Advertisement

ಕುಕ್ಕುಜೆ: ಅಂತಿಮ ಹಂತದಲ್ಲಿ ಪಟ್ಟಿಬಾವು ಸೇತುವೆ ಕಾಮಗಾರಿ

10:29 AM May 27, 2019 | Team Udayavani |

ಅಜೆಕಾರು: ಕಡ್ತಲ ಮತ್ತು ಎರ್ಲಪಾಡಿ ಪಂಚಾಯತ್‌ಗಳ ನಡುವೆ ಸಂಪರ್ಕ ಕಲ್ಪಿಸುವ ಕುಕ್ಕುಜೆ ಪಟ್ಟಿಬಾವುವಿನ ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮಳೆಗಾಲಕ್ಕೂ ಮುನ್ನ ಉದ್ಘಾಟನೆಗೊಳ್ಳಲಿದೆ.

Advertisement

ಕುಕ್ಕುಜೆ, ಎರ್ಲಪಾಡಿ, ಶಿರೂರು ಗ್ರಾಮಸ್ಥರ ಬಹುಬೇಡಿಕೆಯ ಪಟ್ಟಿಬಾವು ಸೇತುವೆ ಕಾಮಗಾರಿ ಪ್ರಾರಂಭಗೊಂಡು 3 ವರ್ಷವಾಗಿದ್ದು ಇದೀಗ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.ಸ್ಥಳೀಯರ ಹಲವು ದಶಕಗಳ ಬೇಡಿಕೆ ಯಂತೆ ಶಾಸಕ ಸುನಿಲ್‌ ಕುಮಾರ್‌ ಅವರು ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರದಿಂದ 2014-15ರಲ್ಲಿ ಅನುದಾನ ಮಂಜೂರುಗೊಳಿಸಿದ್ದರು.

ಸುವರ್ಣ ನದಿಗೆ ಅಡ್ಡಲಾಗಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ 3 ಕೋಟಿ ರೂ. ಅನುದಾನ ಮಂಜೂರುಗೊಂಡು 2015-16ನೇ ಸಾಲಿನಲ್ಲಿ ಟೆಂಡರ್‌ ಪ್ರಕ್ರಿಯೆಪೂರ್ಣಗೊಂಡಿತ್ತು. 2017ರ ಜನವರಿಯಲ್ಲಿ ಕಾಮಗಾರಿ ಪ್ರಾರಂಭಗೊಂಡಿತ್ತಾದರೂ ಅನಂತರ
ಕಾಮಗಾರಿ ಕುಂಟುತ್ತಾ ಸಾಗಿ ಸ್ಥಗಿತಗೊಂಡಿತ್ತು. ಸ್ಥಳೀಯರ ತೀವೃ ಒತ್ತಡದ ಪರಿಣಾಮ ಸ್ಥಗಿತಗೊಂಡ ಕಾಮಗಾರಿ ಮತ್ತೆ 2018 ನವೆಂಬರ್‌ನಲ್ಲಿ ಪ್ರಾರಂಭಗೊಂಡು ಇದೀಗ ಬಹುತೇಕ ಪೂರ್ಣಗೊಂಡಿದೆ.

ಈ ಸೇತುವೆ ನಿರ್ಮಾಣದಿಂದ ಕುಕ್ಕುಜೆ, ಶಿರೂರು ಪ್ರದೇಶದ ಜನತೆಗೆ ಬೈಲೂರು, ಕಾರ್ಕಳ ಸಂಪರ್ಕಿಸಲು ಹಾಗೂ ಬೈಲೂರು, ಎರ್ಲಪಾಡಿ ಭಾಗದ ಜನರಿಗೆ ಕುಕ್ಕುಜೆ, ಪೆರ್ಡೂರು, ಹೆಬ್ರಿ ಸಂಪರ್ಕಿಸಲು 10ರಿಂದ 15ಕಿ.ಮೀ.ನಷ್ಟು ಹತ್ತಿರವಾಗಲಿದೆ. ಈಗ ಸ್ಥಳೀಯರು ಕಾರ್ಕಳ, ಅಜೆಕಾರು ಸುತ್ತುಬಳಸಿ ಸುಮಾರು 30ರಿಂದ 35 ಕಿ.ಮೀ. ದೂರ ಪ್ರಯಾಣಿಸುತ್ತಿದ್ದಾರೆ. ಕಾಮಗಾರಿ ಮುಕ್ತಾಯದ ಅವಧಿಯು2018ರ ಮಾರ್ಚ್‌ಗೆ ಅಂತಿಮಗೊಂಡಿದ್ದು ಇದೀಗ 2019ರ ಮೇ ಅಲ್ಲಿ ಕಾಮಗಾರಿ ಮುಗಿಯುತ್ತಿದ್ದು ಸುಮಾರು ಒಂದು
ವರ್ಷ ಎರಡು ತಿಂಗಳು ವಿಳಂಬವಾಗಿದೆ.

ಕೃಷಿಕರಿಗೆ ಅನುಕೂಲ
ಸೇತುವೆಯ ಜತೆಗೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿರುವುದರಿಂದ ಕುಕ್ಕುಜೆ ಮತ್ತು ಎರ್ಲಪಾಡಿ ಗ್ರಾಮದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ಎರಡು ಪಂಚಾಯತ್‌ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದು

Advertisement

ಮಳೆಗಾಲಕ್ಕೂ ಮುನ್ನ ಉದ್ಘಾಟನೆ
ಪಟ್ಟಿಬಾವು ಸೇತುವೆ ಕಾಮಗಾರಿ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ವಿಳಂಬಗೊಂಡಿತ್ತು. ಇದೀಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮಳೆಗಾಲಕ್ಕೂ ಮುನ್ನ ಉದ್ಘಾಟನೆ ನೆರವೇರಿಸಿ ಸಾರ್ವಜನಿಕರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು.
ಎಸ್‌.ಪಾಲಣ್ಣ, ಸಹಾಯಕ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next