Advertisement

ಬಾಡಿಗೆ ನಿಯಂತ್ರಿಸಿದರಷ್ಟೇ ಭತ್ತ ಕೃಷಿ ಕಾರ್ಯ ಮುಂದುವರಿಕೆ ಸಾಧ್ಯ

01:20 AM Oct 24, 2021 | Team Udayavani |

ಉಡುಪಿ: ಕೃಷಿ ಯಂತ್ರಗಳ ಬಳಕೆ ಆರಂಭಗೊಂಡು ಕರಾವಳಿಯಲ್ಲಿ ಕೃಷಿ ಕಾರ್ಯ ಮತ್ತೆ ಚಿಗಿತುಕೊಂಡರೂ ಈಗ ಯಂತ್ರಗಳ ಬಾಡಿಗೆ ದರವೇ ದೊಡ್ಡ ಸಮಸ್ಯೆಯಾಗಿದೆ.

Advertisement

ಎರಡು-ಮೂರು ವರ್ಷಗಳಿಂದ ಕರಾವಳಿ ಯಲ್ಲಿ ಹಡಿಲು ಬಿದ್ದ ಗದ್ದೆಗಳಲ್ಲಿಯೂ ಕೃಷಿ ಕಾರ್ಯ ಪುನರಾರಂಭಗೊಳ್ಳುತ್ತಿದೆ. ಆದರೆ ನಾಟಿ ಮಾಡಿ ಫ‌ಸಲು ಕೈಗೆ ಸಿಗುವ ಹಂತದಲ್ಲಿ ಭತ್ತ ಕಟಾವು ಯಂತ್ರಗಳ ದುಬಾರಿ ಬಾಡಿಗೆ ರೈತರಿಗೆ ದೊಡ್ಡ ಹೊಡೆತವನ್ನೇ ನೀಡಿದೆ.

ಸರಕಾರವು ಕಟಾವು ಯಂತ್ರಗಳ ಬಾಡಿಗೆ ದರಕ್ಕೆ ನಿಯಂತ್ರಣ ಹೇರದಿದ್ದಲ್ಲಿ ಮುಂದೆ ಕೃಷಿ ಕಾರ್ಯ ನಡೆಸುವುದೇ ಕಷ್ಟವಾಗಬಹುದು ಎಂಬುದು ಕೃಷಿಕರ ಸಾರ್ವತ್ರಿಕ ಅಭಿಪ್ರಾಯವಾಗಿದೆ.

ಯಂತ್ರ ಅವಲಂಬನೆ ಹೆಚ್ಚಿದೆ
ಮೂರು ತಿಂಗಳು ಕಷ್ಟಪಟ್ಟು ಸಾಗುವಳಿ ಮಾಡಿ, ಉತ್ತಮ ಫ‌ಸಲು ಬಂದರೂ ಕೊಯ್ಲಿನ ಸಂದರ್ಭದಲ್ಲಿ ಸಮಸ್ಯೆಯಾದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ. ಹಿಂದೆ ಭತ್ತ ಕಟಾವು ಮಾಡಲು ಆ ಕಾರ್ಯ ತಿಳಿದವರಿದ್ದರು. ಆದರೆ ಈಗ ನಾವು ಯಂತ್ರಗಳನ್ನೇ ನಂಬಿದ್ದೇವೆ. ಉಳುಮೆಯಿಂದ ನಾಟಿಯವರೆಗೆ ಹಾಗೂ ಕೊನೆಗೆ ಕಟಾವಿಗೂ ಯಂತ್ರವನ್ನೇ ನಂಬಿದ್ದೇವೆ. ಇಂತಹ ಸಂದರ್ಭದಲ್ಲಿ ಬಾಡಿಗೆಯೇ ದುಬಾರಿ ಯಾದರೆ ಕೃಷಿ ನಡೆಸುವುದಾದರೂ ಹೇಗೆ? ಯುವ ಜನಾಂಗ ಕೃಷಿ ಮಾಡುವತ್ತ ಮನಸ್ಸು ಮಾಡುವುದಾದರೂ ಹೇಗೆ ಎಂದು ನಿಟ್ಟೆಯ ಪ್ರಗತಿಪರ ಯುವ ಕೃಷಿಕರೋರ್ವರು ಪ್ರಶ್ನಿಸಿದ್ದಾರೆ.

ಇತರ ಕಡೆಗಳಿಗಿಂತ ಮೊದಲು ಕರಾವಳಿ ಯಲ್ಲಿ ಕೃಷಿ ಕಾರ್ಯ ನಡೆದು ಕಟಾವಿಗೆ ಸಿಗುವುದರಿಂದ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಿದೆ. ಇತರ ಪ್ರದೇಶಗಳ ಕಟಾವು ಯಂತ್ರವನ್ನು ತಂದು ಸರಕಾರವೇ ಒದಗಿಸಿದರೆ ಉತ್ತಮ. ಇಲ್ಲವಾದರೆ ವಿಶೇಷ ಸಬ್ಸಿಡಿಯನ್ನಾದರೂ ನೀಡಲಿ ಎಂಬ ಅಭಿಪ್ರಾಯ ರೈತರದ್ದು.

