Advertisement

ಕೃಷಿಕ ಜ್ಞಾನದ ನೀರಿನ ರೇಶನ್‌!

11:07 AM Apr 06, 2017 | |

ಎಲ್ಲೆಲ್ಲೂ ಕಾಡುತ್ತಿರುವ ನೀರಿನ ಅಭಾವಕ್ಕೆ ಕೊಳವೆ ಬಾವಿಯ ಕೊರೆತ ಪರಿಹಾರವಲ್ಲ. ಜಲ ಸಂರಕ್ಷಣೆ, ಮರುಪೂರಣಗಳ ಜತೆಗೆ ಇರುವ ನೀರಿನ ಮಿತಬಳಕೆ, ನೀರಿನ ಸಹಕಾರೀಕರಣ ಕೂಡ ನಡೆಯಬೇಕು. ರಾಜ್ಯದಲ್ಲಿ ನೀರು ಉಳಿತಾಯದ ಸಹಕಾರಿ ಮಾದರಿಗಳು ವಿರಳವಾಗಿವೆ. ಅರಿವಿನ ದೃಷ್ಟಿಯಿಂದ ಅದಕ್ಕೆ ಬೆಳಕೊಡ್ಡುವ ತುರ್ತಿದೆ.

Advertisement

ಬಿಸಿಲ ಧಗೆ ಏರುತ್ತಿದೆ. ಕೊಳವೆ ಬಾವಿ ಕೊರೆತದ ಯಂತ್ರಗಳು ಸದ್ದನ್ನು ಹೆಚ್ಚಿಸುತ್ತಿವೆ. ಒಂದೆಡೆ ಕನ್ನಾಡಿನ ಕೆಲವೆಡೆ ಕೊಳವೆ ಬಾವಿ ಕೊರತಕ್ಕೆ ನಿಷೇಧ. ಮತ್ತೂಂದೆಡೆ ನಿಷೇಧ ತೆರವುಗೊಳಿಸುವ ಪರವಾನಗಿಗೆ ಸಹಿ ಹಾಕುವ ತರಾತುರಿ! ಕೆರೆ, ಬಾವಿ ಮೊದಲಾದ ನೀರಿನ ಮೂಲಗಳನ್ನು ಬರಿದಾಗಿಸಿದ ಮೇಲೆ ಕಟ್ಟಕಡೆಯ ಕೊಳವೆ ಬಾವಿ ಕೊರೆತದ ಯತ್ನವು ಯಶಸ್ಸು ಸಾಧಿಸಿದ್ದಕ್ಕಿಂತ ವಿಫ‌ಲವಾದ ಸುದ್ದಿಗಳೇ ಕೇಳಿಸುತ್ತಿವೆ.   

ಶಿರಸಿಯ ಪಾಂಡುರಂಗ ಹೆಗಡೆ ಉಲ್ಲೇಖೀಸುತ್ತಾರೆ, “”ದಶಕದ ಹಿಂದೆ ಬಯಲು ಸೀಮೆಯಲ್ಲಿ 600-800 ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಇಂದು ಒಂದು 1400-1,800 ಅಡಿಗೆ ಕುಸಿದಿದೆ. ಹೆಚ್ಚು ಮಳೆ ಬೀಳುವ ಕರಾವಳಿ, ಮಲೆನಾಡು ಇದಕ್ಕಿಂತ ಹೊರತಲ್ಲ.” 

