Advertisement

ಲೋಕಾ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲಲು ಗುರಿ

01:45 AM Feb 22, 2019 | |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 25 ಸ್ಥಾನ ಗೆಲ್ಲುವಂತೆ ಗುರಿ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, 25 ಸ್ಥಾನ ಗೆದ್ದರೆ ಮರುದಿನ ರಾಜ್ಯದಲ್ಲಿ ಮೈತ್ರಿ ಸರ್ಕಾರವೇ ಇರುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ ಎನ್ನಲಾಗಿದೆ.

Advertisement

ಯಲಹಂಕದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ರಾಜ್ಯ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ಲೋಕ ಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಕೆಲ ನಿರ್ದೇಶನ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೂ ಆತಂಕ ಪಡುವ ಅಗತ್ಯವಿಲ್ಲ. ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದರೆ ಬಿಜೆಪಿಗೆ ಅನುಕೂಲವಾಗುವ ಅಂಶಗಳೇ ಹೆಚ್ಚಾಗಿವೆ. ಪಕ್ಷದ ಸಂಘಟನೆ ಉತ್ತಮವಾಗಿದ್ದು, ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದರು.

ಭಿಕ್ಷೆ ಬೇಡುವುದರಿಂದ, ಒತ್ತಡ ಹೇರುವುದರಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆ ಯಲ್ಲಿ 25 ಸ್ಥಾನ ಗೆದ್ದರೆ ಮರುದಿನ ರಾಜ್ಯದಲ್ಲಿ ಮೈತ್ರಿ ಸರ್ಕಾರವಿರುವುದಿಲ್ಲ. ಹಾಗಾಗಿ, ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಶ್ರಮಿಸಬೇಕು. ಅಭ್ಯರ್ಥಿ ಯಾರೇ ಇದ್ದರೂ ಪಕ್ಷದ ಗೆಲುವಿಗೆ ಶಾಸಕರು ಶ್ರಮ ವಹಿಸಬೇಕು. ಶಾಸಕರು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸದಿದ್ದರೆ ಒಂದೊಮ್ಮೆ ಆಗಸ್ಟ್‌ನಲ್ಲಿ ವಿಧಾನಸಭೆ ಚುನಾವಣೆ ಎದುರಾದರೆ ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಎನ್ನಲಾಗಿದೆ.

ವಂಶಾಧಾರಿತ ಪಕ್ಷವಲ್ಲ: ಬಿಜೆಪಿ ವಂಶಾಧಾರಿತ ಪಕ್ಷವಲ್ಲ.ರಾಜ್ಯದ ಪ್ರಮುಖ ನಾಯಕರ ತಂದೆಯ ಹೆಸರು ಎಷ್ಟು ಮಂದಿಗೆ ಗೊತ್ತು ಹೇಳಿ. ಪಕ್ಷದಲ್ಲಿ ಎಲ್ಲರೂ ವೈಯಕ್ತಿಕ ಶ್ರಮ, ಹೋರಾಟ, ಸಂಘಟನೆಯಿಂದ ಈ ಹಂತಕ್ಕೆ ಬಂದಿದ್ದಾರೆ. ಹಾಗಾಗಿ ಸಂಘಟನೆಗೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು. ಪ್ರತಿ ಚುನಾವಣೆಯಲ್ಲೂ ಬೂತ್‌ಮಟ್ಟದ ಕಾರ್ಯಕರ್ತರ ಪರಿಶ್ರಮದಿಂದ ಗೆಲ್ಲುತ್ತಿದ್ದೇವೆ. ಈ ಬಾರಿಯೂ ಅದೇ ಕಾರ್ಯ ಮುಂದುವರಿಸಬೇಕು. ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಯಡಿಯೂರಪ್ಪ, ಅನಂತ ಕುಮಾರ್‌ ಅವರ ವಿಶೇಷ ಶ್ರಮವಿದೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಪಕ್ಷಕ್ಕೆ ಉತ್ತಮ ಫ‌ಲಿತಾಂಶವೇ ಬಂದಿದೆ. ಹಾಗಾಗಿ ಈ ಬಾರಿಯೂ ಹೆಚ್ಚು ಸ್ಥಾನ ಗೆಲ್ಲಲು ಶ್ರಮಿಸಬೇಕೆಂದು ಕರೆ ನೀಡಿದರು ಎಂದು ರಾಜ್ಯ ನಾಯಕರೊಬ್ಬರು ತಿಳಿಸಿದರು

