Advertisement

ನಗರಗಳ ಪುನರ್‌ನಾಮಕರಣ –ಅಂತಃಕರಣವೋ, ರಾಜಕಾರಣವೋ? 

06:00 AM Nov 22, 2018 | |

ಒಂದು ಪ್ರೇಮ ಭಾವನೆ, ಧರ್ಮ – ಭಾಷೆ ಕುರಿತ ಅಭಿಮಾನ ಹಾಗೂ ನಿರ್ದಿಷ್ಟ ತಾಣವೊಂದರ ಬಗೆಗಿನ ಪ್ರಭಾವ ಅಥವಾ ಬಾಂಧವ್ಯ ಸೂಸುವ ಹೆಸರಿಗೆ ತುಂಬಾ ಅರ್ಥವಿದೆ. ನಮ್ಮ ರಾಜ್ಯದ ಹೆಸರನ್ನು “ಮೈಸೂರು’ ಎಂಬುದರಿಂದ “ಕರ್ನಾಟಕ’ ವೆಂದು
ಬದಲಾಯಿಸಲಾಗಿದ್ದರೆ, ಇದಕ್ಕೆ ಕಾರಣ ಹಿಂದಿನ ಹೆಸರು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸಂಬಂಧಿಸಿತ್ತೆಂಬುದೇ ಆಗಿತ್ತು. 

Advertisement

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಕಾಲದಿಂದಲೂ ನಮ್ಮ ಪೇಟೆ- ಪಟ್ಟಣ-ನಗರಗಳ ಹಾಗೂ ಸಾರ್ವಜನಿಕ ಸ್ಥಳಗಳ ಪುನರ್‌ನಾಮಕರಣ ಪ್ರಕ್ರಿಯೆಯೆನ್ನುವುದು ನಮ್ಮನ್ನು ಆಳುತ್ತ ಬಂದಿರುವ ನಾಯಕರಿಗೆ ಒಂದು ಆಟವೇ ಆಗಿಬಿಟ್ಟಿರುವುದನ್ನು ನೋಡುತ್ತಲೇ ಬಂದಿದ್ದೇವೆ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಸರಕಾರಗಳೂ ಈ ವಿನೋದದ ಆಟವನ್ನು ಆಡುತ್ತಲೇ ಬಂದಿವೆ. ಜನರು ಕೂಡ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಕ್ರೈಸ್ತ ಧರ್ಮ ಪ್ರಚಲಿತವಾಗಿರುವ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂಥ ಖಯಾಲಿಯನ್ನು ಕಾಣಲಾರೆವು. ವಾಸ್ತವವಾಗಿ ಕ್ರಿಶ್ಚಿಯನ್ನರಲ್ಲಿ ನವಜಾತಶಿಶುವಿಗೆ ಹೆಸರಿಡುವ ವಿಧಿಯಾಚರಣೆಗೆ ಕ್ರಿಶ್ಚಿಯನಿಂಗ್‌ ಎಂದೇ ಹೆಸರು. ಕೆ. ಪ್ರಭಾಕರ್‌ ಹಾಗೂ ಪ್ರೊ| ಎ. ಲಕ್ಷ್ಮೀ ಸಾಗರ್‌ ಅವರಂಥ ನಮ್ಮ ಕೆಲ ಮಾಜಿ ಸಚಿವರುಗಳಿಗೆ ತಂದೆ ತಾಯಿಗಳು ಇರಿಸಿದ್ದ ಹೆಸರುಗಳು ಬೇರೆಯೇ ಆಗಿದ್ದವು.

