Advertisement

Reservation ಗೊಂದಲ: ಸ್ಥಳೀಯಾಡಳಿತ ಸಂಸ್ಥೆಗಳ “ಅಧಿಕಾರ ಭಾಗ್ಯ’ಕ್ಕೆ ಅಡ್ಡಿ

11:34 PM Jan 29, 2024 | Team Udayavani |

ಬೆಂಗಳೂರು: ಮೀಸಲಾತಿ ಗೊಂದಲ ರಾಜ್ಯದ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಆಡಳಿತಕ್ಕೆ ಅಡ್ಡಿಯಾಗಿದೆ. ಒಂದು ಕಡೆ ಕಳೆದ ಎರಡೂ¾ರು ವರ್ಷಗಳಿಂದ ತಾ.ಪಂ.-ಜಿ.ಪಂ. ಚುನಾವಣೆಗಳೂ ನನೆಗುದಿಗೆ ಬಿದ್ದಿವೆ. ಇತ್ತ ಚುನಾವಣೆ ನಡೆದರೂ ರಾಜ್ಯದ ಅರ್ಧದಷ್ಟು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಿಗೆ “ಅಧಿಕಾರ ಭಾಗ್ಯ’ ಇಲ್ಲವಾಗಿದೆ.

Advertisement

ರಾಜ್ಯದಲ್ಲಿ ಸದ್ಯ 31 ಜಿ.ಪಂ. ಹಾಗೂ 276 ತಾ.ಪಂ.ಗಳಿದ್ದು, ಅವುಗಳಿಗೆ ಚುನಾವಣೆ ನಡೆಯಬೇಕಾಗಿದೆ. ಅದೇ ರೀತಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಿತ ರಾಜ್ಯದಲ್ಲಿ 301 ನಗರ ಸ್ಥಳೀಯ ಸಂಸ್ಥೆಗಳಿವೆ. ಇವುಗಳಲ್ಲಿ ಸದ್ಯ ನಾಲ್ಕು ಮಹಾನಗರ ಪಾಲಿಕೆಗಳು, 31 ನಗರಸಭೆ, 70 ಪುರಸಭೆ ಹಾಗೂ 64 ಪಟ್ಟಣ ಪಂಚಾಯತ್‌ಗಳು ಸಹಿತ 170ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಇಲ್ಲ.

ಗ್ರಾ.ಪಂ.ವ್ಯಾಪ್ತಿ ಹೊರತುಪಡಿಸಿ ಜಿ.ಪಂ.-ತಾ.ಪಂ. ವ್ಯಾಪ್ತಿಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳ ವ್ಯಾಪ್ತಿಯ ಅರ್ಧಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆದರೂ ಗೆದ್ದವರಿಗೆ ಅಧಿಕಾರ ಭಾಗ್ಯ ಸಿಕ್ಕಿಲ್ಲ. ಚುನಾಯಿತ ಜನಪ್ರತಿನಿಧಿಗಳ ಆಡಳಿತ ಇಲ್ಲದ ಕಡೆಗಳಲ್ಲಿ ಈಗ ಆಡಳಿತಾಧಿಕಾರಿಗಳದ್ದೇ “ದರ್ಬಾರ್‌’ ನಡೆಯುತ್ತಿದೆ.
ಪಂಚಾಯತ್‌ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಚುನಾಯಿತ ಜಪ್ರತಿನಿಧಿಗಳ ಆಡಳಿತದಿಂದ ವಂಚಿತವಾಗಲು ಮೀಸಲಾತಿ ಕಾರಣ. ಮೀಸಲಾತಿ ಗೊಂದಲದಿಂದಾಗಿ ಕಳೆದ ಎರಡೂ¾ರು ವರ್ಷಗಳಿಂದ ಜಿ.ಪಂ. ಹಾಗೂ ತಾ.ಪಂ. ಚುನಾವಣೆ ನಡೆದಿಲ್ಲ. 301 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 2017-18ರಲ್ಲಿ ಚುನಾವಣೆ ನಡೆದು 2021ರ ಆರಂಭದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದು ಮೊದಲ 30 ತಿಂಗಳ ಅಧಿಕಾರಾವಧಿ ಮುಗಿದು, 2ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿ ಆಗದ ಕಾರಣ ರಾಜ್ಯದ 111 ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅಧಿಕಾರದಿಂದ ವಂಚಿತರಾಗಿದ್ದಾರೆ. ಅದೇ ರೀತಿ 2021ರಲ್ಲಿ ಚುನಾವಣೆ ನಡೆದ 50ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೆ ಎರಡು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲವಾಗಿದೆ.

