Advertisement

ಚಾರ್ಮಾಡಿ ಘಾಟಿಯಲ್ಲಿ ಹೊಸ ಶೋಕಿ ಆರಂಭ; ಅನಾಹುತ ಕಟ್ಟಿಟ್ಟ ಭುತ್ತಿ

09:06 PM Jun 03, 2022 | Team Udayavani |

ಚಿಕ್ಕಮಗಳೂರು: ಈಗಲೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ರಸ್ತೆಯನ್ನ ಅಪಘಾತಗಳ ರಸ್ತೆ ಅನ್ನುತ್ತಾರೆ, ಆದರೀಗ, ಪ್ರವಾಸಿಗರ ಹೊಸ ಶೋಕಿ ಮತ್ತಷ್ಟು ಅಪಘಾತಗಳಿಗೆ ಕಾರಣವಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗರು ತಮ್ಮ ಐಶಾರಾಮಿ ಗಾಡಿಗಳಲ್ಲಿ ಸನ್ ರೂಫ್ ಓಪನ್ ಮಾಡಿಕೊಂಡು ಮೋಜು-ಮಸ್ತಿ ಮಾಡಿಕೊಂಡು ಹೋಗುತ್ತಿರುವುದು ಸ್ಥಳಿಯರು ಹಾಗೂ ಇತರೆ ಪ್ರವಾಸಿಗರಿಗೆ ಆತಂಕ ತಂದೊಡ್ಡಿದೆ.

Advertisement

ಹಾವು-ಬಳುಕಿನ ಮೈಕಟ್ಟಿನ ಈ ರಸ್ತೆಯಲ್ಲಿ ಸನ್ ರೂಪ್ ಓಪನ್ ಮಾಡಿಕೊಂಡು ಹಾವಿನ ತರ ತಲೆ ಹೊರಗಡೆ ಹಾಕಿಕೊಂಡು ಹೋಗುವುದು ಖುಷಿ ಕೊಡುತ್ತೆ. ಆದರೆ, ಅಷ್ಟೆ ಅಪಾಯ ಕೂಡ. ಚಾರ್ಮಾಡಿ ಘಾಟಿಯಲ್ಲಿ ಡ್ರೈವರ್ ಸೀಟಲ್ಲಿ ಕೂತವರು ಹದ್ದಿನ ಕಣ್ಣಿನಲ್ಲಿ ಡ್ರೈವ್ ಮಾಡಬೇಕು. ಎಷ್ಟೆ ಹುಷಾರು, ಜಾಗರೂಕರಾಗಿದ್ದರೂ ಇಲ್ಲಿ ಡ್ರೈವಿಂಗ್ ಕಷ್ಟ. ಕಣ್ಣು ಮಿಸುಕುವಷ್ಟರಲ್ಲಿ ವಾಹನಗಳು ನುಗ್ಗಿರುತ್ತದೆ. ಇಂತಹಾ ಜಾಗದಲ್ಲಿ ಸನ್ ರೂಫ್ ಓಪನ್ ಮಾಡಿಕೊಂಡು ಕೂಗಿಕೊಂಡು ಹೋದರೆ ಡ್ರೈವರ್ ತಿರುಗಿ ನೋಡಿ ಮತ್ತೆ ರಸ್ತೆ ನೋಡುವಷ್ಟರಲ್ಲಿ ಅಪಘಾತಗಳು ಸಂಭವಿಸಿರುತ್ತವೆ. ಹಾಗಾಗಿ, ಪ್ರವಾಸಿಗರು ಚಾರ್ಮಾಡಿಯಂತಹಾ ಅಪಾಯದ ರಸ್ತೆಯಲ್ಲಿ ಇಂತಹ ಶೋಕಿಗೆ ಮುಂದಾಗಬಾರದು ಎಂದು ಕೆಲ ಪ್ರವಾಸಿಗರೇ ಮನವಿ ಮಾಡಿದ್ದಾರೆ.

ಈಗಾಗಲೇ ಚಾರ್ಮಾಡಿಯಲ್ಲಿ ಆಗಾಗ್ಗೆ ಅಪಘಾತಗಳು ನಡೆಯುತ್ತಲೇ ಇವೆ. ಕೆಲ ಅಪಘಾತದಲ್ಲಿ ಚಾಲಕನ ಬೇಜವಾಬ್ದಾರಿ ಹಾಗೂ ಕೆಲ ಶೋಕಿಯ ಲಕ್ಷಣಗಳು ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಪ್ರವಾಸಿಗರ ಈ ಶೋಕಿ ಮತ್ತೋರ್ವ ಪ್ರವಾಸಿಗನಿಗೆ ಮುಳ್ಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಾರ್ಮಾಡಿ ರಸ್ತೆಯ ಒಂದು ಬದಿ ಏನೋ ಗುಡ್ಡ. ಆದರೆ, ಮತ್ತೊಂದು ಬದಿಗೆ ಬಿದ್ದಿಗೆ ಬಿದ್ದರೆ ಸಾವಿರಾರು ಅಡಿ ಪ್ರಪಾತ. ಹುಡುಕುವುದಕ್ಕೆ ಎರಡು ಮೂರು ದಿನ ಬೇಕು.

ಚಾರ್ಮಾಡಿ ಘಾಟಿಯಲ್ಲಿ ವಾರಕ್ಕೆ ನಾಲ್ಕೈದು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆಗ ಹಗಲು-ರಾತ್ರಿ ಎನ್ನದೆ ಓಡಿಹೋಗುವುದು ಅದೇ ಕೊಟ್ಟಿಗೆಹಾರದ ಜನ. ಪ್ರವಾಸಿಗರ ಈ ಶೋಕಿಗೆ ಕೊಟ್ಟಿಗೆಹಾರದ ಜನ ಕೂಡ ಇಂತಹಾ ಮೋಜು ಈ ರಸ್ತೆಯಲ್ಲಿ ಬೇಡ ಎಂದು ಮನವಿ ಮಾಡಿದ್ದಾರೆ. ಕೆಲ ಪ್ರವಾಸಿಗರ ಶೋಕಿಯಿಂದ ಮತೋರ್ವ ಪ್ರವಾಸಿಗರ ಪ್ರಾಣ ಹೋದರೆ ಯಾರಿಂದಲೂ ತರಲು ಸಾಧ್ಯವಿಲ್ಲ. ಹಾಗಾಗಿ, ಈ ಭಾಗದಲ್ಲಿ ಗಸ್ತು ತಿರುಗುವ ಪೊಲೀಸರು ಇಂತಹ ವಾಹನಗಳು ಕಂಡು ಬಂದರೆ ಅವರಿಗೆ ಭಾರೀ ಮೊತ್ತದ ದಂಡ ವಿಧಿಸಿ, ವಾಹನವನ್ನು ಜಪ್ತಿ ಮಾಡಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next