Advertisement

ಪ್ರಧಾನಮಂತ್ರಿ ಫ‌ಸಲ್‌ ವಿಮಾ ಯೋಜನೆ; ಭತ್ತ ಬೆಳೆಯುವ ರೈತರು ನೋಂದಾಯಿಸಲು ಸೂಚನೆ

12:32 AM Jun 13, 2024 | Team Udayavani |

ಉಡುಪಿ/ಮಂಗಳೂರು: ಕರ್ನಾಟಕ ರೈತ ಸುರûಾ ಪ್ರಧಾನಮಂತ್ರಿ ಫ‌ಸಲ್‌ ವಿಮಾ ಯೋಜನೆಯಡಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಭತ್ತ ಬೆಳೆಯುವ ರೈತರು ನೋಂದಾಯಿಸಿ ಕೊಳ್ಳುವಂತೆ ಜಿಲ್ಲಾ
ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Advertisement

ಈ ಯೋಜನೆಯಡಿ ವಿಮಾ ಮೊತ್ತ ಪ್ರತೀ ಹೆಕ್ಟೇರ್‌ಗೆ 63,750 ರೂ.ಗಳಂತೆ ವಿಮಾ ಕಂತಿನ ದರವನ್ನು ಪ್ರತೀ ಹೆಕ್ಟೇರ್‌ಗೆ 1,275 ರೂ.ಗಳಂತೆ ನಿಗದಿಪಡಿಸಲಾಗಿದೆ. (ಅಥವಾ ವಿಮಾ ಕಂತು ಒಂದು ಎಕರೆಗೆ 516 ರೂ. ಇರುತ್ತದೆ ಹಾಗೂ ಒಟ್ಟು ವಿಮಾ ಮೊತ್ತ ಎಕರೆಗೆ 25,800 ರೂ. ಆಗಿರುತ್ತದೆ.) ನೋಂದಣಿಗೆ ಆ. 16 ಕೊನೆಯ ದಿನ ಆಗಿರುತ್ತದೆ.

ಬೆಳೆ ಸಾಲ ಪಡೆಯದ ರೈತರು ಪಹಣಿ ಪತ್ರ, ಖಾತೆ ಪಾಸ್‌ ಪುಸ್ತಕ/ಬ್ಯಾಂಕ್‌ ಪಾಸ್‌ ಪುಸ್ತಕ, ಕಂದಾಯ ರಸೀದಿ ಮತ್ತು ಆಧಾರ್‌ ಸಂಖ್ಯೆಗಳನ್ನು ಒದಗಿಸಿ ವಾಣಿಜ್ಯ ಬ್ಯಾಂಕ್‌ಗಳು ಅಥವಾ ಗ್ರಾಮೀಣ ಮಟ್ಟದ ವ್ಯವಸಾಯ ಸೇವಾ ಸಹಕಾರ ಸಂಘಗಳು, ಸಾರ್ವಜನಿಕ ಸೇವಾ ಕೇಂದ್ರ, ಗ್ರಾಮ ಒನ್‌ ಮತ್ತು ವಿಮಾ ಸಂಸ್ಥೆಗಳನ್ನು ಸಂಪರ್ಕಿಸಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದು.