ಅಧಿಕಾರಕ್ಕೆ ಮೀಸಲಾತಿಯೇ ಪ್ರಮುಖ ಅಡ್ಡಿ?
ರಾಜಕೀಯವಾಗಿ ಅವಕಾಶ ವಂಚಿತ ಸಮುದಾಯಗಳಿಗೆ ಅಗತ್ಯ ಪ್ರಾತಿನಿಧ್ಯ ಕಲ್ಪಿಸಲು ಮೀಸಲಾತಿ ವ್ಯವಸ್ಥೆಯಿದೆ. ಆದರೆ ಆ ಮೀಸಲಾತಿ ವಿಚಾರದಲ್ಲಿ ಏಳುವ ಗೊಂದಲಗಳು ಇಂದು ಅವಕಾಶ ವಂಚಿತ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸಲು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸಕಾಲಕ್ಕೆ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಬರಲು ಬಹುದೊಡ್ಡ ಅಡ್ಡಿಯಾಗಿದೆ. ಚುನಾವಣೆ ನಡೆಯುವಾಗ ವಾರ್ಡ್‌ವಾರು ಮೀಸಲಾತಿ ವಿವಾದ ಏಳುತ್ತದೆ. ವರ್ಷಗಟ್ಟಲೆ ಕಾನೂನು ಹೋರಾಟದ ಬಳಿಕ ಅದು ಬಗೆಹರಿದು ಚುನಾವಣೆ ನಡೆದರೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ವಿಚಾರ ಮತ್ತೆ ನ್ಯಾಯಾಲಯದ ಮೆಟ್ಟಿಲೇರುತ್ತದೆ. ಇದು ಬಗೆಹರಿಯವ ತನಕ ಚುನಾವಣೆಯಲ್ಲಿ ಗೆದ್ದಿದ್ದರೂ ಸ್ಥಳೀಯ ಜನಪ್ರತಿನಿಧಿಗಳಿಗೆ ಅಧಿಕಾರ ಭಾಗ್ಯ ಸಿಗುವುದಿಲ್ಲ.

ಏನಿದು ಮೀಸಲಾತಿ ಗೊಂದಲ?
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ಗಳ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಕಾರಣಕ್ಕೆ 2020ರಿಂದ ಚುನಾವಣೆ ನಡೆದಿಲ್ಲ. ಜಿ.ಪಂ. ತಾ.ಪಂ.ಗಳಿಗೂ ಇದೇ ಕಾರಣಕ್ಕೆ ಚುನಾವಣೆ ನಡೆದಿಲ್ಲ. 170ಕ್ಕೂ ಅಧಿಕ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ ನನೆಗುದಿಗೆ ಬಿದ್ದಿದೆ. ಈ ಎಲ್ಲ ಪ್ರಕರಣಗಳು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ಮೆಟ್ಟಿಲೇರಿವೆ. ಅಂತಿಮವಾಗಿ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ನೀಡುವ ಸಂಬಂಧ ಸುಪ್ರೀಂಕೋರ್ಟ್‌ 2021ರಲ್ಲಿ ನೀಡಿದ ತೀರ್ಪು ಮೀಸಲಾತಿ ವಿವಾದವನ್ನು ಮತ್ತೂಂದು ಹಂತಕ್ಕೆ ತೆಗೆದುಕೊಂಡು ಹೋಗಿತ್ತು. ನ್ಯಾ|ಭಕ್ತವತ್ಸಲ ಆಯೋಗದ ಶಿಫಾರಸಿನಂತೆ ಮೀಸಲಾತಿ ನಿಗದಿ ಆಗಬೇಕಿದೆ. ನ್ಯಾ| ಕ್ತವತ್ಸಲ ವರದಿಯನ್ನು ರಾಜ್ಯ ಸರಕಾರ ಒಪ್ಪಿಕೊಂಡಿದೆ. ಆದರೆ ಸರಕಾರದ ನಿರ್ಧಾರ ಸುಪ್ರೀಂಕೋರ್ಟ್‌ನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪು ಇನ್ನೂ ಬರಬೇಕಿದೆ.

