, ಕರ್ನಾಟಕ ರತ್ನ, ಶತಾಯುಷಿ ಡಾ.ಸಿದ್ದಗಂಗಾಶ್ರೀಗಳು(111ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಲಿಂಗೈಕ್ಯರಾಗಿದ್ದಾರೆ.
ಅಸಂಖ್ಯಾತ ಭಕ್ತರು, ಲಕ್ಷಾಂತರ ಶಿಷ್ಯವೃಂದವನ್ನು ಹೊಂದಿದ್ದ ಡಾ.ಶಿವಕುಮಾರ ಸ್ವಾಮೀಜಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದರು. ಭಾನುವಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ತಡರಾತ್ರಿ ಸಿದ್ದಗಂಗಾಶ್ರೀಗಳ ಬಿಪಿ ಮತ್ತು ಉಸಿರಾಟದಲ್ಲಿ ತೀವ್ರ ವ್ಯತ್ಯಯವಾಗಿತ್ತು.
ಸಿದ್ದಗಂಗಾಶ್ರೀಗಳ ಆರೋಗ್ಯ ಗಂಭೀರವಾಗಿದ್ದು, ನಾವು ಎಲ್ಲಾ ರೀತಿಯಿಂದಲೂ ಚಿಕಿತ್ಸೆ ನೀಡುತ್ತಿದ್ದೇವೆ. ಆದರೆ ಅದು ಎಷ್ಟರ ಮಟ್ಟಿಗೆ ಫಲ ನೀಡುತ್ತೋ, ಇಲ್ಲವೋ ಗೊತ್ತಿಲ್ಲ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡದ ಡಾ.ಪರಮೇಶ್ವರ್ ಅವರು ಇಂದು ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.
Related Articles
ಬೆಳಗ್ಗೆ ಸಿದ್ದಗಂಗಾಮಠಕ್ಕೆ ಪ್ರವೇಶ ನಿರ್ಬಂಧ:
ಸಿದ್ದಗಂಗಾಶ್ರೀಗಳ ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ಸಿದ್ದಗಂಗಾಮಠಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.. ಕೇವಲ ಆಪ್ತರಿಗಷ್ಟೇ ಮಠದೊಳಕ್ಕೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ನಾಳೆ ಸಂಜೆ ಕ್ರಿಯಾಸಮಾಧಿ:
ಶತಾಯುಷಿ ಡಾ.ಶಿವಕುಮಾರ್ ಸ್ವಾಮೀಜಿ ಇಂದು ಬೆಳಗ್ಗೆ 11.44ಕ್ಕೆ ಲಿಂಗಕ್ಯರಾಗಿದ್ದಾರೆ. ಪ್ರತಿಯೊಬ್ಬರ ಹೃದಯದಲ್ಲಿ ಸ್ಥಾನಪಡೆದಿದ್ದ ಸಿದ್ದಗಂಗಾಶ್ರೀಗಳು ವೈದ್ಯರ ಹಲವಾರು ಉತ್ತಮ ಚಿಕಿತ್ಸೆ ನೀಡಿಯೂ ಫಲನೀಡಿಲ್ಲ. ಕಳೆದ ಕೆಲವು ದಿನಗಳಿಂದ ಜವರಾಯನ ಜೊತೆ ಹೋರಾಡಿ ಲಿಂಗಕ್ಯರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುದ್ದಿಗಾರರ ಜೊತೆ ಮಾತನಾಡುತ್ತ ಮಧ್ಯಾಹ್ನ 2ಗಂಟೆಗೆ ಮಾಹಿತಿ ನೀಡಿದ್ದಾರೆ.
ನಾಳೆ ಸಂಜೆ 4.30ಕ್ಕೆ ಸ್ವಾಮೀಜಿಯವರ ಕ್ರಿಯಾಸಮಾಧಿ ನಡೆಯಲಿದೆ. ನಾಳೆ ಮಧ್ಯಾಹ್ನ 3ಗಂಟೆವರೆಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತರು ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.