ಈಗ ಉದ್ಭವವಾಗಿರುವ ಹೊಸ ವಿವಾದ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಅವರ ಸರಕಾರ ರಾಜ್ಯದ ಮುಖ್ಯ ನಗರಗಳಲ್ಲೊಂದಾದ ಅಲಹಾಬಾದ್‌ಗೆ ಪ್ರಯಾಗ್‌ರಾಜ್‌ ಎಂಬುದಾಗಿ ಪುನರ್‌ನಾಮಕರಣ ಮಾಡಿರುವುದಕ್ಕೆ ಸಂಬಂಧಿ ಸಿದ್ದಾಗಿದೆ. ರಾಜಕೀಯ ಪಕ್ಷಗಳಿಂದ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಸರಕಾರ ರಾಷ್ಟ್ರದ ಚರಿತ್ರೆಯೊಂದಿಗೆ ಚಿನ್ನಾಟವಾಡುತ್ತಿದೆ ಎಂಬುದು ಇವುಗಳ ಆಕ್ಷೇಪ. ಇದು 16ನೆಯ ಶತಮಾನದಲ್ಲಿ ಮೊಘಲ್‌ ಸಾಮ್ರಾಟ ಅಕºರ್‌ ಇರಿಸಿದ್ದ ಹೆಸರು; ಅಕºರ್‌ ಒಬ್ಬ ದಾಳಿಕೋರನೆಂಬುದು ಬಿಜೆಪಿ ಹಾಗೂ ಆರೆಸ್ಸೆಸ್‌ಗಳ ದೃಷ್ಟಿಕೋನ ಎನ್ನುತ್ತಿವೆ ಈ ಎರಡೂ ಪಕ್ಷಗಳು. ಅಲಹಾಬಾದ್‌ ನಗರದ ಹೆಸರು ನೆಹರೂ ಕುಟುಂಬದ ಜತೆಗೆ ತಳುಕು ಹಾಕಿಕೊಂಡಿರುವುದೂ ಇವುಗಳ ವಿರೋಧಕ್ಕೆ ಇನ್ನೊಂದು ಕಾರಣವೆಂದು ತೋರುತ್ತದೆ.

ನಿಜವಾಗಿ ಅಕºರ್‌ ಇರಿಸಿದ್ದ ಹೆಸರು “ಇಲಹಾಬಾದ್‌’. ದೇವರ ನಿವಾಸ ಸ್ಥಾನ ಎನ್ನುವುದು ಈ ಹೆಸರಿನ ಅರ್ಥ. ಈ ವಿಷಯದಲ್ಲಿ ಯಾವುದೇ ತಕರಾರು ಇರಲಾರದು. ಈ ಹೆಸರನ್ನು ಭಾರತೀಯಗೊಳಿಸೋಣವೆಂಬುದು ಪುನರ್‌ನಾಮಕರಣದ ಹಿಂದಿನ ಆಶಯವಾಗಿದ್ದಿರಬಹುದು. ಮೂಲ ಹೆಸರನ್ನು ಅಕºರ್‌ ಇಸ್ಲಾಮೀಕರಿಸಿದ್ದು, ಇದೀಗ ಹಿಂದಿನ ಹೆಸರೇ ಈ ನಗರಕ್ಕೆ ಪ್ರಾಪ್ತವಾದಂತಾಗಿದೆ. ಇಂದಿಗೂ ಈ ನಗರದ ಕೆಲ ಭಾಗ “ಪ್ರಯಾಗ’ವೆಂದೇ ಕರೆಸಿಕೊಳ್ಳುತ್ತಿದೆ; ಕುಂಭ ಮೇಳ ಜರಗುವುದು ಈ ಜಾಗದಲ್ಲೇ. ವಾಸ್ತವವಾಗಿ ಬಿಜೆಪಿ, ವಿಶೇಷವಾಗಿ ಕರ್ನಾಟಕದಲ್ಲಿ ಇತರ ಪಕ್ಷಗಳಂತೆಯೇ ಜಾತಿ ಆಧರಿತ ಪಕ್ಷವೇ ಹೌದಾಗಿದ್ದರೂ, ವಸ್ತುತಃ ಸೈದ್ಧಾಂತಿಕವಾಗಿ ಅದು ಹಿಂದುತ್ವ ಆಧಾರಿತ ಪಕ್ಷ. ಹಾಗೆ ನೋಡಿದರೆ ಮುಸ್ಲಿಂ ಆಡಳಿತಗಾರರು ತಾವು ಆಳ್ವಿಕೆ ನಡೆಸಿದ  ಪೇಟೆ – ಪಟ್ಟಣ – ನಗರಗಳ ಪೈಕಿ ಹೆಚ್ಚಿನವುಗಳ ಹೆಸರನ್ನು ಬದಲಾಯಿಸಿದ್ದರು. ಇಂದು ಕೂಡ ಹೈದರಾಬಾದ್‌ ಹಾಗೂ ಅಹಮದಾಬಾದ್‌ ತಮ್ಮ ಭೂತಪೂರ್ವ ಮುಸ್ಲಿಂ ಆಡಳಿತಗಾರರು ನೀಡಿದ್ದ ಹೆಸರನ್ನೇ ಹೊತ್ತುಕೊಂಡಿವೆ. ಕುತೂಹಲಕಾರಿ ಸಂಗತಿಯೆಂದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ರಾಜಧಾನಿ ಅಹಮದಾಬಾದಿನ ಹೆಸರನ್ನು ಬದಲಾಯಿಸುವ ಗೋಜಿಗೆ ಹೋಗಿಲ್ಲ. 