Advertisement

ಎಲ್ಲೆಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲ?
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆ.
ನಗರಸಭೆ: ಉಡುಪಿ, ಹೊಸಕೋಟೆ, ಶಹಾಬಾದ, ಸಿರಗುಪ್ಪ, ಚಾಮರಾಜನಗರ, ಸಿಂಧನೂರು, ಬಾಗಲಕೋಟೆ, ಕನಕಪುರ, ಕೊಳ್ಳೆಗಾಲ, ಚಿಕ್ಕಬಳ್ಳಾಪುರ, ಯಾದಗಿರಿ, ಸುರಪುರ, ಕಾರವಾರ, ಶಿರಸಿ, ದಾಂಡೇಲಿ, ಚಿಂತಾಮಣಿ, ಗೌರಿಬಿದನೂರು, ಚಿತ್ರದುರ್ಗ, ತಿಪಟೂರು, ಶಹಾಪುರ, ಇಳಕಲ್‌, ಗಂಗಾವತಿ, ಮುಧೋಳ, ಜಮಖಂಡಿ, ಚಳ್ಳಕೆರೆ, ಹಿರಿಯೂರು, ರಬಕವಿ-ಬನಹಟ್ಟಿ, ರಾಯಚೂರು, ಮಂಡ್ಯ, ಬಸವಕಲ್ಯಾಣ.
ಪುರಸಭೆ: ಆನೇಕಲ್‌, ಹಳ್ಳಿಖೇಡ-ಬಿ, ದೆವನಹಳ್ಳಿ, ಚಿಟಗುಪ್ಪ, ರೋಣ, ಮಳವಳ್ಳಿ, ಪಾಂಡವಪುರ, ಮದ್ದೂರು, ಕುಶಾಲನಗರ, ಸಂಡೂರು, ನವಲಗುಂದ, ವಿರಾಜಪೇಟೆ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ಕಂಪ್ಲಿ, ಶ್ರೀರಂಗಪಟ್ಟಣ, ನಾಗಮಂಗಲ, ಗಜೇಂದ್ರಗಡ, ಜೇವರ್ಗಿ, ಆಳಂದ, ಸೇಡಂ, ಚಿತ್ತಾಪುರ, ಕುಣಿಗಲ್‌, ದೇವದುರ್ಗ, ಮುದಗಲ್‌, ಬೀರೂರು, ಕುಷ್ಟಗಿ, ಮುದ್ದೇಬಿಹಾಳ, ಇಂಡಿ, ಲಿಂಗಸೂಗೂರು, ಹುನಗುಂದ, ಅಂಕೋಲಾ,ಗುರುಮಿಠಕಲ್‌ ಬಸವನಬಾಗೇವಾಡಿ, ಸಿಂದಗಿ, ಹಳಿಯಾಳ, ಕುಮಟಾ, ಭಟ್ಕಳ, ಗುಂಡ್ಲುಪೇಟೆ, ಬಾಗೇಪಲ್ಲಿ, ತೆರದಾಳ, ಮಹಾಲಿಂಗಾಪುರ, ಗುಳೇದಗುಡ್ಡ, ಹೊಸದುರ್ಗ, ಮಾನ್ವಿ. ಬದಾಮಿ, ತಾಳಿಕೋಟೆ, ಶಿಕಾರಿಪುರ, ಶಿರಾಳಕೊಪ್ಪ.
ಪಟ್ಟಣ ಪಂಚಾಯತ್‌: ಕುಡತಿನಿ, ಮುಳಗುಂದ, ಅಳ್ನಾವರ, ಬೆಳ್ಳೂರು, ನರೇಗಲ್ಲ, ಕುಂದಗೋಳ, ಕಲಘಟಗಿ, ತೆಕ್ಕಲಕೋಟೆ, ಶಿರಹಟ್ಟಿ, ಜಗಳೂರು, ಕೆರೂರು, ಯಲಬುರ್ಗಾ, ಬೀಳಗಿ, ಕೊಪ್ಪ, ಶೃಂಗೇರಿ, ಯಳಂದೂರು, ಮುಂಡಗೋಡ,ಮೂಡಿಗೆರೆ, ಮೊಳಕಾಲ್ಮೂರು, ಯಲ್ಲಾಪುರ, ಹೊನ್ನಾವರ, ಹನೂರು, ನರಸಿಂಹರಾಜ, ಸಿದ್ದಾಪುರ, ಹೊಸನಗರ, ಜೋಗ್‌-ಕಾರ್ಗಲ್‌.

 ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next