Advertisement

ಜಿಲ್ಲೆಯ ಆಯ್ದ ಭತ್ತದ ಬೆಳೆಗಾರರನ್ನು “ಉದಯವಾಣಿ’ ಈ ನಿಟ್ಟಿನಲ್ಲಿ ಸಂಪರ್ಕಿಸಿದ್ದು, ಅವರೆಲ್ಲರೂ ಸರಕಾರದ ನಿಯಂತ್ರಣ ಇದ್ದರಷ್ಟೇ ಕೃಷಿ ಯಂತ್ರಗಳ ಬಾಡಿಗೆ ಇತಿಮಿತಿಯಲ್ಲಿರಲು ಸಾಧ್ಯ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೃಷಿ ಕಾರ್ಯ ಮುಂದುವರಿಯುವುದು ಕಷ್ಟ ಎಂದಿದ್ದಾರೆ.

ಸರಕಾರದ ಹಿಡಿತ ಅಗತ್ಯ
ಅಕಾಲಿಕ ಮಳೆ, ಪ್ರಕೃತಿ ವಿಕೋಪ, ಕೊರೊನಾ ಲಾಕ್‌ಡೌನ್‌ನಂತಹ ಸಮಸ್ಯೆಗಳಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಸರಕಾರವೇ ಬೆನ್ನೆಲುವಾಗಿ ನಿಲ್ಲಬೇಕಿದೆ. ಮಳೆಯಿಂದಾಗಿ ಪೈರು ಅಡ್ಡ ಬಿದ್ದು ತೆನೆ ಹಾನಿಯಾಗುತ್ತಿದೆ. ಕಟಾವು ನಡೆಸಲೂ ಅಸಾಧ್ಯವಾಗುತ್ತಿದೆ. ಯಾಂತ್ರೀಕೃತ ಕೃಷಿಗೆ ಹೆಚ್ಚಿನ ಒತ್ತು ನೀಡುವ ಜಿಲ್ಲಾಡಳಿತ, ಸರಕಾರವು ಖಾಸಗಿ ಬಸ್‌ ಯಾನ ದರದಲ್ಲಿ ಹಿಡಿತ ಸಾಧಿಸುವಂತೆ ಕೃಷಿ ಯಂತ್ರಗಳ ಬಾಡಿಗೆ ದರದ ಮೇಲೂ ಹಿಡಿತಕ್ಕಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಚುನಾವಣೆ ಸಂದರ್ಭ ಖಾಸಗಿ ವಾಹನಗಳನ್ನು ಇಲಾಖೆಯ ಸುಪರ್ದಿಗೆ ಪಡೆಯುವಂತೆ ಖಾಸಗಿ ಕೃಷಿ ಯಂತ್ರಗಳ ದರ ನಿಗದಿಯಲ್ಲಿಯೂ ಹಿಡಿತ ಸಾಧಿಸಬೇಕಾಗಿದೆ. ಇಲ್ಲವಾದಲ್ಲಿ ಸರಕಾರವೇ ಬೇಡಿಕೆಯುಳ್ಳ ಹೆಚ್ಚುವರಿ ಕೃಷಿ ಯಂತ್ರಗಳನ್ನು ಒದಗಿಸಲು ಯೋಜನೆ ರೂಪಿಸಲಿ. ರೈತರಿಗೆ ಕಟಾವಿಗೆ ಸಬ್ಸಿಡಿ ನೀಡಲಿ ಅಥವಾ ಭತ್ತದ ಬೆಂಬಲ ಬೆಲೆಯನ್ನು ಹೆಚ್ಚಳಗೊಳಿಸಲಿ.
– ಲಕ್ಷ್ಮಣ್‌ ಮಟ್ಟು, ಕೃಷಿಕರು, ಉಡುಪಿ

