Advertisement

ರಾಜಕೀಯ ರಹಿತ ರಾಜಕಾರಣದ ತ್ರಿಮೂರ್ತಿಗಳು

01:01 AM Sep 18, 2021 | Team Udayavani |

ರಾಜಕಾರಣವನ್ನು ನೇತ್ಯಾ ತ್ಮಕವಾಗಿ ಕಾಣುವುದು ಹೆಚ್ಚು. ಇದಕ್ಕೆ ಅಪವಾದವಾಗಿ ಕಾಣು ವವರಲ್ಲಿ ಸೆ. 13ರಂದು ನಮ್ಮ ನ್ನಗಲಿದ ಆಸ್ಕರ್‌ ಫೆರ್ನಾಂಡಿಸ್‌ ಒಬ್ಬರು. ಇದೇ ತೆರನಾಗಿ 40 ವರ್ಷಗಳ ಹಿಂದೆ (1981ರ ಮೇ 29) ಇಹಲೋಕ ತ್ಯಜಿ ಸಿದ ಮಣಿಪಾಲದ ಟಿ.ಎ.ಪೈ, 10 ವರ್ಷಗಳ ಹಿಂದೆ (2012ರ ಫೆಬ್ರವರಿ 14) ನಿಧನ ಹೊಂದಿದ ಡಾ|ವಿ.ಎಸ್‌.ಆಚಾರ್ಯ ಕಣ್ಣ ಮುಂದೆ ನಿಲ್ಲುತ್ತಾರೆ. ಟಿ.ಎ. ಪೈ, ಆಸ್ಕರ್‌ ಫೆರ್ನಾಂಡಿಸ್‌ ಕಾಂಗ್ರೆಸಿಗರು, ಡಾ| ಆಚಾರ್ಯ ಬಿಜೆಪಿಯವರು. ಪಕ್ಷ ಬೇರೆಯಾ ದರೂ ಸಮುದಾಯ ಹಿತದ ದೃಷ್ಟಿ ಒಂದೆ.

Advertisement

ಟಿ.ಎ.ಪೈ ಅವರು ಏಕಕಾಲದಲ್ಲಿ ಕೇಂದ್ರದ ಐದು ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದುದು ಒಂದು ದಾಖಲೆ. ಕರಾವಳಿಗೂ ದಿಲ್ಲಿಗೂ ಸಂಪರ್ಕ ಬೇಕೆಂಬ ಕಾರಣಕ್ಕೆ “ಜಯಂತಿ ಜನತಾ ಎಕ್ಸ್‌ಪ್ರೆಸ್‌’ ರೈಲು ಆರಂಭಿಸಿದ ಟಿ.ಎ. ಪೈಯವರು, ಉಡುಪಿ ಪುರಸಭೆ ಡಾ|ವಿ.ಎಸ್‌.ಆಚಾರ್ಯರ ನೇತೃತ್ವದಲ್ಲಿ ಆಡಳಿತದಲ್ಲಿದ್ದಾಗ ಸ್ವರ್ಣಾ ಮೊದಲ ಹಂತದ ಯೋಜನೆಗೆ ಎಲ್‌ಐಸಿ ಅಧ್ಯಕ್ಷರಾಗಿ ಸಾಲ ಕೊಟ್ಟು ಮತ ರಾಜಕೀಯ ಬೇರೆ, ಅಭಿವೃದ್ಧಿ ಬೇರೆ ಎಂದು ತೋರಿಸಿದವರು. ಕೊಂಕಣ ರೈಲ್ವೇಯ ಕನಸು ಮೊದಲು ಕಂಡದ್ದು ಇವರೇ. ಈಗೇನಾದರೂ ಎಲ್‌ಐಸಿ ಮುಂಚೂಣಿ ವಿಮಾ ಸಂಸ್ಥೆಯಾಗಿ ಮುನ್ನಡೆಯುತ್ತಿದ್ದರೆ ಇದರ ಹಿಂದೆ ಟಿ.ಎ.ಪೈ ಅವರ ಪ್ರಾಮಾಣಿಕ ಶ್ರಮವಿದೆ. ಯಾವುದೇ ನಷ್ಟದಾಯಕ ಸಂಸ್ಥೆಗಳನ್ನು ಇವರಿಗೆ ಕೊಟ್ಟರೆ ಅದನ್ನು ಮುನ್ನಡೆಸುವ ರೀತಿಯೇ ಬೇರೆಯಾಗಿತ್ತು. “ಹೀಗಾಗಿಯೇ ಮಣಿಪಾಲ ಸಮೂಹ ಸಂಸ್ಥೆಗಳ ಸ್ಥಾಪಕ ಡಾ| ಟಿ.ಎಂ.ಎ.ಪೈಯವರಿಗೆ ತಮ್ಮ ಅಣ್ಣನ ಮಗ ಟಿ.ಎ.ಪೈ ಅವರು ರಾಜಕೀಯದಲ್ಲಿ ಸಕ್ರಿಯ ರಾಗುತ್ತಿದ್ದುದು ಅಷ್ಟು ಹಿಡಿಸುತ್ತಿರಲಿಲ್ಲ. ನಮ್ಮ ಸಂಸ್ಥೆಗಳಲ್ಲಿಯೇ ಸಾಕಷ್ಟು ಕೆಲಸಗಳಿವೆ. ಇಲ್ಲಿಯೇ ಇದ್ದು ಅಭಿವೃದ್ಧಿಪಡಿಸು ಎನ್ನುತ್ತಿದ್ದರು’ ಎಂದು ಟಿ.ಎ.ಪೈಯವರ ಕುರಿತಾದ ಪುಸ್ತಕ ಅನಾವರಣ ಸಭೆಯಲ್ಲಿ ಡಾ|ಆಚಾರ್ಯ ಹೇಳಿದ್ದರು.

