Advertisement

ತಿಲಕ್‌ನಗರ ನಿವಾಸಿಗಳಿಗೆ ಖಾಸಗಿ ಟ್ಯಾಂಕರ್‌ ನೀರೇ ಗತಿ!

10:08 AM Apr 28, 2022 | Team Udayavani |

ಉಳ್ಳಾಲ: ಬೇಸಗೆ ಬಂದರೆ ನೀರಿನ ಸಮಸ್ಯೆ ಸಾಮಾನ್ಯ. ಕೊಳವೆ ಬಾವಿಯನ್ನೇ ಆಶ್ರಯಿಸುವ ಪ್ರದೇಶದಲ್ಲಿ ನೀರು ವ್ಯತ್ಯಯವಾದರೆ ದುಬಾರಿ ಮೊತ್ತದ ಖಾಸಗಿ ಟ್ಯಾಂಕರ್‌ಗಳನ್ನೇ ಆಶ್ರಯಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಮಸ್ಯೆ ಅಂಬ್ಲಿಮೊಗರು ಗ್ರಾಮದ ತಿಲಕ್‌ನಗರದ ಜನರಿಗೆ ಉದ್ಭವಿಸಿದ್ದು, ಕೊಳವೆ ಬಾವಿ ಇದ್ದರೂ ನೀರು ಸರಬರಾಜು ಆಗುವ ಪೈಪ್‌ ತುಂಡಾಗಿ ಕಳೆದ ವಾರದಿಂದ ಖಾಸಗಿ ನೀರಿನ ಟ್ಯಾಂಕರ್‌ಗೆ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಗ್ರಾಮದ ಎತ್ತರ ಪ್ರದೇಶಗಳಲ್ಲಿ ಒಂದಾಗಿರುವ ತಿಲಕ್‌ ನಗರದಲ್ಲಿ ಅತೀ ಹೆಚ್ಚು ಮನೆಗಳಿದ್ದು, ಈ ಪ್ರದೇಶಕ್ಕೆ ಒಂದೆರಡು ದಿನಗಳು ನೀರು ಬರದಿದ್ದರೆ ಜನರ ಸ್ಥಿತಿ ಡೋಲಾಯಮಾನವಾಗಲಿದೆ. ಆದರೆ ಕಳೆದ ವಾರದಿಂದ ನೀರು ಸರಬರಾಜಿಗೆ ಮಣ್ಣಿನಡಿ ಹಾಕಿರುವ ಪೈಪ್‌ ತುಂಡಾಗಿ ನೀರು ಬಾರದೆ ವ್ಯತ್ಯಯವಾಗಿದೆ. ಈ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿ ಪ್ರತೀ ಮನೆಯವರು ಮೂರು ದಿನಕೊಮ್ಮೆ ನೀರಿಗಾಗಿ 700 ರೂ. ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತಿಲಕ್‌ನಗರದಲ್ಲಿ ಮಳೆಗಾಲದಲ್ಲೂ ಪಂಪ್‌ ಹಾಳಾಗಿ ನೀರಿಗೆ ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ತಾರಿಪಡ್ಪು ಬಳಿ ಪಂಪ್‌ ಹಾಳಾಗಿ ಸುಮಾರು 20 ದಿನಗಳ ಕಾಲ ನೀರಿಗೆ ಸಮಸ್ಯೆ ಉದ್ಭವಿಸಿತ್ತು. ಉಳ್ಳಾಲ ತಾಲೂಕಿಗೆ ಒಳಪಡುವ ಅಂಬ್ಲಿಮೊಗರು ಗ್ರಾಮವು ಒಂದು ಭಾಗ ನೇತ್ರಾವತಿ ನದಿ ತಟಕ್ಕೆ ತಾಗಿಕೊಂಡಿದೆ. ಇನ್ನೊಂದು ಭಾಗದಲ್ಲಿ ಗುಡ್ಡ ಪ್ರದೇಶಗಳು ಹೆಚ್ಚಿದ್ದು ಇದೇ ಪ್ರದೇಶದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. 1,327,11 ಎಕ್ರೆ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ ಸುಮಾರು 1100 ಮನೆಗಳಿದ್ದು, ಏಳು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಇಲ್ಲಿ ಸಾರ್ವಜನಿಕ ಕುಡಿಯುವ ನೀರಿಗೆ ಇರುವ ಮೂರು ತೆರೆದ ಬಾವಿಗಳಲ್ಲಿ ಒಂದು ಬಾವಿ ಮಾತ್ರ ಕುಡಿಯಲು ಯೋಗ್ಯವಾಗಿದ್ದು ಉಳಿದಂತೆ ನೀರಿಗೆ ಆಶ್ರಯವಾಗಿರುವುದೇ ಕೊಳವೆ ಬಾವಿಗಳು.