ಇದನ್ನೂ ಓದಿ:ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಇಲಾಖೆಯೇ ಯಂತ್ರ ಒದಗಿಸಲಿ
ನಾವು 3 ವರ್ಷಗಳಿಂದ ಕಟಾವಿಗೆ ಖಾಸಗಿ ಕೃಷಿ ಯಂತ್ರಗಳನ್ನು ಕರೆಸುತ್ತಿದ್ದೇವೆ. ಕಳೆದ ವರ್ಷ ಗಂಟೆಗೆ 2,300 ರೂ. ಇತ್ತು. ಈ ವರ್ಷ 2,500 ರೂ.ತನಕ ಹೇಳುತ್ತಿದ್ದಾರೆ. ಇಲಾಖೆಯಿಂದಲೇ ಕೃಷಿ ಯಂತ್ರಗಳ ವ್ಯವಸ್ಥೆ ಮಾಡಿಕೊಟ್ಟರೆ ಸ್ವಲ್ಪ ಕಡಿಮೆ ದರದಲ್ಲಿ ಆಗಬಹುದು. ಯುವ ಜನರು ಹೆಚ್ಚೆಚ್ಚು ಕೃಷಿಯಲ್ಲಿ ತೊಡಗುವಂತೆ ಸರಕಾರದಿಂದ ಸಾಕಷ್ಟು ಉತ್ತೇಜನ ಕ್ರಮ ಅಗತ್ಯ. – ಸಂತೋಷ್‌ ಮಡಾಮಕ್ಕಿ, ಕೃಷಿಕರು, ಹೆಬ್ರಿ

ಭತ್ತ ಕಟಾವಿಗೆ ಬಂದಿದ್ದರೂ ಮಳೆಯಿಂದಾಗಿ ಅಸಾಧ್ಯ ವಾಗುತ್ತಿದೆ. ಒಂದೇ ಬಾರಿಗೆ ಕಟಾವಿಗೆ ಬರುತ್ತಿರು ವುದರಿಂದ ಸಮಸ್ಯೆಯುಂಟಾಗುತ್ತಿದೆ. ದಾವಣಗೆರೆ, ಶಿವಮೊಗ್ಗ, ಸಕಲೇಶಪುರ ಭಾಗದಲ್ಲಿ ಕಟಾವು ಪ್ರಕ್ರಿಯೆ ನವೆಂಬರ್‌, ಡಿಸೆಂಬರ್‌ನಲ್ಲಿ ನಡೆಯುವುದರಿಂದ ಆ ಭಾಗದಲ್ಲಿರುವ ಕೃಷಿ ಯಂತ್ರಧಾರೆಯ ಯಂತ್ರಗಳನ್ನು ಕರಾವಳಿ ಜಿಲ್ಲೆಗಳಿಗೆ ತರಿಸಿಕೊಳ್ಳಬಹುದು. ಇದರಿಂದ ದರ ಏರಿಕೆಗೂ ಕಡಿವಾಣ ಬೀಳಲಿದೆ. ಈ ಹಿಂದೆ 1 ಎಕರೆ ಪ್ರದೇಶದಲ್ಲಿದ್ದ ಭತ್ತವನ್ನು ಮುಕ್ಕಾಲು ಗಂಟೆಯಲ್ಲಿ ಕಟಾವು ಮಾಡುತ್ತಿದ್ದರು. ಈಗ ಒಂದೂವರೆ ಗಂಟೆ ಸಮಯ ತೆಗೆದುಕೊಂಡು ಹೆಚ್ಚುವರಿ ಹಣ ವಸೂಲಿ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಇಂತಹ ಚಟುವಟಿಕೆಗಳ ಬಗ್ಗೆ ಸರಕಾರ ಗಮನಹರಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ವಿನಾಕಾರಣ ರೈತರು ಹೆಚ್ಚುವರಿ ದರ ಪಾವತಿಸಬಾರದು. ಕೃಷಿ ಮುಂದುವರಿಯಲು ಇಂತಹ ಕ್ರಮ ಅನಿವಾರ್ಯ.
– ಕುದಿ ಶ್ರೀನಿವಾಸ ಭಟ್‌, ಕೃಷಿಕರು ಉಡುಪಿ

ಭತ್ತದ ಬೆಂಬಲ ಬೆಲೆ ಹೆಚ್ಚಿಸಿ
ಪ್ರಸ್ತುತ ನಮಗೆ ಪುತ್ತೂರಿನಿಂದ ಕಟಾವು ಯಂತ್ರ ಬರುತ್ತಿದೆ. ಯಂತ್ರದ ಬಾಡಿಗೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಬಾಡಿಗೆಗಿಂತಲೂ ಭತ್ತದ ಬೆಂಬಲ ಬೆಲೆ ಹೆಚ್ಚಾಗಬೇಕು. ಭತ್ತಕ್ಕೆ ಉತ್ತಮ ಧಾರಣೆ ಸಿಕ್ಕಿದರೆ ಯಂತ್ರದ ಬಾಡಿಗೆಯ ಜತೆಗೆ ಇದರ ವೆಚ್ಚವನ್ನು ಸರಿದೂಗಿಸಲು ಅನುಕೂಲವಾಗುತ್ತದೆ.
– ರಮೇಶ್‌ ಕೆ. ಮಠದಮೂಲೆ, ಪುತ್ತೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next