Advertisement

ಈಗ ಹೊಸ ಕಾಮಗಾರಿ ಸರದಿ

11:33 AM Apr 01, 2018 | |

ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಸಹ ಮಾರ್ಚ್‌ ತಿಂಗಳಲ್ಲಿ ವೇಗ ಪಡೆದುಕೊಂಡಿದ್ದು ಯಲಚೇನಹಳ್ಳಿ-ಅಂಜನಾಪುರ ಮತ್ತು ಹೆಸರಘಟ್ಟ ಕ್ರಾಸ್‌-ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದತ್ತ ಕಾಮಗಾರಿ ಶುರುವಾಗಿದೆ. ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಾಣ, ರೇಸ್‌ಕೋರ್ಸ್‌ ರಸ್ತೆಯ ಕಡೆಯಿಂದ ಹರೆಕೃಷ್ಣ ರಸ್ತೆಯವರೆಗೆ ಶಿವಾನಂದ ಉಕ್ಕಿನ ಸೇತುವೆ ನಿರ್ಮಾಣದ ಯೋಜನೆ ಕಾರ್ಯಆರಂಭವಾಗಿದ್ದು ಮಣ್ಣಿನ ಪರೀಕ್ಷೆ ಯಶಸ್ವಿಯೊಂದಿಗೆ ಯೋಜನೆ ವಿಳಂಬಗತಿಯಲ್ಲಿ ಸಾಗುತ್ತಿದೆ. 

Advertisement

ಚುನಾವಣೆ ಕಾವಿನಲ್ಲಿ ಕೊಂಚ ಮಂಕಾದ ಮೆಟ್ರೋ ಕಾಮಗಾರಿ
ವಸ್ತುಸ್ಥಿತಿ:
ಒಟ್ಟಾರೆ 72.3 ಕಿ.ಮೀ. ಮಾರ್ಗದ ಎರಡನೇ ಹಂತದ ಮೆಟ್ರೋ ಯೋಜನೆಯಲ್ಲಿ ಅತಿ ಹೆಚ್ಚು ಪ್ರಗತಿ ಕಂಡಿದ್ದು ಕನಕಪುರ ರಸ್ತೆಯ ಯಲಚೇನಹಳ್ಳಿ-ಅಂಜನಾಪುರ ಮಾರ್ಗ. ಅತಿ ಮಂದಗತಿಯಲ್ಲಿ ಸಾಗಿದ್ದು ತುಮಕೂರು ರಸ್ತೆಯ ನಾಗಸಂದ್ರ-ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ. 

ಆದರೆ, ಅಂಜನಾಪುರ ಮಾರ್ಗದಲ್ಲಿ ಆರಂಭದ ಉತ್ಸಾಹ ಈಗ ಇಲ್ಲವಾಗಿದೆ. ಹೌದು, ಈ ಮಾರ್ಗದ ಸಿವಿಲ್‌ ಕಾಮಗಾರಿ ಶೇ. 55ರಷ್ಟು ಪೂರ್ಣಗೊಂಡಿದೆ. ಅಷ್ಟೇ ಅಲ್ಲ, ಈಗಾಗಲೇ ಫ್ಲೋರಿಂಗ್‌ಗೆ (ಪೇಂಟಿಂಗ್‌, ಫಿನಿಷಿಂಗ್‌) ಟೆಂಡರ್‌ ಕೂಡ ಕರೆಯಲಾಗಿದೆ. ಇಲ್ಲಿಂದ ಕಾಮಗಾರಿ ಮುಂದೆ ಸಾಗುತ್ತಿಲ್ಲ. 

ಈ ಮಧ್ಯೆ ಚುನಾವಣೆ ಬೇರೆ ಹೊಸ್ತಿಲಲ್ಲಿರುವುದರಿಂದ ಮತ್ತಷ್ಟು ನಿಧಾನಗತಿಯಲ್ಲಿ ಸಾಗಿದೆ. ಮತ್ತೂಂದೆಡೆ ತುಮಕೂರು ರಸ್ತೆಯಲ್ಲಿ ಮೆಟ್ರೋ ಮಾರ್ಗವನ್ನು ಈಗಷ್ಟೇ ಕೈಗೆತ್ತಿಕೊಳ್ಳಲಾಗಿದ್ದು, ಇನ್ನೂ ಅಡಿಪಾಯ ಹಾಕುವ ಕಾಮಗಾರಿ ನಡೆದಿದೆ. ಬಿಎಂಆರ್‌ಸಿಯು ಈ ಕಾಮಗಾರಿ ಪೂರ್ಣಗೊಳಿಸಲು ಇನ್ನೊಂದು ವರ್ಷದ ಗುರಿ ಇಟ್ಟುಕೊಂಡಿದೆ. ಸದ್ಯದ ಪ್ರಗತಿಯನ್ನು ನೋಡಿದರೆ, ನಿಗದಿತ ಅವಧಿಯಲ್ಲಿ ಇದು ಪೂರ್ಣಗೊಳ್ಳುವುದು ಅನುಮಾನ. 

