Advertisement

ಸಭೆಯಲ್ಲಿ ಜನರಿಂದ ಸಮಸ್ಯೆಗಳ ಸುರಿಮಳೆ

12:06 PM Aug 02, 2018 | Team Udayavani |

ಹರಿಹರ: ರಸ್ತೆಗಳ ತುಂಬಾ ಗುಂಡಿಗಳಾಗಿ ಜನ-ವಾಹನ ಸಂಚರಿಸುವಂತಿಲ್ಲ. ಚರಂಡಿ ನೀರು ಮುಂದೆ ಸಾಗುತ್ತಿಲ್ಲ. ಹಲವು ಪ್ರದೇಶಗಳಿಗೆ ನೀರು ಪೂರೈಸುತ್ತಿಲ್ಲ. ಖಾತಾ ಉತಾರಕ್ಕೆ ವರ್ಷಗಟ್ಟಲೆ ಅಲೆದಾಡಬೇಕು. ಲಂಚ ಇಲ್ಲದೇ
ಯಾವುದೇ ಕೆಲಸವಾಗೊಲ್ಲ, ಹಂದಿ-ಬಿಡಾಡಿ ದನ ತಡೆಯುವವರಿಲ್ಲ. ಮನೆ ನಿರ್ಮಾಣಕ್ಕೆ ಅನುಮತಿ ಸಿಗುತ್ತಿಲ್ಲ…..

Advertisement

ನಗರಸಭೆ ಆವರಣದಲ್ಲಿ ಶಾಸಕ ಎಸ್‌. ರಾಮಪ್ಪ ನಡೆಸಿದ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರು ನಗರಸಭೆ ಕಾರ್ಯವೈಖರಿ ಕುರಿತು ಸಮಸ್ಯೆಗಳ ಸುರಿಮಳೆಗೈದರು.

17ನೇ ವಾರ್ಡ್‌ನ ಈರಣ್ಣ ಮೆಹರಾಡೆ, ನದಿಯೆ ಇಲ್ಲದ ದಾವಣಗೆರೆ, ರಾಣೆಬೆನ್ನೂರಲ್ಲಿ ನೀರಿನ ಸಮಸ್ಯೆಯಿಲ್ಲ. ಪಕ್ಕದಲ್ಲೆ ನದಿ ಹರಿದಿದ್ದರೂ ನಾವು ನೀರಿಗೆ ಪರದಾಡಬೇಕು. ಹೊಳೆ ನೀರನ್ನು ಸರಿಯಾಗಿ ಶುದ್ಧೀಕರಿಸುತ್ತಿಲ್ಲ, ಮಳೆಗಾಲದಲ್ಲಿ ಕೆಸರು ನೀರನ್ನೇ ಕುಡಿಯಬೇಕಾಗಿದೆ ಎಂದಾಗ ಎಇ ಮಾಲತೇಶ್‌, ನದಿಗೆ ಕೆಸರು ಮಿಶ್ರಿತ ಮಳೆ ನೀರು ಸೇರುತ್ತಿದ್ದು, ನಿಗದಿಯಂತೆ ನೀರು ಶುದ್ಧೀಕರಿಸುತ್ತಿದ್ದೇವೆ. ಅಧಿಕ ರಾಸಾಯನಿಕ ಬಳಸುವುದು ಜೀವಕ್ಕೆ ಅಪಾಯವಾದ್ದರಿಂದ ನೀರನ್ನು ಕಾಯಿಸಿ, ಆರಿಸಿ ಕುಡಿಯಲು ಸೂಚಿಸಲಾಗಿದೆ ಎಂದರು.

ಕೇಶವ ನಗರದ ಅಹಮದ್‌, ಹಂದಿಗಳ ಹಾವಳಿ ಮಿತಿ ಮೀರಿದೆ, ಮಕ್ಕಳು-ಮಹಿಳೆಯರು ಮನೆಯಿಂದ ಹೊರಗೆ ಬರಲಾಗುತ್ತಿಲ್ಲ, ಸ್ವತ್ಛತೆಯಿಲ್ಲದೆ ಸಾಂಕ್ರಮಿಕ ರೋಗಗಳು ಹರಡುತ್ತಿವೆ. ಹಂದಿ ಸಾಕಾಣೆದಾರರೊಂದಿಗೆ ಅಧಿಕಾರಿಗಳು
ಷಾಮೀಲಾಗಿದ್ದಾರೆ ಎಂದಾಗ ಶಾಸಕರು, ಕೂಡಲೆ ಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿ ವರಾಹ ಶಾಲೆ ತೆರೆಯುವುದಾಗಿ ಡಿಸಿ ಹಿಂದೆಯೇ ಹೇಳಿದ್ದು, ಈ ಕುರಿತು ಚರ್ಚಿಸುತ್ತೇನೆ ಎಂದರು.

