Advertisement

ಶೆಟ್ಟರ್‌ ನಿರ್ಗಮನ: ಕಾಂಗ್ರೆಸ್‌ಗೆ ನಷ್ಟವೇನು? ಬಿಜೆಪಿಗೆ ಲಾಭವೇನು ?

10:50 PM Jan 25, 2024 | Team Udayavani |

ಕಾಂಗ್ರೆಸ್‌ಗೆ ನಷ್ಟವೇನು ?

Advertisement

ಬೆಂಗಳೂರು: ಕೇವಲ 9 ತಿಂಗಳ ಹಿಂದೆ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇಬ್ಬರು ಪ್ರಮುಖ ಲಿಂಗಾಯತ ನಾಯಕರನ್ನು ಕಾಂಗ್ರೆಸ್‌, ತನ್ನ ಮನೆಗೆ ಕರೆತರುವುದ
ರೊಂದಿಗೆ ಬಿಜೆಪಿ ವಿರುದ್ಧ “ಲಿಂಗಾಯತ ಸ್ವಾಭಿಮಾನದ ಅಸ್ತ್ರ’ ಪ್ರಯೋಗಿಸಿತ್ತು. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಆ ಇಬ್ಬರ ಪೈಕಿ ಒಬ್ಬ ನಾಯಕರನ್ನು ಬಿಜೆಪಿ ವಾಪಸ್‌ ತನ್ನ ಮನೆಗೆ ಕರೆತಂದಿದೆ. ಈ ಮೂಲಕ ತಿರುಮಂತ್ರಕ್ಕೆ ನಾಂದಿ ಹಾಡಿದೆ.

“ಶೆಟ್ಟರ್‌ ಆಗಮನ, ನಿರ್ಗಮನ ದಿಂದ ಲಾಭವೂ ಇಲ್ಲ; ನಷ್ಟವೂ ಇಲ್ಲ’ ಎಂದು ಕಾಂಗ್ರೆಸ್‌ ನಾಯಕರು ಸಮಜಾಯಿಷಿ ನೀಡುತ್ತಿರಬಹುದು. ಆದರೆ ಅದೇ ನಾಯಕರು ವಿಧಾನಸಭಾ ಚುನಾವಣೆ ವೇಳೆ ಶೆಟ್ಟರ್‌ ವೀರಶೈವ-ಲಿಂಗಾಯತ ಪ್ರಬಲ ನಾಯಕರು. ಅವರ ಸೇರ್ಪಡೆಯೊಂದಿಗೆ ಕಾಂಗ್ರೆಸ್‌ಗೆ ದೊಡ್ಡಶಕ್ತಿ ಬಂದಿದೆ. ಇದರಿಂದ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ ಎಂದು ಹೇಳಿದ್ದರು. ಚುನಾವಣೆಯ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಅಗ್ರಸ್ಥಾನವನ್ನೂ ನೀಡಿದ್ದರು. ಈಗ ಶೆಟ್ಟರ್‌ ನಿರ್ಗಮನದಿಂದ ಸಹಜವಾಗಿ ಕಾಂಗ್ರೆಸ್‌ ಶಕ್ತಿ ಕುಂದಿದಂತಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಬಂಧಿಕರು ಮತ್ತು ಕಾಂಗ್ರೆಸ್‌ ಪ್ರಭಾವಿ ನಾಯಕರಾದ ಎಂ.ಬಿ. ಪಾಟೀಲ್‌ ಹಾಗೂ ಶಾಮನೂರು ಶಿವಶಂಕರಪ್ಪ ಈ ಹಿಂದೆ ಹಲವು ಸುತ್ತಿನ ಮಾತುಕತೆ ನಡೆಸಿ, ಶೆಟ್ಟರ್‌ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗ ದೇಶದ ಹಿತಕ್ಕಾಗಿ ಶೆಟ್ಟರ್‌ ಬಿಜೆಪಿ ಕಡೆ ವಾಲಿದ್ದಾರೆ. ಈ ಬೆಳವಣಿಗೆ ಪ್ರಮುಖವಾಗಿ ಬಿಜೆಪಿ ಭದ್ರಕೋಟೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ತನ್ನ ಸ್ಥಾನ ಗಟ್ಟಿಯಾದಂತಾಗಲಿದೆ. ಹಾವೇರಿ-ಗದಗ, ವಿಜಯಪುರ, ಬಾಗಲಕೋಟೆ ಸಹಿತ ಲಿಂಗಾಯತ ಸಮುದಾಯ ಹೆಚ್ಚಿರುವ ಕಡೆ ಕಾಂಗ್ರೆಸ್‌ಗೆ ಇದು ತಕ್ಕಮಟ್ಟಿನ ಹಿನ್ನಡೆ ಎಂದು ಹೇಳಲಾಗುತ್ತಿದೆ. ಈ ಹಿನ್ನಡೆ-ಮುನ್ನಡೆಯ ಲೆಕ್ಕಾಚಾರ ಕ್ಕಿಂತ ಹೆಚ್ಚಾಗಿ ವೀರಶೈವ- ಲಿಂಗಾ ಯತ ನಾಯಕರು ಬಿಜೆಪಿ ಕಡೆಗಿದ್ದಾರೆ ಎಂಬ ಸಂದೇಶ ರವಾನೆ ಇಲ್ಲಿ ಮುಖ್ಯವಾಗಿದೆ. ಒಂದೆಡೆ ಬಿ.ವೈ. ವಿಜಯೇಂದ್ರ ಅವರಿಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮತ್ತೂಂದೆಡೆ ಶೆಟ್ಟರನ್ನು ವಾಪಸ್‌ ಕರೆತರಲಾಗಿದೆ. ಇದೆಲ್ಲದರ ನಡುವೆ ಬಿಜೆಪಿ-ಜೆಡಿಎಸ್‌ ಮೈತ್ರಿ ಆಗಿದೆ. ರಾಜಕೀಯ ಧ್ರುವೀಕರಣದ ಸುಳಿವು ಇದಾಗಿದೆ.

