Advertisement

ಲಿಂಬೆಹಣ್ಣಿನ ಮೇಲೆ ಕಳ್ಳರ ಕಣ್ಣು : ಉತ್ತರ ಪ್ರದೇಶದಲ್ಲಿ 15 ಸಾವಿರ ಲಿಂಬೆಹಣ್ಣಿನ ದರೋಡೆ!

10:49 PM Apr 15, 2022 | Team Udayavani |

ಲಕ್ನೋ: ಬೆಳ್ಳಿ, ಬಂಗಾರದ ಕಳವು ಈಗ ಹೊಸ ವಿಚಾರವಾಗಿ ಉಳಿದಿಲ್ಲ. ಈಗೇನಿದ್ದರೂ, “ಬೆಲೆಬಾಳುವ’ ಲಿಂಬೆಹಣ್ಣು, ತರಕಾರಿಗಳನ್ನು ಕದಿಯುವ ಜಮಾನ!

Advertisement

ಹೌದು. ತರಕಾರಿಗಳ ದರ ಗಗನಕ್ಕೇರಿರುವ ಉತ್ತರ ಪ್ರದೇಶದಲ್ಲಿ, ಲೆಂಬೆಹಣ್ಣನ್ನು ಕದಿಯುವ ಟ್ರೆಂಡ್‌ ಶುರುವಾಗಿದೆ. ಕಾನ್ಪುರದಲ್ಲಿ 15 ಸಾವಿರ ಲಿಂಬೆಹಣ್ಣು ಕಳುವಾದ ಬೆನ್ನಲ್ಲೇ, ಷಹಜಹಾನ್‌ಪುರದ ಮಾರುಕಟ್ಟೆಯಲ್ಲಿ 60 ಕಿಲೋ ಲಿಂಬೆಹಣ್ಣು ದರೋಡೆ ಆಗಿದೆ!

ಮುಂಜಾನೆ ವೇಳೆ ಇಲ್ಲಿನ ಬಹದ್ದೂರ್‌ಗಂಜ್‌ ಮಾರುಕಟ್ಟೆಯಲ್ಲಿ ವ್ಯಾಪಾರಿ ಮನೋಜ್‌ ಕಶ್ಯಪ್‌, ಅಂಗಡಿಯ ಬಾಗಿಲು ತೆರೆಯುತ್ತಿದ್ದಂತೆ, ಆಘಾತಕ್ಕೊಳಗಾದರು. ತರಕಾರಿಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. 60 ಕಿಲೋ ಲಿಂಬೆಹಣ್ಣು ಇದ್ದ ಮೂಟೆಯನ್ನೇ ಕಳ್ಳರು ಎಗರಿಸಿದ್ದರು. ಉತ್ತರ ಪ್ರದೇಶದಲ್ಲಿ 1 ಕಿಲೋ ಲಿಂಬೆಹಣ್ಣು 325 ರೂ. ಮುಟ್ಟಿದ್ದು, 1 ಲಿಂಬೆಹಣ್ಣನ್ನು 13 ರೂ.ನಂತೆ ಮಾರಲಾಗುತ್ತಿದೆ. ಕಾಳಸಂತೆಯಲ್ಲಿ ಲಿಂಬೆಹಣ್ಣು ಮಾರಾಟಗೊಳ್ಳುತ್ತಿದೆ.

ಈರುಳ್ಳಿ, ಬೆಳ್ಳುಳ್ಳಿಯನ್ನೂ ಬಿಡ್ಲಿಲ್ಲ: “ದುಬಾರಿ ದರವೆಂದು ಲಿಂಬೆಹಣ್ಣನ್ನು ಕದ್ದಿದ್ದಾರೆ. ಇದರೊಂದಿಗೆ 40 ಕಿಲೋ ಈರುಳ್ಳಿ, 38 ಕಿಲೋ ಬೆಳ್ಳುಳ್ಳಿಯನ್ನೂ ಎಗರಿಸಿದ್ದಾರೆ’ ಎಂದು ಮನೋಜ್‌ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದೇನೂ ಹೊಸತಲ್ಲ…
– ಅಮೆರಿಕದ ವಿಸ್ಕಾನ್ಸಿನ್‌ನಲ್ಲಿ 20 ಸಾವಿರ ಪೌಂಡ್‌ ಚೀಸ್‌ ಹೊತ್ತೂಯ್ಯುತ್ತಿದ್ದ ಟ್ರಕ್ಕನ್ನೇ ಕದ್ದಿದ್ದರು.
– ಆಸ್ಟ್ರೇಲಿಯಾದಲ್ಲಿ 400 ಕಿಲೋ ಬೆಳ್ಳುಳ್ಳಿಯನ್ನು ಕದ್ದಿದ್ದರು.
– ಕ್ಯಾಲಿಫೋರ್ನಿಯಾದಲ್ಲಿ ಜೇನು ಅಂಗಡಿಯಿಂದ ನೂರಾರು ಜೇನುಗೂಡುಗಳನ್ನು ಕದಿಯಲಾಗಿತ್ತು.
– ಜರ್ಮನಿಯ ನ್ಯೂಸ್ಟಾಡ್‌ ಪಟ್ಟಣದಲ್ಲಿ 20 ಟನ್‌ ಕಿಂಡರ್‌ ಚಾಕ್ಲೆಟ್‌ ಎಗ್‌ಗಳನ್ನು ಕದಿಯಲಾಗಿತ್ತು.
– ವಿಟ್ಟನ್‌ಬರ್ಗ್‌ನಲ್ಲಿ 30 ಟನ್‌ ಹಣ್ಣಿನ ಜ್ಯೂಸನ್ನು ಕಳ್ಳರು ಎಗರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next