ಅಲಹಾಬಾದ್‌ನ ಹೆಸರನ್ನು ಕೈ ಬಿಟ್ಟು ಮರುನಾಮಕರಣ ಮಾಡಿರುವುದಕ್ಕೆ ವ್ಯಕ್ತವಾದ ವಿರೋಧದ ಹಿಂದಿನ ಕಾರಣ ಮೇಲ್ನೋಟಕ್ಕೆ ಸರಳವಾಗಿದೆ – ಬೇಕಾದರೆ ಬ್ರಿಟಿಷ್‌ ದಾಳಿಕೋರರು ನೀಡಿದ ಹೆಸರುಗಳನ್ನು ಬದಲಿಸಿರಿ. ಆದರೆ ಮೊಘಲರು ಅಥವಾ ಇತರ ಮುಸ್ಲಿಂ ದೊರೆಗಳು ನೀಡಿದ ಹೆಸರುಗಳನ್ನು ಬದಲಾಯಿಸಬೇಡಿ! ಮೊಘಲರು ಹಾಗೂ ಅವರಿಗಿಂತ ಮುಂಚೆ ಇಲ್ಲಿದ್ದ ಗುಲಾಮ ದೊರೆಗಳಾಗಿದ್ದ ಸೈಯ್ಯಿದ್‌ಗಳು, ಲೋಧಿಗಳು, ಖೀಲ್ಜಿಗಳು ಅಥವಾ ತುಘಲಕ್‌ಗಳನ್ನು ದಾಳಿಕಾರರೆಂದು ಪರಿಗಣಿಸಲು ಒಪ್ಪದವರು ಅನೇಕರಿದ್ದಾರೆ. ಇಲ್ಲೊಂದು ತಾಂತ್ರಿಕ ಅಂಶವಿದೆ. ಇಂಥ ಆಡಳಿತಗಾರರ ಪ್ರಥಮ ತಲೆಮಾರಿನ ದೊರೆಗಳನ್ನು /ಸಾಮ್ರಾಟರನ್ನು ಬಿಟ್ಟರೆ ಉಳಿದವರೆಲ್ಲ ಭಾರತದಲ್ಲೇ ಹುಟ್ಟಿದವರು, ಇಲ್ಲೇ ಮಡಿದವರು. 

Advertisement

ಬ್ರಿಟಿಷರು ಹಾಗಲ್ಲ. 1876ರ ವರೆಗೂ ಬ್ರಿಟಿಷ್‌ ಚಕ್ರವರ್ತಿ/ರಾಜರುಗಳ ಪೈಕಿ ಯಾರೂ ಭಾರತಕ್ಕೆ ಭೇಟಿ ನೀಡಿದವರಿಲ್ಲ. ಏಳನೆಯ ಎಡ್ವರ್ಡ್‌ ದೊರೆ ತಾನು ಭಾವೀ ದೊರೆಯಾಗಿದ್ದ ಕಾಲದಲ್ಲಿ (ವೇಲ್ಸ್‌ನ ರಾಜಕುಮಾರನಾಗಿದ್ದ ಕಾಲದಲ್ಲಿ) ಇಲ್ಲಿಗೆ ಮೊದಲ ಬಾರಿಗೆ ಭೇಟಿ ಇತ್ತಿದ್ದರು. ಎಡ್ವರ್ಡ್‌ ದೊರೆಯ ತಾಯಿ ವಿಕ್ಟೋರಿಯಾ ಮಹಾರಾಣಿ ಭಾರತಕ್ಕೆ ಬಂದದ್ದೇ ಇಲ್ಲ. ಬ್ರಿಟಿಷರು ಭಾರತವನ್ನು ಆಳಿದ್ದು, ಈಸ್ಟ್‌ ಇಂಡಿಯಾ ಕಂಪೆನಿಯ ಮೂಲಕ; 1858ರ ಭಾರತ ಸರಕಾರದ ಕಾಯಿದೆ ಭಾರತದ ಮೇಲಿನ ಅಧಿಕಾರವನ್ನು ಬ್ರಿಟಿಷ್‌ ಅರಸೊತ್ತಿಗೆಗೆ ವರ್ಗಾವಣೆಯಾದ ಬಳಿಕ. ಬ್ರಿಟಿಷ್‌ ವೈಸರಾಯ್‌ಗಳ ಪೈಕಿ ಯಾರೊಬ್ಬರೂ ಭಾರತವನ್ನು ತಮ್ಮ ನಿವಾಸ ನೆಲೆಯನ್ನಾಗಿ ಮಾಡಿಕೊಳ್ಳಲಿಲ್ಲ. 

