Advertisement

ಹಳೇ ಮೈಸೂರು ಭಾಗದ ಶಾಸಕರೇ ಟಾರ್ಗೆಟ್‌

11:52 PM Jul 08, 2019 | Team Udayavani |

ಬೆಂಗಳೂರು: ಶನಿವಾರ ರಾಜೀನಾಮೆ ನೀಡಿರುವ ಕಾಂಗ್ರೆಸ್‌, ಜೆಡಿಎಸ್‌ನ 12 ಮಂದಿ ಪೈಕಿ ಏಳು ಶಾಸಕರು ಬೆಂಗಳೂರು ಸೇರಿ ಹಳೇ ಮೈಸೂರು ಪ್ರದೇಶದವರಾಗಿದ್ದಾರೆ. ಪಕ್ಷ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿಲ್ಲದ ಭಾಗದ ಶಾಸಕರನ್ನೇ ಸೆಳೆದು ತನ್ನ ನೆಲೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನ ಆರಂಭಿಕ ಯಶಸ್ಸು ಕಂಡಂತೆ ಕಾಣುತ್ತಿದೆ.

Advertisement

ಕಳೆದ ಲೋಕಸಭಾ ಚುನಾವಣೆಯಲ್ಲೇ ಪಕ್ಷವು ಹಳೇ ಮೈಸೂರು ಭಾಗದಲ್ಲಿ ಉತ್ತಮ ಮತ ಗಳಿಕೆ ಮೂಲಕ ಗಮನಾರ್ಹ ಸಾಧನೆ ತೋರಿದೆ. ಇದೀಗ ರಾಜೀನಾಮೆ ನೀಡಿದವರು ಹಾಗೂ ಸದ್ಯದಲ್ಲೇ ರಾಜೀನಾಮೆ ನೀಡಲಿದ್ದಾರೆ ಎನ್ನಲಾದ ಶಾಸಕರ ಪೈಕಿಯೂ ಹಲವರು ಹಳೇ ಮೈಸೂರು ಭಾಗದವರೇ ಎನ್ನಲಾಗಿದೆ. ಹಾಗಾಗಿ ಈ ಭಾಗದ ಶಾಸಕರನ್ನೇ ಟಾರ್ಗೆಟ್‌ ಮಾಡಿ ಸೆಳೆದು ಸರ್ಕಾರ ರಚನೆ ಜತೆಗೆ ಪಕ್ಷ ಸಂಘಟನೆಗೂ ಬಿಜೆಪಿ ಒತ್ತು ನೀಡಿದಂತಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ನ ಅತೃಪ್ತ ಶಾಸಕರ ರಾಜೀನಾಮೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಹಿಂದೆ ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಅತೃಪ್ತರು ಎನ್ನಲಾಗಿದ್ದ ಶಾಸಕರಿಗಿಂತಲೂ ಅಚ್ಚರಿ ಎಂಬಂತಹ ಶಾಸಕರ ಹೆಸರೇ ರಾಜೀನಾಮೆ ನೀಡಿದವರ ಪಟ್ಟಿಯಲ್ಲಿ ದೊಡ್ಡದಿದೆೆ. ಅದರಲ್ಲೂ ಕಾಂಗ್ರೆಸ್‌, ಜೆಡಿಎಸ್‌ನ ಹಿರಿಯ ನಾಯಕರೇ ರಾಜೀನಾಮೆ ಸಲ್ಲಿಸಿ ಅಸಮಾಧಾನ ಹೊರಹಾಕಿರುವುದು ಬಿಜೆಪಿ ಪಾಳಯದಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ದಕ್ಷಿಣ ಭಾರತ ರಾಜ್ಯಗಳ ಪೈಕಿ ಬಿಜೆಪಿಗೆ ಕರ್ನಾಟಕದಲ್ಲಿ ಉತ್ತಮ ನೆಲೆಯಿದೆ. ರಾಜ್ಯದಲ್ಲಿ ನಿರಂತರವಾಗಿ ಸಂಘಟನೆ ಬಲಪಡಿಸಿಕೊಂಡು 2008ರಲ್ಲಿ ಅಧಿಕಾರವನ್ನೂ ಹಿಡಿದು ಐದು ವರ್ಷ ಆಡಳಿತ ಕೂಡ ನಡೆಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ 104 ಸ್ಥಾನ ಗೆಲ್ಲುವ ಮೂಲಕ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಮೊದಲ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರ ರಚನೆಯಾಗಿತ್ತು.

ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿ ಸಂಘಟನೆಯ ಉತ್ತಮವಾಗಿದ್ದು, ಉತ್ತಮ ನೆಲೆಯನ್ನೂ ಹೊಂದಿದೆ. ಆದರೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಹಾಗಾಗಿ ರಾಜಕೀಯವಾಗಿಯೂ ಪಕ್ಷ ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ 104 ಸ್ಥಾನ ಗಳಿಸಿದರೂ ಹಳೇ ಮೈಸೂರು ಭಾಗದಲ್ಲಿನ ಹಿನ್ನಡೆಯಿಂದಾಗಿಯೇ ಸರ್ಕಾರ ರಚನೆ ಅವಕಾಶ ಕೈತಪ್ಪಿತ್ತು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

Advertisement

ಹಳೇ ಮೈಸೂರಿನವರೇ ಟಾರ್ಗೆಟ್‌: ರಾಜೀನಾಮೆ ನೀಡಿದ 12 ಶಾಸಕರ ಪೈಕಿ ಏಳು ಮಂದಿ ಹಳೇ ಮೈಸೂರು ಭಾಗದವರಾಗಿದ್ದಾರೆ. ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜು, ಮುನಿರತ್ನ, ಜೆಡಿಎಸ್‌ನ ಎಚ್‌.ವಿಶ್ವನಾಥ್‌, ಕೆ.ಗೋಪಾಲಯ್ಯ, ನಾರಾಯಣಗೌಡ ಅವರು ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಯ ಶಾಸಕರಾಗಿದ್ದಾರೆ. ಎರಡನೇ ಸುತ್ತಿನಲ್ಲಿ 6- 8 ಶಾಸಕರು ರಾಜೀನಾಮೆ ನೀಡಲಿದ್ದಾರೆಂಬ ಮಾತಿದ್ದು, ಅದರಲ್ಲೂ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಭಾಗದ ಶಾಸಕರೇ ಪ್ರಮುಖರಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಹಳೇ ಮೈಸೂರು ಭಾಗದ ಶಾಸಕರೇ ಟಾರ್ಗೆಟ್‌ ಎಂಬಂತಿದ್ದು, ಸರ್ಕಾರ ರಚನೆ ಹಾಗೂ ಸಂಘಟನೆಗೆ ಬಿಜೆಪಿ ಯೋಜಿತ ಪ್ರಯತ್ನ ನಡೆಸಿದಂತೆ ಕಾಣುತ್ತಿದೆ.

ಇಷ್ಟು ಸಂಖ್ಯೆಯ ಶಾಸಕರು ರಾಜೀನಾಮೆ ನೀಡಿ ಅಂಗೀಕೃತವಾದರೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಸಂಘಟನಾ ಬಲವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವುದು ಸುಳ್ಳಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೇ ಹಳೇ ಮೈಸೂರು ಭಾಗದ ಬಹಳಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿಸಿದ್ದು, ಮತ ಗಳಿಕೆ ಪ್ರಮಾಣವೂ ವೃದ್ಧಿಸಿದೆ. ಇದೀಗ ಶಾಸಕರ ರಾಜೀನಾಮೆ ಬೆಳವಣಿಗೆಯೂ ಹಳೇ ಮೈಸೂರು ಭಾಗದಲ್ಲಿ ಪಕ್ಷ ಇನ್ನಷ್ಟು ಗಟ್ಟಿಯಾಗಿ ನೆಲೆಯೂರಲು ಪೂರಕ ವಾತಾವರಣ ಸೃಷ್ಟಿಸಿದಂತಾಗಿದೆ ಎಂಬುದು ಬಿಜೆಪಿ ಲೆಕ್ಕಾಚಾರ.

ಪಕ್ಷ ಸಂಘಟನೆಗೆ ಅನುಕೂಲ: ರಾಜ್ಯದ ಬಹುತೇಕ ಕಡೆ ಬಿಜೆಪಿಗೆ ಉತ್ತಮ ನೆಲೆಯಿದ್ದು, ಹಳೇ ಮೈಸೂರು ಭಾಗದಲ್ಲಿ ಮಾತ್ರ ಪಕ್ಷ ಸಂಘಟನೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಆದರೆ ಸಂಘಟನೆ ಬಲಪಡಿಸುವ ಕಾರ್ಯ ನಿರಂತರವಾಗಿ ನಡೆದಿದ್ದು, ಅದು ಫ‌ಲ ಕೂಡ ನೀಡುತ್ತಿದೆ. ಇದು ಕಳೆದ ಲೋಕಸಭಾ ಚುನಾವಣೆಯಲ್ಲೂ ಸಾಬೀತಾಗಿದೆ. ಹಳೇ ಮೈಸೂರು ಭಾಗದ ಕೆಲ ಶಾಸಕರ ರಾಜೀನಾಮೆ ಬೆಳವಣಿಗೆಯಿಂದ ಸಹಜವಾಗಿಯೇ ಸಂಘಟನೆಗೆ ಹೆಚ್ಚಿನ ಬಲ ಬರುವ ನಿರೀಕ್ಷೆಯಿದೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ತಿಳಿಸಿದರು.

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next