ರಾಹುಲ್‌ ಬಾಬಾಗೆ ಗಣಿತ ಗೊತ್ತಿಲ್ಲ: ಲೇವಡಿ

Advertisement

ಬೆಂಗಳೂರು: ಕೇಂದ್ರ ಸರ್ಕಾರವು ಬಡ, ಮಧ್ಯಮ ರೈತರಿಗೆ ವಾರ್ಷಿಕ 6000 ರೂ.ನೆರವು ನೀಡುವ ಯೋಜನೆ ಬಗ್ಗೆ ರಾಹುಲ್‌ ಗಾಂಧಿ ಅಪಹಾಸ್ಯ ಮಾಡಿದ್ದಾರೆ. ಕರ್ನಾಟಕದಲ್ಲಿ ರೈತರಿಗೆ ನೀಡಿರುವ ಭರವಸೆಯಂತೆ 48,000 ಕೋಟಿ ರೂ.ಸಾಲ ಮನ್ನಾ ಮಾಡಿದ ನಂತರ ರಾಹುಲ್‌ ಗಾಂಧಿ ಮಾತನಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸವಾಲೆಸೆದರು.

ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಯುಪಿಎ ಸರ್ಕಾರದ 10 ವರ್ಷದ ಆಡಳಿತದಲ್ಲಿ ದೇಶದ 3 ಕೋಟಿ ರೈತರಿಗೆ 50,000 ಕೋಟಿ ರೂ.ಸಾಲ ಮನ್ನಾ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದ ಒಂದು ವರ್ಷಕ್ಕೆ 13ರಿಂದ 15 ಕೋಟಿ ರೈತರಿಗೆ 75,000 ಕೋಟಿ ರೂ.ನೆರವು ಸಿಗಲಿದೆ. 10 ವರ್ಷಗಳಲ್ಲಿ 7.5 ಲಕ್ಷ ಕೋಟಿ ರೂ.ರೈತರಿಗೆ ನೇರವಾಗಿ ತಲುಪುತ್ತದೆ. ಆದರೆ, ರಾಹುಲ್‌ಬಾಬಾಗೆ ಗಣಿತ ಗೊತ್ತಿಲ್ಲ. ಅದರಲ್ಲಿ ಅವರ ತಪ್ಪಿಲ್ಲ. ಏಕೆಂದರೆ ಅವರಿಗೆ ಆಲೂಗಡ್ಡೆ ಭೂಮಿಯ ಒಳಗೆ ಬೆಳೆಯುತ್ತದೆಯೋ, ಭೂಮಿಯ ಮೇಲಿರುತ್ತದೆಯೋ ಅಥವಾ ಫ್ಯಾಕ್ಟರಿಯಲ್ಲಿರುತ್ತದೆಯೋಎಂಬುದು ಗೊತ್ತಿಲ್ಲ. ಉತ್ತರ ಪ್ರದೇಶದಲ್ಲಿ ಆಲೂಗಡ್ಡೆ ಫ್ಯಾಕ್ಟರಿ ಮಾಡುವುದಾಗಿ ಘೋಷಿಸಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ದೇಶದ ಸುರಕ್ಷತೆ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. ಮುಂದಿನ ಬಾರಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಕರ್ನಾಟಕ ಸೇರಿ ದೇಶಾದ್ಯಂತ ಅಕ್ರಮವಾಗಿ ನೆಲೆಸಿರುವ ನುಸುಳುಕೋರರನ್ನು ಹುಡುಕಿ ಹುಡುಕಿ ಹೊರಗಟ್ಟಲಾಗುವುದು. ಎಚ್‌.ಡಿ.ದೇವೇಗೌಡರು ಮಮತಾ ಬ್ಯಾನರ್ಜಿ ಅವರು ಒಪ್ಪಲಿ, ಬಿಡಲಿ. ರಾಹುಲ್‌ ಗಾಂಧಿ, ಚಂದ್ರಬಾಬು ನಾಯ್ಡು ಏನೇ ಹೇಳಲಿ ಮುಂದಿನ ಬಾರಿ ಮೋದಿ ಸರ್ಕಾರ ಬಂದ ಬಳಿಕ ಮೂಲೆ ಮೂಲೆಯಲ್ಲಿರುವ ಅಕ್ರಮ ನುಸುಳು ಕೋರರನ್ನು ಹುಡುಕಿ ಹೊರಗಟ್ಟಲಾಗುವುದು ಎಂದು ವಾಗ್ಧಾನ ನೀಡಿದರು.