ಇನ್ನೂ ಒಂದು ವಾದವಿದೆ – ಬ್ರಿಟಿಷರು ಮಾಡಿದಂತೆ ಮೊಘಲ್‌ ಚಕ್ರವರ್ತಿಗಳು ಭಾರತದ ಜನರಿಂದ ಏನನ್ನು ಲೂಟಿಗೈದರೋ ಅದನ್ನು ಇತರ ಯಾವುದೇ ದೇಶಕ್ಕೆ ವರ್ಗಾಯಿಸಲಿಲ್ಲ ಎಂಬುದೇ ಈ ವಾದ. ಒಂದು ಮಾತು ನಿಜ; ವಾಮಪಂಥೀಯ ಇತಿಹಾಸಕಾರರ ಪೈಕಿ ಯಾರೂ ಮುಸ್ಲಿಂ ದೊರೆಗಳನ್ನು ಭಾರತದ ಮೂಲ ನಿವಾಸಿಗಳೆಂದು ಅಥವಾ ಭಾರತೀಯ ನಿವಾಸಿಗಳೆಂದು ವಾದಿಸಿಲ್ಲ. ಸಾಮಾನ್ಯವಾಗಿ ಕೇಳಿಬರುತ್ತಿರುವ ಇನ್ನೊಂದು ವಾದವೆಂದರೆ, ಆರ್ಯರು ನಮ್ಮ ನೆಲಕ್ಕೆ ದಾಳಿಯಿಡಬಹುದೆಂದಾದರೆ ಟರ್ಕಿ, ಮಧ್ಯ ಏಶ್ಯಾ, ಇರಾನ್‌ ಅಥವಾ ಇರಾಕ್‌ಗಳಿಂದ ಮುಸ್ಲಿಂ ದೊರೆಗಳು ದಾಳಿಯಿಟ್ಟದ್ದರಲ್ಲಿ ತಪ್ಪೇನಿದೆ ಎಂಬುದು.

ಇನ್ನು ನಮ್ಮ ಹಿಂದಿನ ಸಿದ್ದರಾಮಯ್ಯ ಸರಕಾರ ಟಿಪ್ಪೂ ಸುಲ್ತಾನ್‌ ಜಯಂತಿಯನ್ನು ಆಚರಿಸಲು ನಿರ್ಧರಿಸಿದಂದಿನಿಂದಲೂ ಈ ಕುರಿತ ಪರ ಹಾಗೂ ವಿರೋಧ ಅಭಿಪ್ರಾಯಗಳು ಪ್ರಕಟವಾಗುತ್ತಲೇ ಇವೆ. ಟಿಪ್ಪೂ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೆ ಅಥವಾ ಹಿಂದುಗಳನ್ನು ಬಲಿಪಶುಗಳನ್ನಾಗಿಸಿದ ನಿರಂಕುಶ ಆಡಳಿತಗಾರನೆ? ಆತ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ವಾದಿಸುವವರು ಒಂದು ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಕರ್ನಾಟಕದ 40ಕ್ಕೂ ಅಧಿಕ ಪೇಟೆ ಪಟ್ಟಣಗಳಿಗೆ ಆತ ಇರಿಸಿದ್ದ ಇಸ್ಲಾಮಿಕ್‌ ಹೆಸರುಗಳನ್ನು ಕೈ ಬಿಟ್ಟು ಹಿಂದಿನ ಹೆಸರುಗಳನ್ನು ಚಾಲ್ತಿಗೆ ತರುವುದಕ್ಕೆ ಇಂಥವರು ಸಿದ್ಧರಿದ್ದಾರೆಯೆ? ಮೈಸೂರು ನಗರದ ಹೆಸರನ್ನು ಟಿಪ್ಪು ನಜರಾಬಾದ್‌ ಎಂದು, ಮಂಗಳೂರಿನ ಹೆಸರನ್ನು ಜಲಾಲಾಬಾದ್‌ ಎಂದು, ಹಾಸನದ ಹೆಸರನ್ನು ಖಾಯಿಮಾಬಾದ್‌ ಎಂಬುದಾಗಿ, ಹಾಗೆಯೇ ಹಾಸನ ಜಿಲ್ಲೆಯ ಸಕಲೇಶಪುರದ ಹೆಸರನ್ನು ಜಾಫ‌ರಾಬಾದ್‌ ಎಂದು ಬದಲಾಯಿಸಿದ್ದು ಇಂದಿಗೂ ಮೈಸೂರಿನ ಒಂದು ಭಾಗ ನಜರಾಬಾದ್‌ ಎಂಬ ಹೆಸರನ್ನೇ ಹೊತ್ತುಕೊಂಡಿದೆ. 