ತೆಗ್ಗಿನ ಕೇರಿಯ ಕಿರಣ್‌ ಭೂತೆ, 2014 ರಲ್ಲಿ ಆಶ್ರಯ ಮನೆ ನೀಡುವುದಾಗಿ ಹೇಳಿದ್ದರಿಂದ ಸೂರಿಲ್ಲದವರು, ತಲಾ 500-1000 ರೂ. ವ್ಯಯಿಸಿ ದಾಖಲೆ ಸಲ್ಲಿಸಿದ್ದರು. ಮನೆಯಂತೂ ಸಿಗಲಿಲ್ಲ, ಅರ್ಜಿದಾರರು ಪಾವತಿಸಿದ ತಲಾ 50 ರೂ. ಶುಲ್ಕದ ಹಣ ಏನಾಯ್ತು ಹೇಳಿ ಎಂದು ಪಟ್ಟು ಹಿಡಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕರು, ಅರ್ಜಿ ಶುಲ್ಕವಾಗಿ ಅಂದಾಜು 11 ಲಕ್ಷ ರೂ. ಸಂಗ್ರಹವಾಗಿರುವ ಮಾಹಿತಿಯಿದ್ದು, ಈ ಹಣ ದುರ್ಬಳಕೆಯಾಗಿದ್ದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಪೌರಾಯುಕ್ತೆಗೆ ಸೂಚಿಸಿದರು.

Advertisement

ಜೀಜಾಮಾತಾ ಕಾಲೋನಿ ನಿವಾಸಿ ಅಜಿತ್‌ ಸಾವಂತ್‌, ಮನೆ ನಿರ್ಮಾಣ, ದುರಸ್ತಿಗೆ ಪರವಾನಿಗೆ ಸಿಗದೆ ಜನರು ಶಿಥಿಲಗೊಂಡ ಮನೆಗಳಲ್ಲಿಯೇ ವಾಸಿಸಬೇಕಾದೆ. ಮನೆ ಕುಸಿದು ಅನಾಹುತವಾದರೆ ಯಾರು ಹೊಣೆ, ದಶಕಗಳಿಂದ ನಗರಸಭೆಗೆ ಕಂದಾಯ ಪಾವತಿಸುತ್ತಿದ್ದರೂ ಲೇಔಟ್‌ ಪ್ಲಾನ್‌ ಇಲ್ಲವೆಂದು ಅನುಮತಿ ನಿರಾಕರಿಸಿದರೆ ಜನರ ಪಾಡೇನು ಎಂದು ಪ್ರಶ್ನಿಸಿದರು. 

ಪೌರಾಯುಕ್ತೆ ಲಕ್ಷ್ಮಿ ಪ್ರತಿಕ್ರಿಯಿಸಿ, ನಗರದ 2800 ಮನೆಗಳು ಲೇಔಟ್‌ ಇಲ್ಲದ ಸ್ಥಳದಲ್ಲಿವೆ. ಇಂತಹ ಅನಧಿಕೃತ ಮನೆಗಳ ಸಕ್ರಮಕ್ಕೆ ಹಿಂದೆಯೇ ಅವಕಾಶ ನೀಡಿದ್ದು, ಸಕಾಲದಲ್ಲಿ ಸಕ್ರಮ ಮಾಡಿಕೊಳ್ಳದಿರುವುದು ಸಮಸ್ಯೆಗೆ ಕಾರಣ. ಬಿಲ್ಡಿಂಗ್‌ ಲೈಸೆನ್ಸ್‌ಗೆ ಸರ್ಕಾರ ಲೇಔಟ್‌ ಪ್ಲಾನ್‌ ಕಡ್ಡಾಯಗೊಳಿಸಿದೆ ಎಂದರು.

ಎಕೆ ಕಾಲೋನಿಯ ನಿರಂಜನ ಮೂರ್ತಿ, ಶೋಷಣೆ ತಪ್ಪಿಸಲೆಂದು ರೂಪಿಸಿರುವ ಸಕಾಲ ಯೋಜನೆ ಹೆಸರಿಗಷ್ಟೆ ಇದ್ದು, ಸಕಾಲಕ್ಕೆ ಯಾವುದೂ ಆಗುತ್ತಿಲ್ಲ ಎಂದು ದೂರಿದರು. ಖಾತಾ ಎಕ್ಸಟ್ರಾಕ್ಟ್ಗೆ ಅರ್ಜಿ ಸಲ್ಲಿಸಿ ಅಲೆದಾಡುತ್ತಿರುವುದಾಗಿ
ತಿಳಿಸಿದ ಸೋಮಣ್ಣ ಹಾಗೂ ಮಾರುತಿ ಎಂಬುವರಿಗೆ ಸಭೆ ನಡೆಯುವಾಗಲೇ ದಾಖಲೆ ನೀಡಲಾಯಿತು.

