Advertisement

ಹಿಂದೂವಿರೋಧಿ ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

01:46 PM Sep 21, 2021 | Team Udayavani |

ಬೀದರ್: ಸುಪ್ರೀಂ ಆದೇಶದ ಹೆಸರಿನಲ್ಲಿ ಆಡಳಿತದ ಮೂಲಕ ಧಾರ್ಮಿಕ ಕೇಂದ್ರ ದೇವಸ್ಥಾನಗಳನ್ನು ನೆಲಸಮಗೊಳಿಸಿ ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿರುವ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಸಂಘ ಪರಿವಾರದಿಂದ ಬಂದವರಲ್ಲ, ಅವರೊಬ್ಬ ಕಮ್ಯುನಿಸ್ಟ್ ಪಕ್ಷದಿಂದ ಬಂದಿರುವ ನಾಯಕ. ಅವರಲ್ಲಿ ಹಿಂದೂಪರ ಗುಣಗಳು ಇರಲು ಸಾಧ್ಯವಿಲ್ಲ. ಹಾಗಾಗಿ ಹಿಂದೂ ವಿರೋಧಿ ನಿಲುವುಳ್ಳ ಬೊಮ್ಮಾಯಿ ಅವರನ್ನು ಸಿಎಂ ಹುದ್ದೆಯಿಂದ ತೆಗೆದು, ಒಬ್ಬ ಹಿಂದೂವಾದಿ ನಾಯಕನನ್ನು ಮುಖ್ಯಮಂತ್ರಿ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ದೊಡ್ಡ ಪೆಟ್ಟು ಬೀಳುವುದು ನಿಶ್ಚಿತ ಎಂದು ಎಚ್ಚರಿಸಿದರು.

ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಜನರ ಅಭಿವೃದ್ಧಿಗಾಗಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿಲ್ಲ. ಬದಲಾಗಿ ಹಿಂದೂಗಳ ಶ್ರದ್ಧಾ ಕೇಂದ್ರಗಳನ್ನು ನೆಲಸಮ ಮಾಡಲು ತಮ್ಮ ಆಡಳಿತವನ್ನು ಛೂ ಬಿಟ್ಟಿದ್ದಾರೆ. ಹಿಂದಿನ ಸಿಎಂ ಬಿಎಸ್‌ವೈ ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಮಠ- ಮಂದಿರಗಳನ್ನು ಅಭಿವೃದ್ಧಿಪಡಿಸಿದ್ದರು. ಆದರೆ, ಇಂದು ಸಿಎಂ ಹುದ್ದೆಗಾಗಿ ಅವರೇ ಸೂಚಿಸಿದ ವ್ಯಕ್ತಿ, ಬಿಎಸ್‌ವೈ ಮಾರ್ಗ ಅನುಸರಿಸದೇ ಹಿಂದೂಗಳ ಜತೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಸ್ಲಿಂ ತುಷ್ಠೀಕರಣಕ್ಕಿಳಿದ ಸಿಎಂ: ಸುಪ್ರೀಂ ಕೋರ್ಟ್ ಆದೇಶದಂತೆ ದೇಗುಲಗಳನ್ನು ನೆಲಸಮ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ ಆದೇಶ ಒಂದು ಸಮುದಾಯಕ್ಕೆ ಗುರಿ ಪಡಿಸಿ ನೀಡಿದ ಆದೇಶವಲ್ಲ. ಇಡೀ ದೇಶದಲ್ಲಿ ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ ಮಂದಿರ, ಮಸೀದಿ ಮತ್ತು ಚರ್ಚ್ ಸೇರಿ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಬೇಕು ಎಂಬುದು ಆದೇಶದಲ್ಲಿದೆ. ಹಾಗಾಗಿದ್ದಲ್ಲಿ ಈವರೆಗೆ ಎಷ್ಟು ಅಕ್ರಮವಾಗಿ ಕಟ್ಟಿರುವ ಮಸೀದಿ, ಚರ್ಚ್‌ಗಳನ್ನು ನೆಲಸಮ ಮಾಡಿದ್ದೀರಿ ಎಂಬುದರ ಲೆಕ್ಕ ಕೊಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ:ವಿವಾಹಿತ ಗ್ರಾಮ ಲೆಕ್ಕಿಗನೊಂದಿಗೆ ಮದುವೆಯಾದ ತಹಶಿಲ್ದಾರ್: ಜಿಲ್ಲಾಧಿಕಾರಿಯಿಂದ ನೋಟಿಸ್

Advertisement

ಸಿಎಂ ಬೊಮ್ಮಾಯಿ ಅವರ ಕ್ಷೇತ್ರದ ಬಂಕಾಪುರ ಗ್ರಾಮದ ದ್ವಿಪಥ ರಸ್ತೆ ಮಧ್ಯದಲ್ಲೇ ಮಸೀದಿ ಇದೆ. ಸವಣೂರಿನಲ್ಲೂ ಅಂಥ ಕೇಂದ್ರಗಳಿವೆ. ಸುಪ್ರೀಂ ಆದೇಶ ಪಾಲಿಸುವ ಇಚ್ಚಾಶಕ್ತಿ ಸಿಎಂಗೆ ಇದ್ದರೆ ಮೊದಲು ಆ ಅಕ್ರಮ ಮಸೀದಿ ನೆಲಸಮ ಮಾಡಿ ನಿಮ್ಮ ತಾಕತ್ತು ಪ್ರದರ್ಶಿಸಿ ಎಂದ ಸಿದ್ಧಲಿಂಗ ಶ್ರೀಗಳು, ಮುಸ್ಲಿಂ ತುಷ್ಠೀಕರಣಕ್ಕಾಗಿ ಆ ಕೆಲಸಕ್ಕೆ ಅವರು ಕೈ ಹಾಕುವುದಿಲ್ಲ ಎಂದು ಹೇಳಿದರು.

