Advertisement

ಭವಂತಿಸ್ಟ್ರೀಟ್‌ ಅಂಗಡಿಗಳಿಗೆ ನುಗ್ಗಿದ ಮಳೆನೀರು !

08:15 AM Aug 20, 2017 | Team Udayavani |

ಮಹಾನಗರ: ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಅಂಗಡಿ ಮುಂಗಟ್ಟುಗಳು-ಮನೆಗಳಿಗೆ ನೀರು ನುಗ್ಗಿದ್ದನ್ನು ನಾವು ಕೇಳಿದ್ದೇವೆ. ಆದರೆ ಇದೀಗ ಮಂಗಳೂರಿನಲ್ಲಿ ಸಾಧಾರಣ ಮಳೆಗೇ ನೀರು ಅಂಗಡಿಗಳಿಗೆ ನುಗ್ಗಿದೆ. ಶುಕ್ರವಾರ ರಾತ್ರಿ ಸುರಿದ ಮಳೆಗೆ ನಗರದ ಭವಂತಿಸ್ಟ್ರೀಟ್‌ನಲ್ಲಿ 4 ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. 

Advertisement

ಪಾಲಿಕೆಯ ಅವ್ಯವಸ್ಥೆಯ ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಕಾಂಕ್ರೀಟ್‌ ರಸ್ತೆಯ ಕೆಲಸವನ್ನು ಅರ್ಧಕ್ಕೆ ಬಿಟ್ಟ ಪರಿಣಾಮ ನೀರು ನುಗ್ಗಿದೆ ಎಂದು ಅಂಗಡಿ ಮಾಲಕರು ಆರೋಪಿಸಿದರೆ, ಸ್ಥಳೀಯ ಅಂಗಡಿಯವರು ಜಾಗ ಬಿಟ್ಟುಕೊಡದ ಪರಿಣಾಮ ಚರಂಡಿ ಮಾಡಲಾಗದೆ ಅಂಗಡಿಗಳಿಗೆ ನೀರು ನುಗ್ಗಿದೆ ಎಂದು ಪಾಲಿಕೆ ಹೇಳುತ್ತಿದೆ. ಪ್ರಸ್ತುತ ಅಂಗಡಿಯವರು ಮತ್ತೆ ಮಳೆನೀರು ನುಗ್ಗದಂತೆ ತಾತ್ಕಾಲಿಕ ವ್ಯವಸ್ಥೆಯೊಂದನ್ನು ಮಾಡಿದ್ದಾರೆ. ಆದರೆ ಜೋರಾಗಿ ಮಳೆ ಬಂದರೆ ಮತ್ತೆ ನೀರು ನುಗ್ಗದು ಎಂದು ಹೇಳುವಂತಿಲ್ಲ. 

ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ಬದಿಯಲ್ಲಿ ಮಣ್ಣು ರಾಶಿ ಹಾಕಲಾಗಿತ್ತು. ಹೀಗಾಗಿ ಮಳೆನೀರು ಅಂಗಡಿಯೊಳಗೆ ನುಗ್ಗಿರಲಿಲ್ಲ. ಆದರೆ ಶುಕ್ರವಾರ ರಾತ್ರಿ ಒಮ್ಮೆಲೆ ನೀರು ಬಂದ ಪರಿಣಾಮ ಮಣ್ಣು ಕೊಚ್ಚಿ ಹೋಗಿ ನೀರು ಪೂರ್ತಿ ಅಂಗಡಿಗಳಿಗೆ ನುಗ್ಗಿದೆ. ಇಲ್ಲಿನ ಅರುಣ್‌ ಜುವೆಲ್ಲರ್‌, ಜ್ಯೋತಿ ಜ್ಯುವೆಲ್ಲರ್, ಗುರುಪ್ರಸಾದ್‌ ಜ್ಯುವೆಲ್ಲರ್‌ ಹಾಗೂ ಜ್ಯೂಸ್‌ ಸೆಂಟರ್‌ಗಳಿಗೆ ನೀರು ನುಗ್ಗಿದೆ. ಜತೆಗೆ ಇನ್ನಿತರ ಅಂಗಡಿಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. 

