Advertisement

ಎಣ್ಣೆ ನಿಮ್ದು ಊಟ ನಮ್ದು…

11:05 AM Jan 05, 2018 | Team Udayavani |

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆರ್‌.ಚಂದ್ರು ನಿರ್ದೇಶನ, ನಿರ್ಮಾಣದ “ಕನಕ’ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಈ ತಿಂಗಳು ಬಿಡುಗಡೆಯಾಗುತ್ತದೆ. ಚಿತ್ರವನ್ನು ಜನವರಿ 26 ರಂದು ಬಿಡುಗಡೆ ಮಾಡಬೇಕೆಂದುಕೊಂಡಿದೆ ಚಿತ್ರತಂಡ. ಅದಕ್ಕಿಂತ ಮೊದಲು ಚಿತ್ರದ ಪ್ರಮೋಶನಲ್‌ ಸಾಂಗ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. “ಎಣ್ಣೆ ನಿಮ್ದು ಊಟ ನಮ್ದು …’ ಎಂಬ ಪ್ರಮೋಶನಲ್‌ ಸಾಂಗ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಸಂಗೀತ ನಿರ್ದೇಶಕ ನವೀನ್‌ ಸಜ್ಜು ಹಾಗೂ ಸಹ ಕಲಾವಿದರು ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಯಾಗುವಾಗ ಈ ಚಿತ್ರದಲ್ಲಿ ಇರೋದಿಲ್ಲ. ಚಿತ್ರ ಬಿಡುಗಡೆಯಾಗಿ ಎರಡು ವಾರಗಳ ನಂತರ ಈ ಹಾಡನ್ನು ಚಿತ್ರಕ್ಕೆ ಸೇರಿಸಲಾಗುತ್ತದೆಯಂತೆ. 

Advertisement

ಅಂದಿನ ಕಾರ್ಯಕ್ರಮಕ್ಕೆ ಕೆ.ಪಿ.ನಂಜುಂಡಿ ಬಂದಿದ್ದರು. ಅದಕ್ಕೆ ಕಾರಣ ಅವರು ಕೂಡಾ “ಕನಕ’ ಚಿತ್ರದಲ್ಲಿ ನಟಿಸಿದ್ದಾರೆ. ತುಂಬಾ ವರ್ಷಗಳ ನಂತರ ಬಣ್ಣ ಹಚ್ಚಿದ ನಂಜುಂಡಿ ಅವರು “ಕನಕ’ ಚಿತ್ರದ ಬಗ್ಗೆ ಮಾತನಾಡಿದರು. “ನಾನು ಈ ಚಿತ್ರದಲ್ಲಿ ನಟಿಸಲು ಕಾರಣ ಚಂದ್ರು. ಚಿತ್ರದಲ್ಲೊಂದು ಪಾತ್ರವಿದ್ದು, ಅವರು ನಿಮ್ಮ ವ್ಯಕ್ತಿತ್ವಕ್ಕೆ ತುಂಬಾ ಹೊಂದಿಕೆಯಾಗುತ್ತದೆ ಎಂದರು. ಅದರಂತೆ ಪಾತ್ರ ಕೂಡಾ ಚೆನ್ನಾಗಿದೆ’ ಎನ್ನುತ್ತಾ ಆರ್‌.ಚಂದ್ರು ಅವರ ಸಿನಿಮಾ ಪ್ರೀತಿ, ಆರಂಭದ ದಿನಗಳಲ್ಲಿ ಅವರು ಪಟ್ಟ ಕಷ್ಟದ ಬಗ್ಗೆ ಮಾತನಾಡಿದರು ನಂಜುಂಡಿ. ನಾಯಕ ದುನಿಯಾ ವಿಜಯ್‌ ಎಂದಿನಂತೆ “ಕನಕ’ ಬಗ್ಗೆ ಹೆಚ್ಚೇನು ಮಾತನಾಡಲಿಲ್ಲ. ಸಿನಿಮಾ ಚೆನ್ನಾಗಿ ಮೂಡಿಬಂದ ಖುಷಿಯ ಜೊತೆಗೆ ಸಂಗೀತ ನಿರ್ದೇಶಕ ನವೀನ್‌ ಸಜ್ಜು ಅವರ ಉತ್ಸಾಹದ ಬಗ್ಗೆ ಮಾತನಾಡಿದರು. ಪೋಸ್ಟರ್‌ನಲ್ಲಿ ತನ್ನ ಫೋಟೋ ಹಾಕಿಲ್ಲ ಎಂಬ ಬೇಸರದಲ್ಲೇ ಇದ್ದ ನಾಯಕಿ ಮಾನ್ವಿತಾ ಹರೀಶ್‌, ಚಿತ್ರದ ಪಾತ್ರದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ರಂಗಾಯಣ ರಘು ಕೂಡಾ ನಟಿಸಿದ್ದು, ಸಣ್ಣ ಪಾತ್ರವಾದರೂ ಚಂದ್ರು ಮೇಲಿನ ಪ್ರೀತಿಯಿಂದ ನಟಿಸಿದ್ದಾಗಿ ಹೇಳಿಕೊಂಡರು. ಸಂಗೀತ ನಿರ್ದೇಶಕ ನವೀನ್‌ ಸಜ್ಜು ಪ್ರಮೋಶನಲ್‌ ಹಾಡು ಹುಟ್ಟಿದ್ದನ್ನು ಮೆಲುಕು ಹಾಕಿಕೊಂಡರು. ಎಲ್ಲಾದರೂ ಹೊರಗಡೆ ಹೋಗಿ ಟ್ಯೂನ್‌ ಹಾಕೋಣ ಎಂದು ಯೋಚಿಸಿದಾಗ ಈ ಹಾಡು ಹುಟ್ಟಿತಂತೆ. 

ನಿರ್ದೇಶಕ, ನಿರ್ಮಾಪಕ ಆರ್‌.ಚಂದ್ರು ತಮ್ಮ ಆರಂಭದ ದಿನ, ಕೆ.ಪಿ.ನಂಜುಂಡಿಯವರ ಬೆಂಬಲವನ್ನು ನೆನೆದರು.

Advertisement

Udayavani is now on Telegram. Click here to join our channel and stay updated with the latest news.

Next