Advertisement

ಹಸಿ ಕಸ ನಿರ್ವಹಣೆಗೆ ಬಗೆಹರಿಯದ ಜಾಗದ ಸಮಸ್ಯೆ

05:24 PM Aug 01, 2018 | |

ಕುಮಟಾ: ರಥಬೀದಿಯ ರಾರಾ ಅಣ್ಣಾ ಪೈ ಸಭಾಭವನದಲ್ಲಿ ಮಂಗಳವಾರ ಪುರಸಭೆಯ ವಿಶೇಷ ಸಾಮಾನ್ಯ ಸಭೆ ಪೌರಾಧ್ಯಕ್ಷ ಮಧುಸೂದನ ಶೇಟ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಮುಖವಾಗಿ ಕಿತ್ತೂರ ಚೆನ್ನಮ್ಮ ಉದ್ಯಾನವನದಲ್ಲಿ ಹಸಿಕಸ ವಿಲೇವಾರಿ ವಿಚಾರಕ್ಕೆ ಸಾಕಷ್ಟು ಚರ್ಚೆ ನಡೆಯಿತು. ಪರಿಸ್ಥಿತಿಯನ್ನು ತುರ್ತಾಗಿ ನಿರ್ವಹಿಸಲು ಹಲವು ಬಗೆಯ ಸಲಹೆ ಸೂಚನೆಗಳು ಕೇಳಿಬಂತು.

Advertisement

ಪಟ್ಟಣದ ನಾಗರಿಕರಿಂದ ಹಸಿಕಸವನ್ನು ಪುರಸಭೆ ಕಸದ ವಾಹನದವರು ಸ್ವೀಕರಿಸದೇ ಇರಲು ಸಾಧ್ಯವಿಲ್ಲ. ಹಸಿಕಸವನ್ನು ಒಣಕಸವಾಗಿ ಪರಿವರ್ತಿಸುವ ತಾಂತ್ರಿಕತೆ ಈಗಾಗಲೇ ಶಿವಮೊಗ್ಗದ ವಾರ್ಡೊಂದರಲ್ಲಿ ಸರಕಾರ ಪ್ರಾಯೋಗಿಕವಾಗಿ ಅಳವಡಿಸಿದ್ದು ಸಾಧ್ಯತೆಗಳ ವರದಿಯ ನಂತರವೇ ರಾಜ್ಯಾದ್ಯಂತ ಅಳವಡಿಸಬಹುದು. ಅಲ್ಲಿಯವರೆಗೆ ಸಮಸ್ಯೆಗೆ ತಾತ್ಕಾಲಿಕ ಉಪಶಮನ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಮುಖ್ಯಾಧಿಕಾರಿ ಎಂ.ಕೆ. ಸುರೇಶ ತಿಳಿಸಿದರು.

ಪರಿಸರ ಅಭಿಯಂತ ನಾಗೇಂದ್ರ ಗಾಂವಕರ ಮಾತನಾಡಿ, ಪುರಸಭೆಗೆ ಸ್ವಂತ ತ್ಯಾಜ್ಯ ವಿಲೇವಾರಿ ಘಟಕ ಹೊಂದಲು ಮಿರ್ಜಾನದಲ್ಲಿ ಜಾಗ ಗುರುತಿಸಿ ನಡೆಸಿದ ಪ್ರಯತ್ನಕ್ಕೆ ಸ್ಥಳೀ ಯ ಪಂಚಾಯತದಿಂದ ಒಪ್ಪಿಗೆ ಸಿಕ್ಕಿಲ್ಲ, ಆದರೂ ಪ್ರಯತ್ನ ನಡೆಸಿದ್ದೇವೆ. ಈ ನಡುವೆ ಅನಿವಾರ್ಯ ಪರಿಸ್ಥಿತಿಯಲ್ಲಿ ಉದ್ಯಾನವನದ ಮೂಲೆಯಲ್ಲಿ ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿತ್ತು. ಮಳೆಗಾಲವಾದ್ದರಿಂದ ಹಸಿಕಸ ನೀರಲ್ಲಿ ನೆನೆದು ವಾಸನೆ ಬರಲಾ ರಂಭಿಸಿದ್ದು, ಜನ ಆಕ್ಷೇಪ ಮಾಡುತ್ತಿದ್ದಾರೆ. ಪರ್ಯಾಯ ಜಾಗ ಎಲ್ಲಿದೆ. ಕೊನೆಯದಾಗಿ ಸ್ಮಶಾನಗಳನ್ನು ಬಳಸಿಕೊಳ್ಳಬೇಕಾಗಬಹುದು ಎಂದರು.