ಒಂದು ಕೊಳವೆ ಬಾವಿ ವಿಫ‌ಲಗೊಂಡರೆ ಮತ್ತೂಂದು, ಇನ್ನೊಂದು… ಹೀಗೆ ಕೊರೆತಗಳ ಸಾಲು ಸಾಲು ಕಥೆಗಳು ಕಣ್ತೆರೆದರೆ ಕಾಲಬುಡದಲ್ಲೇ ಇವೆ. ಪ್ರತಿಯೊಬ್ಬನಿಗೂ ತನ್ನ ಸ್ಥಳದಲ್ಲಿ ಒಂದಾದರೂ ಕೊಳವೆ ಬಾವಿ ಇರಲೇಬೇಕೆನ್ನುವ ಹಪಾಹಪಿ, ಜತೆಗೆ ಹಠ! ಧರಣಿಗೆ ನೀರುಣಿಸುವ ಕಾಳಜಿ ಇಲ್ಲ, ಕೊರೆಯಲು ಎಷ್ಟೊಂದು ಉತ್ಸಾಹ! ನೀರಿನ ಕೊರತೆಯ ಈ ಹೊತ್ತಲ್ಲಿ ಇಂತಹ ಮಾತು ಅಪಥ್ಯವಾಗಬಹುದು. ನೀರಿನ ಅಭಾವದ ಸಂಕಷ್ಟದ ಮನಃಸ್ಥಿತಿಯ ತೇವವು ಮಳೆಗಾಲ ಬಂದಾಗಲೂ ಆರಕೂಡದು ಅಲ್ಲವೇ. ಬಹುಶಃ ಆಗ ಭೂ ಒಡಲಿಗೆ ನೀರಿಂಗಿಸುವ, ಮಳೆಕೊಯ್ಲಿನಂತಹ ಜಲಸಂರಕ್ಷಣೆಯ ಅರಿವಿನ ಅನುಷ್ಠಾನಕ್ಕೆ ಕಾಲ ಪಕ್ವ. ನೀರಿಲ್ಲ ಎಂದಾಗ ಸರ್ಕಾರದಲ್ಲಿರುವ ಒಂದೇ ಅಸ್ತ್ರ – ಕೊಳವೆ ಬಾವಿಗಳ ಕೊರೆತ. ಇಂತಹ ಬಾವಿಗಳ ವೈಫ‌ಲ್ಯದ ಕತೆಗಳು ಸರಕಾರದ ಕಡತದಲ್ಲಿ ಎಷ್ಟಿಲ್ಲ? ಅವು ಎಂದೂ ತೆರೆದುಕೊಳ್ಳುವುದಿಲ್ಲ ಬಿಡಿ. 

ನಮ್ಮ ಬಾವಿ, ನಮ್ಮ ನೀರು ಎಂದು ಬೀಗುವ ಕಾಲಕ್ಕೀಗ ಇಳಿಲೆಕ್ಕ. ಬಾವಿಯಲ್ಲಿ ನೀರಿದೆ ಎಂದು ಟ್ಯಾಂಕಿ ತುಂಬಿ ಪೋಲಾಗುವಷ್ಟು ಪಂಪ್‌ ಚಾಲೂ ಮಾಡುವಾತನಿಗೆ ಭವಿಷ್ಯದ ಕರಾಳತೆಯ ಅರಿವು ಬೇಕಾಗಿಲ್ಲ. ನೀರನ್ನು ತುಪ್ಪದಂತೆ ಬಳಸಿ ಎಂದು ಜಲಯೋಧರು ಕಳೆದೆರಡು ದಶಕದಿಂದ ಹೇಳುತ್ತಿದ್ದರೂ ನಗೆಯಾಡಿದವರೇ ಅಧಿಕ. ಆ ನಗೆಯ ಮುಖದಲ್ಲಿ ಈಗ ವಿಷಾದದ ಛಾಯೆ!  ನೀರನ್ನು ತುಪ್ಪದಂತೆ ಬಳಸುವ ಮನಃಸ್ಥಿತಿಯನ್ನು ಅನಿವಾಧಿರ್ಯಧಿವಾಗಿ ರೂಢಿಸಿಕೊಳ್ಳಬೇಕಾದುದು ಕಾಲದ ಅನಿವಾರ್ಯತೆ. ಹಿಂದೊಮ್ಮೆ ಕ್ಯಾಂಪ್ಕೊದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭರು ಇಸ್ರೇಲಿಗೆ ಹೋಗಿದ್ದರು. “”ಕಡಿಮೆ ಮಳೆ ಬೀಳುವ ಇಸ್ರೇಲ್‌ ದೇಶದ ನೀರಿನ ಬಳಕೆಯ ಪಾಠ ನಿಜಕ್ಕೂ ನೀರಿನ ಮಾದರಿ ಪಠ್ಯ. ಅಲ್ಲಿ ನೀರು ತುಪ್ಪಕ್ಕೆ ಸಮಾನ. ಜನರ ಮನಃಸ್ಥಿತಿ ಅದಕ್ಕೆ ಟ್ಯೂನ್‌ ಆಗಿದೆ. ಹಾಗಾಗಿ ನೋಡಿ, ಕೃಷಿಯಲ್ಲಿ ಇಸ್ರೇಲ್‌ ಮುಂದಿದೆ” ಎಂದಿದ್ದರು.

