Advertisement

ಸತೀಶ್‌ ಹೊಸ ಚಿತ್ರ ಅಯೋಗ್ಯ

10:41 AM Jul 24, 2017 | Team Udayavani |

ಯೋಗರಾಜ್‌ ಭಟ್‌ ಗರಡಿಯ ಪವನ್‌ ಒಡೆಯರ್‌, ವೀರು ಸೇರಿದಂತೆ ಒಂದಿಷ್ಟು ಹುಡುಗರು ಈಗಾಗಲೇ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ಭಟ್ಟರ ಇನ್ನೊಬ್ಬ ಶಿಷ್ಯ ಮಹೇಶ್‌, ಸ್ವತಂತ್ರ ನಿರ್ದೇಶಕರಾಗುವುದಕ್ಕೆ ಸಜ್ಜಾಗಿದ್ದಾರೆ. “ಅಯೋಗ್ಯ’ ಎಂಬ ಚಿತ್ರ ಮಾಡುವುದಕ್ಕೆ ಮಹೇಶ್‌ ಹೊರಟಿದ್ದು, ಆಗಸ್ಟ್‌ ನಾಲ್ಕರಂದು ಚಿತ್ರ ಶುರುವಾಗಲಿದೆ. ಚಿತ್ರದ ಮುಹೂರ್ತ ನಿಗದಿಯಾಗಿರುವುದು ಕಂಠೀರವ ಸ್ಟುಡಿಯೋದಲ್ಲಿ.

Advertisement

ಅಂದಹಾಗೆ, ಮಹೇಶ್‌ ನಿರ್ದೇಶನದಲ್ಲಿ “ಅಯೋಗ್ಯ’ ಆಗುವುದಕ್ಕೆ ಹೊರಟಿರುವುದು ಸತೀಶ್‌ ನೀನಾಸಂ. ಅವರ ಜೊತೆಗೆ ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ, ರಂಗಾಯಣ ರಘು, ರವಿಶಂಕರ್‌ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ವಿಶೇಷವೆಂದರೆ, ಹಿರಿಯ ನಟಿ ಸರಿತಾ ಈ ಚಿತ್ರದಲ್ಲಿ ನಟಿಸುತ್ತಿರುವುದು. ರವಿ ಶ್ರೀವತ್ಸ ನಿರ್ದೇಶನದ “ದಶಾವತಾರ’ ಚಿತ್ರದಲ್ಲಿ ಸರಿತಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈಗ “ಅಯೋಗ್ಯ’ ಮೂಲಕ ಅವರು ಪುನಃ ಕನ್ನಡಕ್ಕೆ ವಾಪಸ್ಸಾಗಿದ್ದಾರೆ. ಇನ್ನು ಸತೀಶ್‌ ನೀನಾಸಂಗೆ ನಾಯಕಿಯ ಹುಡುಕಾಟ ನಡೆಯುತ್ತಿದ್ದು, ಸದ್ಯದಲ್ಲೇ ನಾಯಕಿ ಫಿಕ್ಸ್‌ ಆಗುವ ಸಾಧ್ಯತೆ ಇದೆ.

ಇದೊಂದು ಕಾಮಿಡಿ ಸಿನಿಮಾ ಆಗಿದ್ದು, ಹಿನ್ನೆಲೆಯಲ್ಲಿ ಒಂದು ಸಂದೇಶ ಹೇಳುವುದಕ್ಕೆ ಹೊರಟಿದ್ದಾರಂತೆ ಮಹೇಶ್‌. ಹಳ್ಳಿಗಳಲ್ಲಿ ಜನ ಇನ್ನೂ ಬಹಿರ್ದೆಸೆಗೆ ಬಯಲಿಗೆ ಹೋಗುವುದರ ಕುರಿತು ಮತ್ತು ಎದುರಿಸುತ್ತಿರುವ ನೂರಾರು ಸಮಸ್ಯೆಗಳ ಬಗ್ಗೆ ಅವರು ಈ ಚಿತ್ರದಲ್ಲಿ ಬೆಳಕು ಚೆಲ್ಲಲಿದ್ದಾರಂತೆ. ಸರ್ಕಾರ ಇಷ್ಟೊಂದು ಸವಲತ್ತುಗಳನ್ನು ಕೊಟ್ಟರೂ ಯಾಕೆ ಬಳಕೆಯಾಗುವುದಿಲ್ಲ ಮತ್ತು ಏನೇನು ಆಗಬೇಕೆಂದು ಅವರು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

ಇಲ್ಲಿ ನಾಯಕ ಆರಂಭದಲ್ಲಿ ಎಲ್ಲರಿಂದ ಅಯೋಗ್ಯ ಎಂದು ಕರೆಸಿಕೊಂಡು, ಕೊನೆಗೆ ಹೇಗೆ ಜನ ಮೆಚ್ಚುವ ಕೆಲಸಗಳನ್ನು ಮಾಡುತ್ತಾನೆ ಎಂಬುದು ಚಿತ್ರದ ಕಥೆಯಂತೆ. ಈ ಚಿತ್ರವನ್ನು ಸೃಷ್ಠಿ ಎಂಟರ್‌ಪ್ರೈಸಸ್‌ನಡಿ ಸುರೇಶ್‌ ಬಿ.ಸಿ ಮತ್ತು ಎಸ್‌.ಕೆ. ಮೋಹನ್‌ ಕುಮಾರ್‌ ಅವರು ನಿರ್ಮಿಸುತ್ತಿದ್ದಾರಂತೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದರೆ, ಪ್ರೀತಂ ಎನ್ನುವವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಮಹೇಶ್‌ ಗುರು ಯೋಗರಾಜ್‌ ಭಟ್‌ ಹಾಡುಗಳನ್ನು ಬರೆಯುವುದರ ಜೊತೆಗೆ ಚಿತ್ರವನ್ನೂ ಅರ್ಪಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next