ಇದೊಂದು ವೈಭವೋಪೇತ ಪ್ರದೇಶ. ಮಂಜರಾಬಾದ್‌ ಕೋಟೆ ಇಂದಿಗೂ ಅಸ್ತಿತ್ವದಲ್ಲಿದೆ. ಹೀಗೆಯೇ ಟಿಪ್ಪು ಆಡಳಿತಭಾಷೆಯಾಗಿದ್ದ ಕನ್ನಡ ಜಾಗದಲ್ಲಿ ಪರ್ಶಿಯನ್‌ ಭಾಷೆಯನ್ನು ತಂದು ಕೂರಿಸಿದ. ಇಂದಿಗೂ ನಮ್ಮ ಕಂದಾಯ ಇಲಾಖೆ ಫಾರ್ಸಿ, ಉರ್ದು ಹಾಗೂ ಪರ್ಶಿಯನ್‌ ಪದಗಳನ್ನು ಬಳಸುತ್ತಿದೆ. ಕನ್ನಡದ ಹೋರಾಟಗಾರರ ಪೈಕಿ ಯಾರೂ ಇವುಗಳನ್ನು ಕಿತ್ತು ಹಾಕಬೇಕೆಂದು ಆಗ್ರಹಿಸಿಲ್ಲ. ಟಿಪ್ಪು ಬೆಂಗಳೂರು ಮತ್ತು ಶ್ರೀರಂಗಪಟ್ಟಣಗಳ ಹೆಸರನ್ನೂ ಇಸ್ಲಾಮೀ ಕರಿಸಿದ್ದ. ಮೈಸೂರಿನ ಒಡೆಯರು ತಮ್ಮ ಪ್ರಾಂತ್ಯವನ್ನು ಮರಳಿ ದಕ್ಕಿಸಿಕೊಂಡುದರಿಂದ ಹಳೆಯ ಹೆಸರುಗಳೇ ಉಳಿದುಕೊಂಡಿವೆ. ಇನ್ನು, ಟಿಪ್ಪು ಒಬ್ಬ ಕನ್ನಡಿಗ ಎಂಬ ವಾದವೂ ಇದೆ. ಆದರೆ ಟಿಪ್ಪು ಬಗ್ಗೆ ಕಾದಂಬರಿಯೊಂದನ್ನು ಬರೆದಿರುವ ಭಗವಾನ್‌ ಎಸ್‌. ಗಿದ್ವಾನಿಯವರು ಹೈದರಲಿ ಹಾಗೂ ಟಿಪ್ಪೂ ಇಬ್ಬರೂ ಪಂಜಾಬಿ ಮೂಲದವರೆಂದು ದಾಖಲಿಸಿದ್ದಾರೆ. ಗಿದ್ವಾನಿಯವರು ಅವಿಭಜಿತ ಭಾರತದ ಸಿಂಧ್‌ ಪ್ರಾಂತ್ಯದವರಾದ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಚೊçತ್‌ರಾಂ ಗಿದ್ವಾನಿಯವರ ಪುತ್ರ. ಚೊçತ್‌ ರಾಂ ಅವರು ಕರಾಚಿಯ ಮೇಯರ್‌ ಕೂಡ ಆಗಿದ್ದರು.
ಟಿಪ್ಪುವಿನ ವೀರತನ ಹಾಗೂ ಜಾತ್ಯತೀತ ಧೋರಣೆಯ ಬಗ್ಗೆ ಅಭಿಮಾನದಿಂದ ಹೇಳಿಕೊಳ್ಳುವವರು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡನ ಹೆಸರಿನ ಬದಲಿಗೆ ಟಿಪ್ಪು ಹೆಸರಿಡಬೇಕೆಂಬ ವಾದಕ್ಕೆ ವ್ಯಕ್ತವಾದ ವಿರೋಧವನ್ನು ನೆನಪಿಸಿಕೊಳ್ಳಬೇಕು. ಟಿಪ್ಪೂ ಜನಿಸಿದ್ದು ಈ ವಿಮಾನ ನಿಲ್ದಾಣ ಇರುವ ಜಾಗವಾದ ದೇವನಹಳ್ಳಿಯಲ್ಲಿ, ಹಾಗಾಗಿ ಆತನ ಹೆಸರನ್ನೇ ಇರಿಸೋಣ ಎಂದು ಸಲಹೆಯಿತ್ತವರು ಗಿರೀಶ್‌ ಕಾರ್ನಾಡ್‌. ಕೊನೆಗೂ ಗೆದ್ದದ್ದು ಕೆಂಪೇಗೌಡರೇ! 

