Advertisement

ಹೊಸ ಚೇತನದ ಮೀಸಲಾತಿ

12:30 AM Jan 17, 2019 | |

“ಮೀಸಲಾತಿ (Reservation)’ ಎಂಬುದು ಸಮಗ್ರ ವಿಶ್ವ ಕುಟುಂಬದ ರಾಷ್ಟ್ರಗಳ ಸಂವಿಧಾನಗಳ ಪೈಕಿ ಕೇವಲ ಭಾರತದ ಸಂವಿಧಾನದಲ್ಲಿ ಮಾತ್ರ ಮೂಡಿ ನಿಂತ ವಿಷಯ. ಏಕೆಂದರೆ, ಜಾತಿ ಪದ್ಧತಿ ಆಧಾರಿತ ನಮ್ಮ ಸಮಾಜದಲ್ಲಿ “ದುರ್ಬಲ ವರ್ಗ’ಕ್ಕೆ ನ್ಯಾಯ ಒದಗಿಸುವ ಒಂದು ವಿಶಿಷ್ಟ ಸಾಂವಿಧಾನಿಕ ಬದ್ಧತೆಯಲ್ಲಿ ಈ “ಮೀಸಲಾತಿ’ ಹುಟ್ಟಿಕೊಂಡದ್ದು. ನಮ್ಮ ಈ ತೆರನಾದ ಜಾತಿ ಪದ್ಧತಿ ಬೇರಾವ ರಾಷ್ಟ್ರದಲ್ಲಿಯೂ ಇಲ್ಲ. ಹಾಗಾಗಿ ನಮ್ಮ ಈ ಮಾದರಿಯ “ರಿಸರ್ವೇಶನ್‌’ನ ಒಳ ಹೊರಗು ಅನ್ಯ ದೇಶೀಯರಿಗೆ ತೀರಾ ಅಪರಿಚಿತ. ಇಲ್ಲೊಂದು ಗಮನಾರ್ಹ ಅಂಶವೆಂದರೆ 1949ರ ನವೆಂಬರ್‌ 26ರಂದು ನಮ್ಮ ರಾಷ್ಟ್ರೀಯ ಸಂವಿಧಾನವನ್ನು ಹೊಸದಿಲ್ಲಿಯ ಸಾಂವಿಧಾನಿಕ ಸಭೆ ಅಂಗೀಕರಿಸಿದಾಗ ಅದರಲ್ಲಿ “ಮೀಸಲಾತಿ’ ಎಂಬ ಉಲ್ಲೇಖವೇ ಎಲ್ಲೂ ಇಲ್ಲ. ಹಿಂದಿನ ಮದ್ರಾಸು ಸರಕಾರದ ಜಾತಿ ಆಧರಿಸಿ ಶಿಕ್ಷಣ ಸಂಸ್ಥೆಗಳ ಸೀಟು ಹಂಚಿಕೆಯ ಕಾನೂನನ್ನು ಸುಪ್ರೀಂಕೋರ್ಟ್‌ ಅಸಿಂಧುಗೊಳಿಸಿದಾಗ ತಕ್ಷಣ ಭಾರತದ ಸಂಸತ್ತು ಹಿಂದುಳಿದ ಜಾತಿ ಹಾಗೂ ಪಂಗಡಗಳ “ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿ’ ದೃಷ್ಟಿಯಲ್ಲಿ 1951ರಲ್ಲಿ ಪ್ರಪ್ರಥಮ ಸಂವಿಧಾನ ತಿದ್ದುಪಡಿಯಲ್ಲಿ ಮೀಸಲಾತಿಯನ್ನು ಅಂಗೀಕರಿಸಿತು.