ಪುಲ್ವಾಮದಲ್ಲಿ ಇತ್ತೀಚೆಗೆ ಹುತಾತ್ಮ ರಾದ ಭಾರತೀಯ ಯೋಧರಿಗೆ ಬಿಜೆಪಿ ಶ್ರದ್ದಾಂಜಲಿ ಸಲ್ಲಿಸುತ್ತದೆ ಎನ್ನುತ್ತಲೇ ಅಮಿತ್‌ ಶಾ ಭಾಷಣ ಆರಂಭಿಸಿದರು. ಆವತಿ ಗ್ರಾಮದ ತಿಮ್ಮರಾಯಸ್ವಾಮಿ ಪಾದಕ್ಕೆ ನಮಿಸುತ್ತೇನೆ. ನಾಡಪ್ರಭು ಕೆಂಪೇಗೌಡರು ಜನಿಸಿದ ಗ್ರಾಮಕ್ಕೆ ಆಗಮಿಸಿದ್ದು, ಅವರಿಗೂ ನಮಿಸುತ್ತೇನೆ ಎಂದು ಹೇಳಿದರು.

ಹಿನ್ನಡೆ ಬಗ್ಗೆ ಪ್ರಸ್ತಾಪ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನ ಬೆಂಬಲಿಸಿದ್ದರು. ಯಡಿಯೂರಪ್ಪನೇತೃತ್ವದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನವನ್ನು ಗೆದ್ದರೂ ಅಪವಿತ್ರ, ಸ್ವಾರ್ಥದ ಘಟಬಂಧನದಿಂದ ಕಡಿಮೆ ಸ್ಥಾನ ಪಡೆದವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 2014ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಶ್ರಮ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಶಾ ಕರೆ ನೀಡಿದರು.

ಮನೆ ಸೇರುವ ಮಾತಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಶುಕ್ರವಾರದಿಂದ ಮೋದಿ ವಿಜಯ ಸಂಕಲ್ಪ ಯಾತ್ರೆ ಆರಂಭಿಸುತ್ತಿದ್ದು, ಚುನಾವಣೆ ಮುಗಿಯುವವರೆಗೆ ಮನೆ ಸೇರುವ ಮಾತಿಲ್ಲ. ಪ್ರಧಾನಿ ಮೋದಿ ಪರ ಶೇ.84ರಷ್ಟು ಮಂದಿಯಿದ್ದಾರೆ ಎಂಬುದು ಸಮೀಕ್ಷೆಯೊಂದರಿಂದ ಗೊತ್ತಾಗಿದೆ. ಇಡೀ ದೇಶವೇ ಪ್ರಧಾನಿ ಯವರೊಂದಿಗೆ ಇರುವಾಗ ಇನ್ಯಾವ ಅನುಮಾನ? ಪ್ರಧಾನಿಯವರು ಒಂದು ದಿನವೂ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಬೈಕ್‌ ರ್ಯಾಲಿಯ ನಂತರ ರಾಜಕೀಯ ವಿರೋಧಿಗಳ ಮೈ ನಡುಗುತ್ತದೆ. ಅವರ ಭವಿಷ್ಯದ ಬಗ್ಗೆ ಯೋಚಿಸಬೇಕಾದ ದುಸ್ಥಿತಿಗೆ ತಲುಪಲಿದ್ದಾರೆ ಎಂದು ಹೇಳಿದರು.