ಇದಕ್ಕೆ ಸದಸ್ಯರಿಂದ ವಿವಿಧ ಸಲಹೆಗಳು ಕೇಳಿಬಂತು. ಸಮರ್ಪಕ ಕಸ ವಿಲೇವಾರಿ ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಸದಸ್ಯೆ ದಾಕ್ಷಾಯಿಣಿ ಅರಿಗ ನಮ್ಮ ವಾರ್ಡಿನಲ್ಲಿ ಕಸ ವಿಲೇವಾರಿ ಬೇಡ ಎಂದು ತಕರಾರು ತೆಗೆದರೆ, ಹಸಿಕಸವನ್ನು ಒಣಕಸವಾಗಿಸುವ ತಾಂತ್ರಿಕತೆ ತೆಗೆದುಕೊಂಡು ಬನ್ನಿ ಎಂದು ಸದಸ್ಯ ಯೋಗಾನಂದ ನಾಯ್ಕ ತಿಳಿಸಿದರು. ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಸಿಕಸ ಗೊಬ್ಬರವಾಗಿಸಿ ಕೊಟ್ಟರೆ ಕೃಷಿಗೆ ಬಳಕೆಯಾಗುತ್ತದೆ ಎಂದು ಸದಸ್ಯ ಕಾಂತರಾಜ ನಾಯ್ಕ ಸಲಹೆ ನೀಡಿದರು.

