Advertisement

ಪವಿತ್ರ ಯಾತ್ರಾ ಸ್ಥಳ ಮಹಾಕೂಟೇಶ್ವರ  

12:05 PM May 06, 2017 | |

 ಬಾದಾಮಿಯಿಂದ  ಹದಿನಾಲ್ಕು  ಕಿ.ಮೀ ಅಂತರದಲ್ಲಿರುವ  ಶೈವರ  ಒಂದು ಪವಿತ್ರ ಯಾತ್ರಾ ಸ್ಥಳವಿದೆ. ಅದುವೇ  ಮಹಾಕೂಟ.  ಚಾಲುಕ್ಯರ  ಕಾಲದ  ದೇಗುಲಗಳು ಮತ್ತು ಪುಷ್ಕರಣಿಗಳೇ ಇಲ್ಲಿನ   ಆಕರ್ಷಣೆ.  ಅತ್ಯಂತ  ಸುಂದರ  ಹಚ್ಚ ಹಸಿರಿನಿಂದ  ಕೂಡಿದ  ಪ್ರಕೃತಿ  ಸೌಂದರ್ಯದ  ಮಧ್ಯೆ  ನೆಲೆನಿಂತ ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ   ಪಡೆದ  ಮಹಾಕೂಟ ಚಾಲುಕ್ಯರ  ವಾಸ್ತುಶಿಲ್ಪಕ್ಕೆ    ಕೈಗನ್ನಡಿಯಾಗಿದೆ.   ಈ ಮಹಾಕೂಟವನ್ನು   ದೇವಾಲಯಗಳ  ನಗರಿ ಎಂತಲೂ ಹೇಳಬಹುದು.  ಆಲದ ಮರ, ಅತ್ತಿ  ಮರಗಳು ಹರಡಿಕೊಂಡಿರುವ ಇಲ್ಲಿ ಕನಿಷ್ಠ  ಹದಿನಾರು  ದೇಗುಲಗಳಿವೆ.  ಎಲ್ಲ  ದೇಗುಲಗಳು  ಸಂಪೂರ್ಣವಾಗಿ   ಕಲ್ಲಿನಿಂದಲೇ ನಿರ್ಮಾಣಗೊಂಡಿವೆ.  ಈ  ಪ್ರದೇಶದಲ್ಲಿ ಎಲ್ಲಿ   ನೋಡಿದರೂ ಶಿವಲಿಂಗಗಳು ಹಾಗೂ ನಂದಿ ವಿಗ್ರಹಗಳೇ ನಮ್ಮ  ಕಣ್ಣಿಗೆ  ಬೀಳುತ್ತವೆ. ಇವುಗಳಲ್ಲಿ   ಪ್ರಮುಖವಾದುದೇ   ಮಹಾಕೂಟೇಶ್ವರ ದೇವಾಲಯ. ಇದನ್ನು  ದೇಗುಲಗಳ   ಸಂಕೀರ್ಣವೆಂತಲೇ ಹೇಳಬಹುದು.