ವಿಳಂಬಕ್ಕೆ ಕಾರಣ: ಮೆಟ್ರೋ ಯೋಜನೆ ವ್ಯವಸ್ಥಾಪಕ ನಿರ್ದೇಶಕರಿಗೆ ಹೊಸದು. ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ತಿಂಗಳ ಮೇಲಾದರೂ ರೈಲ್ವೆ ಕಂಬಿಗಳ ಪೂರೈಕೆಗೆ ಟೆಂಡರ್‌ ಕರೆದಿಲ್ಲ. ಹಳಿಗಳ ಜೋಡಣೆಗೂ ಟೆಂಡರ್‌ ಕರೆದಿಲ್ಲ. ಅದೇ ರೀತಿ, ತುಮಕೂರು ರಸ್ತೆ ಮಾರ್ಗದ ಭೂಸ್ವಾಧೀನದಲ್ಲಿ ವಿಳಂಬವಾಗಿದ್ದು, ಇದು ಕಾಮಗಾರಿ ಮೇಲೆ ಪರಿಣಾಮ ಬೀರಿದೆ. 

Advertisement

ತಡೆಗೋಡೆ ನಿರ್ಮಾಣ ಈಗಷ್ಟೇ ಶುರು
ಯೋಜನೆ:
ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಿಸುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್‌, ಫ‌ುಡ್‌ ವರ್ಲ್ಡ್ ಜಂಕ್ಷನ್‌ ಹಾಗೂ ಜೇಡಿಮರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ ಮತ್ತು ಡಾಲರ್ ಕಾಲೋನಿ, ಹೊಸಕೆರೆ ಹಳ್ಳಿಯ ಕೆಇಬಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 

ಈ ತಿಂಗಳ ಪ್ರಗತಿ: ಕುಡಿವ ನೀರು, ಒಳಚರಂಡಿ, ಬೆಸ್ಕಾಂ ಸೇರಿದಂತೆ ಇತರೆ ಸಂಸ್ಥೆಗಳ ಸೇವಾಜಾಲಗಳನ್ನು ಸ್ಥಳಾಂತರಗೊಳಿಸಲಾಗಿದೆ. ಜತೆಗೆ, ಸಂಚಾರ ಬದಲಾಣೆಗೆ ಪೊಲೀಸರ ಅನುಮತಿ ಪಡೆದಿರುವ ಪಾಲಿಕೆ, ಕೆಳ ಸೇತುವೆಗೆ ತಡೆಗೋಡೆಗಳ ನಿರ್ಮಾಣ ಕಾರ್ಯ ಆರಂಭಿಸಿದೆ.

ವಸ್ತುಸ್ಥಿತಿ: ಅಂಡರ್‌ಪಾಸ್‌ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಿರುವ ಅಧಿಕಾರಿಗಳು, ಕಾಮಗಾರಿ ಪೂರ್ಣಗೊಂಡ ಬಳಿಕ ಅಂಡರ್‌ಪಾಸ್‌ ಮಣ್ಣು ಅಗೆಯಲು ತೀರ್ಮಾನಿಸಿದ್ದು, ಈಗಾಗಲೇ ಒಂದು ಕಡೆ ಬಹುತೇಕ ತಡೆಗೋಡೆ ಕಾರ್ಯ ಪೂರ್ಣಗೊಂಡಿದ್ದು, ಮತ್ತೂಂದು ಭಾಗದಲ್ಲಿ ಕಾಮಗಾರಿ ಆರಂಭವಾಗಿದೆ. 

ಸಂಪೂರ್ಣ ರಸ್ತೆ ಬಂದ್‌ ಮಾಡಿ ಕಾಮಗಾರಿ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮೊದಲು ತಡೆ ಗೋಡೆ ನಿರ್ಮಿಸಿ ನಂತರ ಮಣ್ಣು ಅಗೆಯುವ ಕಾಮಗಾರಿ ನಡೆಸಲಾಗುವುದು.
-ಸಹಾಯಕ ಎಂಜಿನಿಯರ್‌

ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ
ಯೋಜನೆ:
ರೇಸ್‌ಕೋರ್ಸ್‌ ರಸ್ತೆಯ ಕಡೆಯಿಂದ ಹರೆಕೃಷ್ಣ ರಸ್ತೆಯವರೆಗೆ 326.25 ಮೀಟರ್‌ ಉದ್ದದ ಉಕ್ಕಿನ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದ್ದು, ಇದರಿಂದ ರೇಸ್‌ಕೋರ್ಸ್‌ ಕಡೆಯಿಂದ ಶೇಷಾದ್ರಿಪುರ ರೈಲ್ವೆ ಕೆಳಸೇತುವೆ ಕಡೆಗೆ ಹೋಗುವ ಹಾಗೂ ಆ ಕಡೆಯಿಂದ ಬರುವವರಿಗೆ ದಟ್ಟಣೆ ಸಮಸ್ಯೆ ಎದುರಾಗುವುದಿಲ್ಲ. 