Advertisement

ಹೀಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಬುಡಕಟ್ಟು ಸಮಾಜದ ಇತರ ವರ್ಗದವರೊಂದಿಗೆ ಸಮಾನ ನೆಲೆಯಲ್ಲಿ ಬೆರೆಯಲು, “ಸಾಮಾಜಿಕ ನ್ಯಾಯ’ ಎನ್ನುವ ನೆಲೆಯಲ್ಲಿ , ಶೋಷಣೆ ಮುಕ್ತ ಸಮಾಜದ ನೆಲೆಯಲ್ಲಿ ಮೀಸಲಾತಿ ಕಲ್ಪಿಸಲಾಯಿತು. ಅದೂ ಕೇವಲ 10 ವರ್ಷಗಳ ಸೀಮಿತ ಅವಧಿಗೆ. ಮುಂದೆ ಕಾಲಮಿತಿ ಒಂದೆಡೆ ಮುಂದುವರಿಯಿತು; ಇನ್ನೊಂದೆಡೆ ಇತರ ಹಿಂದುಳಿದ ವರ್ಗಗಳು ಈ ಪಟ್ಟಿಯೊಳಗೆ ಸೇರಿಸಲ್ಪಟ್ಟವು. ಅದೇ ರೀತಿ, ಪಟೇಲ್‌, ಜಾಟ್‌ ಮುಂತಾದ ಪ್ರಾದೇಶಿಕ ಸಂಖ್ಯಾ ಬಾಹುಳ್ಯದ ಜಾತಿಗಳೂ ಹಿಂದುಳಿದ ಹಣೆಪಟ್ಟಿಗೆ ಪ್ರಚಂಡ ಹೋರಾಟದ ಹಾದಿ ಹಿಡಿದವು. “ಶೆಡ್ನೂಲ್‌ ಕಾಸ್ಟ್‌ ಆ್ಯಂಡ್‌ ಶೆಡ್ನೂಲ್‌ ಟ್ರೈಬ್‌’ ಎನ್ನುವ ಪಟ್ಟಿಗಳಿಗೆ ಹೊಸದಾಗಿ ಜಾತಿ, ಉಪ ಜಾತಿ, ಪಂಗಡಗಳ ಸೇರ್ಪಡೆಗೆ ತೀವ್ರ ಪೈಪೋಟಿ ಹೆಚ್ಚಲಾರಂಭಿಸಿತು. ಅದರೊಂದಿಗೇ ಮಂಡಲ ಆಯೋಗದಂತಹ ವರದಿಗಳು ಮೇಲ್ವರ್ಗ, ಕೆಳವರ್ಗ ಎಂಬ ವಿಭಾಜಕತೆಯಲ್ಲೇ, ಯುವ ಜನತೆಯ ಹೋರಾಟದ ಕಿಚ್ಚನ್ನು ಉರಿಸಿತು. ಹೀಗೆ “ನ್ಯಾಯ’ದ ತಕ್ಕಡಿಯಲ್ಲೇ ಅಸಮಾನತೆ, ಉದ್ವಿಗ್ನತೆ, ಹತಾಶೆ ಹಾಗೂ ದೇಶದಾದ್ಯಂತ ಹತ್ತು ಹಲವು ಜಾತಿ, ಪಂಗಡಗಳಲ್ಲಿ ಒಳಗುದಿಯೂ ಹೊಮ್ಮಲಾರಂಭಿಸಿತು.

ಈ ಮಧ್ಯೆ ಪುನಃ ಎರಡು ಬೆಳವಣಿಗೆಗಳು ಈ ಮೀಸಲಾತಿ ಪಥದಲ್ಲಿ ಹುಟ್ಟಿಕೊಂಡವು. “ಸರಕಾರಿ ನೌಕರಿಯಲ್ಲಿ ಒಳಪ್ರವೇಶದ ಬಳಿಕವೂ ಮುಂಬಡ್ತಿಗಾಗಿ ಮೀಸಲಾತಿ ಮಾನದಂಡ ಆಗಲಾರದು’ ಎಂದು 1993ರಲ್ಲಿ ಇಂದಿರಾ ಸಾಹಿ° ವರ್ಸಸ್‌ ಕೇಂದ್ರ ಸರಕಾರ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟು ತೀರ್ಪು ನೀಡಿತು. ಈ ಆದೇಶವನ್ನು ನಿಷ್ಕ್ರಿಯಗೊಳಿಸಬೇಕೆಂಬ ದಲಿತರ ಕೂಗಿಗೆ ಭಾರತ ಸರಕಾರ ಮಣಿಯಿತು ಹಾಗೂ 1995ರ 77ನೇ ಸಂವಿಧಾನ ತಿದ್ದುಪಡಿ ಜಾರಿಗೊಳಿಸಿ 16(4) ವಿಧಿಗೆ (4ಎ) ಉಪವಿಧಿಯನ್ನು ಸೇರಿಸಿ, ಪದೋನ್ನತಿಯಲ್ಲೂ ಮೀಸಲಾತಿಗೆ ಮಣೆ ಹಾಕಿತು. ತನ್ಮೂಲಕ, ಜಾತಿಯನ್ನೇ ಆಧರಿಸಿ, ಕೌಶಲ್ಯತೆ, ಸೇವಾ ಹಿರಿತನ ಎಲ್ಲವನ್ನೂ ಧಿಕ್ಕರಿಸುವ ವ್ಯವಸ್ಥೆ ಸಹಜವಾಗಿ ಮೇಲ್ವರ್ಗಕ್ಕೆ ನುಂಗಲಾರದ ತುತ್ತು ಎನಿಸಿದೆ. ಮಾತ್ರವಲ್ಲ, ಇದೊಂದು ಸಮಗ್ರ ಸರಕಾರಿ ವ್ಯವಸ್ಥೆಯ ಅಂತಸ್ಥೈರ್ಯವನ್ನೇ ಕುಗ್ಗಿಸುವ ಪಥ್ಯವಲ್ಲದ ವಿಧಾನ ಎಂಬ ಅಪಸ್ವರವೂ ಹೊರಟಿತು. ಇನ್ನೊಂದೆಡೆ, ಮೀಸಲಾತಿಯ ದಾಮಾಶಯ, ತೀವ್ರಗತಿಯಲ್ಲಿ ಏರುತ್ತಿರುವಂತೆಯೇ 50 ಪ್ರತಿಶತದಿಂದ ಹೆಚ್ಚು ಜಾತಿ ಆಧಾರದ ಮೀಸಲಾತಿಯ ರೇಖೆ ಏರುವಂತಿಲ್ಲ ಎಂದು ಸುಪ್ರೀಂಕೋರ್ಟು ತಾಕೀತು ಮಾಡಿತು.