Advertisement

     ಚಾಲುಕ್ಯ ದೊರೆಗಳ  ಆರಾಧ್ಯ ದೈವವಾಗಿದ್ದ ಇಲ್ಲಿನ  ಶಿವಲಿಂಗ ಸಾಕಷ್ಟು  ಮಹತ್ವ ಪಡೆದುಕೊಂಡಿದೆ. ಕ್ರಿ.ಶ. ಆರನೆಯ  ಶತಮಾನದಲ್ಲಿ  ದ್ರಾವಿಡ   ವಾಸ್ತುಶೈಲಿಯಲ್ಲಿ ಈ ಮಹಾಕೂಟೇಶ್ವರ  ದೇಗುಲದ  ನಿರ್ಮಾಣವಾಯಿತು  ಎಂದು ಉಲ್ಲೇಖವಿದೆ.  ಗಟ್ಟಿಮುಟ್ಟಾದ  ಬೆಣಚು  ಕಲ್ಲಿನಿಂದ  ನಿರ್ಮಿಸಲ್ಪಟ್ಟ ಆಧಾರ ಸ್ತಂಭಗಳು ಮತ್ತು ನಾಲ್ಕೂ  ಮೂಲೆಯಲ್ಲಿನ  ಕಲ್ಲು  ಗೋಡೆಗಳಿಂದಾಗಿ ದೇಗುಲ ಅತ್ಯಂತ  ಸುಭದ್ರವಾಗಿದೆ. ಹಿಂದೆ ಈ ದೇಗುಲಕ್ಕೆ  ಮುಕುಟೇಶ್ವರ  ದೇವಾಲಯ ಎಂದು ಕರೆಯಲಾಗುತ್ತಿತ್ತು. ಕಾಲಾನಂತರದಲ್ಲಿ ಮಹಾಕೂಟೇಶ್ವರವಾಯಿತು.  ದೇಗುಲದಲ್ಲಿರುವ ಒಂದು ಶಾಸನದ  ಪ್ರಕಾರ ಚಾಲುಕ್ಯರ  ರಾಜರಲ್ಲಿ  ಒಬ್ಬನಾದ  ಜಯಾದಿತ್ಯ ರಾಜನ  ಪತ್ನಿ ಮಹಾಕೂಟೇಶ್ವರನ ದೇಗುಲವನ್ನು ಜೀಣೊìದ್ದಾರ  ಮಾಡಿದರು.  ರತ್ನಪೀಠ,  ಬೆಳ್ಳಿಯ ಛತ್ರಿ  ಮತ್ತು ಸಾಕಷ್ಟು  ಪ್ರಮಾಣದಲ್ಲಿ  ಭೂಮಿಯನ್ನು ದಾನವಾಗಿ ನೀಡಿದ್ದಳಂತೆ.  ಈ  ದೇವಾಲಯದ   ಹೊರಗೋಡೆಯಲ್ಲಿ ಕೈಲಾಸ ಪರ್ವತ ಎತ್ತುತ್ತಿರುವ  ರಾವಣ, ಶಿವಪಾರ್ವತಿಯರು ಮತ್ತು ಪುರಾಣ   ಕಥನಗಳನ್ನು  ಹೋಲುವ  ಸಾಕಷ್ಟು ಯುದ್ಧ ಸನ್ನಿವೇಶಗಳನ್ನು ಒಳಗೊಂಡ   ಸುಂದರವಾದ  ಚಿತ್ರಣಗಳು   ಎಲ್ಲರ  ಗಮನ ಸೆಳೆಯುತ್ತವೆ. ಇನ್ನು ಗರ್ಭಗುಡಿಯಲ್ಲಿ ಮಹಾಕೂಟೇಶ್ವರ  ಲಿಂಗರೂಪದಲ್ಲಿ  ನೆಲೆಸಿದ್ದರೆ  ಎದುರಿಗೆ ಭವ್ಯವಾದ ನಂದಿ  ರಾಜಮಾನನಾಗಿದ್ದಾನೆ.