ಬಿಜೆಪಿಗೆ ಲಾಭವೇನು ?

Advertisement

ಜಗದೀಶ್‌ ಶೆಟ್ಟರ್‌ “ಘರ್‌ವಾಪ್ಸಿ’ ಮೂಲಕ ರಾಜ್ಯದಲ್ಲಿ ಪಕ್ಷ ಮತ್ತೆ ಗಟ್ಟಿಯಾಗುತ್ತಿದೆ ಎಂದು ಬಿಂಬಿಸಲು ಬಿಜೆಪಿ ಮುಂದಾಗಿದ್ದು, ಚದುರಿದ ಮತಬ್ಯಾಂಕನ್ನು ಭದ್ರಪಡಿಸಿಕೊಳ್ಳುವುದಕ್ಕೆ ಈ ಮೂಲಕ ತಂತ್ರಗಾರಿಕೆ ಹೆಣೆಯಲಾಗುತ್ತಿದೆ.

ವಿಧಾನಸಭಾ ಟಿಕೆಟ್‌ ನಿರಾಕರಿಸಿದ ಕಾರಣಕ್ಕೆ ವರಿಷ್ಠರ ವಿರುದ್ಧವೇ ಮುನಿಸಿಕೊಂಡಿದ್ದ ಶೆಟ್ಟರ್‌ ಕಾಂಗ್ರೆಸ್‌ ಸೇರಿದ್ದರು. ಬಿಜೆಪಿ ಅಭ್ಯರ್ಥಿ ಮಹೇಶ್‌ ಟೆಂಗಿನಕಾಯಿ ವಿರುದ್ಧ ಹೀನಾಯವಾಗಿ ಸೋತಿದ್ದರೂ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತಬ್ಯಾಂಕ್‌ ಕಂಪಿಸುವಂತೆ ಮಾಡಿದ್ದರು. ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರ್ಪಡೆಯಿಂದ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದ್ದನ್ನು ಅಲ್ಲಗಳೆಯುವಂತಿಲ್ಲ.