ರಾಮದಾಸ ಅಲ್ಲ ರಾವಣದಾಸ: ದೇಗುಲಗಳ ದ್ವಂಸದ ವಿರುದ್ಧ ಆಡಳಿತ ಪಕ್ಷದ ಸಂಸದರೇ ಅವಲತ್ತುಕೊಂಡರೂ ಯಾರು ಕಿವಿಗೊಡಲಿಲ್ಲ. ಸರ್ಕಾರ ಕೋರ್ಟ್ ಆದೇಶ ಪಾಲಿಸುತ್ತಿದೆ ಎಂದು ಹೇಳಿ ಸಮರ್ಥಿಸಿಕೊಳ್ಳುವ ಶಾಸಕರಾದ ಹರ್ಷವರ್ಧನ, ರಾಮದಾಸ್ ಅವರು ಯಾಕೆ ಮಸೀದಿ ನೆಲಸಮಗೊಳಿಸುವ ಬಗ್ಗೆ ಕೇಳುವುದಿಲ್ಲ? ಮೂರ್ತಿ ದ್ವಂಸ ಪಕ್ಷದ ಪರ ವಹಿಸಿಕೊಳ್ಳುವ ರಾಮದಾಸ ಅವರೊಬ್ಬ ರಾವಣದಾಸ ಎಂದು ಛೇಡಿಸಿದರು.

ಹಿಂದು ದೇಗುಲ ನೆಲಸಮ ಮಾಡುವುದಿಲ್ಲ ಎಂದು ಈಗ ಸಿಎಂ ಘೋಷಿಸಿದರೆ ಒಡೆದ ಹಿಂದೂಗಳ ಭಾವನೆ ಜೋಡಣೆ ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಎಷ್ಟು ಮಂದಿಗಳು ಒಡೆದಿದ್ದಾರೆ, ಅಷ್ಟೇ ಮಸೀದಿ, ಚರ್ಚ್‌ಗಳನ್ನು ನೆಲಸಮ ಮಾಡಬೇಕು. ಇಲ್ಲವಾದಲ್ಲಿ ಶ್ರೀ ರಾಮಸೇನೆ ಅನಧೀಕೃತ ಮಸೀದಿ, ಚರ್ಚ್‌ಗಳ ದಾಖಲೆಗಳನ್ನು ಸಂಗ್ರಹಿಸಿ ಕೋರ್ಟ್ ಮೆಟ್ಟಿಲು ಹತ್ತಬೇಕಾಗುತ್ತದೆ. ಮುಂದೆ ಕಾನೂನು ಶಿಕ್ಷೆಗೆ ಸಿಎಂ ಗುರಿಯಾಗಬೇಕಾಗುತ್ತದೆ ಎಂದು ಹೇಳಿದರು.

ಹೆಗಡೆ, ಯತ್ನಾಳ ಸಿಎಂ ಆಗಲಿ: ಹಿಂದೂ ವಿರೋಧಿ ಸಿಎಂ ಬೊಮ್ಮಾಯಿ ಅವರನ್ನು ಅಧಿಕಾರಿಂದ ಕೆಳಗಿಳಿಸಿ ಹಿಂದೂ ಪರವಾದಿ ಅನಂತಕುಮಾರ ಹೆಗಡೆ, ಬಸವರಾಜ ಪಾಟೀಲ ಯತ್ನಾಳ ಅಥವಾ ಪ್ರತಾಹ ಸಿಂಹ ಅಂಥವರನ್ನು ಸಿಎಂ ಮಾಡಬೇಕು. ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಹೆಣಗಳನ್ನು ಎಣಿಸಿದ್ದೆವು. ಈಗ ಹಿಂದೂಗಳ ಹೆಸರಿನಲ್ಲಿ ಅಧಿಕಾರ ಬಂದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಿಂದೂ ಮಂದಿರಗಳ ಅವಶೇಷ ಎಣಿಸಬೇಕಾದದ್ದು ದುರ್ದೈವ. ಬಿಜೆಪಿಯಲ್ಲೇ ಟಿಪ್ಪು, ಗಜನಿ ಹುಟ್ಟಿಕೊಂಡಿದ್ದಾರೆ ಎಂದರು.

ವೀರಶೆಟ್ಟಿ ಖ್ಯಾಮಾ, ಅಮೃತ ಪಾಟೀಲ, ಶಂಕರ ಖ್ಯಾಮಾ, ಕರುಣೇಶ್ವರ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next