Advertisement

Rajya Sabha Elections; ನಾಳೆ ರಾತ್ರಿಯೇ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ರೆಸಾರ್ಟ್‌ಗೆ?

11:08 PM Feb 21, 2024 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣ ಕಣದಲ್ಲಿ 5ನೇ ಅಭ್ಯರ್ಥಿಯಾಗಿರುವ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಕಾಂಗ್ರೆಸ್‌ನ ನಿದ್ದೆಗೆಡಿಸಿದ್ದಾರೆ.

Advertisement

ಅಡ್ಡಮತದಾನದ ಭೀತಿ ಎದುರಾಗಿರುವುದರಿಂದ ಆಡಳಿತಾರೂಢ ಕಾಂಗ್ರೆಸ್‌ ತನ್ನ ಶಾಸಕರನ್ನು ಮತದಾನ ದಿನದ (ಫೆ.27) ತನಕ ರೆಸಾರ್ಟ್‌ಗೆ ಸ್ಥಳಾಂತರಿಸುವ ಆಲೋಚನೆಯಲ್ಲಿದೆ.

ಅಧಿವೇಶನ ಅಂತ್ಯವಾಗುವ ಶುಕ್ರವಾರದಿಂದಲೇ ಶಾಸಕರು ರೆಸಾರ್ಟ್‌ಗೆ ತೆರಳುವ ಸಾಧ್ಯತೆಯಿದೆ.
ಜೆಡಿಎಸ್‌ಗೂ ಅಡ್ಡ ಮತದಾನದ ಭೀತಿಯಿದೆ.

ತನ್ನ 6 ಮಂದಿ ಶಾಸಕರು ಅಡ್ಡ ಮತದಾನ ಮಾಡಬಹುದೆಂಬ ವದಂತಿ ದಟ್ಟವಾಗಿದ್ದು, ಆ ಪಕ್ಷವೂ ತನ್ನ ಶಾಸಕರನ್ನು ರೆಸಾರ್ಟ್‌ಗೆ ಸಾಗಿಸುವ ಸಾಧ್ಯತೆಯೂ ಇದೆ!

ಕಾಂಗ್ರೆಸ್‌ ಪಕ್ಷ ತನ್ನ ಸಂಖ್ಯಾಬಲದಲ್ಲಿ ಮೂವರನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಲಿದೆ. ಆದರೆ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಎನ್‌ಡಿಎ ಅಭ್ಯರ್ಥಿಯಾಗಿ ಕಣದಲ್ಲಿರುವ ಕುಪೇಂದ್ರ ರೆಡ್ಡಿ, ಗೆಲುವಿಗೆ ಅಗತ್ಯ ಮತಗಳ ಕೊರತೆ ಇದ್ದರೂ ಸ್ಪರ್ಧಾ ಕಣದಲ್ಲಿದ್ದಾರೆ. ಇದು ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿರುವ ಅಜಯ್‌ ಮಾಕೆನ್‌, ಜಿ.ಸಿ.ಚಂದ್ರಶೇಖರ್‌ ಹಾಗೂ ನಾಸೀರ್‌ ಹುಸೇನ್‌ ಅವರ ನಿದ್ದೆಗೆಡಿಸಿದೆ.

Advertisement

ಈ ಹಿನ್ನೆಲೆಯಲ್ಲಿ ತನ್ನ 135 ಶಾಸಕರ ಜತೆಗೆ ಪಕ್ಷೇತರರಾದ ಲತಾ ಮಲ್ಲಿಕಾರ್ಜುನ್‌, ಪುಟ್ಟಸ್ವಾಮಿ ಗೌಡ ಹಾಗೂ ದರ್ಶನ್‌ ಪುಟ್ಟಣ್ಣಯ್ಯ ಜತೆಗೆ ರೆಸಾರ್ಟ್‌ಗೆ ತೆರಳಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.