Advertisement

ಕನ್ನಾಡಿನಲ್ಲಿ ಅದರಲ್ಲೂ ಕರಾವಳಿಯಲ್ಲಿ ಸಹಕಾರ ವ್ಯವಸ್ಥೆಯು ಗ್ರಾಮೀಣ ಭಾರತದ ಉಸಿರು. ಇಂತಹ ಸಹಕಾರ ವ್ಯವಸ್ಥೆಯು ನೀರಿನ ವಿಚಾರದಲ್ಲೂ ಹೊಂದಿದರೆ ಕೊಳವೆ ಬಾವಿಗಳ ಅವಿರತ ಕೊರೆತಕ್ಕೆ ಪರ್ಯಾಯ ಪರಿಹಾರವಾಗಬಹುದು. ಕೊಳವೆ ಬಾವಿ ಮಾತ್ರವಲ್ಲ, ಜಲನಿಧಿಗಳಾದ ಕಟ್ಟ, ಮದಕಗಳ ನೀರಿನ ಬಳಕೆಯಲ್ಲೂ ಇದೇ ಮಾದರಿಯನ್ನು ಹೊಂದಿರುವ ಉದಾಹರಣೆಗಳೆಷ್ಟಿಲ್ಲ? ಅಂಥ‌ ತಂಪು ಸುದ್ದಿಗಳು ಎಲ್ಲೂ ಸುದ್ದಿಯಾಗುವುದಿಲ್ಲ. 

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮಕ್ಕೆ ಮೃತ್ಯುಂಜಯ ನದಿ ಜಲದಾತೆ. ನೇತ್ರಾವತಿಯ ಮೂರನೇ ಒಂದು ಉಪನದಿ. ಅಗಲ ಸುಮಾರು ಐವತ್ತು ಮೀಟರ್‌. ಆಳ ಒಂದೂವರೆ ಮೀಟರ್‌. ಇದು ಚಾರ್ಮಾಡಿಯ ಮಧುಗುಂಡಿಯಲ್ಲಿ ಹುಟ್ಟಿ ಹದಿನೈದು ಕಿಲೋಮೀಟರ್‌ ಹರಿದು ಫ‌ಜಿರಡ್ಕದಲ್ಲಿ ನೇತ್ರಾವತಿಯನ್ನು ಸೇರುತ್ತದೆ. ಇಲ್ಲಿನ ಪೂರ್ವಜರು ಶತಮಾನಕ್ಕೂ ಮೊದಲೇ ಕಟ್ಟ ನಿರ್ಮಿಸಿ ಕೃಷಿಗೆ ನೀರು ಬಳಸುತ್ತಿದ್ದರು.  ಕಟ್ಟ ಎಂದರೆ ಹರಿಯುವ ನೀರನ್ನು ತಡೆಧಿಯಲು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ನದಿಗೆ 

(ತೋಡಿಗೆ) ಅಡ್ಡವಾಗಿ ಕಟ್ಟುವ ತಾತ್ಕಾಲಿಕ ತಡೆಗಟ್ಟ ಅಥವಾ ಚೆಕ್‌ಡ್ಯಾಮ್‌. ನದಿಗುಂಟದ ಹದಿನೆಂಟು ಮನೆಗಳು ಕಟ್ಟದ ಫ‌ಲಾಧಿನುಭಧಿವಿಗಳು. ಮೊದಲು ಇಪ್ಪತ್ತೆರಡು ಕುಟುಂಬಗಳಿದ್ದವಂತೆ. ಎಲ್ಲರದೂ ಮುಖ್ಯ ಕೃಷಿ ಅಡಿಕೆ. ಕಟ್ಟದ ನೀರೇ ಆಧಾರ. ಸುಮಾರು 1906ರಲ್ಲಿ ಈ ಕಟ್ಟ ಆರಂಭವಾಗಿರುವ ಉಲ್ಲೇಖ ಕೃಷಿಕರಲ್ಲಿದೆ. 1917ರಿಂದ ಸವಿವರವಾದ ಖರ್ಚುವೆಚ್ಚ ಬರೆದಿಟ್ಟ ದಾಖಲೆಗಳಿವೆ. 