ಗುತ್ತಿಗೆದಾರ: ಎಂ.ವೆಂಕಟರಾವ್‌ ಇನ್ಫಾ ಪ್ರಾಜೆಕ್ಟ್ ಪ್ರೈವೇಟ್‌ ಲಿಮಿಟೆಡ್‌

ಈ ತಿಂಗಳ ಪ್ರಗತಿ: ಚಲನಚಿತ್ರ ವಾಣಿಜ್ಯ ಮಂಡಳಿಯ ಸಮೀಪ ಹಾಗೂ ಶಿವಾನಂದ ಸ್ಟೋರ್‌ ಬಳಿ ಉಕ್ಕಿನ ಸೇತುವೆಗಾಗಿ ಕಾಂಕ್ರಿಟ್‌ ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಒಂದು ಭಾಗದಲ್ಲಿ ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಮತ್ತೂಂದು ಭಾಗದಲ್ಲಿ ಮಣ್ಣು ಅಗೆಯುವ ಕೆಲಸ ನಡೆಯುತ್ತಿದೆ. 

ವಸ್ತುಸ್ಥಿತಿ: ಶಿವಾನಂದ ಉಕ್ಕಿನ ಸೇತುವೆ ಯೋಜನೆ ವಿಳಂಬಗತಿಯಲ್ಲಿ ಸಾಗುತ್ತಿದ್ದು, ಮಣ್ಣಿನ ಪರೀಕ್ಷೆ ಯಶಸ್ವಿಯಾಗಿ ಹಲವು ತಿಂಗಳು ಕಳೆದರೂ ಕಾಮಗಾರಿ ವೇಗ ಪಡೆದುಕೊಂಡಿಲ್ಲ. ಇತ್ತೀಚೆಗೆ ಮೇಯರ್‌ ಸ್ಥಳ ಪರಿಶೀಲನೆ ನಡೆಸಿದ ಗಡುವು ನೀಡಿದ ನಂತರದಲ್ಲಿ ಗುತ್ತಿಗೆದಾರರು ಕಾಂಕ್ರಿಟ್‌ ಪಿಲ್ಲರ್‌ಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. 

ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ ನಡೆಸಿದ ಮಣ್ಣಿನ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ಸೇತುವೆಗೆ ಪಿಲ್ಲರ್‌ಗಳ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬಳಿ ಪಿಲ್ಲರ್‌ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
-ಸಹಾಯಕ ಎಂಜಿನಿಯರ್‌

ವರ್ತುಲ ರಸ್ತೆಯಲ್ಲಿ ಟಾಪಿಂಗ್‌ ಟ್ರಾಫಿಕ್
ಯೋಜನೆ:
ನಗರದ ಪ್ರಮುಖ 29 ರಸ್ತೆಗಳು, 6 ಜಂಕ್ಷನ್‌ಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸುವ ಮೂಲಕ ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸಲು ಪಾಲಿಕೆ ಮುಂದಾಗಿದೆ. 

ಈ ತಿಂಗಳ ಪ್ರಗತಿ: ನಾಯಂಡಹಳ್ಳಿ ಜಂಕ್ಷನ್‌ನಿಂದ ಸುಮ್ಮನಹಳ್ಳಿ ಜಂಕ್ಷನ್‌ವರೆಗೆ ಕಾಮಗಾರಿ ನಡೆಯುತ್ತಿದ್ದು, ಕೋರಮಂಗಲ 20ನೇ ಮುಖ್ಯರಸ್ತೆ, ಶೇಷಾದ್ರಿಪುರ ಹಾಗೂ ನಾಗಾವರ ಹೊರವರ್ತುಲ ರಸ್ತೆಯ ಹೆಣ್ಣೂರು ಜಂಕ್ಷನ್‌ನಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿ ಪೂರ್ಣಗೊಂಡಿದೆ. 

ವಸ್ತುಸ್ಥಿತಿ: ಪಾಲಿಕೆಯಿಂದ ನಡೆಸಲಾಗುತ್ತಿರುವ ವೈಟ್‌ಟಾಪಿಂಗ್‌ ಕಾಮಗಾರಿ ಹಲವು ಭಾಗಗಳಲ್ಲಿ ಪೂರ್ಣಗೊಂಡಿದ್ದರೂ, ಕನಕಪುರ ರಸ್ತೆ, ಹೊಸೂರು ರಸ್ತೆಯ ಲಸ್ಕರ್‌ ರಸ್ತೆ, ಮೈಸೂರು ರಸ್ತೆ, ವಿಜಯನಗರದಲ್ಲಿ ಸ್ಥಗಿತಗೊಂಡಿ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. 

ಮೈಸೂರು ರಸ್ತೆಯಲ್ಲಿ ಜಲಮಂಡಳಿಯಿಂದ ನೀರಿನ ಪೈಪುಗಳ ಅಳವಡಿಕೆ ಬಾಕಿಯಿರುವುದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಪಾಲಿಕೆಯಿಂದ ಕೈಗೊಳ್ಳಲು ಉದ್ದೇಶಿಸಿರುವ 93.47 ಕಿ.ಮೀ. ಪೈಕಿ 10 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಲಾಗಿದೆ.
-ಪಾಲಿಕೆಯ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ 

ಮಾಹಿತಿ: ವಿಜಯ್‌ಕುಮಾರ್‌ ಚಂದರಗಿ, ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next