ಪದೇಪದೇ ಸ್ಮಶಾನ ಜಾಗದಲ್ಲಿ ಹಸಿಕಸ ವಿಲೇವಾರಿ ಮಾಡುವ ಪ್ರಸ್ತಾಪವಾದಾಗ ಕೆರಳಿದ ಸದಸ್ಯ ಪ್ರಶಾಂತ ನಾಯ್ಕ ಎದ್ದುನಿಂತು, ಜನರ ಭಾವನೆ ಕೆಣಕುವ ಪ್ರಯತ್ನ ಬೇಡ. ಸಾಮರಸ್ಯ ಕಾಯ್ದುಕೊಳ್ಳಿ, ಹಾಗೆ ಮಾಡುವುದಾದರೆ ಕೇವಲ ಮೃತದೇಹ ಸುಡುವಲ್ಲಿ ಮಾತ್ರವಲ್ಲ, ಹುಗಿಯುವಲ್ಲೂ ಹಸಿಕಸ ವಿಲೇವಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಇಲ್ಲಿನ ಹಸಿಕಸ ಗೊಬ್ಬರ ಪರಿವರ್ತಿಸುವ ವ್ಯವಸ್ಥೆಗೆ ಮೇಲ್ಚಾವಣಿ ಒದಗಿಸಿ ಸರಿಪಡಿಸಿದರೆ ವಾಸನೆ ಬರುವುದೂ ಇಲ್ಲ. ಸಮಸ್ಯೆಯೂ ಇಲ್ಲ, ಈಗಾಗಲೇ 14ನೇ ಹಣಕಾಸು ಯೋಜನೆಯಡಿ 5 ಲಕ್ಷ ಅನುದಾನವನ್ನು ಈ ಕಾರ್ಯಕ್ಕೆ ಬಳಸಿ ಕೊಳ್ಳುವತ್ತ ಕಾರ್ಯಪ್ರವೃತ್ತರಾಗಿದ್ದೆವು. ಸಮಿತಿ ಸಮ್ಮತಿಸಿದರೆ ಅನಿವಾರ್ಯ ತಾತ್ಕಾಲಿಕ ವ್ಯವಸ್ಥೆಯಾಗಿ ಈಗಿರುವ ಉದ್ಯಾನವನದ ವಿಲೇವಾರಿ ಜಾಗದಲ್ಲೇ ಮರುಬಳಕೆ ಮಾದರಿಯಲ್ಲಿ ಶೆಡ್‌ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದ ಸಂದರ್ಭದಲ್ಲಿ ಹೊನ್ನಾವರ ತ್ಯಾಜ್ಯ ವಿಲೇವಾರಿ ಘಟಕದವರು ಕೇವಲ ಒಣಕಸಕ್ಕೆ ಅವಕಾಶ ಕೊಟ್ಟಿದ್ದಾರೆ. ನಮ್ಮ ಹಸಿಕಸವನ್ನು ಅಲ್ಲಿಗೆ ಒಯ್ಯಲಾಗದು. ಎಲ್ಲರ ಸಹಕಾರದಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ. ಸದ್ಯ ಉದ್ಯಾನವನದಲ್ಲಿ ಶೆಡ್‌ನ‌ಡಿ ಹಸಿಕಸ ವಿಲೇವಾರಿ ನಡೆಯಲಿ, ಪರ್ಯಾಯ ಮಾರ್ಗಗಳ ಬಗ್ಗೂ ಪ್ರಯತ್ನ ಮುಂದುವರೆಯಲಿ ಎಂದು ವಿಷಯಕ್ಕೆ ತೆರೆ ಎಳೆದರು. 

ಒಳಚರಂಡಿ ಯೋಜನೆಯವರ ಅಧ್ವಾನವನ್ನು ಸರಿಪಡಿಸುವ ಕಾಳಜಿ ಜಿಲ್ಲಾಧಿಕಾರಿಗಳಿಗೂ ಇದ್ದಂತಿಲ್ಲ. ಯೋಜನೆಯನ್ನು ರದ್ದು ಮಾಡಿಸುವುದೇ ಕ್ಷೇಮ ಎಂಬ ಮಾತು ಕೇಳಿಬಂತು. ವಾಕರಸಾ ಬಸ್‌ ನಿಲ್ದಾಣದ ಎದುರು ಗಟಾರ ಸ್ವಚ್ಛತೆಗೆ ಕ್ರಮವಾಗಬೇಕು. ಒಳರಸ್ತೆಗಳ ನಿರ್ವಹಣೆ ಸರಿಯಾಗಿ ನಡೆಯಲಿ, ಮಳೆಗಾಲದಲ್ಲಿ ಜಾರದಂಥ ಇಂಟರ್‌ ಲಾಕ್‌ಗಳನ್ನೇ ಅಳವಡಿಸಬೇಕು ಎಂಬ ಸಲಹೆಗಳು ಬಂದವು. ವಿವಿಧ ಯೋಜನೆಯಡಿ ಕಾಮಗಾರಿ ನಿರ್ವಹಣೆ, ಹೊರಗುತ್ತಿಗೆಯಡಿ ಚಾಲಕರ ಪೂರೈಕೆ, ಮರಾಕಲ್‌ ಜಂಟಿ ನೀರು ಯೋಜನೆಯ ಸಾಂತಗಲ್‌ ಕ್ಲೋರಿನೇಷನ್‌ ಘಟಕ ನವೀಕರಿಸುವ ಕುರಿತು, ಕಟ್ಟಡ ಪರವಾನಿಗೆ ಅನುಮೋದನೆ ಕುರಿತು ಚರ್ಚೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next