ಒಂದೆಡೆ ಕೇಂದ್ರೀಯ ಶಾಸನಾತ್ಮಕ ಮೀಸಲಾತಿ, ಇನ್ನೊಂದೆಡೆ ಜಾತಿ, ಉಪಜಾತಿಗಳನ್ನು ಪರಿಶಿಷ್ಟ ಪಟ್ಟಿಗೆ ಒಳತರುವಲ್ಲಿ ರಾಜ್ಯಗಳ ಸರಕಾರಗಳ ಮೇಲೆ ಒತ್ತಡ, ಮತ್ತೂಂದೆಡೆ ಶಿಕ್ಷಣ ಸಂಸ್ಥೆಗಳ ಸೀಟು ಹಂಚಿಕೆ, ಸರಕಾರಿ ಉದ್ಯೋಗಾವಕಾಶದಲ್ಲಿ ನಾವು ವಂಚಿತರಾಗಿದ್ದೇವೆ ಎಂಬ “ಶಿಷ್ಟ ವರ್ಗದವರ ಬೇಗುದಿ’ ಹೀಗೆ ಈ ಮೀಸಲಾತಿ ಸಾಮಾಜಿಕ ಹಾಗೂ ರಾಜಕೀಯ ಸಾಮರಸ್ಯ ಕದಡುವ ಮಟ್ಟ ಮುಟ್ಟಿತು. ಇದರ ಜತೆ ಜತೆಗೇ ನ್ಯಾಯಾಂಗ ವ್ಯವಸ್ಥೆಯಿಂದಲೂ ಆಗಾಗ್ಗೆ ಚಿಕಿತ್ಸಕ ಯತ್ನಗಳೂ ಪ್ರಕಟಗೊಂಡವು. “ಸಾಮಾಜಿಕ ನ್ಯಾಯ’ ಎಂದರೇನು ಎಂಬ ಜಿಜ್ಞಾಸೆಯೂ ಪ್ರಬಲಗೊಂಡಿತು. ಭಾರತೀಯ ಸಂವಿಧಾನದ ಪ್ರಸ್ತಾಪನೆಯಲ್ಲೇ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಎಂಬ ಸುಂದರ ಪದಪುಂಜಗಳು ಮಿನುಗುತ್ತಿವೆ. ಅದೇ ರೀತಿ ಸಂವಿಧಾನದ 4ನೇ ವಿಭಾಗದ ರಾಷ್ಟ್ರ ನಿರ್ದೇಶಕ ತತ್ವಗಳಲ್ಲಿ “ದುರ್ಬಲ ವರ್ಗದ, ಅದರಲ್ಲೂ ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆರ್ಥಿಕ ಹಾಗೂ ಶೈಕ್ಷಣಿಕ ಮಟ್ಟವನ್ನು ಎತ್ತರಿಸುವ ಯತ್ನವನ್ನು ರಾಜ್ಯ ವ್ಯವಸ್ಥೆ ಮಾಡತಕ್ಕದ್ದು’ ಎಂಬ ವಿಚಾರ ಸು#ರಿಸಲ್ಪಟ್ಟಿದೆ. 1990ರಲ್ಲಿ ಸರ್ವೋತ್ಛ ನ್ಯಾಯಾಲಯ ಶಾಂತಿ ಸ್ಟಾರ್‌ವರ್ಸಸ್‌ ಎನ್‌.ಕೆ. ತೋಟ್ಟಂ ಮೊಕದ್ದಮೆಯಲ್ಲಿ “ದುರ್ಬಲ ವರ್ಗಗಳ ಬಗ್ಗೆ ನಿಖರವಾದ ವ್ಯಾಖ್ಯೆ ಹಾಗೂ ಮಾರ್ಗದರ್ಶಿ ರೂಪುರೇಖೆಗಳನ್ನು’ ಗುರುತಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿತು. 