ಗೆಲುವಿಗೆ ಶಾ ಸೂತ್ರ
ಮಹಾಘಟಬಂಧನ್‌ ಸರ್ಕಾರ ಬಂದರೆ ಆಡಳಿತ ಹೇಗಿರಲಿದೆ, ಮೋದಿ ಹಾಗೂ ಮಹಾ ಘಟಬಂಧನ್‌ನೊಂದಿಗಿನ ಹೋಲಿಕೆ ಹಾಗೂ ಮೋದಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಜನರಿಗೆ ತಿಳಿಸಿ. ಇದು ಬಿಜೆಪಿ ಕಾರ್ಯಕರ್ತರಿಗೆ ಅಮಿತ್‌ ಶಾ ಅವರು ಲೋಕಸಭಾ ಚುನಾವಣೆ ಗೆಲುವಿಗೆ ನೀಡಿರುವ ಮೂರು ಅಂಶಗಳ ಸೂತ್ರ. ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಚುನಾವಣೆ ಗೆಲುವಿಗೆ ಕಾರ್ಯಕರ್ತರು ಅನುಸರಿಸ ಬೇಕಾದ 3 ಅಂಶಗಳ ಬಗ್ಗೆ ಅಮಿತ್‌ ಶಾ, 3 ಅಂಶದ ಸೂತ್ರಗಳನ್ನು ತಿಳಿಸಿದ್ದಾರೆ.

ಮೊದಲಿಗೆ ಮಹಾಘಟಬಂಧನ್‌ ಸರ್ಕಾರ ರಚನೆಯಾದರೆ ಯಾವ ರೀತಿಯ ಆಡಳಿತ ನೀಡಬಹುದೆಂಬ ಕಲ್ಪನೆಯನ್ನು ಜನರ ಮುಂದಿಡಬೇಕು. ಪ್ರಧಾನಿ ಮೋದಿ, ಮಹಾಘಟ ಬಂಧನ್‌ಗೆ ಹೋಲಿಕೆ ಮಾಡಿ ಜನರಿಗೆತಿಳಿಸು ವುದು. ಮೋದಿ ಸರ್ಕಾರ ಸ್ಪಷ್ಟ ಬಹುಮ ತದೊಂದಿಗೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬು ದನ್ನು ಮನವ ರಿಕೆ ಮಾಡಿಕೊಡಬೇಕೆಂಬ ಅಂಶಗಳನ್ನು ತಿಳಿಸಿದ್ದಾರೆ ಎಂದು ಹೇಳಿದರು.

ಕಾರ್ಯಕರ್ತರು ಚುನಾವಣೆ ಕಾರ್ಯಕ್ಕೆ ಪೂರ್ಣ ಸಮಯ ವಿನಿ ಯೋಗಿಸಬೇಕು. ಕನಿಷ್ಠ 40 ಲಕ್ಷ ಧ್ವಜ,
50 ಲಕ್ಷ ದೀಪ ಬೆಳಗುವುದು, ಸಂಘಟನಾ ಸಂವಾದ ದಂತಹ ಐದು ಕಾರ್ಯ ಕ್ರಮಗಳನ್ನು ಮಾ.2ರೊಳಗೆ ಪೂರ್ಣಗೊ ಳಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next