ಕಟ್ಟದ ಫ‌ಲಾನುಭವಿಗಳಲ್ಲಿ ಒಬ್ಬರು ಗಜಾನನ ವಝೆ ಅವರಿಗೆ ಕಟ್ಟದ ಸುದ್ದಿ ಹೇಳಲು ಖುಷಿ – “”ಪ್ರತಿ ವರುಷ ನವೆಂಬರ್‌ ತಿಂಗಳಲ್ಲಿ ಕಟ್ಟ ಕಟ್ಟುವ ಮುಹೂರ್ತ. ನಮ್ಮೆಲ್ಲರ ತೋಟಗಳಿಗೆ ಎರಡು ತಿಂಗಳ ಕಾಲ ಸಮೃದ್ಧ ಹಾಯಿ ನೀರಾವರಿ. ನೀರು ಕಡಿಮೆಯಾಗುತ್ತಿದ್ದಂತೆ ರೇಶನ್‌! ಅಂದರೆ ನಾಲ್ಕು ತಿಂಗಳ ತುಂತುರು ನೀರಾವರಿ. ತೋಡಿನಲ್ಲಿ ನೀರಿನ ಹರಿವಿರುವಾಗ ಎಲ್ಲ ಕೆರೆ, ಬಾವಿಗಳು ತುಂಬಿರುತ್ತವೆ. ಕಟ್ಟ ಕಟ್ಟುವ ಸ್ಥಳವು ಪೂರ್ತಿ ನೇರವಾಗಿಲ್ಲ. ನದಿಯಲ್ಲೇ ನೈಸರ್ಗಿಕ ಬಂಡೆಕಲ್ಲುಗಳಿವೆ. ಇವು ಕೆಲಸವನ್ನು ಸುಲಭವಾಗಿಸಿವೆ. ಅಲ್ಲಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಅಡ್ಡ ಕಟ್ಟಿದರೆ ಸಾಕು, ಕಟ್ಟ ಆಗಿಬಿಡುತ್ತದೆ.”

ಕಟ್ಟದ ಕತೆಗೆ ಕಿವಿಯಾಗುತ್ತಿದಂತೆ ಸಹಜವಾಗಿ ನೀರಿನ ಖುಷಿ ಆಗುತ್ತದೆ. ಆದರೆ ವರುಷ ವರುಷ ಮಳೆ ಕಡಿಮೆಯಾಗುತ್ತಿದ್ದಂತೆ ಕಟ್ಟದ ನೀರಿನಲ್ಲೂ ವ್ಯತ್ಯಯವಾಗುತ್ತಿದೆ. ಏಪ್ರಿಲ್‌-ಮೇ ತಿಂಗಳಲ್ಲಿ ತೋಡಿನಲ್ಲಿ ಧಾರಾಳವಾಗಿ ನೀರು ಹರಿಯುತ್ತಿದ್ದ ದಿನಮಾನಗಳನ್ನು ನೆನೆಯುತ್ತಾರೆ ವಝೆ, “”ಆ ಕಾಲದಲ್ಲಿ ನದಿಯ ನೀರನ್ನು ಪಂಪ್‌ ಮಾಡುತ್ತಿರಲಿಲ್ಲ. ಕೆಲವರು ಅವರವರ ತೋಟದ ಕೆಳಭಾಗದಲ್ಲಿ ಪಂಪ್‌ ಇಟ್ಟಿರುತ್ತಾರೆ. ಬರಬರುತ್ತಾ ಕಟ್ಟದ ನೀರು ತೋಟಕ್ಕೆ ಹರಿಯುವ ದಿನಗಳು ತುಂಬಾ ಕಡಿಮೆಯಾಗುತ್ತಿವೆ. ಬಹುತೇಕ ಫೆಬ್ರವರಿ ತನಕ ನೀರು ಹರಿಯುತ್ತದಷ್ಟೇ. ಕೆಲವೊಮ್ಮೆ ಜನವರಿಗೇ ಕಡಿಮೆಯಾಗಿರುತ್ತದೆ. ಹೀಗಿದ್ದೂ ಆರು ತಿಂಗಳ ಬದಲು ಎರಡೇ ತಿಂಗಳಿಗೆ ನೀರು ಸಿಗುತ್ತಿದ್ದರೂ ಕಟ್ಟ ಕಟ್ಟುವುದನ್ನು ನಿಲ್ಲಿಸಿಲ್ಲ.” 

