Advertisement

ನಗರದಲ್ಲಿ ಧಾರಾಕಾರ ಮಳೆ: ಧರೆಗುರುಳಿದ ಮರಗಳು

12:52 AM May 08, 2019 | Team Udayavani |

ಬೆಂಗಳೂರು: ಫೋನಿ ಚಂಡಮಾರುತ ಬಳಿಕ ನಗರದಲ್ಲಿ ಪೂರ್ವಮುಂಗಾರಿನ ಮತ್ತೂಂದು ಮಳೆಯ ಆರ್ಭಟ ಶುರುವಾಗಿದೆ. ಅಲ್ಪಾವಧಿಯಲ್ಲಿ ಗಂಟೆಗೆ ಕೆಲವೆಡೆ ತೀವ್ರವಾಗಿ ಮಳೆ ಸುರಿದ ಪರಿಣಾಮ ಹತ್ತಾರು ಮರಗಳು ನೆಲಕಚ್ಚಿದವು. ಆಯ್ದ ಭಾಗಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

Advertisement

ಹೊರವಲಯದ ದೇವನಹಳ್ಳಿಯಲ್ಲಿ ಸಿಡಿಲು ಬಡಿದು 12 ಕುರಿಗಳು ಸಾವಿಗೀಡಾದ ಘಟನೆ ವರದಿಯಾಗಿದೆ. ಮಾಗಡಿ ರಸ್ತೆಯಲ್ಲಿ ಹಲವು ಮನೆಗಳು, ಬಸವೇಶ್ವರನಗರದ ನಂದಿನಿ ಚಿತ್ರಮಂದಿರದ ಬಳಿ, ವಾಣಿ ವಿಲಾಸ ಆಸ್ಪತ್ರೆಯ 3ನೇ ಹಂತದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.

ಪ್ರಮುಖ ಜಂಕ್ಷನ್‌ಗಳು, ಅಂಡರ್‌ಪಾಸ್‌ಗಳಲ್ಲಿ ಎರಡು-ಮೂರು ಅಡಿ ನೀರು ತುಂಬಿಕೊಂಡಿದ್ದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಬಸವೇಶ್ವರನಗರದಲ್ಲಿ ಮಳೆಯ ಹೊಡೆತಕ್ಕೆ ಮರವೊಂದು ರಸ್ತೆ ಬದಿ ನಿಲ್ಲಿಸಿದ್ದ ಕಾರು ಮತ್ತು ಬೈಕ್‌ ಮೇಲೆ ಬಿದ್ದಿದೆ. ಕಾರು ಚಾಲಕ ಅದೃಷ್ಟವಶಾತ್‌ ಪಾರಾಗಿದ್ದಾನೆ.

ಮರಗಳು ಧರೆಗೆ: ರಾಜಾಜಿನಗರದ ಭಾಷ್ಯಂ ವೃತ್ತ, ಶೇಷಾದ್ರಿಪುರದ ಗಾಯತ್ರಿನಗರ, ಎಚ್‌ಎಂಟಿ ಲೇಔಟ್‌, ಲಕ್ಷ್ಮೀದೇವಿ, ಗೊರುಗುಂಟೆಪಾಳ್ಯದ ಆರ್‌ಸಿಎಂ ಲೇಔಟ್‌, ಆರ್‌.ಟಿ. ನಗರದ ಎಚ್‌ಎಂಟಿ ಮೈದಾನ, ಭದ್ರಪ್ಪ ಲೇಔಟ್‌, ಸಂಜಯನಗರ, ಸುಬ್ಬಯ್ಯ ವೃತ್ತದಲ್ಲಿ ತಲಾ ಒಂದು ಮರಗಳು ಧರೆಗುರುಳಿವೆ. ಶಿವಾನಂದ ವೃತ್ತದಲ್ಲಿ ಮರ ಬಿದ್ದು ಕಾರೊಂದು ಜಖಂಗೊಂಡಿದೆ.

ಈ ಮಧ್ಯೆ ಮಲ್ಲೇಶ್ವರದ ಲಿಂಕ್‌ ರಸ್ತೆಯಲ್ಲಿ ಬಿದ್ದ ಮರ ತೆರವುಗೊಳಿಸುವಂತೆ ಸಹಾಯವಾಣಿಗೆ ಕರೆ ಮಾಡಿದರೂ ಸ್ಥಳಕ್ಕೆ ಧಾವಿಸಿಲ್ಲ ಎಂದು ಆರೋಪಿಸಿ, ಸ್ಥಳೀಯರು ಆಕ್ರೋಶಗೊಂಡರು. ಎಲೆಕ್ಟ್ರಾನಿಕ್‌ ಸಿಟಿಯ ವೀರಸಂದ್ರ ಗೇಟ್‌ ಬಳಿಯ ರಸ್ತೆ, ಓಕಳೀಪುರ, ಹೆಬ್ಟಾಳ, ಮೆಜೆಸ್ಟಿಕ್‌, ಶಿವಾನಂದ ವೃತ್ತದ ಮಾರ್ಗಗಳಲ್ಲಿ ಬರುವ ಜಂಕ್ಷನ್‌ಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ಆಮೆಗತಿಯಲ್ಲಿ ಸಾಗಿತ್ತು.