ಆಸ್ಕರ್‌ ಫೆರ್ನಾಂಡಿಸ್‌ ಸಿಟ್ಟುಗೊಂಡದ್ದುಂಟೆ? ಎಲ್ಲರೂ ಆನಂದ, ಸವಿಯನ್ನೇ ಬಯಸುವವರು. ಕೋಪವಿದ್ದಲ್ಲಿ ಆನಂದ, ಸವಿ ಇರಲು ಸಾಧ್ಯವೆ? ಸಂತಸದಿಂದ ಇರುವುದು ಆಸ್ಕರ್‌ ಅವರ ಇನ್‌ಬಿಲ್ಟ್ ಗುಣವಾಗಿತ್ತು. ಈಗ ನರೇಗಾ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಗಳು ದೇಶದ ಮೂಲೆಮೂಲೆಗಳಲ್ಲಿ ಸುದ್ದಿ ಮಾಡುತ್ತಿವೆ. ಇವು ಕೋಟ್ಯಂತರ ಜನರಿಗೆ ಅನುಕೂಲ ಒದಗಿಸುತ್ತಿವೆ. ಇದರ ಹಿಂದಿರುವ ಚಾಲಕಶಕ್ತಿಗಳಲ್ಲಿ ಆಸ್ಕರ್‌ ಫೆರ್ನಾಂಡಿಸರು ಪ್ರಮುಖರು. ಎಐಸಿಸಿ ಪ್ರಧಾನ ಕಾರ್ಯದರ್ಶಿತ್ವವನ್ನು ಸುದೀರ್ಘ‌ ಕಾಲ ಹೊಂದಿದ ಸಂದರ್ಭ ದಿಲ್ಲಿಯಲ್ಲಿ ತಡರಾತ್ರಿವರೆಗೂ ಕುಳಿತು ಕೆಲಸ ಮಾಡಿದ್ದು, ಸಂಸದರಾಗಿಯೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿದ್ದಾಗ ಕಾರ್ಖಾನೆ ವಸತಿಗೃಹದಲ್ಲಿಯೇ ಠಿಕಾಣಿ ಹೂಡಿ ದನಗಳನ್ನೂ ಸಾಕಿ ನೈಜ ಕೃಷಿಕನಂತೆ ಬದುಕಿದ್ದು, ಕಾಂಗ್ರೆಸ್‌ ಪರಮೋಚ್ಚ ನಾಯಕರಿಗೆ ಆಪ್ತರಾದರೂ ಸರಳವಾಗಿ ನಡೆದುಕೊಳ್ಳುತ್ತಿದ್ದುದು ಸಾಮಾನ್ಯವೆ?