ಅರ್ಧಂಬರ್ಧ ಕಾಮಗಾರಿ
ಭವಂತಿಸೀrÅಟ್‌ನಲ್ಲಿ ಜಾಗದ ವಿವಾದ ಮುಗಿಯದೇ ಕಾಮಗಾರಿ ಆರಂಭಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ಕಾಂಕ್ರೀಟ್‌ ಕಾಮಗಾರಿಯನ್ನು ಅರ್ಧಕ್ಕೆ ಬಿಡಲಾಗಿದೆ. ಜತೆಗೆ ಹಿಂದೆ ಇದ್ದ ಡಾಮಾರು ರಸ್ತೆಗಿಂತ ಪ್ರಸ್ತುತ ಕಾಂಕ್ರೀಟ್‌ ರಸ್ತೆ ಎತ್ತರವಾಗಿದೆ. ಹೀಗಾಗಿ ಅಂಗಡಿ ಮುಂಗಟ್ಟುಗಳು ತಗ್ಗಿನಲ್ಲಿದ್ದು, ರಸ್ತೆಯ ನೀರು ಒಳನುಗ್ಗುತ್ತಿದೆ. 

ಅಂಗಡಿ ಮಾಲಕರು ಹಾಗೂ ಪಾಲಿಕೆಯವರ ಪರಸ್ಪರ ಪ್ರತ್ಯಾರೋಪ ಮಾಡುತ್ತಿರುವ ಪರಿಣಾಮ ಪ್ರಸ್ತುತ ಚರಂಡಿ ಕಾಮಗಾರಿ ನಡೆಸಲು ಜಾಗವಿಲ್ಲ. ಹೀಗಾಗಿ ಮಳೆನೀರು ಹೋಗಲು ಜಾಗವಿಲ್ಲ. ಸ್ಥಳೀಯ ಅಂಗಡಿ ಮಾಲಕರು ಜಾಗ ಬಿಟ್ಟು ಕೊಡದ ಪರಿಣಾಮ ರಸ್ತೆಯೂ ಕಿರಿದಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. 

Advertisement

ಬಿಟ್ಟು ಕೊಡದೆ ಕೆಲಸ ಅಸಾಧ್ಯ
ಸ್ಥಳೀಯ ಅಂಗಡಿಯವರು ಜಾಗ ಬಿಟ್ಟುಕೊಡದ ಪರಿಣಾಮ ನೀರು ನುಗ್ಗುತ್ತಿದೆ. ಪ್ರಸ್ತುತ ಈ ರಸ್ತೆಯಲ್ಲಿ ಚರಂಡಿ ಮಾಡಲು ಜಾಗವಿಲ್ಲ. ಜತೆಗೆ ಅಂಗಡಿಯವರೇ ಮಣ್ಣನ್ನು ತಂದು ರಾಶಿ ಹಾಕಿದ್ದರು. ಜಾಗ ಬಿಟ್ಟು ಕೊಡದೆ ನಾವು ಏನು ಮಾಡುವಂತಿಲ್ಲ. ಈಗಾಗಲೇ ಪಾಲಿಕೆಯ ವತಿಯಿಂದ ಜಾಗ ಬಿಟ್ಟುಕೊಡಲು ತಿಳಿಸಲಾಗಿದೆ. 
– ಪೂರ್ಣಿಮಾ, ಸ್ಥಳೀಯ ಕಾರ್ಪೊರೇಟರ್‌

ನೀರು ಹೋಗಲು ವ್ಯವಸ್ಥೆ ಮಾಡಲಿ
ಜಾಗದ ವಿವಾದ ಇರುವಾಗಲೇ ಪಾಲಿಕೆಯವರು ಕಾಮಗಾರಿ ಆರಂಭಿಸಿದ ಪರಿಣಾಮ ಈ ರೀತಿ ಅಂಗಡಿಗಳಿಗೆ ನೀರು ನುಗ್ಗಿದೆ. ಪ್ರಸ್ತುತ ನಾವು ನೀರು ಬರದಂತೆ ನಾವು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಆದರೆ ಜೋರು ಮಳೆಬಂದರೆ ಮತ್ತೆ ನೀರು ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ಅರ್ಧದಲ್ಲಿ ಬಿಟ್ಟಿರುವ ಕಾಮಗಾರಿಯನ್ನು ಪೂರ್ತಿಗೊಳಿಸಿ ನೀರು ಹೋಗಲು ವ್ಯವಸ್ಥೆ ಮಾಡಬೇಕಿದೆ.
– ಅನಿಲ್‌ ಶೇಟ್‌, ಮಾಲಕರು, ಅರುಣ್‌ ಜ್ಯುವೆಲ್ಲರ್

Advertisement

Udayavani is now on Telegram. Click here to join our channel and stay updated with the latest news.

Next