Advertisement

ಪರಿಶೀಲನೆ ಇಲ್ಲದೆ ಪಾಸ್‌ಪೋರ್ಟ್‌ ಕೈಗೆ

02:11 PM Apr 26, 2018 | |

ಬೆಂಗಳೂರು: ನಾಗರಿಕರಿಗೆ ಪಾಸ್‌ಪೋರ್ಟ್‌ಪಡೆದುಕೊಳ್ಳುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಮುಂದಾಗಿರುವ ಪಾಸ್‌ಪೋರ್ಟ್‌ ಕಚೇರಿ,ನಿಗದಿಪಡಿಸಿದ 13 ದಾಖಲೆಗಳ ಪೈಕಿ ಯಾವುದಾದರೂ ಮೂರು ದಾಖಲೆಗಳನ್ನು ಸಲ್ಲಿಸಿ ಪೊಲೀಸ್‌ ಪರಿಶೀಲನೆ ಪೂರ್ವದಲ್ಲೇ ಪಾಸ್‌ಪೋರ್ಟ್‌ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಆದರೆ,ಆ ಪಾಸ್‌ಪೋರ್ಟ್‌ ಪೊಲೀಸ್‌ ಪರಿಶೀಲನೆಯ ಶರತ್ತಿಗೆ ಒಳಪಟ್ಟಿರುತ್ತದೆ.

Advertisement

ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಭರತ್‌ ಕುಮಾರ್‌ ಕುತಾಟಿ, ಸಾರ್ವಜನಿಕರಿಗೆ ಸುಗಮವಾಗಿ ಮತ್ತು ಸಕಾಲಕ್ಕೆ ಪಾಸ್‌ ಪೋರ್ಟ್‌ ಸೇವೆ ಹಾಗೂ ಸೌಲಭ್ಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಆ ಪೈಕಿ ಪೊಲೀಸ್‌ ಪರಿಶೀಲನೆ ಪೂರ್ವ ಪಾಸ್‌ಪೋರ್ಟ್‌ ವಿತರಣೆಯೂ ಒಂದು ಎಂದರು.

ಪಾಸ್‌ಪೋರ್ಟ್‌ ಪಡೆದುಕೊಳ್ಳಲು ಸಲ್ಲಿಸಬೇಕಾದ ದಾಖಲೆಗಳ ಪಟ್ಟಿ ಈ ಹಿಂದೆ ಬಹಳ ದೊಡ್ಡದಾಗಿತ್ತು. ಅದನ್ನೀಗ ಕಡಿಮೆ ಮಾಡಿ ಆಧಾರ್‌, ಚುನಾವಣಾ ಗುರುತಿನ ಚೀಟಿ ಸೇರಿ ಒಟ್ಟು 13 ದಾಖಲೆಗಳನ್ನು ನಿಗದಿಪಡಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಈ ಹದಿಮೂರು ದಾಖಲೆಗಳ ಪೈಕಿ ಯಾವುದಾದರೂ ಮೂರು ದಾಖಲೆಗಳನ್ನು ಸಲ್ಲಿಸಿದರೆ ಪೊಲೀಸ್‌ ಪರಿಶೀಲನೆಯ ಶರತ್ತಿನೊಂದಿಗೆ ತಕ್ಷಣ ಪಾಸ್‌ಪೋರ್ಟ್‌ ವಿತರಿಸಲಾಗುತ್ತದೆ. ಇದೇ ವೇಳೆ ಪೊಲೀಸ್‌ ಪರಿಶೀಲನೆ ಸಹ ನಡೆದಿರುತ್ತದೆ.

ಒಂದು ವೇಳೆ ಪೊಲೀಸ್‌ ಪರಿಶೀಲನಾ ವರದಿ ವ್ಯತಿರಿಕ್ತ ಅಥವಾ ಸಂಶಯಾಸ್ಪದವಾಗಿ ಬಂದರೆ ಪಾಸ್‌ಪೋರ್ಟ್‌ ಹೊಂದಿದವರಿಗೆ ನೋಟಿಸ್‌ ನೀಡಿ ಸ್ಪಷ್ಟೀಕರಣ ಪಡೆದುಕೊಳ್ಳಲಾಗುತ್ತದೆ. ಅವರು ಕೊಟ್ಟ ಮಾಹಿತಿ ಸಮರ್ಪಕವಾಗಿದ್ದರೆ ಪ್ರಕರಣ ಇತ್ಯರ್ಥಪಡಿಸಲಾಗುತ್ತದೆ. ಇಲ್ಲದಿದ್ದರೆ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ಭರತ್‌ ಕುಮಾರ್‌ ವಿವರಿಸಿದರು.

ಪೊಲೀಸ್‌ ಪರಿಶೀಲನೆಯನ್ನು ಅನಗತ್ಯವಾಗಿ ವಿಳಂಬ ಮಾಡಲಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಸ್ಥಳೀಯ ಪೊಲೀಸರು ಹಣದ ಬೇಡಿಕೆ ಇಡುತ್ತಾರೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಪ್ರಕರಣಗಳು ನಡೆದಾಗ ಅರ್ಜಿದಾರರು ತಕ್ಷಣ ಮೇಲಾಧಿಕಾರಿಗಳಿಗೆ ದೂರು ನೀಡಬೇಕು.

Advertisement

ಅದಾಗ್ಯೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು. ನಿಯಮಾವಳಿ ಪ್ರಕಾರ 21 ದಿನಗಳಲ್ಲಿ ಪೊಲೀಸ್‌ ಪರಿಶೀಲನೆ ಕಾರ್ಯ ಪೂರ್ಣಗೊಳಿಸಬೇಕು.

ಬೆಂಗಳೂರಿನಲ್ಲಿ ಕೇವಲ 11 ದಿನಗಳಲ್ಲಿ ಈ ಕಾರ್ಯ ಮುಗಿಯುತ್ತಿದೆ. ಶೇ. 97ರಷ್ಟು ಪ್ರಕರಣಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಗೊಳ್ಳುತ್ತಿವೆ. ಆದರೆ,ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ಕೋಲಾರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪೊಲೀಸ್‌ ಪರಿಶೀಲನೆ ಕಾರ್ಯ ನಿಧಾನಗತಿಯಲ್ಲಿ ಆಗುತ್ತಿದ್ದು, ಈ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಕೊಡಿಸಲಾಗುವುದು ಎಂದರು.

2017-18ನೇ ಸಾಲಿನಲ್ಲಿ 7.21 ಲಕ್ಷ ಪಾಸ್‌ ಪೋರ್ಟ್‌ಗಳನ್ನು ವಿತರಿಸಲಾಗಿದೆ. 5 ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳು, 12 ಪೋಸ್ಟ್‌ ಆಫೀಸ್‌ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಇದೇ ವೇಳೆ ಭರತ್‌ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next