ಸ್ಥಳಗಳ ಹೆಸರನ್ನು ಬದಲಾಯಿಸುವ ವಿಷಯದಲ್ಲಿ ಭಾರತದವರಾದ ನಾವು ಪ್ರವೀಣರೇ ಹೌದು. ನಮ್ಮನ್ನು ಬಿಟ್ಟರೆ ಪಾಕಿಸ್ಥಾನೀಯರು ಹಾಗೂ ರಶ್ಯನರು. ಭೂತಪೂರ್ವ ಸೋವಿಯತ್‌ ಒಕ್ಕೂಟದ ಕಮ್ಯುನಿಸ್ಟ್‌ ಆಡಳಿತಗಾರರು ಹಿಂದಿನ ಝಾರ್‌ ಆಡಳಿತದ ಕಾಲದಲ್ಲಿ ಇರಿಸಲಾಗಿದ್ದ ಹೆಸರುಗಳನ್ನು ಬದಲಾಯಿಸಿದ್ದರು. ಕಮ್ಯೂನಿಸಂನ ಪತನ ಹಾಗೂ ಸೋವಿಯತ್‌ ಒಕ್ಕೂಟದ ವಿದಳನದ ಪರಿಣಾಮವಾಗಿ ಅನೇಕ ಹಳೆಯ ಹೆಸರುಗಳು ಮರಳಿ ಚಾಲ್ತಿಗೆ ಬರುವಂತಾಯಿತು. ಈ ಮಾತಿಗೆ ಅತ್ಯುತ್ತಮ ಉದಾಹರಣೆಯೆಂದರೆ, ಸೈಂಟ್‌ಪೀಟರ್ಬರ್ಗ್‌ನದು. ಕಮ್ಯುನಿಸ್ಟರು ಇದಕ್ಕೆ ಲೆನಿನ್‌ಗಾÅಡ್‌ ಎಂಬ ಹೆಸರನ್ನು ನೀಡಿದ್ದರು. ಇದೇ ರೀತಿ ಪಾಕಿಸ್ಥಾನ ಹಳೆಯ ಹಿಂದೂ ಹೆಸರುಗಳನ್ನು ಹಾಗೂ ಬ್ರಿಟಿಷರು ಇರಿಸಿದ್ದ ಹೆಸರುಗಳನ್ನು ಕಿತ್ತೂಗೆಯಿತು. ಆದರೆ ಪಾಕಿಸ್ಥಾನಿಯರು ಲಾಹೋರ್‌ನ ಸರ್‌ ಗಂಗಾರಾಮ್‌ ಆಸ್ಪತ್ರೆಯ ಹೆಸರನ್ನು ಬದಲಾಯಿಸುವ ಧೈರ್ಯ ಮಾಡಿಲ್ಲ.