ನಗರಸಭಾಧ್ಯಕ್ಷೆ ಸುಜಾತಾ, ಸದಸ್ಯರಾದ ಶಂಕರ್‌ ಖಟಾವಕರ್‌, ನಾಗರಾಜ್‌ ಮೆಹರಾಡೆ, ಕೆ.ಮರಿದೇವ, ಬಿ.ರೇವಣಸಿದ್ದಪ್ಪ, ಸಿಗ್ಬತ್‌ಉಲ್ಲಾ, ಸೈಯದ್‌ ಎಜಾಜ್‌, ಎಸ್‌.ಎಂ.ವಸಂತ್‌, ಪ್ರತಿಭಾ ಕುಲಕರ್ಣಿ, ನಗಿನಾ ಸುಬಾನ್‌ ಸಾಬ್‌, ಬಿ.ಕೆ. ಸೈಯದ್‌, ಮುಖಂಡರಾದ ರೇವಣಸಿದ್ದಪ್ಪ, ನಗರಸಭೆ ಎಇಇ ಬಿ.ಎಸ್‌.ಪಾಟೀಲ್‌ ಮತ್ತಿತರರಿದ್ದರು.

ಶೌಚಕ್ಕೆ ತೆರಳಲು ಕತ್ತಲಾಗೋವರೆಗೂ ಕಾಯಬೇಕು-ಕಣ್ಣೀರಿಟ್ಟ ಮಹಿಳೆ ಯುಜಿಡಿ ಕಾಮಗಾರಿಯಿಂದ ನಮ್ಮ ಕಾಲೋನಿ ರಸ್ತೆ-ಚರಂಡಿಗಳೆಲ್ಲಾ ಹಾಳಾಗಿವೆ. ಚರಂಡಿ-ಶೌಚದ ನೀರು ಮುಂದೆ ಸಾಗದೆ ಗಬ್ಬು ವಾಸನೆ ಬೀರುತ್ತಿದ್ದು, ನಿತ್ಯಕರ್ಮಗಳಿಗೆ ಬಯಲಿಗೆ ತೆರಳುವ ಅನಿವಾರ್ಯತೆಯಿದೆ.

ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಶೌಚಕ್ಕೆ ಹೋಗಲು ಕತ್ತಲಾಗುವುದನ್ನು ಕಾಯಬೇಕಾಗಿದೆ ಎಂದು ಗುತ್ತೂರು ಕಾಲೋನಿಯ ಗೀತಾ ದೇವರಮನೆ ಶಾಸಕರೆದುರು ಕಣ್ಣೀರು ಸುರಿಸಿದರು. ಹೆಲ್ತ್‌ ಇನ್ಸ್‌ಪೆಕ್ಟರ್‌ ಗಳು ಕೆಲಸ ಮಾಡುತ್ತಾರೋ ಇಲ್ಲವೋ ಎಂದು ತರಾಟೆಗೆ ತೆಗೆದುಕೊಂಡ ರಾಮಪ್ಪ, ಕೂಡಲೆ ಸ್ಥಳಕ್ಕೆ ತೆರಳಿ ಸಮಸ್ಯೆ ನಿವಾರಿಸುವಂತೆ ಪೌರಾಯಕ್ತರಿಗೆ ತಾಕೀತು ಮಾಡಿದರು.

2-3 ತಿಂಗಳಿಗೊಮ್ಮೆ ಸಭೆ
ಸಭೆಯಲ್ಲಿ ಮಾತನಾಡಿದ ಶಾಸಕ ಎಸ್‌.ರಾಮಪ್ಪ, ನಗರಸಭೆ ಕಾರ್ಯ ವೈಖರಿಯಿಂದ ಜನರು ರೋಸಿ ಹೋಗಿರುವುದಕ್ಕೆ ಸಭೆಯಲ್ಲಿ ವ್ಯಕ್ತವಾದ ಜನರು ಆಕ್ರೋಶವೇ ಸಾಕ್ಷಿ. ಯಾರೇ ಅಧಿಕಾರಿಗಳು ಜನರನ್ನು ಅಲೆದಾಡಿಸುವುದು, ಹಣ ಕೇಳುವುದು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುಡು. 2-3 ತಿಂಗಳಿಗೊಮ್ಮೆ ನಿಯಮಿತವಾಗಿ ಕುಂದು ಕೊರತೆ ಸಭೆ ನಡೆಸಲಾಗುವುದು. ಅಲ್ಲದೆ ಇತರೆ ಇಲಾಖೆಗಳಲ್ಲೂ ಇಂತಹ ಸಭೆ ನಡೆಸಲು ಯೋಜಿಸಲಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next