Advertisement

ಲಾರಿಯಲ್ಲಿ ಸಾಗಿಸುತ್ತಿದ್ದ 70 ಲಕ್ಷ ರೂ. ವಶ

03:28 PM May 12, 2018 | Team Udayavani |

ಕೋಲಾರ: ತಾಲೂಕಿನ ಕೊಂಡರಾಜನಹಳ್ಳಿ ಸಮೀಪ ಜಿಲ್ಲಾಧಿಕಾರಿ ಜಿ.ಸತ್ಯವತಿ ನೇತೃತ್ವದಲ್ಲಿ ಗುರುವಾರ ರಾತ್ರಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಿಮೆಂಟ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 70 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

Advertisement

ನಗರದ ಸಿಮೆಂಟ್‌ ಗೋದಾಮು ಒಂದರಿಂದ ಗುರುವಾರ ತಡ ರಾತ್ರಿ ಬೆಂಗಳೂರಿನ ಆವಲಹಳ್ಳಿಗೆ ಹೋಗುತ್ತಿದ್ದ ಲಾರಿಯಲ್ಲಿ ಸಿಮೆಂಟ್‌ ಮೂಟೆಗಳ ಮಧ್ಯೆ ಹಣದ ಚೀಲವಿಟ್ಟು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಜಿಲ್ಲಾ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿತ್ತು. 

ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ 75ರ ಕೊಂಡರಾಜನಹಳ್ಳಿ ಬಳಿ ಲಾರಿ ತಡೆದು ಪರಿಶೀಲನೆ ನಡೆಸಿದಾಗ ಹಣದ ಚೀಲ ಇರುವುದು ಗೊತ್ತಾಗಿದೆ. ಚೀಲದಲ್ಲಿ 500 ಮತ್ತು 2,000 ರೂ.ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. 

ಚಾಲಕ, ಕ್ಲೀನರ್‌ ಬಂಧನ: ಲಾರಿಯಲ್ಲಿನ ಸಿಮೆಂಟ್‌ ಸರಕು ಕೋಲಾರ ನಗರದ ನಾಗರಾಜ್‌ ಹಾರ್ಡ್‌ವೇರ್‌ ಸ್ಟೋರ್‌ ಮಾಲಿಕರಿಗೆ ಸೇರಿದ್ದು ಎನ್ನಲಾಗಿದೆ. ಅವರು ಬೆಂಗಳೂರಿನ ಆವಲಹಳ್ಳಿಯ ಗುತ್ತಿಗೆದಾರರೊಬ್ಬರಿಗೆ ಸಿಮೆಂಟ್‌ ಕಳುಹಿಸುತ್ತಿದ್ದರು. ಪ್ರಕರಣ ಸಂಬಂಧ ಚಾಲಕ ನವಾಜ್‌ ಮತ್ತು ಕ್ಲೀನರ್‌ ಶಂಕರ್‌ರನ್ನು ಬಂಧಿಸಿ, ಹಣ ಹಾಗೂ ವಾಹನ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಪತ್ರಕರ್ತರಿಗೆ ತಿಳಿಸಿದರು.
 
ಬೇತಮಂಗಲದಲ್ಲಿ ದಾಳಿ: ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿರುವ ಜಿಪಂ ಮಾಜಿ ಸದಸ್ಯ ಅ.ಮು. ಲಕ್ಷ್ಮೀನಾರಾಯಣ ಅವರ ಮನೆ ಮತ್ತು ಶಾಲೆ ಮೇಲೆ ಶುಕ್ರವಾರ ದಾಳಿ ನಡೆಸಿದ ಮಾದರಿ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿಗಳು, ದಾಖಲೆ ಪತ್ರಗಳಿಲ್ಲದ 1.19 ಲಕ್ಷ ರೂ. ಅನ್ನು ವಶಪಡಿಸಿಕೊಂಡಿದ್ದಾರೆ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಅಥವಾ ತೆರಿಗೆ ವಂಚನೆ ಉದ್ದೇಶಕ್ಕಾಗಿ ಕದ್ದು ಮುಚ್ಚಿ ಹಣ ಸಾಗಿಸಲಾಗುತ್ತಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ತನಿಖೆಗೆ ಹಾಜರಾಗುವಂತೆ ಹಾರ್ಡ್‌ವೇರ್‌ ಮಾಲಿಕ ನಾಗರಾಜ್‌ರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಪ್ರಕರಣ ಸಂಬಂಧ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖೆ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.
 ರೋಹಿಣಿ ಕಟೋಚ್‌ ಸೆಪಟ್‌, ಎಸ್ಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next