ಡಾ|ಆಚಾರ್ಯರು ಮೃತಪಟ್ಟ ಸಂದರ್ಭ ವಿಶಾಲ ವಿಧಾನಸೌಧದಲ್ಲಿ ರಾತ್ರಿ ಇವರೊಬ್ಬರೇ ಕುಳಿತು ಕಡತಗಳ ಅವಲೋಕನ ನಡೆಸುತ್ತಿರುವ ಚಿತ್ರವೊಂದು ಪ್ರಕಟವಾಗಿತ್ತು. ಅವರ ಬಾಯಲ್ಲಿ ಸುಮಾರು 30 ವರ್ಷಗಳ ರಾಜ್ಯ ಮತ್ತು ಕೇಂದ್ರ ಬಜೆಟ್‌ ನಲಿದಾಡುತ್ತಿತ್ತು. ರಾಜ್ಯದಲ್ಲಿ 1997ರಲ್ಲಿ ಉದ್ಘಾಟನೆಗೊಂಡ ಏಳು ಹೊಸ ಜಿಲ್ಲೆಗಳ ಉದಯಕ್ಕೆ ಡಾ|ಆಚಾರ್ಯರು 1983ರಲ್ಲಿ ವಿಧಾನಸಭೆಯಲ್ಲಿ ಮಾಡಿದ ಸಮರ್ಥ ಮಂಡನೆ ಕಾರಣವಾಗಿತ್ತು. ಉಡುಪಿಯ ಜಿಲ್ಲಾಧಿಕಾರಿ ಕಚೇರಿ, ಉಡುಪಿ -ಮಣಿಪಾಲ ರಸ್ತೆಯ ಅಗಲಗೊಳಿಸುವಿಕೆ ಅವರ ಸಾಧನೆಗಳಲ್ಲಿ ಕೆಲವು.

ದನಗಳನ್ನು ಸಾಕಿ, ತುಳು ಹಾಡನ್ನು ಸಂಸತ್ತಿನಲ್ಲಿ ಹಾಡಿದ ಆಸ್ಕರ್‌ರಿಗೆ ಸಾಮಾಜಿಕ ಯೋಜನೆ ರೂಪಿಸುವ ಅರ್ಥ ಶಾಸ್ತ್ರ ತಿಳಿದಿತ್ತು. ವೈದ್ಯಕೀಯ ವಿಜ್ಞಾನ ಕಲಿತ ಆಚಾರ್ಯರಿಗೆ ಜನಸಾಮಾನ್ಯರಿಗೆ ಅಗತ್ಯ ವಾದ ಅರ್ಥಶಾಸ್ತ್ರದ ಅರಿ ವಿತ್ತು. ಹಾಲು ಒಕ್ಕೂಟ, ಸಿಂಡಿ ಕೇಟ್‌ ಬ್ಯಾಂಕ್‌, ಎಲ್‌ಐಸಿ ಯಂತಹ ಸಂಸ್ಥೆಗಳ ಮೂಲಕ ಸಾಮಾನ್ಯರ ಆರ್ಥಿಕ ಅಭಿ ವೃದ್ಧಿ ಸಾಧಿಸುವ ಅರ್ಥಶಾಸ್ತ್ರ ಟಿ.ಎ.ಪೈಗಳಿಗೆ ಕರಗತವಾಗಿತ್ತು.