ಇದರೊಂದಿಗೆ “ಮಹಿಳಾ ಮೀಸಲಾತಿ’ ವಿಷಯ ಕೂಡ ರಾಜಕೀಯ ವಲಯದಲ್ಲಿ “ಸುಂಟರ ಗಾಳಿ’ ಎನಿಸದೆ ಇದ್ದರೂ, ಅಲ್ಲಲ್ಲಿ ಹೊಸ ಹವಾ ನಿರ್ಮಿಸಲು ಬೀಸುತ್ತಲೇ ಇದೆ. ಇನ್ನು ಆರ್ಥಿಕವಾಗಿ ದುರ್ಬಲರಾದ ಮೇಲ್ವರ್ಗದವರಿಗೆ ಈ ನೆಲದ “ಸಹಜ ನ್ಯಾಯ’ ಎಂಬುದು ಎಲ್ಲಿದೆ ಎಂಬ ಪ್ರಶ್ನೆಯೂ 1950ರಿಂದ ಈ ವರೆಗೂ ಗಾಢವಾಗಿ, ಬೇರೂರುತ್ತಾ ಬಂದಿತ್ತು. ಇದಕ್ಕೆ ಪರಿಹಾರ ರೀತಿಯಲ್ಲಿ ಪಿ.ವಿ. ನರಸಿಂಹ ರಾವ್‌ ಸರಕಾರ 1991ರಲ್ಲಿ ಆರ್ಥಿಕ ಹಿಂದುಳಿಕೆಯನ್ನೂ ಮಾನದಂಡವಾಗಿಸಿ ಶೇ.10 ಮೀಸಲಾತಿಗೆ ಆಜ್ಞೆ ನೀಡಿತು. ಆದರೆ, ಅಂತಹ ಶಾಸನಕ್ಕೆ “ಅಧಿಕಾರದ ಮೂಲ’ ಎಲ್ಲಿದೆ ಎಂಬ ತಾಂತ್ರಿಕ ಪ್ರಶ್ನೆಯನ್ನು ಆಧರಿಸಿ ಸುಪ್ರೀಂಕೋರ್ಟು ಆ ಆದೇಶವನ್ನು ಸ್ಥಗಿತಗೊಳಿಸಿತು. ಇದೀಗ 124ನೇ ಸಾಂವಿಧಾನಿಕ ತಿದ್ದುಪಡಿಯೊಂದಿಗೇ ಭದ್ರ ಬುನಾದಿ ನಿರ್ಮಿಸಿಯೇ ಮೋದಿ ಸರಕಾರ ಬಡವರ್ಗಕ್ಕೆ, ಎಲ್ಲಾ ಜಾತಿಯವರನ್ನೂ ಸೇರಿಸಿ, ಹೊಸ ವರ್ಷದ ಭರ್ಜರಿ ಉಡುಗೊರೆ ರೀತಿಯಲ್ಲಿ 10 ಪ್ರತಿಶತ ಮೀಸಲಾತಿಯನ್ನು ಕಲ್ಪಿಸುತ್ತಿದೆ. ಮಹಾಚುನಾವಣೆ ಕದತಟ್ಟುತ್ತಿರುವ ಈ ದಿನಗಳಲ್ಲಿ ಬಡತನ ಆಧಾರಿತ ಮೀಸಲಾತಿಗೆ ಅಡ್ಡಿ ಒಡ್ಡಿದರೆ, ತಮ್ಮ ಪ್ರಾದೇಶಿಕ ಮೇಲ್ಜಾತಿಯ ಓಟಿನ ತುತ್ತು ಜಾರಿ ಹೋದೀತು ಎಂಬ ಲೆಕ್ಕಾಚಾರದಲ್ಲಿ ಪ್ರತಿಪಕ್ಷಗಳೂ ತಲೆ ಆಡಿಸಿವೆ; ಎರಡೂ ಸದನಗಳಲ್ಲಿ ಮೂರನೇ ಎರಡಂಶದ ಪ್ರಚಂಡ ಬಹುಮತದ ಜಯಭೇರಿಯನ್ನು ಈ ಮಸೂದೆ ತನ್ನದ್ದಾಗಿಸಿದೆ. ಪ್ರತಿಭಾ ಪಲಾಯನಕ್ಕೂ ಪರಿಹಾರದ ಜತೆಗೆ ಸಾಮಾಜಿಕ ನ್ಯಾಯಕ್ಕೂ ಹಾಗೂ ಆರ್ಥಿಕ ನ್ಯಾಯಕ್ಕೂ ನ್ಯಾಯವನ್ನು ಈ ಸಾಂವಿಧಾನಿಕ ತಿದ್ದುಪಡಿ ಒದಗಿಸಲಿದೆ.

Advertisement

ಡಾ. ಪಿ. ಅನಂತಕೃಷ್ಣ ಭಟ್‌ 

Advertisement

Udayavani is now on Telegram. Click here to join our channel and stay updated with the latest news.

Next