ಕಾಸರಗೋಡು ಜಿಲ್ಲೆಯ ಮೀಯಪದವಿನ ಉಪ್ಪಳ ನದಿಯ ಒಂದು ದಡದಲ್ಲಿ ಡಾ| ಡಿ.ಸಿ. ಚೌಟರ ತೋಟ. ಮತ್ತೂಂದು ದಡದಲ್ಲಿ ಸುಮಾರು ಇಪ್ಪತ್ತೈದು ಮಂದಿ ಕೃಷಿಕರ ಗದ್ದೆ-ತೋಟ. ಒಂದೆಕ್ರೆಯಿಂದ ಐದೆಕ್ರೆ ತನಕ. ಏತದ ಮೂಲಕ ನೀರೆತ್ತಿ ಗದ್ದೆ ಬೇಸಾಯ ಮಾಡಿದ ದಿನಮಾನಗಳನ್ನು ಕೃಷಿಕರು ಜ್ಞಾಪಿಸಿಕೊಳ್ಳುತ್ತಿದ್ದಾರೆ. ಮೋಟಾರು ಪಂಪ್‌ ಇಲ್ಲದ ಕಾಲಘಟ್ಟ. “”ಭೂಮಿಯಿದೆ, ಕೃಷಿ ಮಾಡುವ ಉಮೇದಿದೆ. ಮಾಡಲಾಗುತ್ತಿಲ್ಲ” ಎನ್ನುವ ಸ್ಥಿತಿ.  ಈ ಸಂಕಟ ಪರಿಹಾರಕ್ಕೆ ಕೃಷಿಕ ಡಾ| ಡಿ.ಸಿ. ಚೌಟರ ಯೋಜನೆ. ಮೊದಲಿಗೆ ಹನ್ನೆರಡು ಮಂದಿಯ ಗುಂಪು ರಚನೆ. ವಿದ್ಯುತ್‌ ಸಂಪರ್ಕಕ್ಕೆ ಮೊದಲಾದ್ಯತೆ. ಹೊಳೆಯಿಂದ ಮೋಟಾರ್‌ ಪಂಪ್‌ ಮೂಲಕ ನೀರೆತ್ತಿ ಕೃಷಿಗೆ ಸಹಕಾರಿ ವ್ಯವಸ್ಥೆಯಲ್ಲಿ ಬಳಕೆ. ಅವರವರ ಕೃಷಿ ಭೂಮಿಗೆ ಹೊಂದಿಕೊಂಡು ನೀರಿನ ವಿತರಣೆ. ಎಲ್ಲರ ತೋಟಗಳು ಒತ್ತಟ್ಟಿಗೆ ಇದ್ದುದರಿಂದ ಯೋಜನೆಗೆ ಶೀಘ್ರ ಚಾಲನೆ. ಸುಮಾರು ಇಪ್ಪತ್ತೆರಡು ವರುಷವಾಯಿತು, ಕೃಷಿಕರಲ್ಲಿ ಪರಸ್ಪರ ನಿಜಾರ್ಥದ ಒಗ್ಗಟ್ಟು ಮತ್ತು ಸನ್ಮನಸ್ಸು ಮೂಡಿದ್ದರಿಂದಾಗಿ ನೀರಿನ ಬಳಕೆಯಲ್ಲಿ ಸಹಕಾರಿ ತತ್ವ ಅನ್ವಯವಾಗಿ ಯಶವಾಗಿವೆ. “”ಸಹಕಾರಿ ನೀರಾವರಿ ಶುರುವಾಗುವ ಮೊದಲು ಹದಿನೈದೆಕ್ರೆ ಕೃಷಿಯಾಗುತ್ತಿತ್ತು. ಈಗ ದುಪ್ಪಟ್ಟು ಅಲ್ಲ ಅದಕ್ಕಿಂತಲೂ ಹೆಚ್ಚು ವಿಸ್ತಾರಗೊಂಡಿದೆ” ಎನ್ನುತ್ತಾರೆ ಚೌಟರು.  ಈ ಎಲ್ಲ ಜಲವಿಚಾರಗಳನ್ನು ಜಾಲಾಡುತ್ತಿದ್ದಾಗ ಪುತ್ತೂರು ಬಲಾ°ಡಿನ ಕೃಷಿಕ ಸುರೇಶ್‌ ಭಟ್‌ ಮಾಹಿತಿ ಹಂಚಿಕೊಂಡರು, “”ನನ್ನೂರಲ್ಲಿ ಒಂದು ಕೊಳವೆ ಬಾವಿಯಿಂದ ದಿನಕ್ಕೊಬ್ಬರಂತೆ ಏಳು ಮಂದಿ ಕೃಷಿಕರು ಸಹಕಾರಿ ತತ್ವಕ್ಕನುಗುಣವಾಗಿ ನೀರನ್ನು ಬಹುಕಾಲ ಬಳಸುತ್ತಿದ್ದರು. ಈ ವ್ಯವಸ್ಥೆ ಒಂದಷ್ಟು ಕಾಲ ನಡೆದಿತ್ತು”. 