     ಇನ್ನು ಮಹಾಕೂಟದಲ್ಲಿರುವ ಎರಡನೇ ಅತೀ ದೊಡ್ಡ ದೇಗುಲವೆಂದರೆ  ಮಲ್ಲಿಕಾರ್ಜುನ  ದೇವಾಲಯ. ಇಲ್ಲಿ ಐದು ಅಡಿ ಎತ್ತರದ ಶಿವಲಿಂಗದೆ.ಈ ದೇಗುಲದ ಗೋಡೆ ಮತ್ತು  ಕಂಬಗಳ  ಮೇಲೆ  ಸಾಕಷ್ಟು  ಕೆತ್ತನೆಗಳಿವೆ.  ನಾಗರಶೈಲಿಯ  ಸುಂದರವಾದ  ಶಿಖರವನ್ನು  ಹೊಂದಿರುವ  ಈ ಮಲ್ಲಿಕಾರ್ಜುನ  ದೇವಾಲಯ ಅತ್ಯಂತ ಸುಂದರವಾಗಿದ್ದು ಇದರ ಎದುರುಗಡೆ ಸರಸ್ವತಿ, ಗಣೆೇಶ,  ವೀರಭದ್ರೇಶ್ವರ, ಶಿವಲಿಂಗ ಮುಂತಾದ  ವಿಗ್ರಹಗಳಿವೆ.   ಇಷ್ಟೇ ಅಲ್ಲದೇ ಈ  ದೇವಾಲಯದ  ಸಂಕೀರ್ಣದ  ಒಳಗೆ  ಕಾಲಿಟ್ಟರೆ  ನಮಗೆ ಮೊದಲು ಸಿಗುವುದೇ  ಕಾಶಿತೀರ್ಥ.  ಇದಕ್ಕೆ ಗಣೆೇಶ ಹೊಂಡ ಎಂತಲೂ ಹೇಳಲಾಗುತ್ತದೆ. ಚೌಕಾಕಾರದ  ಪುಟ್ಟ  ಹೊಂಡದ  ಮೇಲೆ ಒಂದು ಗಣಪತಿಯ ಗ್ರಹವಿದ್ದು   ಅತ್ಯಂತ ಸುಂದರವಾಗಿದೆ.  ಈ ಹೊಂಡದ ಮೇಲಿನ  ಕಟ್ಟಿಗೆಯ  ಪಟ್ಟಿಗೆ   ಪುಟ್ಟದಾದ  ಒಂದು ತೊಟ್ಟಿಲು ಕಟ್ಟಲಾಗಿದ್ದು, ಅದರಲ್ಲಿನ  ಬಂಗಾರವರ್ಣದ  ಗಣಪತಿಯನ್ನು  ತೂಗುವುದು  ಇಲ್ಲಿನ  ವಾಡಿಕೆ.   ಈ  ಎಲ್ಲಾ  ದೇಗುಲದ   ಆವರಣವನ್ನು  ಪ್ರವೇಶಿಸುವ  ಮುಂಚೆ   ಈ  ಹೊಂಡದ ನೀರಿನಿಂದ  ಪವಿತ್ರರಾಗಬೇಕೆಂಬ  ನಂಬಿಕೆ ಇದೆ.    ಈ  ದೇಗುಲದ   ಆವರಣದಲ್ಲಿರುವ ಇನ್ನೊಂದು ಪುಷ್ಕರಣಿ ಎಂದರೆ ವಿಷ್ಣುತೀರ್ಥ.  ಸದಾ ಹರಿಯುವ  ನೀರಿನ   ಚಿಲುಮೆ ಇದಾಗಿದ್ದು   ಇದರ   ಪಕ್ಕದಲ್ಲಿಯೇ ಒಂದು ಚತುರ್ಮುಖ  ಈಶ್ವರನ   ಸುಂದರ  ವಿಗ್ರಹವಿದೆ.  ಈ  ವಿಗ್ರಹಕ್ಕೆ  ಒಂದು ಮಂಟಪವನ್ನು  ನಿರ್ಮಿಸಲಾಗಿದೆ.   ಸುತ್ತಲೂ  4 ಅಡಿಯಷ್ಟು  ನೀರಿರುವುದರಿಂದ   ಇಲ್ಲಿಗೆ  ಬರುವ   ಭಕ್ತಾದಿಗಳು  ಸ್ವತ್ಛಂದವಾಗಿ ಈಜಬಹುದಾಗಿದೆ.  ಎಷ್ಟೇ  ಬರಗಾಲದಲ್ಲಿಯೂ   ಇಲ್ಲಿನ   ನೀರಿನ ಬುಗ್ಗೆ   ಬತ್ತುವುದಿಲ್ಲ.   ಇದರ  ಸುತ್ತಮುತ್ತಲೂ  ಆಲ,  ಅತ್ತಿ  ಮತ್ತು   ಬಗೆ ಬಗೆಯ ಸಂಪಿಗೆ ಮರಗಳು  ವ್ಯಾಪಿಸಿರುವುದರಿಂದ  ಈ ಕ್ಷೇತ್ರ  ಇನ್ನಷ್ಟು  ಸುಂದರವಾಗಿ ಕಂಗೊಳಿಸುತ್ತಿದೆ.  ವರ್ಷಕ್ಕೊಮ್ಮೆ  ನಡೆಯುವ ರಥೋತ‌Õವಕ್ಕೆ  ಲಕ್ಷಾಂತರ ಭಕ್ತರು ಬಂದು ಸೇರುತ್ತಾರೆ.   ಇಲ್ಲಿ   ಅನ್ನದಾಸೋಹ  ಕಾರ್ಯಕ್ರಮಗಳೂ ನಡೆಯುತ್ತವೆ.       ದೇಶದ   ಪ್ರಮುಖ ನಗರಗಳಿಂದ  ಬಾದಾಮಿಗೆ  ಸಾಕಷ್ಟು  ಬಸ್‌ ಹಾಗೂ ರೈಲುಗಳ ವ್ಯವಸ್ಥೆ ಇದೆ.   ಬಾದಾಮಿಯಿಂದ  ಕೇವಲ  14 ಕಿ.ಮೀ  ಅಂತರದಲ್ಲಿರುವ  ಮಹಾಕೂಟಕ್ಕೆ  ಸಾಕಷ್ಟು  ಬಸ್‌ಗಳ ವ್ಯವಸ್ಥೆಗಳಿವೆ. 

 ಆಶಾ ಎಸ್‌. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next