Advertisement

ಶರ್ಯಾತಿ

03:45 AM Mar 23, 2017 | Harsha Rao |

ಶರ್ಯಾತಿ ಎಂಬುವವನು ಮಹಾಜ್ಞಾನಿಯಾದ ರಾಜ. ಸುಕನ್ಯೆ ಅವನ ಮಗಳು ಬಹಳ ಸುಂದರಿ. ಒಂದು ದಿನ ರಾಜನೂ, ಸುಕನ್ಯೆಯೂ ಪರಿವಾರದವರೂ ಚ್ಯವನ ಎಂಬ ಮಹರ್ಷಿಯ ಆಶ್ರಮಕ್ಕೆ ಹೋದರು. ಅಲ್ಲಿ ಸುಕನ್ಯೆಯೂ ಅವರ ಸಖೀಯರೂ ಒಡಾಡುತ್ತಿರುವಾಗ ಅವಳು ಒಂದು ದೊಡ್ಡ ಹುತ್ತವನ್ನು ಕಂಡಳು. ಅದರ ಹತ್ತಿರ ಹೋದಾಗ ವಜ್ರಗಳಂತೆ ಹೊಳೆಯುತ್ತಿದ್ದ ಎರಡು ವಸ್ತುಗಳನ್ನು ಕಂಡಳು. ಅವಳು ಕುತೂಹಲದಿಂದ ಒಂದು ಮುಳ್ಳನ್ನು ತೆಗೆದುಕೊಂಡು ಅವುಗಳಿಗೆ ಚುಚ್ಚಿದಳು. ತಕ್ಷಣವೇ ರಕ್ತ ಹರಿಯಲು ಪ್ರಾರಂಭವಾಯಿತು. ಅವಳು ಅಲ್ಲಿಂದ ಓಡಿಬಿಟ್ಟಳು.

Advertisement

ರಾಜನಿಗೂ ರಾಜನ ಪರಿವಾರದವರಿಗೂ ತೀವ್ರ ಅಸ್ವಸ್ಥತೆಯಾಯಿತು. ಯಾರೋ ಮಹರ್ಷಿಗೆ ಅಪಚಾರ ಮಾಡಿರಬೇಕು ಎಂದು ರಾಜನಿಗೆ ಆತಂಕವಾಯಿತು. ಎಲ್ಲರನ್ನೂ ಕರೆದು ಕೇಳಿದ. ಕಡೆಗೆ ಸುಕನ್ಯೆಯು ನಡೆದ ಸಂಗತಿಯನ್ನು ಹೇಳಿದಳು. ರಾಜನಿಗೆ ಆಘಾತವಾಯಿತು. ಹುತ್ತದಲ್ಲಿ ಚ್ಯವನ ಮಹರ್ಷಿಗಳು  ತಪಸ್ಸು ಮಾಡುತ್ತಿದ್ದರು. ವಜ್ರಗಳಂತೆ ಹೊಳೆಯುತ್ತಿದ್ದುದು ಅವರ ಕಣ್ಣುಗಳು. ಈಗ ಅವರು ಕುರುಡರಾದರು. ರಾಜನು ಅವರ ಕಾಲುಗಳನ್ನು ಹಿಡಿದು ತನ್ನ ಮಗಳನ್ನು ಕ್ಷಮಿಸುವಂತೆ ಬೇಡಿದ. ಅವಳೇ ಅವರನ್ನು ಮದುವೆಯಾಗಿ ಅವರನ್ನು ನೋಡಿಕೊಳ್ಳುವಳೆಂದು ಹೇಳಿದ. ಸುಕನ್ಯೆಯು ಮುದುಕರೂ, ಕುರುಡರೂ ಆದ ಚ್ಯವನರ ಪತ್ನಿಯಾದಳು.

ಸುಕನ್ಯೆಯು ಬೇಸರಪಡಲಿಲ್ಲ, ದುಃಖಪಡಲಿಲ್ಲ. ಚ್ಯವನ ಮಹರ್ಷಿಗಳಿಗೆ ಸಂತೋಷವಾಗುವಂತೆ ಅವರನ್ನು ನೋಡಿಕೊಳ್ಳುತ್ತಿದ್ದಳು. ಒಂದು ದಿನ ಅಶ್ವಿ‌ನಿ ದೇವತೆಗಳು ಅವರ ಮನೆಗೆ ಬಂದರು. ಅವರು ದೇವಲೋಕದ ವೈದ್ಯರು. ಗಂಡ ಹೆಂಡತಿಯರು ಅವರನ್ನು ಸತ್ಕರಿಸಿದರು. ಚ್ಯವನ ಮಹರ್ಷಿಗಳು ಅವರಿಗೆ “ಮುದುಕನಾದ ನನ್ನನ್ನು ಯುವಕನನ್ನಾಗಿ ಮಾಡಿ. ಇನ್ನು ಮುಂದೆ ಯಜ್ಞಗಳಲ್ಲಿ ನಿಮಗೂ ಸೋಮದಲ್ಲಿ ಭಾಗ ದೊರೆಯುವಂತೆ ಮಾಡುತ್ತೇನೆ’ ಎಂದರು. ಅಶ್ವಿ‌ನಿ ದೇವತೆಗಳಿಗೆ ಸಂತೋಷವಾಯಿತು. ಅವರು ಋಷಿಗಳನ್ನು ಸುಂದರ ಯುವಕರನ್ನಾಗಿ ಮಾಡಿದರು. ದೇವತೆಗಳೂ ಸುಂದರ ಯುವಕರಾದರು.