ಕೊಳವೆ ಬಾವಿಗಳನ್ನು ಕೊರೆಯುತ್ತಾ ಹೋಗುವುಧಿದಕ್ಕಿಂತ ಜೀವವಿದ್ದ ಕೊಳವೆಬಾವಿಗಳ ನೀರನ್ನು ಸಹಕಾರೀಧಿಕರಣಗೊಳಿಸಬಹುದು. ಇದರಲ್ಲಿ ಸಮಸ್ಯೆ ಇಲ್ಲವೆಂದಲ್ಲ. ಅಲ್ಲಲ್ಲಿನ ಸಂಪನ್ಮೂಲ, ಅಗತ್ಯಗಳಿಗೆ ಹೊಂದಿಕೊಂಡು ಮನಃಸ್ಥಿತಿಗಳನ್ನು ಬದಲಾಯಿಸಿಕೊಳ್ಳಬೇಕಾಗಬಹುದು. ಮನಸ್ಸು ಸಜ್ಜಾಗಬೇಕಷ್ಟೇ. ಸಹಕಾರಿ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಬಹುಶಃ ನೀರಿಗೂ ರೇಶನ್‌ ಸಿಸ್ಟಮ್‌ ಅನಿವಾರ್ಯ.  

ಒಂದು ನೆನಪಿಟ್ಟುಕೊಳ್ಳೋಣ – ನೀರಿನ ಬರಕ್ಕೆ ಕೊಳವೆ ಬಾವಿಗಳ ಕೊರೆತ ಪರಿಹಾರವಲ್ಲ. ಇಂತಹ ಚಿಕ್ಕಪುಟ್ಟ ಸಹಕಾರೀಕರಣವು ಕೂಡ ಜಲಸಂರಕ್ಷಣೆಗೆ ಮಾದರಿ. ಕನ್ನಾಡಿನಲ್ಲಿ ನೀರುಳಿತಾಯದ ಸಹಕಾರಿ ಮಾದರಿಗಳು ವಿರಳವಾಗಿವೆ. ಅರಿವಿನ ದೃಷ್ಟಿಯಿಂದ ಅದಕ್ಕೆ ಬೆಳಕೊಡ್ಡುವ ತುರ್ತಿದೆ.

ನಾ. ಕಾರಂತ ಪೆರಾಜೆ

Advertisement

Udayavani is now on Telegram. Click here to join our channel and stay updated with the latest news.

Next