ಈ ಕಾರಣಕ್ಕಾಗಿಯೇ ಸೋತ ಶೆಟ್ಟರ್‌ಗೆ ವಿಧಾನ ಪರಿಷತ್‌ ಸದಸ್ಯ ಸ್ಥಾನ ನೀಡಿ ಕಾಂಗ್ರೆಸ್‌ ಋಣ ತೀರಿಸಿಕೊಂಡಿತ್ತು. ಆದರೆ ಕಷ್ಟದ ಸಮಯದಲ್ಲಿ ಕೈ ಹಿಡಿದ ಕಾಂಗ್ರೆಸ್‌ ಬಿಟ್ಟು ಮಾತೃಪಕ್ಷಕ್ಕೆ ಶೆಟ್ಟರ್‌ ಪುನರಾಗಮನವಾಗಿದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಸಹಜವಾಗಿಯೇ ಬಿಜೆಪಿಗೆ ಲಾಭವಾಗಲಿದ್ದು, ಉತ್ತರ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹಾವೇರಿ, ಗದಗ ಹೀಗೆ ಐದಾರು ಕ್ಷೇತ್ರಗಳಲ್ಲಿ ಲಿಂಗಾಯತ ಮತಬ್ಯಾಂಕ್‌ ಕ್ರೋಢೀಕರಣಕ್ಕೆ ಅನುಕೂಲ ವಾಗಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ “ಆಪರೇಷನ್‌ ಹಸ್ತ’ದ ಹೆಸರಿನಲ್ಲಿ ಬಿಜೆಪಿ ಶಾಸಕರನ್ನು ಸೆಳೆಯುತ್ತೇವೆ ಎಂದು ಬೆದರಿಕೆಯೊಡ್ಡುತ್ತಿದ್ದ ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು ನೀಡಿದಂತಾಗಿದೆ.

ಬಿಜೆಪಿ ಮೂಲಗಳ ಪ್ರಕಾರ ಉತ್ತರ ಪ್ರಾಂತ್ಯದ ಆರೆಸ್ಸೆಸ್‌ ನಾಯಕರು ಶೆಟ್ಟರ್‌ ಸಹಿತ ಪಕ್ಷ ತೊರೆದವರನ್ನು ಮರಳಿ ಕರೆತರುವ ಬಗ್ಗೆ ವರಿಷ್ಠರ ಬಳಿ ಪ್ರಸ್ತಾವವಿಟ್ಟಿದ್ದರು. ಶೆಟ್ಟರ್‌ ಕೂಡ ಪಕ್ಷಕ್ಕೆ ಮರಳಲು ಸಿದ್ಧ ಎಂದು ಆಪ್ತರ ಮೂಲಕ ಸಂಘದ ಹಿರಿಯರಿಗೆ ಸಂದೇಶ ರವಾನಿಸಿದ್ದರು. ಸೂಕ್ತ ಸಮಯದಲ್ಲಿ ಶೆಟ್ಟರ್‌ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅಮಿತ್‌ ಶಾ ಹೇಳಿದ್ದರು. ಹೀಗಾಗಿ ರಾಮಮಂದಿರ ಪ್ರತಿಷ್ಠಾಪನೆ ಮುಗಿ ಯುತ್ತಿದ್ದಂತೆ ರಾಜಕೀಯ “ಘರ್‌ ವಾಪ್ಸಿ’ಗೆ ಹೈಕಮಾಂಡ್‌ ಹಸುರು ನಿಶಾನೆ ತೋರಿಸಿದ್ದು, ಸುಮಾರು 1 ತಿಂಗಳಿಂದ ನಡೆಯುತ್ತಿದ್ದ ಬೆಳವಣಿಗೆಗೆ ತೆರೆ ಬಿದ್ದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next