Advertisement

ಸಂಚಾರದಟ್ಟಣೆಯೂ ಹೆಚ್ಚಿತ್ತು. ಬಸ್‌ಗಳ ಕಾರ್ಯಾಚರಣೆಯಲ್ಲೂ ಇದು ಪರಿಣಾಮ ಬೀರಿತು. ಇದರಿಂದ ಸಕಾಲದಲ್ಲಿ ಬಸ್‌ಗಳು ನಿಗದಿತ ಸ್ಥಳಕ್ಕೆ ಬಾರದ್ದರಿಂದ ಪ್ರಯಾಣಿಕರು ಪರದಾಡಿದರು.

ಬಸವನಗುಡಿ, ಸಂಜಯ್‌ ನಗರದ ಡಾಲರ್ಸ್‌ ಕಾಲೊನಿ, ಪೀಣ್ಯ ಕೈಗಾರಿಕಾ ಪ್ರದೇಶ, ಹೆಗ್ಗವನಹಳ್ಳಿ, ಜಯನಗರ 4 ಟಿ ಬ್ಲಾಕ್‌, ನವರಂಗ ಮಲ್ಲೇಶ್ವರ, ಸೌಂತ್‌ ಎಂಡ್‌ ಸರ್ಕಲ್‌, ರಾಜಾಜಿನಗರ, ದೇವಗೌಡ ಪೆಟ್ರೋಲ್‌ ಬ್ಯಾಂಕ್‌, ಎಚ್‌ಎಸ್‌ಆರ್‌ ಲೇಔಟ್‌, ಪದ್ಮನಾಭನಗರ ಮತ್ತಿತರ ಕಡೆಗಳಲ್ಲಿ ಮಳೆ ಜೋರಾಗಿತ್ತು.

ಸಂಚಾರ ದಟ್ಟಣೆ: ಭಾರೀ ಮಳೆಯಿಂದಾಗಿ ರಸ್ತೆ ಮೇಲೆ ನೀರು ನುಗಿದ ಪರಿಣಾಮ ನಾಯಂಡಹಳ್ಳಿ ಜಂಕ್ಷನ್‌ ಸಮೀಪದ ಮೇಲು ಸೇತುವೆ ಬಳಿ ಸಂಚಾರ ದಟ್ಟಣೆ ಉಂಟಾಗಿತ್ತು. ಮಳೆಯಿಂದ ಈ ಸ್ಥಳದಲ್ಲಿ ನಿರಂತರವಾಗಿ ನೀರು ನಿಂತುಕೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ಸಂಬಂಧ ಬಿಬಿಎಂಪಿಗೆ ಹಲವಾರು ಬಾರಿ ದೂರು ನೀಡಿದರು ಪ್ರಯೋಜನವಾಗಿಲ್ಲ ಎಂದು ಸಂಚಾರ ಪೊಲೀಸರು ಆರೋಪಿಸಿದ್ದಾರೆ.

ಇನ್ನೂ ಎರಡು ದಿನ ಮಳೆ?: ಮಳೆ ಅಬ್ಬರ ನಗರದ ಹೃದಯಭಾಗದಲ್ಲಿಗಿಂತ ಹೊರವಲಯದಲ್ಲಿ ಹೆಚ್ಚಾಗಿತ್ತು. ಪೂರ್ವಮುಂಗಾರು ಮಳೆ ಇದಾಗಿದ್ದು, ಇನ್ನೂ ಎರಡು ದಿನಗಳು ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ (ಮಿ.ಮೀ.ಗಳಲ್ಲಿ): ಹಾಲನಾಯಕನಹಳ್ಳಿ 118, ಸೊಂಡೆಕೊಪ್ಪ 102, ಬೊಮ್ಮನಹಳ್ಳಿ 100, ಬಸವನಗುಡಿ 98, ಗಾಳಿ ಆಂಜನೇಯ ದೇವಸ್ಥಾನ 88, ಆರ್‌.ಆರ್‌. ನಗರ 82, ದೊಡ್ಡಬಿದರಕಲ್ಲು 76, ಹೇರೋಹಳ್ಳಿ 78, ಪೀಣ್ಯ ಕೈಗಾರಿಕಾ ಪ್ರದೇಶ 69, ಮಾದಾವರ 69, ರಾಧಾಕೃಷ್ಣ ದೇವಾಲಯ 52, ಸಾರಕ್ಕಿ 56, ಸಿದ್ದವನಹಳ್ಳಿ 65.5, ಮಾಡೊಹಳ್ಳಿ 82, ದಾಸನಪುರ 96, ನೆಲಮಂಗಲ 66.5ರಷ್ಟು ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next