ಬೇಸಗೆಯಲ್ಲಿ ಟ್ಯಾಂಕರ್‌ ನೀರು

ಅಂಬ್ಲಿಮೊಗರು ಕುಡಿಯುವ ನೀರಿನ ಅಭಾವವಿರುವ ಪ್ರದೇಶಗಳಿಗೆ ಸರಬರಾಜು ಮಾಡಲು ಒಟ್ಟು 9 ಕೊಳವೆ ಬಾವಿಗಳಿವೆ. ಬೇಸಗೆಯಲ್ಲಿ ಮೂರು ತಿಂಗಳು ಈ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಜನರಿಗೆ ಟ್ಯಾಂಕರ್‌ ನೀರೆ ಆಶ್ರಯ. ತಿಲಕ್‌ ನಗರದಲ್ಲಿ ಅತೀ ಹೆಚ್ಚು ಮನೆಗಳಿದ್ದರೆ, ಉಳಿದಂತೆ ಬೆಳ್ಮ ಗ್ರಾಮದ ಗಡಿ ಪ್ರದೇಶಗಳಾದ ರೆಂಜಾಡಿ, ಗಾಂಧೀನಗರ, ಸೇನೆರೆಬೆಟ್ಟು, ಮದಕ, ತಾರಿಗುಡ್ಡೆ, ಅಂಬೇಡ್ಕರ್‌ ಪದವು, ಬರುವ, ಎಲಿಯಾರ್‌, ಪಡ್ಡಾಯಿಗುಡ್ಡೆ, ಮದಕ ಗುಡ್ಡೆ, ಸಣ್ಣ ಮದಕ ಪ್ರದೇಶಗಳಿಗೆ ಕೊಳವೆ ಬಾವಿಯ ನೀರೆ ಆಶ್ರಯವಾಗಿವೆ. ಈ ಕೊಳವೆ ಬಾವಿಗಳು ಹಾಳಾದರೆ ಈ ಪ್ರದೇಶಗಳಿಗೆ ಒಂದೆರಡು ದಿನಗಳು ನೀರಿಗೆ ಬರ ಸ್ಥಿತಿ ನಿರ್ಮಾಣವಾಗುತ್ತದೆ. ಮಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದ್ದು ಈ ಯೋಜನೆ ಆರಂಭಗೊಂಡರೆ ಈ ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

Advertisement

ಗ್ರಾ.ಪಂ. ತತ್‌ಕ್ಷಣ ಎಚ್ಚೆತ್ತುಕೊಳ್ಳಲಿ

ಒಂದು ವಾರದಿಂದ ಪೈಪ್‌ ಒಡೆದು ನೀರಿನ ಸಮಸ್ಯೆ ಎದುರಾಗಿದ್ದು, ಈ ಪ್ರದೇಶದಲ್ಲಿ ಬಡ ಜನರೇ ಹೆಚ್ಚಾಗಿದ್ದು, ನೀರಿಗಾಗಿ ಹಣ ವ್ಯಯ ಮಾಡುವುದರಿಂದ ಜೀವನ ಕಷ್ಟಕರವಾಗಿದೆ. ನೀರಿನ ಸಮಸ್ಯೆ ಉದ್ಭವಿಸಿದ ತತ್‌ಕ್ಷಣ ಪಂಚಾಯತ್‌ ಆಡಳಿತ ಎಚ್ಚೆತ್ತುಕೊಂಡರೆ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next