ಸುಮಾರು 200 ಮಂದಿಗೆ ವಾಸ್ತವ್ಯವುಳ್ಳ ಹೊಟೇಲ್‌ ಅಥವಾ ರೆಸಾರ್ಟ್‌ ಹುಡುಕುವ ಕೆಲಸ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೊಗಸಾಲೆಯಲ್ಲಿ ಮಾಕೆನ್‌
ಈ ಮಧ್ಯೆ ಕಾಂಗ್ರೆಸ್‌ ಅಭ್ಯರ್ಥಿ ಅಜಯ್‌ ಮಾಕೆನ್‌ ವಿಧಾನಸಭೆಯ ಮೊಗಸಾಲೆಯಲ್ಲಿ ಆಡಳಿತ ಪಕ್ಷದ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸರಕಾರಿ ಮುಖ್ಯ ಸಚೇತಕ ಪಿ.ಎಂ.ಅಶೋಕ್‌ ಅವರು ಶಾಸಕರನ್ನು ಪರಿಚಯ ಮಾಡಿಕೊಟ್ಟರು. ಮಂಗಳವಾರ ಮತ್ತೂಬ್ಬ ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್‌ ಆಗಮಿಸಿದ್ದರು.

ಅಧಿವೇಶನ ವಿಸ್ತರಣೆಗೂ ಕಸರತ್ತು
ಶುಕ್ರವಾರ ಅಂತ್ಯಗೊಳ್ಳಲಿರುವ ವಿಧಾನಮಂಡಲದ ಅಧಿವೇಶನವನ್ನು ಬುಧವಾರದವರೆಗೂ ವಿಸ್ತರಿಸುವ ಚಿಂತನೆಯನ್ನೂ ಸರಕಾರ ಮಾಡಿದೆ ಎನ್ನಲಾಗಿದೆ.

ಸೋಮವಾರದಿಂದ ಬುಧವಾರದ ಕಲಾಪಕ್ಕೆ ಮೂರು ದಿನ ವಿಪ್‌ ಜಾರಿಗೊಳಿಸಿ ಅಧಿವೇಶನ ನಡೆಸಬಹುದೇ ಎಂಬ ಲೆಕ್ಕಾಚಾರ ಸಾಗಿದೆ. ಆದರೆ ಈ ಬಗ್ಗೆ ಸ್ಪೀಕರ್‌ ಯು.ಟಿ.ಖಾದರ್‌ ಒಲವು ತೋರಿಲ್ಲ ಎನ್ನಲಾಗಿದೆ. ಹೀಗಾಗಿ ರೆಸಾರ್ಟ್‌ಗೆ ಹೋಗುವುದು ಅನಿವಾರ್ಯವಾಗಲಿದೆ.

ಬಿಜೆಪಿ ನಡೆ ಇನ್ನೂ ನಿಗೂಢ
ಇಂದು ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರು: ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಡೆ ನಿಗೂಢವಾಗಿದ್ದು, ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವಿಗೆ ಕಾರ್ಯತಂತ್ರವೇನು ಎಂಬುದು ಗುಟ್ಟಾಗಿಯೇ ಉಳಿದಿದೆ. ಅಭ್ಯರ್ಥಿಯನ್ನು ಗೆಲ್ಲಿಸಿ ಆಡಳಿತ ಪಕ್ಷಕ್ಕೆ ಮುಜುಗರ ಸೃಷ್ಟಿಸಬೇಕೆಂಬ ಆಸೆಯನ್ನು ಉಭಯ ಪಕ್ಷಗಳು ಹೊಂದಿವೆಯಾದರೂ, ಕಾರ್ಯತಂತ್ರದ ಬಗ್ಗೆ ಇದುವರೆಗೆ ಜಂಟಿಯಾಗಿ ಸಭೆ ನಡೆಸಿ ಚರ್ಚಿಸಿಲ್ಲ. ಎರಡು ದಿನಗಳಿಂದ ಸದನದಲ್ಲಿ ಕಾಣಿಸಿಕೊಳ್ಳದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಬುಧವಾರ ಪುತ್ರ ನಿಖೀಲ್‌ ಜತೆ ದಿಲ್ಲಿಗೆ ಪ್ರಯಾಣ ಬೆಳೆಸಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಂದು ಸ್ವಲ್ಪ ಹೊತ್ತು ಮಾತ್ರ ಕಲಾಪದಲ್ಲಿ ಕಾಣಿಸಿಕೊಂಡರು. ಸಾಯಂಕಾಲದ ಬಳಿಕ ಅವರು ರಹಸ್ಯ ಸ್ಥಳದಲ್ಲಿ ಆಪ್ತರ ಜತೆಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ಈ ಮಧ್ಯೆ ಗುರುವಾರ ಸಂಜೆ ಏಳು ಗಂಟೆಗೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಇಲ್ಲಿ ಚುನಾವಣ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಕಡಿಮೆ.

Advertisement

Udayavani is now on Telegram. Click here to join our channel and stay updated with the latest news.

Next