ಸುಕನ್ಯೆಗೆ ಮೂವರಲ್ಲಿ ತನ್ನ ಪತಿ ಯಾರೆಂದು ತಿಳಿಯಲಿಲ್ಲ. ತನ್ನ ಗಂಡನನ್ನು ತೋರಿಸುವಂತೆ ದೇವತೆಗಳನ್ನು ಬೇಡಿದಳು. ಅವರು ತಮ್ಮ ನಿಜ ಸ್ವರೂಪಗಳನ್ನು ಪಡೆದು, ದಂಪತಿಗಲನ್ನು ಬೀಲ್ಕೊಂಡು ಹೊರಟುಹೋದರು.
ಚ್ಯವನ ಋಷಿಗಳೂ ಸುಕನ್ಯೆಯೂ ಸಂತೋಷವಾಗಿ ಸಂಸಾರ ನಡೆಸುತ್ತಿದ್ದರು.

ಸುಕನ್ಯೆಯ ತಂದೆ ಶರ್ಯಾತಿ ಮಹಾರಾಜನು ತಾನು ನಡೆಸಲಿದ್ದ ಒಂದು ಯಾಗಕ್ಕೆ ಮಗಳನ್ನೂ, ಅಳಿಯನನ್ನೂ ಆಹ್ವಾನಿಸಲು ಅವರ ಆಶ್ರಮಕ್ಕೆ ಬಂದನು. ಅಲ್ಲಿ ತನ್ನ ಮಗಳು ಒಬ್ಬ ಸುಂದರ ಯುವಕನೊಡನೆ ಇರುವುದನ್ನು ಕಂಡು ಕೋಪದಿಂದ ಅವಳನ್ನು ಬಯ್ದನು. ಅವಳು ನಡೆದ ಸಂಗತಿಯನ್ನು ತಿಳಿಸಿದಾಗ ಅವನಿಗೂ ಬಹು ಸಂತೋಷವಾಯಿತು. 
ಶರ್ಯಾತಿಯ ಯಾಗಕ್ಕೆ ಚ್ಯವನರೇ ಪುರೋಹಿತರಾಗಿ ನಡೆಸಿಕೊಟ್ಟರು. ಕಡೆಯಲ್ಲಿ ಸೋಮವನ್ನು ಅರ್ಪಿಸುವಾಗ ಅಶ್ವಿ‌ನೀ ದೇವತೆಗಳಿಗೂ ಅರ್ಪಿಸಿದರು. ಇದರಿಂದ ಕೋಪಗೊಂಡ ಇಂದ್ರನು ಚ್ಯವನರನ್ನು ಕೊಂದೇಬಿಡುವೆನೆಂದು ವಜ್ರಾಯುಧವನ್ನು ಎತ್ತಿಕೊಳ್ಳಲು ಹೋದನು. ಆದರೆ ಮಹರ್ಷಿಗಳ ಪ್ರಭಾವದಿಂದ ಅವನು ಕೈಯನ್ನು ಅಲ್ಲಾಡಿಸಲು ಸಾಧ್ಯವಾಗಲಿಲ್ಲ. ಆಗ ದೋವತೆಗಳು, ಅಂದಿನಿಂದ ಶ್ವಿ‌ನಿ ದೇವತೆಗಳಿಗೂ ಸೋಮಭಾಗವನ್ನು ಕೊಡಬಹುದೆಂದು ಒಪ್ಪಿದರು.

Advertisement

ಚ್ಯವನರೂ ಸುಕನ್ಯೆಯೂ ಬಹುಕಾಲ ಸಂತೋಷವಾಗಿದ್ದರು.

(ಪ್ರೊ. ಎಲ್‌. ಎಸ್‌. ಶೇಷಗಿರಿರಾವ್‌ ಅವರ “ಕಿರಿಯರ ಭಾಗವತ’ ಪುಸ್ತಕದಿಂದ)

Advertisement

Udayavani is now on Telegram. Click here to join our channel and stay updated with the latest news.

Next