ಪ್ರಯೋಜನಗಳು
ಹವಾಮಾನ ವೈಪರೀತ್ಯಗಳಾದ ಹೆಚ್ಚಿನ ಮಳೆ, ನೆರೆ/ಪ್ರವಾಹದಿಂದ ಬೆಳೆ ಮುಳುಗಡೆ, ದೀರ್ಘ‌ಕಾಲ ತೇವಾಂಶ ಕೊರತೆ, ತೀವ್ರ ಬರಗಾಲ ಮುಂತಾದವುಗಳಿಂದ ಬಿತ್ತನೆಯಾದ ಒಂದು ತಿಂಗಳಿನಿಂದ ಕಟಾವಿನ 15 ದಿನ ಪೂರ್ವದವರೆಗಿನ ಬೆಳೆ ನಷ್ಟವಾಗಿ ನಿರೀಕ್ಷಿತ ಇಳುವರಿ, ಸಾಮಾನ್ಯ ಇಳುವರಿಯ ಶೇ. 50ಕ್ಕಿಂತ ಕಡಿಮೆ ಇದ್ದಲ್ಲಿ ಅಥವಾ ಬೆಳೆ ನಷ್ಟ ಕಂಡುಬಂದಲ್ಲಿ ವಿಮೆ ಮಾಡಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ನಷ್ಟ ಪರಿಹಾರದಲ್ಲಿ ಶೇ. 25ರಷ್ಟು ಹಣ ಮುಂಚಿತವಾಗಿ ದೊರೆಯಲಿದೆ. ಬೆಳೆ ಕಟಾವಿನ ವಾಸ್ತವಿಕ ಇಳುವರಿ ಆಧಾರದ ಮೇಲೆ ಅಂತಿಮ ಬೆಳೆ ನಷ್ಟ ಪರಿಹಾರದಲ್ಲಿ ಹೊಂದಾಣಿಕೆ ಮಾಡಲಾಗುವುದು.

ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ ಹಾಗೂ ಗುಡುಗು-ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಬೆಳೆ ಹಾನಿಯಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದೆ. ಅಧಿಸೂಚಿಸಿದ ಘಟಕದಲ್ಲಿ ಶೇ. 25ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆ ನಷ್ಟವಾದಲ್ಲಿ ವಿಮೆಗೆ ಒಳಪಟ್ಟ ಬೆಳೆ ನಷ್ಟದ ವರದಿ ಮಾಡಿದ ರೈತರಿಗೆ ಮಾದರಿ ಸಮೀಕ್ಷೆಗೆ ಅನುಗುಣವಾಗಿ ಪರಿಹಾರ ನೀಡಲಾಗುವುದು.

Advertisement

ಕಟಾವಿನ ಅನಂತರದ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ ಹಾಗೂ ಕಟಾವು ಕೈಗೊಳ್ಳುವ 14 ದಿನಗಳ ಒಳಗೆ ಚಂಡಮಾರುತ, ಅಕಾಲಿಕ ಮಳೆಯಿಂದ ಬೆಳೆ ನಾಶವಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದೆ. ಮೇಲಿನ ಎರಡೂ ಸಂದರ್ಭದಲ್ಲಿ ರೈತರು ವಿಮಾ ಸಂಸ್ಥೆ / ಹಣಕಾಸು ಸಂಸ್ಥೆ ಅಥವಾ ಕೃಷಿ ಇಲಾಖೆಯ ಕಚೇರಿಗೆ 72 ಗಂಟೆಗಳ ಒಳಗೆ ಬೆಳೆ ಹಾನಿ ವಿವರದ ಮಾಹಿತಿ ಒದಗಿಸಬೇಕು. ಮಳೆ ಅಭಾವ ಅಥವಾ ಇತರ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಅಧಿಸೂಚಿತ ಘಟಕದಲ್ಲಿ ಶೇ. 75ರಷ್ಟು ಬಿತ್ತನೆಯಾಗದಿದ್ದಲ್ಲಿ ವಿಮೆ ಮಾಡಿಸಿದ ರೈತರಿಗೆ ವಿಮಾ ಮೊತ್ತದ ಶೇ. 25ರಷ್ಟು ಪರಿಹಾರ ದೊರೆಯಲಿದೆ.

ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ರಿಗೆ ಕೊನೆಯ ದಿನಾಂಕದ ಒಂದು ವಾರದ ಮೊದಲು ಈ ಕುರಿತು ಲಿಖೀತವಾಗಿ ಮುಚ್ಚಳಿಕೆ ಪತ್ರ ನೀಡಿ ಬೆಳೆ ವಿಮೆಯಿಂದ ಕೈಬಿಡಲು ಕೋರಬೇಕು.

ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಸ್ಥಳೀಯ ಕೃಷಿ ಇಲಾಖೆಯ ಕಚೇರಿ, ವಾಣಿಜ್ಯ ಬ್ಯಾಂಕ್‌ ಅಥವಾ ಸಂಬಂಧಿಸಿದ ಸೇವಾ ಸಹಕಾರ ಸಂಘಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next