Advertisement

ಚಿಕ್ಕಮಗಳೂರಲ್ಲಿ ಮಳೆ ಅಬ್ಬರ: ಅಪಾರ ಹಾನಿ

12:33 PM Jul 21, 2017 | |

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಮಳೆಯ ಅಬ್ಬರ ಗುರುವಾರ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಮಳೆಯಿಂದಾದ ಹಾನಿಯ ಪ್ರಮಾಣ ಹೆಚ್ಚಿದೆ.

Advertisement

ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗುರುವಾರ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬುಧವಾರ ರಾತ್ರಿ ಮಲೆನಾಡು ಪ್ರದೇಶಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿತ್ತು. ಆದರೆ ಗುರುವಾರ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಭಾರೀ ಗಾಳಿ ಬೀಸುತ್ತಿದೆ. 
ಮೂಡಿಗೆರೆ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ಕಳಸ ಸಮೀಪದ ಹೆಬ್ಟಾಳೆ ಸೇತುವೆ ಮುಳುಗಿ ಹೋಗಿರುವುದರಿಂದ ಕಳಸ-ಹೊರನಾಡು ಹಾಗೂ ಕಳಸ-ಕುದುರೆಮುಖದ ಸಂಪರ್ಕ ಕಡಿತಗೊಂಡಿದೆ.
ಹೇಮಾವತಿ ನದಿಯ ನೀರು ನುಗ್ಗಿದ ಪರಿಣಾಮ ನೂರಾರು ಎಕರೆ ಗದ್ದೆ ನೀರಲ್ಲಿ ಮುಳುಗಿ ಹೋಗಿದೆ. ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಸಮೀಪದ ಹಲಸೂರು ಗ್ರಾಮದ ಚೀಟಿಮಕ್ಕಿ ವಾಸಿ ಕಮಲ ಎಂಬುವವರ ಮನೆಯ ಮೇಲೆ ಮರಬಿದ್ದು,
ಮನೆಗೆ ಹಾನಿಯಾಗಿದೆ. ಅದೇ ರೀತಿ ಮಕಲಾಪುರ ಗ್ರಾಮ ಹಳ್ಳಿಬೈಲು ಕಮಲಾಕ್ಷಿ ಎಂಬುವವರ ಮನೆಯ ಮೇಲೂ ಮರ ಬಿದ್ದು ಸುಮಾರು 1.20 ಲಕ್ಷ ರೂ. ನಷ್ಟವುಂಟಾಗಿದೆ.

ಮೂಡಿಗೆರೆ ತಾಲೂಕು ಕಳಸ ಹೋಬಳಿ ಮಾವಿನಕೆರೆಯಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಭಾಗ್ಯ ಎಂಬುವವರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಳೂರು ಹೋಬಳಿ ಮೂಗೂರು ಗ್ರಾಮದ ಗೌರಮ್ಮ ಎಂಬುವವರ ಮನೆಯ ಮೇಲೆ ಹಾಗೂ ಚಂದ್ರಪ್ಪ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. 

ಕತ್ತಲಲ್ಲಿ ಗ್ರಾಮಗಳು: ಮಳೆಯೊಂದಿಗೆ ಬೀಸುತ್ತಿರುವ ಭಾರೀ ಗಾಳಿಯಿಂದಾಗಿ ಮಲೆನಾಡು ಪ್ರದೇಶಗಳಲ್ಲಿ ಸಾಕಷ್ಟು ಮರಗಳು ಧರೆಗುರುಳಿವೆ. ಇದರಿಂದ ನೂರಾರು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಶೃಂಗೇರಿ ಪಟ್ಟಣ ಸೇರಿದಂತೆ ಮಲೆನಾಡು ಪ್ರದೇಶದ ಹಲವು ಗ್ರಾಮಗಳಲ್ಲಿ ಬುಧವಾರ ರಾತ್ರಿಯಿಂದಲೇ ವಿದ್ಯುತ್‌ ಇಲ್ಲದೆ ಕತ್ತಲಲ್ಲಿ ಮುಳುಗಿವೆ.

Advertisement

Udayavani is now on Telegram. Click here to join our channel and stay updated with the latest news.

Next