Advertisement

ಮೂವರೂ ಬಹುಕಾಲ ರಾಜಕೀಯ ಮಾಡಿ ದರೂ ವೈಯಕ್ತಿಕ ಟೀಕೆ, ಅವಹೇಳನ ಮಾಡಿ ರಲಿಲ್ಲ. ಬೇರೆ ಪಕ್ಷದವರ ಜತೆಗಿನ ನಡವಳಿಕೆಯಲ್ಲಿ ಸೌಜನ್ಯವಿರುತ್ತಿತ್ತು. ಇವರೆಲ್ಲ ರಾಜಕಾರಣಿಗಳಾ ದರೂ ರಾಜಕಾರಣದ ನೇತ್ಯಾತ್ಮಕ ಅಂಶಗಳನ್ನು ಮೈಗೆ ಮೆತ್ತಿಕೊಂಡವರಲ್ಲ. ಇವರಿಗೆ ರಾಜಕೀಯ ಎನ್ನುವುದು ಲೋಕೋಪಕಾರಕ್ಕೆ ಸಾಧನ ಮಾತ್ರ ಎನ್ನಬಹುದು.

ನಮಗೆ ರಾಜಕಾರಣಿ ಮತ್ತು ಮುತ್ಸದ್ದಿಗಳ ವ್ಯತ್ಯಾ ಸದ ಅರಿವಿಲ್ಲ. ಅರಿವಿದ್ದರೂ ಸೋಲು ಗೆಲುವುಗಳ ಲೆಕ್ಕಾಚಾರ ಬಂದಾಗ ಮುತ್ಸದ್ದಿಗಳು ಪ್ರಯೋಜನಕ್ಕೆ ಬಾರದ ವ್ಯಕ್ತಿಗಳಾಗುವ ಸಂಭವವಿದೆ. ಮುತ್ಸದ್ದಿ ಗಳು ಮರಣಾನಂತರ ಪೂಜಾರ್ಹರಾಗುತ್ತಾರೆ. ಜೀವಂತವಿರುವಾಗ ಕೆಲವೊಮ್ಮೆ ತಮಾಶೆಯ ವಸ್ತುವಾಗುತ್ತಾರೆ. ಹೀಗಾಗಿ ಮುತ್ಸದ್ದಿಗಳಾಗುವ ಯೋಗ್ಯತೆ ಇರುವವರೂ ಅದು ದಿಢೀರ್‌ ಗೆಲುವು ತಾರದ ಕಿರೀಟ ಎಂದು ತಿಳಿದು ಅಡ್ಡಮಾರ್ಗ ತುಳಿಯುತ್ತಾರೆ. ಲೋಕಕ್ಕೆ ಒಳಿತಾಗಬೇಕಾದರೆ ಮುತ್ಸದ್ದಿತನಕ್ಕೆ ಗೌರವ ಸಿಗುವಂತಾಗಬೇಕು. ಇಲ್ಲವಾದರೆ ಕಳಪೆ ರಾಜಕೀಯವೇ ಜೀವನಾದರ್ಶ ವಾಗುವ ಅಪಾಯವಿದೆ.

ಡಾ|ಆಚಾರ್ಯ ಚುನಾವಣೆಯಲ್ಲಿ ಸೋತಾಗ ಮನೆ ಎದುರು ಕೆಲವರು “ಮರಣ’ದ ಸಂಕೇತವನ್ನು ಬಿಂಬಿಸಿದ್ದೂ ಮತ್ತು ಆಸ್ಕರ್‌ ಫೆರ್ನಾಂಡಿಸರು ನಿಧನ ಹೊಂದಿದಾಗ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಮಾಹಿತಿಯೂ ಮಾನವೀಯ ಮುಖದ್ದಲ್ಲ.

ಡಾ|ಆಚಾರ್ಯರು ನಿಧನ ಹೊಂದಿದಾಗ ಆಸ್ಕರ್‌ ಅವರು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದರು. ಈ ಸತ್ಸಂಪ್ರದಾಯ ಆಸ್ಕರ್‌ ನಿಧನ ಹೊಂದಿದಾಗ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯುವ ಮೂಲಕ ಮುಂದುವರಿಯಿತು. ಇಂತಹವರ ರಾಜಕೀಯವಿಲ್ಲದ ರಾಜಕಾರಣಕ್ಕೆ “ಮರಣ’ ಬರಕೂಡದು ಎಂಬ ಜಾಗೃತಿ ಸಮಾಜದಲ್ಲಿರಬೇಕು.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next