ಸರ್‌ ಗಂಗಾರಾಮ್‌ ಅಗ್ರವಾಲ್‌ (1851-1927) ಪಾಕಿಸ್ಥಾನಕ್ಕೆ ಕೊಟ್ಟ ಕೊಡುಗೆ ಅಷ್ಟೊಂದು ದೊಡ್ಡದು. ರಾಷ್ಟ್ರ ವಿಭಜನೆ ಪೂರ್ವದ ಪಂಜಾಬಿನವರಾಗಿದ್ದ ಗಂಗಾರಾಮ್‌ ಅಗ್ರವಾಲ್‌ ಓರ್ವ ಉನ್ನತ ಮಟ್ಟದ ಸಿವಿಲ್‌ ಇಂಜಿನಿಯರ್‌, ಕೃಷಿಕ ಹಾಗೂ ಮಾನವ ಶಾಸ್ತ್ರಜ್ಞರಾಗಿ ಸುಪ್ರಸಿದ್ಧರು. ನಮ್ಮ ಸರ್‌ ಎಂ. ವಿಶ್ವೇಶ್ವರಯ್ಯನವರಿಗೆ ಸರಿಸಮಾನರಾಗಿದ್ದ ಅವರು ಪಾಕಿಸ್ಥಾನದ ಕೆಲವು ಪ್ರತಿಷ್ಠಿತ ಕಟ್ಟಡಗಳ ಹಾಗೂ ನೀರಾವರಿ ಘಟಕಗಳ ನಿರ್ಮಾಣಕ್ಕೆ ಕಾರಣರಾ ದವರು. ಇಂದಿಗೂ ಅವರನ್ನು “ಆಧುನಿಕ ಲಾಹೋರ್‌ನ ಪಿತ’ ನೆಂದು ಮನ್ನಿಸಲಾಗುತ್ತಿದೆ. ರಾಜ್ಯ ವಿಭಜನೆಯ ಬಳಿಕ ದಿಲ್ಲಿಯಲ್ಲಿ ಇನ್ನೊಂದು ಸರ್‌ ಗಂಗಾರಾಮ್‌ ಆಸ್ಪತ್ರೆ ನಿರ್ಮಾಣಗೊಂಡಿತು.
ಪೇಟೆ-ನಗರಗಳ ಹೆಸರುಗಳನ್ನು ಬದಲಾಯಿಸುವ ಬದಲಿಗೆ, ಆಯಾ ಜಾಗಗಳ ನಾಗರಿಕ ಸೌಲಭ್ಯಗಳಲ್ಲಿ ಸುಧಾರಣೆ ತರುವ ಹಾಗೂ ಅವುಗಳ ಗುಣಮಟ್ಟ ಕುಸಿಯುವುದನ್ನು ತಡೆಯುವ ಕೆಲಸವಾಗಬೇಕು ಎಂಬ ವಾದವೂ ಇದೆ. ಈ ವಾದದಲ್ಲಿ ಅರ್ಥವಿಲ್ಲದಿಲ್ಲ. ಆದರೆ ಒಂದು ಪ್ರೇಮ ಭಾವನೆ, ಧರ್ಮ – ಭಾಷೆ ಕುರಿತ ಅಭಿಮಾನ ಹಾಗೂ ನಿರ್ದಿಷ್ಟ ತಾಣವೊಂದರ ಬಗೆಗಿನ ಆ ಪ್ರಭಾವ ಅಥವಾ ಬಾಂಧವ್ಯ ಸೂಸುವ ಹೆಸರಿಗೆ ತುಂಬಾ ಅರ್ಥವಿದೆ. ನಮ್ಮ ರಾಜ್ಯದ ಹೆಸರನ್ನು “ಮೈಸೂರು’ ಎಂಬುದರಿಂದ 
“ಕರ್ನಾಟಕ’ವೆಂದು ಬದಲಾಯಿಸಲಾಗಿದ್ದರೆ, ಇದಕ್ಕೆ ಕಾರಣ ಹಿಂದಿನ ಹೆಸರು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸಂಬಂಧಿಸಿತ್ತೆಂಬುದೇ ಆಗಿತ್ತು. 

“ಬ್ಯಾಂಗಲೋರ್‌’ “ಬೆಂಗಳೂರು’ ಆಯಿತು; ಮೊದಲನೆಯದು ಆಂಗ್ಲೀಕೃತ ನಾಮಧೇಯ; ಎರಡನೆಯದು ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿರುವ ಹೆಸರು. ಈಗ ಅಲಹಾಬಾದ್‌ಗೆ ಪ್ರಯಾಗ್‌ ರಾಜ್‌ ಎಂಬ ಹೆಸರಿಟ್ಟಿರುವುದನ್ನು ವಿರೋಧಿಸುವವರು ಹಿಂದೆ ಮಾಯಾವತಿ ನೇತೃತ್ವದ (ಉತ್ತರ ಪ್ರದೇಶದ) ಬಹುಜನ ಸಮಾಜಪಕ್ಷದ ಸರಕಾರ ಸ್ಥಳಗಳ ಹೆಸರನ್ನು ಬದಲಾಯಿಸಿದಾಗ, ಅನೇಕ ಕಡೆಗಳಲ್ಲಿ ಎಗ್ಗಿಲ್ಲದೆ ಪ್ರತಿಮೆಗಳನ್ನು ಸ್ಥಾಪಿಸಿದಾಗ ಏನೂ ಹೇಳದೆ ತೆಪ್ಪಗಿದ್ದರು. ಜಿಲ್ಲೆಗಳಿಗೆ ಸ್ಥಳೀಯ ನಾಯಕರ ಹೆಸರುಗಳನ್ನು ಇರಿಸುವುದರಲ್ಲಿ ನಮ್ಮ ನೆರೆ ರಾಜ್ಯವಾದ ತಮಿಳುನಾಡು ಕೂಡ ಅಗ್ರಗಣ್ಯವೇ. ಆಂಧ್ರ ಪ್ರದೇಶ/ ತೆಲಂಗಣ ರಾಜ್ಯ ಮೇಡಕ್‌ ಜಿಲ್ಲೆಯ ಹೆಸರನ್ನು ಇಂದಿರಾಗಾಂಧಿ ಜಿಲ್ಲೆಯೆಂದು, ಹಾಗೆಯೇ ಓಂಗೋಲ್‌ ಜಿಲ್ಲೆಯ ಹೆಸರನ್ನು ಪ್ರಕಾಶಂ ಜಿಲ್ಲೆಯೆಂದೂ ಬದಲಾಯಿಸಿದೆ.

ಬ್ರಿಟಿಷರು ಇರಿಸಿದ್ದ ಹೆಸರುಗಳನ್ನು ಬದಲಾಯಿಸುವುದಕ್ಕೆ ಹೊರಟಿರುವುದರಲ್ಲಿ ಹೆಚ್ಚಿನ ಮಟ್ಟಿನ ತಾರ್ಕಿಕತೆಯಿದೆ ಎನ್ನುವುದೇನೋ ನಿಜವೇ. ನಮ್ಮ ಜಾಗಗಳ ಅನೇಕ ಹೆಸರುಗಳನ್ನು ಉಚ್ಚರಿಸಲು ಅವರಿಗೆ ಕಷ್ಟವಾಯಿತು; ಹಾಗಾಗಿ ಅವರು ಅವುಗಳನ್ನು ತಿರುಚಿದರು. ಬ್ರಿಟಿಷರು ನಮ್ಮ ಆಹಾರದ ರುಚಿ ಸವಿಯದೆ, ಹೆಸರುಗಳನ್ನು ಉಚ್ಚರಿಸುವ ಕಷ್ಟ ತೆಗೆದುಕೊಳ್ಳದೆ ಎರಡು ಶತಮಾನಗಳಿಗೂ ಹೆಚ್ಚು ಕಾಲ ನಮ್ಮನ್ನು ಆಳಿದರು ಎಂಬ ಮಾತೇ ಇಲ್ಲವೆ? ಈ ಮಾತಿಗೆ ಸರ್‌ ವಿಲಿಯಂ ಜೋನ್ಸ್‌ ಹಾಗೂ ಸರ್‌ ಮೋನಿಯರ್‌ ವಿಲಿಯಮ್ಸ್‌ರಂಥ ಕೆಲ ಅಪವಾದಗಳೂ ಇರುವುದು ಸುಳ್ಳಲ್ಲವೆನ್ನಿ.

Advertisement

Udayavani is now on Telegram. Click here to join our channel and stay updated with the latest news.

Next